ವಿಷ್ಣುದಾದನ 75ನೇ ಹುಟ್ಟುಹಬ್ಬವನ್ನು 'ಯಜಮಾನರ ಅಮೃತ ಮಹೋತ್ಸವ'ವೆಂದು ಆಚರಣೆ; ಹೇಗಿರುತ್ತೆ ಸೆಲೆಬ್ರೆಷನ್?
ಸಾಹಸ ಸಿಂಹ ವಿಷ್ಣುವರ್ಧನ್ ಅಗಲಿ ಒಂದೂವರೆ ದಶಕಗಳಾಗುತ್ತಿದ್ದರೂ ಅಭಿಮಾನಿಗಳ ಮಾನಸದಿಂದ ಮಾತ್ರ ಮರೆಯಾಗಿಲ್ಲ. ವಿಷ್ಣುದಾದ ಇನ್ನೂ ಇದ್ದಿದ್ದರೆ, 75ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಆದರೆ, ಅಭಿಮಾನಿಗಳು ಸುಮ್ಮನೆ ಕೂತಿಲ್ಲ. ತಮ್ಮ ನೆಚ್ಚಿನ ತಾರೆಯ ಬರ್ತ್ಡೇಯನ್ನು ಅದ್ಧೂರಿಯಾಗಿ ಆಚರಣೆ ಮಾಡುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಹೌದು, ಡಾ. ವಿಷ್ಣುವರ್ಧನ್ ಅವರ 75ನೇ ಹುಟ್ಟುಹಬ್ಬವನ್ನು 'ಯಜಮಾನರ ಅಮೃತ ಮಹೋತ್ಸವ'ವೆಂದು ಆಚರಿಸುವುದಕ್ಕೆ ಅಭಿಮಾನಿಗಳು ನಿರ್ಧರಿಸಿದ್ದಾರೆ. ಡಾ.ವಿಷ್ಣು ಸೇನಾ ಸಮಿತಿ ಈ ನಿರ್ಧಾರವನ್ನು ಕೈ ಗೊಂಡಿದ್ದು ಅದ್ಧೂರಿಯಾಗಿ ಆಚರಣೆ ಮಾಡುವುದಕ್ಕೆ ನಿರ್ಧರಿಸಿದೆ. ಕನ್ನಡ ಚಿತ್ರರಂಗದ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆಗಳು ಇವೆ. ಇನ್ನೂ ಎರಡೂವರೆ ತಿಂಗಳು ಉಳಿದುಕೊಂಡಿದ್ದರಿಂದ ಈಗಿನಿಂದಲೇ ರೂಪುರೇಷೆಗಳನ್ನು ರೂಪಿಸಲಾಗುತ್ತಿದೆ.

'ಯಜಮಾನರ ಅಮೃತ ಮಹೋತ್ಸವ'ವನ್ನು ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಹಾಗೂ ವಿಷ್ಣುದಾದ ಅವರ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಎಸ್.ನಾರಾಯಣ್ ವಹಿಸಿಕೊಂಡಿದ್ದಾರೆ. ಇವರೊಂದಿಗೆ ಮತ್ತೊಬ್ಬರ ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಮಾರ್ಗದರ್ಶಕರಾಗಿ ಇರಲಿದ್ದಾರೆ. ಈ ಕುರಿತು ಡಾ.ವಿಷ್ಣು ಸೇನಾ ಸಮಿತಿ ಮಾಹಿತಿಯನ್ನು ಹಂಚಿಕೊಂಡಿದೆ. ಹಾಗಿದ್ದರೆ, ಯಾರೆಲ್ಲ ಏನೆಲ್ಲ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆಂದು ತಿಳಿಯುವುದಕ್ಕೆ ಮುಂದೆ ಓದಿ.
ಕನ್ನಡ ಚಿತ್ರರಂಗದ ಗಣ್ಯರು 'ಯಜಮಾನರ ಅಮೃತ ಮಹೋತ್ಸವ' ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುವುದಕ್ಕೆ ಮುಂದೆ ಬಂದಿದ್ದಾರೆ. ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ರಾಜೇಂದ್ರ ಸಿಂಗ್ ಬಾಬು, ಎಸ್.ನಾರಾಯಣ್ ಜೊತೆಗೆ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕ ಸಂಘ ಸೇರಿದಂತೆ ಇಡೀ ಚಿತ್ರರಂಗ ಸಹಕಾರ ನೀಡಲಿದೆ.
ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಈ ಕಾರ್ಯಕ್ರಮಕ್ಕೆ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಡಾ.ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವ ಕಾರ್ಯಕ್ರಮ ಈ ಅಗತ್ಯವಾಗಿ ಆಗಬೇಕಿದೆ. ಎಲ್ಲಾ ನಟರಿಗೂ ಇಂತಹದ್ದೊಂದು ಗೌರವ ಸಂದಿದೆ. ಆದರೆ, ಡಾ.ವಿಷ್ಣುವರ್ಧನ್ ಅಂತಹ ನಟರಿಗೆ ಇಂತಹ ಗೌರವ ಸಿಕ್ಕಿಲ್ಲ. ಅಲ್ಲದೆ ಕನ್ನಡ ಚಲನ ಚಿತ್ರರಂಗದಲ್ಲಿಯೂ ಇಂಥದ್ದೊಂದು ದೊಡ್ಡ ಕಾರ್ಯಕ್ರಮವನ್ನು ಆಯೋಜಿಸುವ ತುರ್ತು ಅಗತ್ಯವಿದೆ. ಇದರಲ್ಲಿ ಕಲಾವಿದರ ಸಂಘ ಮತ್ತು ಕಲಾವಿದರು ಭಾಗವಹಿಸುತ್ತಾರೆಂದು ಬೆಂಬಲ ಸೂಚಿಸಿದ್ದಾರೆ.
ಇನ್ನು ರಾಜೇಂದ್ರ ಸಿಂಗ್ ಬಾಬು ಅವರು ಭಾರತೀಯ ಚಿತ್ರರಂಗದಲ್ಲಿರುವ ವಿಷ್ಣುವರ್ಧನ್ ಅವರ ಆಪ್ತರನ್ನೆಲ್ಲ ಆಹ್ವಾನಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಹಿಂದಿ, ತಮಿಳು, ಮಲಯಾಳಂ, ತೆಲುಗು ಚಿತ್ರರಂಗದ ಖ್ಯಾತ ನಟರನ್ನು ಈ ಅಮೃತ ಮಹೋತ್ಸವಕ್ಕೆ ಕರೆದುಕೊಂಡು ಬರುವುದಾಗಿ ಹೇಳಿದ್ದಾರೆ. ಹೀಗಾಗಿ ಇದೊಂದು ತಾರೆಯರ ಸಮ್ಮಿಲನ ಆಗಲಿದೆ.

ಇನ್ನು 'ಯಜಮಾನರ ಅಮೃತ ಮಹೋತ್ಸವ' ಕಾರ್ಯಕ್ರಮಗಳ ಬಗ್ಗೆ ಎಸ್.ನಾರಾಯಣ್ ಮಾಹಿತಿ ನೀಡಿದ್ದಾರೆ. ಈ ಅಮೃತ ಮಹೋತ್ಸವವನ್ನು ಅರಮನೆ ಮೈದಾನದಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾಗುತ್ತೆ ಎಂದು ಹೇಳಿದ್ದಾರೆ. ಎಸ್.ನಾರಾಯಣ್ ಈಗಾಗಲೇ 'ಅಮರ ನಟ' ಎಂಬ ಕಾರ್ಯಕ್ರಮವನ್ನು ಡಾ. ರಾಜ್ ಕುಮಾರ್ ಅವರ ಹೆಸರಲ್ಲಿ, 'ಅಂಬಿ ಸಂಭ್ರಮ' ಕಾರ್ಯಕ್ರಮವನ್ನು ಡಾ. ಅಂಬರೀಶ್ಗಾಗಿ ಆಯೋಜಿಸಿದ ಅನುಭವವಿದೆ. ಈಗ ಡಾ. ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವವನ್ನು ಆಯೋಜಿಸುತ್ತಿದ್ದಾರೆ.
ಇನ್ನು ಡಾ. ವಿಷ್ಣು ಸೇನಾ ಸಮಿತಿಯ ರಾಜ್ಯಾಧ್ಯಕ್ಷರಾದ ಶ್ರೀ ವೀರಕಪುತ್ರ ಶ್ರೀನಿವಾಸ್ ಈ ಕಾರ್ಯಕ್ರಮಕ್ಕೆ ಸುಮಾರು ಎರಡು ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದಿದ್ದಾರೆ. ಡಾ.ವಿಷ್ಣುವರ್ಧನ್ ಅವರಿಗೆ ಆದ ನೋವುಗಳಿಗೆ ಈ ಕಾರ್ಯಕ್ರಮ ಉತ್ತರವಾಗಲಿದೆ. 'ಯಜಮಾನರ ಅಮೃತ ಮಹೋತ್ಸವ' ರಾಜ್ಯಾದ್ಯಂತ ದಸರಾ ಹಬ್ಬದಂತೆ ಆಚರಿಸುವುದಕ್ಕೆ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ. ಇದೇ ವೇಳೆ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು,, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಕೂಡ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದಾರೆ.


Click it and Unblock the Notifications











