Exclusive: ಮುನಿರತ್ನ ವಿರುದ್ಧ ಅಖಾಡಕ್ಕಿಳಿಯುತ್ತಾರಾ 'ಪ್ರೇಮಿಸಂ' ಸ್ಟಾರ್? ಚೇತನ್ ಚಂದ್ರ ನಿರ್ಧಾರದ ಗುಟ್ಟೇನು?
ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಜ್ಯದ ರಾಜಕೀಯ ಅಖಾಡದಲ್ಲಿ ಬಿರುಸಿನ ಚಟುವಟಿಗಳು ನಡೆಯುತ್ತಲೇ ಇವೆ. ಪಕ್ಷಬಿಟ್ಟು ಬೇರೆ ಪಕ್ಷಕ್ಕೆ ಹಾರೋದು. ಟಿಕೆಟ್ಗಾಗಿ ಲಾಬಿ, ಎದುರಾಳಿಗಳನ್ನು ಹೆಣೆಯಲು ರಣತಂತ್ರಗಳನ್ನು ರೂಪಿಸುವಲ್ಲಿ ರಾಜಕೀಯ ಮುಖಂಡರು ನಿರತರಾಗಿದ್ದಾರೆ.
ಈ ಮಧ್ಯೆ ಚುನಾವಣಾ ಕಣದಲ್ಲಿ ಹೊಸ ಹೊಸ ಹೆಸರುಗಳು ಕೇಳಿ ಬರುತ್ತಿವೆ. ಸದ್ಯ ರಾಜಕೀಯ ಹಾಗೂ ಸಿನಿಮಾ ವಲಯದಲ್ಲಿ ಹೊಸ ಹೆಸರೊಂದು ಓಡಾಡುತ್ತಿದೆ. ಅವರೇ ಚೇತನ್ ಚಂದ್ರ. ಕನ್ನಡ ಚಿತ್ರದಲ್ಲಿ ಸುಮಾರು 15 ವರ್ಷಗಳಿಂದ ನಟಿಸುತ್ತಿರುವ ಹೀರೊ ಈ ಬಾರಿ ಚುನಾವಣೆಗೆ ನಿಲ್ಲುತ್ತಾರೆ ಅನ್ನೋ ಸುದ್ದಿ ಓಡಾಡುತ್ತಿದೆ.

ಸ್ಯಾಂಡಲ್ವುಡ್ನ ಈ ಸ್ಟಾರ್ ನಟ ಕನ್ನಡ ಚಿತ್ರರಂಗಕ್ಕೆ ಚಿರಪರಿಚಿತ. 'ಪಿಯುಸಿ', 'ಪ್ರೇಮಿಸಂ', 'ರಾಜಧಾನಿ','ಕುಂಬರಾಶಿ', 'ಜಾತ್ರೆ', 'ಹುಚ್ಚುಡುಗ್ರು', 'ಸಂಯುಕ್ತ 2', 'ಪ್ಲಸ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಸದ್ಯ ಅವರ 'ಪ್ರಭುತ್ವ' ಸಿನಿಮಾ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಈ ಗ್ಯಾಪ್ನಲ್ಲಿ ರಾಜಕೀಯಕ್ಕೂ ಧುಮುಕುತ್ತಾರೆ ಅನ್ನೋ ಸುದ್ದಿ ಓಡಾಡುತ್ತಿದೆ.
ಹಾಲಿ ಶಾಸಕ ಮುನಿರತ್ನ ವಿರುದ್ಧ ಚೇತನ್ ಚಂದ್ರ ಸ್ಪರ್ಧೆ?
ಕನ್ನಡ ಚಿತ್ರರಂಗದಲ್ಲಿ ಇಂತಹದ್ದೊಂದು ಸುದ್ದಿ ಓಡಾಡುತ್ತಿದೆ. ನಟ ಚೇತನ್ ಚಂದ್ರ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ. ಈ ಬಾರಿ ಎಲೆಕ್ಷನ್ನಲ್ಲೇ ಸ್ಪರ್ಧೆ ಮಾಡಲಿದ್ದು, ಬೆಂಗಳೂರಿನ ರಾಜರಾಜೇಶ್ವರಿ ನಗರದಿಂದ ಕಣಕ್ಕಿಳಿಯಲಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.
ಸದ್ಯ ರಾಜರಾಜೇಶ್ವರಿ ವಿಧಾನ ಸಭಾ ಕ್ಷೇತ್ರದ ಹಾಲಿ ಶಾಸಕ ಮುನಿರತ್ನ. ಇವರ ವಿರುದ್ಧವೇ ನಟ ಚೇತನ್ ಚಂದ್ರ ಕಣ್ಣಕ್ಕಿಳಿಯಲು ನಿರ್ಧರಿಸಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಆದರೆ, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದ್ದಾರಾ? ಇಲ್ಲಾ ಯಾವುದಾದರೂ ಪಕ್ಷದಿಂದ ಚುನಾವಣೆ ಧುಮುಕುತ್ತಾರಾ? ಅನ್ನೋದು ಇನ್ನಷ್ಟ ಸ್ಪಷ್ಟ ಆಗಬೇಕಿದೆ. ಚುನಾವಣೆ ಸ್ಪರ್ಧೆ ಮಾಡುವ ಬಗ್ಗೆ ಫಿಲ್ಮಿಬೀಟ್ ಚೇತನ್ ಚಂದ್ರ ಸಂಪರ್ಕ ಮಾಡಿತ್ತು. ಈ ಬಗ್ಗೆ ಚೇತನ್ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ.

ರಾಜಕೀಯ ಎಂಟ್ರಿ ಬಗ್ಗೆ ಏನಂತಾರೆ ಚೇತನ್ ಚಂದ್ರ?
ಚೇತನ್ ಚಂದ್ರ ಸದ್ಯ ರಾಜರಾಜೇಶ್ವರಿ ನಗರದಿಂದಲೇ ಕಣಕ್ಕಿಳಿಯುತ್ತಾರೆ ಅನ್ನೋ ಮಾತು ಬಲವಾಗಿ ಕೇಳಿಬರುತ್ತಿದೆ. ಈ ಬಗ್ಗೆ ಫಿಲ್ಮಿಬೀಟ್ಗೆ ಸ್ವತ: ಚೇತನ್ ಪ್ರತಿಕ್ರಿಯಿಸಿದ್ದಾರೆ. "ರಾಜಕೀಯಕ್ಕೆ ಬರಬೇಕು ಅನ್ನೋದು ಇವತ್ತಿನ ಆಲೋಚನೆ ಅಲ್ಲ. ಹಿಂದಿನಿಂದಲೂ ಇತ್ತು. ಈಗ ದೊಡ್ಡ ದೊಡ್ಡವರೊಂದಿಗೆ ಮಾತುಕತೆನೂ ನಡೆಯುತ್ತಿದೆ. ಅದು ಯಾವ ರೂಪ ಪಡೆದುಕೊಳ್ಳುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ." ಎಂದು ಫಿಲ್ಮಿಬೀಟ್ಗೆ ಮಾಹಿತಿ ಚೇತನ್ ಚಂದ್ರ ಮಾಹಿತಿ ನೀಡಿದ್ದಾರೆ.
"ಈ ವಿಷಯದ ಬಗ್ಗೆ ನಾನು ಏನೂ ಮಾತಾಡುವ ಹಾಗಿಲ್ಲ ಅಂತ ಸ್ಟ್ರಿಕ್ಟ್ ಆಗಿ ಹೇಳಿದ್ದಾರೆ. ಅದರ ಬಗ್ಗೆ ನಾನು ಜಾಸ್ತಿ ಏನೂ ಮಾತಾಡುವ ಹಾಗಿಲ್ಲ. ನಾವು ಅಂದುಕೊಂಡಂತೆ ಆದರೆ, ತುಂಬಾನೇ ಚೆನ್ನಾಗಿರುತ್ತೆ. ತುಂಬಾ ದಿನ ಏನೂ ಇಲ್ಲ ನೋಡೋಣ ಏನಾಗುತ್ತೆ ಅಂತ. ಸದ್ಯ ಯಾವುದಾದರೂ ಪಕ್ಷದಿಂದ ನಿಲ್ಲುತ್ತೇನಾ? ಸ್ವತಂತ್ರವಾಗಿ ನಿಲ್ಲುತ್ತೇನಾ ಅನ್ನೋದು ಇನ್ನೂ ಬಿಟ್ಟುಕೊಡುವ ಹಾಗಿಲ್ಲ." ಎನ್ನತ್ತಾರೆ ನಟ ಚೇತನ್ ಚಂದ್ರ.
ಎಲೆಕ್ಷನ್ಗೂ ಮೊದ್ಲೇ ಪ್ರಭುತ್ವ ರಿಲೀಸ್
ರಾಜಕೀಯ ಕಾವು ಏರುತ್ತಿರುವಾಗಲೇ ಚೇತನ್ ಚಂದ್ರ ನಟಿಸಿದ 'ಪ್ರಭುತ್ವ' ಸಿನಿಮಾ ಕೂಡ ಸದ್ದು ಮಾಡುತ್ತಿದೆ. ರಾಜಕೀಯವನ್ನು ಗಮನದಲ್ಲಿ ಇಟ್ಟುಕೊಂಡೇ ಸಿನಿಮಾ ಮಾಡಿದ್ದಾರಾ? ಅನ್ನೋ ಪ್ರಶ್ನೆ ಕೂಡ ಈ ಸಂದರ್ಭದಲ್ಲಿ ಎದ್ದಿದೆ.
"ನಮ್ಮ ಸಿನಿಮಾ ಪ್ರಭುತ್ವ ಏಪ್ರಿಲ್ನಲ್ಲಿ ರಿಲೀಸ್ ಆಗುತ್ತಿದೆ. ನಮ್ಮ ಸಮಾಜವನ್ನು ತಲೆಯಲ್ಲಿಟ್ಟುಕೊಂಡು ಮಾಡಿದ ಸಿನಿಮಾ. ಅದು ಯಾವ ಪಕ್ಷವನ್ನು ಇಟ್ಟುಕೊಂಡು ಮಾಡಿದ ಸಿನಿಮಾ ಅಲ್ಲ. ಜನಸಾಮಾನ್ಯರನ್ನು ತಲೆಯಲ್ಲಿಟ್ಟುಕೊಂಡು ಮಾಡಿದ ಸಿನಿಮಾ.ಜನಕ್ಕೆ ಸಖತ್ ಇಷ್ಟ ಆಗುತ್ತೆ. ಇನ್ನು ರಾಜಕೀಯದ ಬಗ್ಗೆ ಹೆಚ್ಚು ಮಾತಾಡುವಂತಿಲ್ಲ. ಸದ್ಯ ಇನ್ನೂ ಮಾತುಕತೆ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಹೇಳುತ್ತೇನೆ."
ಚೇತನ್ ಚಂದ್ರ 'ಪ್ರಭುತ್ವ' ಸಿನಿಮಾದಿಂದ ಪ್ರೇರಿತರಾಗಿ ರಾಜಕೀಯಕ್ಕೆ ಧುಮುಕುತ್ತಿಲ್ಲ. ಬಹಳ ಹಿಂದಿನಿಂದಲೇ ಈ ಬಗ್ಗೆ ಮಾತುಕತೆ ನಡೆಯುತ್ತಿತ್ತು ಎಂದಿದ್ದಾರೆ ಚೇತನ್. ಸ್ಥಿತಿವಂತರಾಗಿರೋ ಚೇತನ್ ಚಂದ್ರಗೆ ಈ ಹಿಂದೆಯೇ ಕಾರ್ಪೋರೆಟರ್ ಎಲೆಕ್ಷನ್ಗೆ ಆಫರ್ ಬಂದಿತ್ತಂತೆ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಐದು ವರ್ಷದ ಹಿಂದೆಯೇ ಈ ಯೋಜನೆ ರೂಪಿಸಿದ್ದಾಗಿ ಹೇಳಿದ್ದಾರೆ.


Click it and Unblock the Notifications











