ಸೌಜನ್ಯ ಕೇಸ್ ವಿಡಿಯೋ ಮಾಡಿದ ಯೂಟ್ಯೂಬರ್ ಸಮೀರ್ ಎಂಡಿ; ಮುನ್ನೆಲೆಗೆ ಬಂತು ದುನಿಯಾ ವಿಜಯ್ ಹಳೆ ಟ್ವೀಟ್
ಕರ್ನಾಟಕದಲ್ಲಿ ಸೌಜನ್ಯ ಪ್ರಕರಣ ಮತ್ತೆ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಯೂಟ್ಯೂಬರ್ ಸಮೀರ್ ಎಂಡಿ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ದಶಕಗಳ ಹಿಂದಿನ ಸೌಜನ್ಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಬಗ್ಗೆ ಸವಿಸ್ತಾರವಾದ ವಿಡಿಯೋ ಮಾಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮತ್ತೆ ಸೌಜನ್ಯ ಪ್ರಕರಣದ ಬಗ್ಗೆ ಧ್ವನಿ ಎದ್ದಿದೆ. ಇದೇ ವೇಳೆ ದುನಿಯಾ ವಿಜಯ್ ಹಳೆಯ ಟ್ವೀಟ್ ಕೂಡ ವೈರಲ್ ಆಗುತ್ತಿದೆ.
ಸೌಜನ್ಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಇನ್ನೂ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಆಗಾಗ ದಿಢೀರನೇ ಈ ಪ್ರಕರಣ ಕಾವು ಪಡೆದುಕೊಳ್ಳುತ್ತೆ. ಕೆಲವು ದಿನ ಹಿಂದಷ್ಟೇ ಯೂಟ್ಯೂಬರ್ ಸಮೀರ್ ಎಂಡಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಮಾಡಿದ್ದರು. ಅದರಲ್ಲಿ ಸೌಜನ್ಯ ಕಾಣೆಯಾಗಿದ್ದ ದಿನ ಮನೆಯಿಂದ ಕಾಲೇಜಿಗೆ ಹೊರಡುವುದರಿಂದ ಹಿಡಿದು ಶವವಾಗಿ ಪತ್ತೆ ಆಗುವವರೆಗೂ ವಿಡಿಯೋದಲ್ಲಿ ಹೇಳಲಾಗಿದೆ.

ಈ ಕೇಸ್ ಯಾಕಿಷ್ಟು ಜಟಿಲವಾಗಿದೆ? ಕೇಸ್ ಹಾದಿ ತಪ್ಪುವುದಕ್ಕೆ ಪೊಲೀಸರ ಪಾತ್ರವೇನು? ಈ ಕೃತ್ಯ ಯಾರಿಂದ ಆಗಿದೆ ಅನ್ನೋದನ್ನು ತಮ್ಮ ವಿಡಿಯೋದಲ್ಲಿ ವಿವರಿಸಿದ್ದರು. ಧರ್ಮಸ್ಥಳ ಹಾಗೂ ಅದನ್ನು ನಡೆಸುತ್ತಿರುವ ಮನೆತನದ ವಿರುದ್ಧ ಪರೋಕ್ಷವಾಗಿ ಆ ವಿಡಿಯೋದಲ್ಲಿ ಆರೋಪ ಮಾಡಿದ್ದರು. ಕೆಲವೇ ದಿನಗಳಲ್ಲಿ ಈ ವೀಡಿಯೋ ವೈರಲ್ ಆಗಿತ್ತು. ಸುಮಾರು 10 ಮಿಲಿಯನ್ ವೀವ್ಸ್ ಆಗಿತ್ತು. ಅಷ್ಟೊಂದು ಸದ್ದು ಮಾಡಿತ್ತು.
ಇತ್ತ ಸಮೀರ್ ವೀಡಿಯೋ ವೈರಲ್ ಆಗುತ್ತಿದ್ದಂತೆ, ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ದುನಿಯಾ ವಿಜಯ್ ಮಾಡಿದ್ದ ಟ್ವೀಟ್ ಮತ್ತೆ ಮುನ್ನೆಲೆಗೆ ಬಂದಿದೆ. ಎರಡು ವರ್ಷಗಳ ಹಿಂದೆ ದುನಿಯಾ ವಿಜಯ್ ಕೂಡ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಟ್ಛೀಟ್ ಮಾಡಿದ್ದರು. ಅದರಲ್ಲಿ ಸೌಜನ್ಯ ಪ್ರಕರಣಕ್ಕೆ ಅಂತ್ಯ ಸಿಗುವವರೆಗೂ ಮಂಜುನಾಥನ ದರ್ಶನ್ ಮಾಡುವುದಿಲ್ಲ ಎಂದು ಟ್ವೀಟ್ ಮಾಡಿದ್ದರು. ಆ ಟ್ವೀಟ್ನಲ್ಲಿ ಏನಿತ್ತು ಅಂತ ನೋಡುವುದಾದರೇ.
"ಪ್ರತಿ ವರ್ಷ ಧರ್ಮಸ್ಥಳದ ದರ್ಶನ ಪಡೆಯುವುದು ವಾಡಿಕೆಯಾಗಿತ್ತು. ಆದರೆ ಸೌಜನ್ಯಳ ಪ್ರಕರಣದ ಇಂದಿನ ಬೆಳವಣಿಗೆ ನೋಡಿ ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಅನಿಸುತ್ತಿದೆ. ಸತ್ಯ ಎಂಬುದು ಸೂರ್ಯನ ಬೆಳಕಿದಂತೆ ಯಾರು ಹೆಚ್ಚು ಸಮಯ ಮರೆಮಾಚಲಾಗದು - ಬುದ್ಧ" ಎಂದು ದುನಿಯಾ ವಿಜಯ್ ಟ್ವೀಟ್ ಮಾಡಿದ್ದರು. ಯೂಟ್ಯೂಬರ್ ಸಮೀರ್ ವಿಡಿಯೋ ವೈರಲ್ ಆಗುತ್ತಿದ್ದಂತೆ ದುನಿಯಾ ವಿಜಯ್ ಟ್ವೀಟ್ ಕೂಡ ಸದ್ದು ಮಾಡುವುದಕ್ಕೆ ಶುರುಮಾಡಿದೆ.
ಇಂತಹ ವಿವಾದಾತ್ಮಕ ಪ್ರಕರಣದ ಬಗ್ಗೆ ಕನ್ನಡದ ಬಹುತೇಕ ನಟ-ನಟಿಯರು ಸೈಲೆಂಟ್ ಆಗಿದ್ದರು. ಅಲ್ಲೊಮ್ಮೆ ಇಲ್ಲೊಮ್ಮೆ ಪ್ರತಿಕ್ರಿಯಿಸಿದ್ದು ಬಿಟ್ಟರೆ, ಒಪನ್ ಆಗಿ ಸೌಜನ್ಯ ಪ್ರಕರಣದ ಬಗ್ಗೆ ಮಾತಾಡಿದ್ದು ತೀರಾ ವಿರಳ. ಆದರೆ, ದುನಿಯಾ ವಿಜಯ್ ಮಾತ್ರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದರು. ಆ ವೇಳೆ ಸೌಜನ್ಯ ಹತ್ತೆ ಪ್ರಕರಣದ ಬೆಂಬಲಕ್ಕೆ ದುನಿಯಾ ವಿಜಯ್ ನಿಂತಿದ್ದಕ್ಕೆ ರಾಜ್ಯದ ಮೂಲೆ ಮೂಲೆಯಲ್ಲಿರುವ ಜನರು ಮೆಚ್ಚುಗೆ ಸೂಚಿಸಿದ್ದರು.
ಇದೂವರೆಗೂ ದುನಿಯಾ ವಿಜಯ್ ಧರ್ಮಸ್ಥಳಕ್ಕೆ ಕಾಲಿಟ್ಟಿಲ್ಲ. ಮಂಜುನಾಥ ಸ್ವಾಮಿ ದರ್ಶನವನ್ನೂ ಪಡೆದಿಲ್ಲ. ಈ ಬದ್ಧತೆಗೆ ಕನ್ನಡಿಗರು ಮೆಚ್ಚುಗೆಯನ್ನೂ ಸೂಚಿಸಿದ್ದರು. ಈಗ ಮತ್ತೆ ಸೌಜನ್ಯ ಪ್ರಕರಣ ಮುನ್ನೆಲೆಗೆ ಬಂದ ಬೆನ್ನಲ್ಲೇ ಕನ್ನಡದ ತಾರೆಯರು ಪ್ರತಿಕ್ರಿಯೆ ನೀಡುತ್ತಾರಾ? ಮತ್ತೆ ದುನಿಯಾ ವಿಜಯ್ ಏನಾದರೂ ಹೇಳಬಹುದಾ? ಮತ್ತೆ ಈ ಕೇಸ್ ಬಗ್ಗೆ ಮಾತಾಡಬಹುದಾ? ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.


Click it and Unblock the Notifications











