ಬಾಲಯ್ಯಗೂ ಮುನ್ನ Jr. Ntr ಜೊತೆ ನಟಿಸ್ಬೇಕಿತ್ತು: ಇಷ್ಟು ದೊಡ್ಡ ಆಫರ್ ಬಿಟ್ಟಿದ್ದೇಕೆ ದುನಿಯಾ ವಿಜಯ್?
ದುನಿಯಾ ವಿಜಯ್ ಟಾಲಿವುಡ್ನಲ್ಲಿ ಮಿಂಚೋಕೆ ಶುರು ಮಾಡಿದ್ದಾರೆ. ಬಾಲಕೃಷ್ಣ ಅಭಿನಯದ 'ವೀರ ಸಿಂಹ ರೆಡ್ಡಿ' ಮೂಲಕ ಖಳನಾಯಕನಾಗಿ ಎಂಟ್ರಿ ಕೊಟ್ಟಿದ್ದಾರೆ. ಈಗ ಈ ಸಿನಿಮಾ ರಿಲೀಸ್ ಆಗಿದ್ದು, ಬ್ಲ್ಯಾಕ್ ಕೋಬ್ರಾ ನೋಡಿ ಭೇಷ್ ಅನ್ನುತ್ತಿದ್ದಾರೆ.
ದುನಿಯಾ ವಿಜಯ್ ಸ್ಯಾಂಡಲ್ವುಡ್ನಲ್ಲಿ ನಟನೆ ಜೊತೆ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಈಗಾಗಲೇ 'ಸಲಗ' ಹಿಟ್ ಲಿಸ್ಟ್ ಸೇರಿದೆ. ಒಂದ್ಕಡೆ ತೆಲುಗು ಅವಕಾಶವನ್ನೂ ಬಿಡದೆ, ಇನ್ನೊಂದು ಕಡೆ 'ಸಲಗ' ಸಕ್ಸಸ್ ಅನ್ನೂ ಬಿಡದೆ ಎರಡೂ ಸಂಭಾಳಿಸಿಕೊಂಡು ಬಂದಿದ್ದಾರೆ.
ದುನಿಯಾ ವಿಜಯ್ ಮನಸ್ಸು ಮಾಡಿದ್ದರೆ 'ವೀರ ಸಿಂಹ ರೆಡ್ಡಿ' ಎರಡನೆ ಸಿನಿಮಾನೋ, ಮೂರನೆಯದ್ದೋ ಆಗಬೇಕಿತ್ತು. ಟಾಲಿವುಡ್ ಯಂಗ್ ಟೈಗರ್ ಜೂ.ಎನ್ಟಿಆರ್ ಸಿನಿಮಾದಲ್ಲಿ ನಟಿಸೋಕೆ ಅವಕಾಶ ಸಿಕ್ಕಿತ್ತು. ಆದರೆ, ಆ ಚಾನ್ಸ್ ಅನ್ನು ದುನಿಯಾ ವಿಜಯ್ ಕೈ ಬಿಟ್ಟಿದ್ದರು. ಅದಕ್ಕೆ ಕಾರಣವೇನು? ಅನ್ನೋದನ್ನು 'ವೀರ ಸಿಂಹ ರೆಡ್ಡಿ' ಸಿನಿಮಾದ ಸಂದರ್ಶನದ ವೇಳೆ ರಿವೀಲ್ ಮಾಡಿದ್ದಾರೆ.

Jr. Ntr ಸಿನಿಮಾಗೆ ಮೊದಲ ಆಫರ್
ಜೂ.ಎನ್ಟಿಆರ್ ಸಿನಿಮಾ 'ಜನತಾ ಗ್ಯಾರೇಜ್' ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಇದರ ಹಿಂದೆನೇ 2016ರಲ್ಲಿ 'ಜೈ ಲವ ಕುಶ' ಸಿನಿಮಾ ಸೆಟ್ಟೇರಿತ್ತು. ಈ ಸಿನಿಮಾಗೆ ದುನಿಯಾ ವಿಜಯ್ಗೆ ಆಫರ್ ನೀಡಲಾಗಿತ್ತು. ಆದರೆ, ದುನಿಯಾ ವಿಜಯ್ ಕನ್ನಡದಲ್ಲಿ ಯೋಗರಾಜ್ ಭಟ್ ನಿರ್ದೇಶನದ 'ದನಕಾಯೋನು' ಸಿನಿಮಾದಲ್ಲಿ ನಟಿಸುತ್ತಿದ್ದರು. ಹಾಗೇ 'ಮಾಸ್ತಿಗುಡಿ' ಸಿನಿಮಾ ಸೆಟ್ಟೇರುವುದರಲ್ಲಿತ್ತು. ಹೀಗಾಗಿ ಜೂ.ಎನ್ಟಿಆರ್ ಸಿನಿಮಾವನ್ನು ಕೈ ಬಿಟ್ಟಿದ್ದರು. ಈ ಬಗ್ಗೆ ತೆಲುಗು ಮಾದ್ಯಮಗಳಲ್ಲಿ ವಿಜಯ್ ಹೇಳಿಕೊಂಡಿದ್ದಾರೆ.

'ಕನ್ನಡ ಸಿನಿಮಾದಲ್ಲಿ ಬ್ಯುಸಿಯಾಗಿದ್ದೆ'
"ನನಗೆ ಜೂ.ಎನ್ಟಿಆರ್ ಆಭಿನಯದ 'ಜೈ ಲವ ಕುಶ' ಸಿನಿಮಾದಲ್ಲಿ ನಟಿಸುವುದಕ್ಕೆ ಆಫರ್ ಬಂದಿತ್ತು. ಆದರೆ, ಆ ವೇಳೆ ನಾನು ಕನ್ನಡದಲ್ಲಿ ಬ್ಯುಸಿಯಾಗಿದ್ದೆ. ಈ ಕಾರಣಕ್ಕೆ ಡೇಟ್ ಮ್ಯಾಚ್ ಆಗದೆ ನಟಿಸುವುದಕ್ಕೆ ಆಗಲಿಲ್ಲ. ಈಗ ಅವರ ಕುಟುಂಬದ ಹೀರೊ ಲೆಜೆಂಡ್ ಜೊತೆನೇ ನಟಿಸಿದ್ದೇನೆ." ಎಂದು ದುನಿಯಾ ವಿಜಯ್ ಹೇಳಿದ್ದಾರೆ.

ಜೂ.ಎನ್ಟಿಆರ್ ಮೊದಲ ಭೇಟಿನೇ ಅದ್ಭುತ
" ಇದರ ಹಿಂದೆ ದೊಡ್ಡ ಕಥೆನೇ ಇದೆ. ನನಗೆ ಮೊದಲ ಸಿನಿಮಾಗೆ ಫಿಲ್ಮ್ ಫೇರ್ ಬಂದಿತ್ತು. ಅಲ್ಲಿ ಅವರು ಕೂಡ ಇದ್ದರು. ಪ್ರಕಾಶ್ ರಾಜ್ ಸರ್ ಕೂಡ ಇದ್ದರು. ಆಗ ಕೂಡ ಸಿಂಪಲ್ ಆಗಿ, ಒಂದು ಟಿ-ಶರ್ಟ್ ಹಾಕೊಂಡು ಹೋಗಿದ್ದೆ. ಅವರು ಪ್ರಶಸ್ತಿಯ ಟೆನ್ಶನ್ನಲ್ಲಿ ಇದ್ದರು. ಆಗ ನಾನು ಹೋಗಿ ಸರ್ ನಿಮ್ಮ ಡೈಲಾಗ್ ಚೆನ್ನಾಗಿದೆ ಸರ್ ಅಂದಿದ್ದೆ. ಆ ಡೈಲಾಗ್ಗೆ ನಾನು ಅಭಿಮಾನಿ ಆಗಿ ಬಿಟ್ಟೆ ಸರ್ ಅಂತ ಹೇಳಿದ್ದೆ. ಅವರು ಓಕೆ ಓಕೆ.. ಅಂದಿದ್ದರು. ಆಗ ನನ್ನನ್ನು ಅವರು ಕಾಮನ್ ಮ್ಯಾನ್ ಅಂತಲೇ ಮಾತಾಡಿಸಿದ್ದರು. ನನಗೆ ಕೊನೆಯಲ್ಲಿ ಅವಾರ್ಡ್ ಅನೌನ್ಸ್ ಮಾಡಿದ್ರು. ಆಗ ವೇದಿಕೆ ಮೇಲೆ ನನ್ನನ್ನು ನೋಡಿದ್ರು. ಆಗ ನೀವಾ ಅಂತ ಅಶ್ಚರ್ಯ ಪಟ್ಟಿದ್ದರು." ಎಂದು ಮೊದಲ ಭೇಟಿಯ ಸ್ವಾರಸ್ಯಕರ ಘಟನೆಯನ್ನು ತಿಳಿಸಿದ್ದಾರೆ.

ಪ್ರತಾಪ್ ರೆಡ್ಡಿ ಪಾತ್ರ ಸೂಪರ್
ಟಾಲಿವುಡ್ನ ಕಿಂಗ್ ಆಫ್ ಮಾಸ್ ಬಾಲಕೃಷ್ಣ ಮುಂದೆ ದುನಿಯಾ ವಿಜಯ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಇಂದು (ಜನವರಿ 12) ಬಿಡುಗಡೆಯಾಗಿರುವ 'ವೀರ ಸಿಂಹ ರೆಡ್ಡಿ' ಸಿನಿಮಾದಲ್ಲಿ ದುನಿಯಾ ವಿಜಯ್ ಖಳನಾಯಕನಾಗಿ ಅಬ್ಬರಿಸಿದ್ದಾರೆ. ವಿಲನ್ ಲುಕ್ನಲ್ಲಿ ವಿಜಯ್ ನೋಡಿ ಪ್ರೇಕ್ಷಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Click it and Unblock the Notifications











