ಸಂಜಯ್ ದತ್ರಂತೆ ಜೈಲಿನಲ್ಲಿರುವಾಗಲೇ 'ಡೆವಿಲ್' ಶೂಟಿಂಗ್ ಮಾಡಬಹುದೇ ದರ್ಶನ್? ಸದ್ಯಕ್ಕೆ ಸಾಧ್ಯವಿಲ್ಲ ಯಾಕೆ?
ರೇಣಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಆರೋಪಿಯಾಗಿದ್ದಾರೆ. ಈ ಸಂಬಂಧ ಪರಪ್ಪನ ಅಗ್ರಹಾರ ಜೈಲಿನಲ್ಲಿರುವುದರಿಂದ ದರ್ಶನ್ ಸಿನಿಮಾದ ಶೂಟಿಂಗ್ ನಿಂತಿದೆ. ಅಂದುಕೊಂಡಂತೆ ಆಗಿದ್ದರೆ, 'ಡೆವಿಲ್' ಸಿನಿಮಾದ ಮುಕ್ಕಾಲು ಭಾಗ ಶೂಟಿಂಗ್ ಮುಗಿಯಬೇಕಿತ್ತು. ಆದರೆ, ಕೊಲೆ ಕೇಸ್ನಲ್ಲಿ ದರ್ಶನ್ ಹೆಸರು ತಗಲಾಕಿಕೊಂಡಿದ್ದರಿಂದ ಈ ಸಿನಿಮಾದ ಶೂಟಿಂಗ್ ನಿಂತಿದೆ.
ದರ್ಶನ್ ಜೈಲು ಸೇರುತ್ತಿದ್ದಂತೆ ಸ್ಯಾಂಡಲ್ವುಡ್ನಲ್ಲಿ ಅಲ್ಲೋಲ ಕಲ್ಲೋಲ ಶುರುವಾಗಿತ್ತು. ದರ್ಶನ್ ಜೈಲಿಗೆ ಹೋದರೆ, ಚಿತ್ರರಂಗದ ಗತಿಯೇನು? ಡೆವಿಲ್ ಸಿನಿಮಾ ನಿರ್ಮಾಣ ಮಾಡುತ್ತಿರುವ ನಿರ್ಮಾಪಕರ ಗತಿಯೇನು? ಅನ್ನೋ ಪ್ರಶ್ನೆ ಹುಟ್ಟಿಕೊಂಡಿತ್ತು. ಚಿತ್ರರಂಗದ ನಿರ್ಮಾಪಕರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ದರ್ಶನ್ರನ್ನು ಬ್ಯಾನ್ ಮಾಡಬೇಕು ಅನ್ನುವ ಕೂಗು ಕೇಳಿಬಂದಾಗಲೂ ಫಿಲ್ಮ್ ಚೇಂಬರ್ನಿಂದ ಹಿಡಿದು ನಿರ್ಮಾಪಕರು ಇದೇ ಮಾತಾಡಿದ್ದರು.

ಆದ್ರೀಗ ದರ್ಶನ್ ಜೈಲಿನಲ್ಲಿ ಇರುವಾಗಲೇ 'ಡೆವಿಲ್' ಸಿನಿಮಾ ಶೂಟಿಂಗ್ನಲ್ಲಿ ಭಾಗಯಾಗಬಹುದೇ ಅನ್ನೋ ಚರ್ಚೆಯಾಗುತ್ತಿದೆ. ಅದಕ್ಕೆ ಬಾಲಿವುಡ್ ನಟ ಸಂಜಯ್ ದತ್ರನ್ನು ಉದಾಹರಣೆಯಾಗಿ ತೆಗೆದುಕೊಂಡಿದ್ದಾರೆ. ಈ ಹಿಂದೆ ಸಂಜಯ್ ದತ್ ಕೂಡ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವಾಗಲೇ ಸಿನಿಮಾ ಶೂಟಿಂಗ್ನಲ್ಲಿ ಭಾಗಿಯಾಗಿದ್ದರು. ಈಗ ಅದನ್ನೇ ಉದಾಹರಣೆಯಾಗಿಟ್ಟುಕೊಂಡು ದರ್ಶನ್ ಕೂಡ 'ಡೆವಿಲ್' ಸಿನಿಮಾ ಮುಗಿಸಬಹುದೇ? ಎಂದು ಚರ್ಚೆ ಮಾಡಲಾಗುತ್ತಿದೆ.
'ಕಾಟೇರ' ಸಿನಿಮಾ ಬಳಿಕ ದರ್ಶನ್ 'ಡೆವಿಲ್' ನೋಡುವುದಕ್ಕೆ ಅಭಿಮಾನಿಗಳು ಕಾತುರರಾಗಿದ್ದರು. ಮಿಲನ ಪ್ರಕಾಶ್ ಹಾಗೂ ದರ್ಶನ್ ಕಾಂಬಿನೇಷನ್ ಸಿನಿಮಾ ಆಗಿದ್ದರಿಂದ 'ಡೆವಿಲ್' ಮೇಲೆ ಫ್ಯಾನ್ಸ್ ದೊಡ್ಡ ಮಟ್ಟದಲ್ಲಿ ನಿರೀಕ್ಷೆಯನ್ನೇ ಇಟ್ಟುಕೊಂಡಿದ್ದರು. ಆ ಸಿನಿಮಾ ಶೂಟಿಂಗ್ ನಡೆಯುತ್ತಿರುವಾಗಲೇ ಈ ದುರ್ಘಟನೆ ನಡೆದು ಹೋಗಿತ್ತು. ವಿಧಿಯಿಲ್ಲದೆ 'ಡೆವಿಲ್' ಸಿನಿಮಾ ಶೂಟಿಂಗ್ ಅನ್ನು ಸ್ಥಗಿತಗೊಳಿಸಬೇಕಾಗಿ ಬಂದಿದೆ. ಸದ್ಯ ಆರೋಪಿ ಸ್ಥಾನದಲ್ಲಿದ್ದರೂ, ಜೈಲಿನಲ್ಲಿ ಇರಬೇಕಾಗಿದ್ದರಿಂದ ದರ್ಶನ್ ಸದ್ಯಕ್ಕಂತೂ ಹೊರಬರುವುದು ಅಸಾಧ್ಯ.

ಇನ್ನು ಸಂಜಯ್ ದತ್ ಕೂಡ ಐದು ವರ್ಷಗಳ ಕಾಲ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದು ಗೊತ್ತೇ ಇದೆ. ಆದರೆ, ಸಂಜಯ್ ದತ್ ಜೈಲಿನಲ್ಲಿ ಇರುವಾಗಲೇ ನ್ಯಾಯಾಲಯದಿಂದ ವಿಶೇಷ ಅನುಮತಿಯನ್ನು ಪಡೆದು ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. 2013ರಲ್ಲಿ ಪರೋಲ್ ಪಡೆದು 'ಝಂಜೀರ್' ಅನ್ನುವ ಸಿನಿಮಾದಲ್ಲಿ ನಟಿಸಿ ಬಂದಿದ್ದರು. ಹಾಗೇ ಪೊಲೀಸ್ಗಿರಿ ಡಬ್ಬಿಂಗ್ ಕೂಡ ಮಾಡಿದ್ದರು. ಈ ಎರಡೂ ಸಿನಿಮಾಗಳ ಕೆಲಸವನ್ನು ಸಂಜಯ್ ದತ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವಾಗಲೇ ಮುಗಿಸಿದ್ದರು.
ಈಗ ಇದನ್ನೇ ಉದಾಹರಣೆಯಾಗಿಟ್ಟುಕೊಂಡು ದರ್ಶನ್ ಅಭಿಮಾನಿಗಳು ಕೂಡ 'ಡೆವಿಲ್' ಶೂಟಿಂಗ್ ಆಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ದರ್ಶನ್ ಕೂಡ ಪೆರೋಲ್ ಪಡೆದು ಜೈಲಿನಿಂದ ಹೊರಬಂದು ಡೆವಿಲ್ ಶೂಟಿಂಗ್ನಲ್ಲಿ ಭಾಗಿಯಾಗಬಹುದು. ಶೀಘ್ರದಲ್ಲಿಯೇ ಅವರ ಸಿನಿಮಾ ನೋಡಬಹುದು ಎಂದು ಚರ್ಚೆ ಮಾಡುತ್ತಿದ್ದಾರೆ. ಆದರೆ, ಇದು ಸದ್ಯಕ್ಕೆ ಸಾಧ್ಯವಿಲ್ಲ ಎನ್ನಲಾಗುತ್ತಿದೆ.
ದರ್ಶನ್ ಇನ್ನೂ ಆರೋಪಿ ಅಷ್ಟೇ. ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ ಬಳಿಕ ನ್ಯಾಯಾಲಯದಲ್ಲಿ ವಾದ-ವಿವಾದಗಳು ನಡೆಯಬೇಕು. ಆ ಬಳಿಕ ದರ್ಶನ್ ತಪ್ಪು ಮಾಡಿದ್ದಾರೆ ಅನ್ನೋದು ಸಾಬೀತಾದರೆ, ನ್ಯಾಯಾಧೀಶರು ಶಿಕ್ಷೆಯ ಪ್ರಮಾಣವನ್ನು ಘೋಷಣೆ ಮಾಡುತ್ತಾರೆ. ಆ ನಂತರವಷ್ಟೇ ಪೆರೋಲ್ ಮೂಲಕ ಹೊರಬಂದು ಶೂಟಿಂಗ್ನಲ್ಲಿ ಭಾಗವಹಿಸಬಹುದು ಎನ್ನುತ್ತಾರೆ ಕಾನೂನು ತಜ್ಞರು. ಅದೇ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಿದ ಬಳಿಕ ಜಾಮೀನು ಸಿಕ್ಕರೂ ಶೂಟಿಂಗ್ನಲ್ಲಿ ಭಾಗಿಯಾಗಬಹುದು. ಎಲ್ಲದಕ್ಕೂ ಚಾರ್ಜ್ಶೀಟ್ ಸಲ್ಲಿಸುವವರೆಗೂ ಕಾಯಲೇಬೇಕು.


Click it and Unblock the Notifications











