ಎಮ್ಮೆ ಏರಿ 'ಕರಾವಳಿ'ಗೆ ಬಂದ ಪ್ರಜ್ವಲ್ ದೇವರಾಜ್: ಇದು ಮನುಷ್ಯ-ಪ್ರಾಣಿಯ ಸಂಘರ್ಷ?
'ಕಾಂತರ' ಸಿನಿಮಾ ಬಳಿಕ ಕರಾವಳಿ ಭಾಗದ ಕಥೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತಿದೆ. ಕನ್ನಡ ಫಿಲ್ಮ್ ಮೇಕರ್ಸ್ ಅಲ್ಲಿನ ಕಥೆಗಳನ್ನು ಹುಡುಕಿ ಹುಡುಕಿ ತೆಗೆಯುತ್ತಿದ್ದಾರೆ. ಮತ್ತೊಂದು ದಕ್ಷಿಣ ಕನ್ನಡ ಭಾಗದ ಕಥೆಯನ್ನೇ ಪ್ರೇಕ್ಷಕರಿಗೆ ಹೇಳುವುದಕ್ಕೆ ಹೊರಟಿದೆ ಪ್ರಜ್ವಲ್ ದೇವರಾಜ್ ತಂಡ.
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್, ನಿರ್ದೇಶಕ ಗುರುದತ್ ಗಾಣಿಗ ಜೋಡಿಯ ಸಿನಿಮಾಗೆ 'ಕರಾವಳಿ' ಎಂದು ಟೈಟಲ್ ಇಡಲಾಗಿದೆ. ಈ ಸಿನಿಮಾದ ಟೈಟಲ್ ಟೀಸರ್ ಈಗ ಸಿನಿಪ್ರಿಯರನ್ನು ಸೆಳೆಯುತ್ತಿದೆ. ಎಮ್ಮೆ ಏರಿ ಬರುವ ಪ್ರಜ್ವಲ್ ದೇವರಾಜ್ ಪಾತ್ರ ಪ್ರೇಕ್ಷಕರನ್ನು ಈಗಾಗಲೇ ಕಾಡುವುದಕ್ಕೆ ಶುರು ಮಾಡಿದೆ.

ದಕ್ಷಿಣ ಕನ್ನಡ ಭಾಗದ ಕಥೆಯೇ ಆಗಿರುವುದರಿಂದ 'ಕರಾವಳಿ' ಸಿನಿಮಾದ ಟೀಸರ್ ಅನ್ನು ಮಂಗಳೂರಿನಲ್ಲಿಯೇ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದೆ. ಇದು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸುತ್ತಿರುವ 40ನೇ ಸಿನಿಮಾ. ಗುರುದತ್ ಗಾಣಿಗ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಪ್ರಜ್ವಲ್ ದೇವರಾಜ್ ಹಾಗೂ ಗುರುದತ್ ಗಾಣಿಗ ಕಾಂಬಿನೇಷನ್ನಲ್ಲಿ ಬರುತ್ತಿರುವ ಚೊಚ್ಚಲ ಸಿನಿಮ.
ರೆಬೆಲ್ಸ್ಟಾರ್ ಅಂಬರೀಶ್ ನಟಿಸಿದ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾಗೆ ಗುರುದತ್ ಗಾಣಿಗ ಆಕ್ಷನ್ ಕಟ್ ಹೇಳಿದ್ದರು. ಈ ಸಿನಿಮಾ ಗುರುದತ್ ನಿರ್ದೇಶಿಸಿದ ಚೊಚ್ಚಲ ಸಿನಿಮಾ ಕೂಡ ಹೌದು. ಈಗ ಎರಡನೇ ಸಿನಿಮಾ 'ಕರಾವಳಿ'ಯನ್ನು ನಿರ್ದೇಶನ ಮಾಡುವುದಕ್ಕೆ ಹೊರಟಿದ್ದಾರೆ. ಟೀಸರ್ ಮೂಲಕವೇ ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವುದು ವಿಶೇಷ.
'ಕರಾವಳಿ' ಟೀಸರ್ ಕೂಡ ಅಷ್ಟೇ ಕುತೂಹಲಕಾರಿಯಾಗಿದೆ. ಒಂದು ಕಡೆ ತಾಯಿ ಮಗುವಿಗೆ ಜನ್ಮ ಕೊಡುವ ದೃಶ್ಯವಿದೆ. ಅದೇ ಇನ್ನೊಂದು ಕಡೆ ಎಮ್ಮೆ ಕೂಡ ತನ್ನ ಮಗುವಿಗೆ ಜನ್ಮ ಕೊಡುವ ದೃಶ್ಯ. ಈ ಎರಡೂ ವಿಭಿನ್ನ ದೃಶ್ಯಗಳು ಒಂದೇ ಕಾಲಘಟ್ಟದಲ್ಲಿ ನಡೆಯುತ್ತವೆ. ಅದ್ಯಾಕೆ ಈ ದೃಶ್ಯ? ಈ ದೃಶ್ಯದ ಮೂಲಕ ಅದೇನು ಹೇಳುವುದಕ್ಕೆ ಹೊರಟಿದ್ದಾರೆ? ಯಕ್ಷಗಾನದ ಹಿನ್ನೆಲೆ ಧ್ವನಿ ಎಲ್ಲವೂ ಕುತೂಹಲವನ್ನು ಕೆರಳಿಸುತ್ತಿದೆ.

'ಕರಾವಳಿ' ಟೀಸರ್ ಕೊನೆಯಲ್ಲಿ ಪ್ರಜ್ಚಲ್ ದೇವರಾಜ್ ಎಮ್ಮೆ ಮೇಲೆ ಏರಿ ಬಂದು ತಕ್ಷಣವೇ ಬೇರೊಂದು ವೇಷಕ್ಕೆ ಬದಲಾಗುವ ದೃಶ್ಯ ಮೈಝುಂ ಎನಿಸುತ್ತದೆ. ಸಿನಿಮಾದ ಟೈಟಲ್ ಕರಾವಳಿ ಆಗಿರುವುದರಿಂದ ಆ ಭಾಗದ ಸಂಸ್ಕೃತಿ, ದೈವ, ಯಕ್ಷಗಾನ ಮುಖ್ಯವಾಗಿ ಕಂಬಳ ಸೇರಿದಂತೆ ಎಲ್ಲವನ್ನು ಈ ಸಿನಿಮಾದಲ್ಲಿ ನೋಡುವ ಸಾಧ್ಯತೆ ಹೆಚ್ಚಿದೆ. ಇನ್ನು 'ಕರಾವಳಿ' ಸಿನಿಮಾಗೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅಭಿಮನ್ಯೂ ಸದಾನಂದನ್ ಕ್ಯಾಮರಾವರ್ಕ್ ಇದೆ.
ಪ್ರಜ್ವಲ್ ದೇವರಾಜ್ ಈ ಹಿಂದೆ ಇಂತಹ ಪಾತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಪ್ರಜ್ವಲ್ ವೃತ್ತಿ ಬದುಕಿಗೆ ಸಿಕ್ಕಿರೋ ವಿಭಿನ್ನ ಪಾತ್ರವಿದು. ಸಿನಿಮಾದ ಟೀಸರ್ ನೋಡ್ತಿದ್ರೆ ಪ್ರಜ್ವಲ್ 40ನೇ ಸಿನಿಮಾ ತುಂಬಾ ವಿಶೇಷ ಯಾವುದೇ ಅನುಮಾನವಿಲ್ಲ. ಸದ್ಯ 'ಕರಾವಳಿ' ಸಿನಿಮಾದ ಟೀಸರ್ ರಿಲೀಸ್ ಮಾಡಲಾಗಿದೆ. 'ಕರಾವಳಿ' ಸಿನಿಮಾ ಈ ತಿಂಗಳ ಕೊನೆಯಲ್ಲಿ, ಇಲ್ಲವೇ ಹೊಸ ವರ್ಷದ ಪ್ರಾರಂಭದಲ್ಲಿ ಶೂಟಿಂಗ್ಗೆ ಹೋಗುವ ಎಲ್ಲಾ ಸಾಧ್ಯತೆಗಳೂ ಇವೆ. 'ಕರಾವಳಿ' ಭಾಗದ ಕಥೆಯಾಗಿದ್ದರಿಂದ ಮಂಗಳೂರು ಸುತ್ತಮುತ್ತವೇ ಶೂಟಿಂಗ್ ನಡೆಯಲಿದೆ.


Click it and Unblock the Notifications











