ಪವಿತ್ರಾ ಗೌಡಗೆ ಮನೆಯೂಟ.. ಕೋರ್ಟ್ ಒಪ್ಪಿದರೂ ಜೈಲಾಧಿಕಾರಿಗಳು ಒಪ್ಪುತ್ತಿಲ್ಲವೇಕೆ?
ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಗಳಾಗಿ ಪವಿತ್ರಾ ಗೌಡ, ದರ್ಶನ್ ಸೇರಿದಂತೆ ಸಂಗಡಿಗರು ಜೈಲು ಸೇರಿದ್ದಾರೆ. ಪೊಲೀಸರು ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ಪವಿತ್ರಾ ಗೌಡ ಮೊದಲನೇ ಆರೋಪಿಯಾಗಿದ್ದಾರೆ. ಹಾಗೇ ಎರಡನೇ ಆರೋಪಿಯಾಗಿ ದರ್ಶನ್ ಹೆಸರಿದೆ. ಹೀಗಾಗಿ ಈ ಪ್ರಕರಣದಲ್ಲಿ ಇವರಿಬ್ಬರೂ ಪ್ರಮುಖ ಆರೋಪಿಗಳಾಗಿದ್ದಾರೆ.
ಜಾಮೀನು ರದ್ದಾಗಿ ಎರಡನೇ ಬಾರಿ ಜೈಲು ಸೇರಿರುವ ದರ್ಶನ್, ಪವಿತ್ರಾ ಗೌಡ ಹಾಗೂ ಸಂಗಡಿಗರು ನ್ಯಾಯಾಲಯದ ಮುಂದೆ ಒಂದೊಂದೆ ಬೇಡಿಕೆಗಳನ್ನು ಇಡುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ಪವಿತ್ರಾ ಗೌಡ ಪರ ವಕೀಲರು ಜೈಲಿನಲ್ಲಿ ಊಟ ಸರಿಯಾಗಿ ಸಿಗುತ್ತಿಲ್ಲ. ಇದರಿಂದ ಆರೋಗ್ಯದ ಪರಿಣಾಮ ಬೀರುತ್ತೆ ಎಂದು ವಾದವನ್ನು ಮಂಡಿಸಿ, ಮನೆಯೂಟ ಪಡೆಯುವುದಕ್ಕೆ ನ್ಯಾಯಾಧೀಶರಿಂದ ಅನುಮತಿಯನ್ನು ಪಡೆದಿದ್ದರು.

ಪವಿತ್ರಾ ಗೌಡ ಜಾಮೀನು ಸಿಗದೇ ಇದ್ದರೂ, ಮನೆಯೂಟ ಸಿಗುತ್ತೆ ಎಂಬ ಖುಷಿಯಲ್ಲಿದ್ದರು. ಆದರೆ, ಪವಿತ್ರಾ ಗೌಡ ಹುಟ್ಟುಹಬ್ಬದ ದಿನವೇ ಪರಪ್ಪನ ಅಗ್ರಹಾರದ ಜೈಲಾಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಮನೆಯೂಟಕ್ಕೆ ನೀಡಿರುವ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಏರುವ ಸಾಧ್ಯತೆಯಿದೆ. ಅಷ್ಟಕ್ಕೂ ಜೈಲಾಧಿಕಾರಿಗಳು ಪವಿತ್ರಾ ಗೌಡಗೆ ಮನೆಯೂಟ ನೀಡುವುದಕ್ಕೆ ಹಿಂದೇಟು ಹಾಕುತ್ತಿರುವುದು ಯಾಕೆ? ತಿಳಿಯುವುದಕ್ಕೆ ಮುಂದೆ ಓದಿ.
ರೇಣುಕಾಸ್ವಾಮಿ ಪ್ರಕರಣದ ಮೊದಲನೇ ಆರೋಪಿಯಾಗಿರುವ ಪವಿತ್ರಾ ಗೌಡಗೆ ಜೈಲೂಟ ಹಿಡಿಸುತ್ತಿಲ್ಲ. ಹೀಗಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಜೈಲೂಟ ಸರಿಯಿಲ್ಲದೆ ಎಂದು ವಕೀಲರು ಮಂಡಿಸಿದ್ದರಿಂದ ಅವರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಧೀಶರು ಮನೆಯೂಟಕ್ಕೆ ಅನುಮತಿಯನ್ನು ನೀಡಿದ್ದರು. ಆದರೆ, ಜೈಲಾಧಿಕಾರಿಗಳಿಗೆ ಮನೆಯೂಟ ನೀಡಲು ಒಪ್ಪಿಗೆ ಇಲ್ಲ ಎನ್ನಲಾಗಿದೆ. ಅದಕ್ಕೆ ಅವರದ್ದೇ ಆದ ಕೆಲವು ಕಾರಣಗಳು ಇವೆ.

ಜೈಲಿನಲ್ಲಿ ವಿಚಾರಾಧೀನ ಕೈದಿಗಳು ಸಾಕಷ್ಟು ಮಂದಿ ಇದ್ದಾರೆ. ಒಂದು ವೇಳೆ ಪವಿತ್ರಾ ಗೌಡಗೆ ಜೈಲೂಟದ ಬದಲು ಮನೆಯೂಟ ನೀಡಿದರೆ, ಅವರೆಲ್ಲರೂ ಮನೆಯೂಟ ಬೇಕೆಂದು ಪಟ್ಟು ಹಿಡಿಯುವ ಸಾಧ್ಯತೆಯಿದೆ. ಈಗಾಗಲೇ ಕೆಲವು ಮಂದಿ ಕೈದಿಗಳು ಈ ಬೇಡಿಕೆಯನ್ನು ಇಟ್ಟಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕೆ ಜೈಲಾಧಿಕಾರಿಗಳು ನ್ಯಾಯಾಧೀಶರಿಗೆ ಈ ಸಮಸ್ಯೆಯನ್ನು ಮನವರಿಕೆ ಮಾಡಿಸಿ, ಮನೆಯೂಟ ಕ್ಯಾನ್ಸಲ್ ಮಾಡಿಸುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಇನ್ನೊಂದು ಕಡೆ ಕೈದಿಗಳ ಮನೆಯವರು ಮನೆಯೂಟ ತಂದಾಗ ಪ್ರತಿಬಾರಿಗೂ ತಪಾಸಣೆ ಮಾಡಬೇಕಾಗುತ್ತದೆ. ಜೈಲಿನಲ್ಲಿರುವ ಸಾವಿರಾರು ಮಂದಿ ವಿಚಾರಣಾಧೀನ ಕೈದಿಗಳ ಮನೆಯೂಟವನ್ನು ತಪಾಸಣೆ ಮಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಅಲ್ಲದೆ ಊಟದ ಜೊತೆಗೆ ಊಟ ತರುವವರನ್ನೂ ತಪಾಸಣೆ ಮಾಡಬೇಕಾಗುತ್ತೆ. ಇದು ಜೈಲಿನ ಭದ್ರತೆಗೆ ದೊಡ್ಡ ಸವಾಲು ಎಂದು ಹೇಳಲಾಗಿದೆ. ಇದಕ್ಕಾಗಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕಾಗುತ್ತೆ ಎಂದು ಹೈ ಕೋರ್ಟ್ಗೆ ಮನವರಿಕೆ ಮಾಡಿಕೊಡುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.
ಪವಿತ್ರಾ ಗೌಡಗೆ ಮನೆಯೂಟಕ್ಕೆ ಸಿಕ್ಕಿರುವ ಅವಕಾಶದಿಂದ ದರ್ಶನ್ ಮುಖದಲ್ಲಿ ನೆಮ್ಮದಿ ಕಂಡಿತ್ತು. ಆದ್ರೀಗ ಜೈಲಾಧಿಕಾರಿಗಳು ಮನೆಯೂಟ ನೀಡುವುದಕ್ಕೆ ತಡೆ ತರಲು ಹೈಕೋರ್ಟ್ ಮೊರೆ ಹೋಗುತ್ತಿರುವ ವಿಷಯ ಅವರಿಗೆ ನಿರಾಸೆ ಮೂಡಿಸಿರಬಹುದು. ಸದ್ಯ ರೇಣುಕಾಸ್ವಾಮಿ ಪ್ರಕರಣ ದಿನದಿಂದ ದಿನಕ್ಕೆ ಪವಿತ್ರಾ ಗೌಡ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಚಾಲೆಂಜಿಂಗ್ ಆಗಿ ಪರಿಣಮಿಸುತ್ತಿದೆ.


Click it and Unblock the Notifications











