"ಉರಿಸಬೇಕು ಅಂತಿದ್ರೆ, ಒಳ್ಳೆ ಕೆಲಸ ಮಾಡಿ ಉರಿಸುತ್ತಲೇ ಇರ್ತೀವಿ": ದರ್ಶನ್ ಹೇಳಿಕೆಗೆ ಅಪ್ಪು ಫ್ಯಾನ್ಸ್ ತಿರುಗೇಟು!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿಮಾನಿಗಳ ನಡುವೆ ಕಿತ್ತಾಟ ನಡೆಯುತ್ತಿದೆ. ದರ್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣದ ಬಳಿಕ ದರ್ಶನ್ ಹಾಗೂ ಅಪ್ಪು ಫ್ಯಾನ್ಸ್ ನಡುವೆ ಫೈಟ್ ನಡೆಯುತ್ತಿದೆ.
ಈ ಪ್ರಕರಣದ ಬಳಿಕ ದರ್ಶನ್ ಫ್ಯಾನ್ಸ್ ರಾಜವಂಶದ ಕುಟುಂಬದ ವಿರುದ್ಧ ಅವ್ಯಾಚ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಅಣ್ಣಾವ್ರ ಕುಟುಂಬವನ್ನು ನಿಂದಿಸುತ್ತಿದ್ದಾರೆಂದು ಅಪ್ಪು ಫ್ಯಾನ್ಸ್ ಆರೋಪ ಮಾಡುತ್ತಿದ್ದಾರೆ. ಈ ಸಂಬಂಧ ರಾಜವಂಶದ ಅಭಿಮಾನಿಗಳು ಹಾಗೂ ಕನ್ನಡಪರ ಸಂಘಟನೆಗಳು ಇಂದು (ಡಿಸೆಂಬರ್ 29) ಫಿಲ್ಮ್ ಚೇಂಬರ್ಗೆ ಮುತ್ತಿಗೆ ಹಾಕಿದ್ದರು.
ಡಾ.ರಾಜ್ ಕುಟುಂಬದ ವಿರುದ್ಧ ಕೀಳು ಮಟ್ಟದ ಪದಗಳನ್ನು ಬಳಸಿ, ಕೆಟ್ಟ ಸಂದೇಶವನ್ನು ಸಾರುತ್ತಿರುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ. ಅಲ್ಲದೆ ಮಾನನಷ್ಟ ಮೊಕದ್ದಮೆಯನ್ನೂ ದಾಖಲಿಸಲು ತೀರ್ಮಾನಿಸಲಾಗಿದೆ. ಇದೇ ವೇಳೆ ಹುಬ್ಬಳ್ಳಿಯಲ್ಲಿ ದರ್ಶನ್ ನೀಡಿದ ಹೇಳಿಕೆಗೆ ಅಪ್ಪು ಅಭಿಮಾನಿಗಳು ತಿರುಗೇಟು ನೀಡಿದ್ದಾರೆ.

'ಒಳ್ಳೆ ಕೆಲಸ ಮಾಡಿ ಉರಿಸುತ್ತಲೇ ಇರುತ್ತೇವೆ'
" ನೀವು ಎಷ್ಟೇ ನಮ್ಮ ಮೇಲೆ ಆಪಾಧನೆ ಮಾಡಿ. ನೀವು ಎಷ್ಟೇ ಸುಳ್ಳುಗಳನ್ನು ಹೇಳಿ ನಾವು ಬೇಜಾರು ಮಾಡಿಕೊಳ್ಳಲ್ಲ. ನಾವು ತಲೆ ಕೆಡಿಸಿಕೊಳ್ಳಲ್ಲ. ನಾವು ಹೆದರಿಕೊಳ್ಳೋದೂ ಇಲ್ಲ. ತಲೆ ಎತ್ತಿಕೊಂಡು ಓಡಾಡುತ್ತೇವೆ. ಯಾಕೆ ಗೊತ್ತಾ? ಅಣ್ಣಾವ್ರು ಮತ್ತು ಅಪ್ಪು ಅವರು ಅಂತಹ ಕೆಲಸ ಮಾಡಿದ್ದಾರೆ. ಅದಕ್ಕೆ ತಲೆ ಎತ್ತಿಕೊಂಡು ಓಡಾಡುತ್ತೇವೆ. ಅಪ್ಪು ಅಭಿಮಾನಿಗಳಾಗಿ ತಲೆ ತಗ್ಗಿಸುವಂತೆ ಕೆಲಸವನ್ನು ಹಿಂದೆನೂ ಮಾಡಿಲ್ಲ. ಮುಂದೆನೂ ಮಾಡಲ್ಲ. ನಮ್ ಬಾಸು ಒಳ್ಳೆಯದು ಮಾಡು ಅಂತಾನೇ ಹೇಳಿ ಹೋಗಿರೋದು. ಅದನ್ನೇ ಮಾಡುತ್ತೇವೆ. ಉರಿಸಬೇಕು ಅಂತಿದ್ರೆ, ಒಳ್ಳೆ ಕೆಲಸ ಮಾಡಿ ಉರಿಸುತ್ತಲೇ ಇರುತ್ತೇವೆ." ಅಪ್ಪು ಬ್ರಿಗೇಡ್ ಸಂಘಟನೆಯ ಮುರಳಿ ಕಿಡಿಕಾರಿದ್ದಾರೆ.

'ಅಪ್ಪು ಸರ್ ಪರ ಯಾಕೆ ನೀವು ನಿಲ್ಲುತ್ತಿಲ್ಲ'
" ಯಾವುದೋ ಒಬ್ಬ ನಟನ ಮೇಲೆ ದಾಳಿ ಆಗುತ್ತೆ ಅದನ್ನು ಎಲ್ಲರೂ ಖಂಡಿಸುತ್ತಾರೆ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಅಣ್ಣಾವ್ರ ಬಗ್ಗೆ ಅಪ್ಪು ಬಗ್ಗೆ ಮಾನಸಿಕವಾಗಿ ದಾಳಿ ಮಾಡುತ್ತೀರಲ್ಲ. ಯಾಕೆ ಯಾರೂ ಕಂಡಿಸುತ್ತಿಲ್ಲ ನೀವು. ಅಣ್ಣಾವ್ರದ್ದು, ಅಪ್ಪು ಸರ್ದು ಏನೂ ಕೊಡುಗೆ ಇಲ್ವಾ ಇಲ್ಲಿ. ಕೆಲವೇ ಕೆಲವು ನಟರನ್ನು ಬಿಟ್ಟು ಬೇರೆ ಯಾರೂ ಅಪ್ಪು ಸರ್ ಪರ ನಿಲ್ಲುತ್ತಿಲ್ಲ. ಯಾಕೆ ನಿಮಗೆ ಭಯನಾ? ಕರ್ನಾಟಕದ ಅತ್ಯುನ್ನತ ಪ್ರಶಸ್ತಿ ಕರ್ನಾಟಕ ರತ್ನವನ್ನು ತಂದೆ ಮಗ ಇಬ್ಬರಿಗೂ ಕೊಟ್ಟಿದ್ದಾರೆ. ಇಂತಹ ಕುಟುಂಬದ ಬಗ್ಗೆ ಮಾತಾಡುತ್ತೀರಲ್ಲ ನಿಮಗ್ಯಾರಿಗಾದರೂ ನೈತಿಕ ಹಕ್ಕು ಇದೆಯಾ? ಕನ್ನಡ ಅಂದರೆ ಅಣ್ಣಾವ್ರು. ಅಣ್ಣಾವ್ರು ಅಂದರೆ ಕನ್ನಡ. " ಎಂದು ಅಪ್ಪು ಬ್ರಿಗೇಡ್ ಸಂಘಟನೆಯ ಮುರಳಿ ಆಕ್ರೋಶ ಹೊರ ಹಾಕಿದ್ದಾರೆ.

1090 ಪ್ರಕರಣ ದಾಖಲು
"ಸರಳ ಜೀವಿ ಶಿವಣ್ಣ, ರಾಘಣ್ಣ ಸೇರಿದಂತೆ ಅವರ ಮನೆಯ ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಕೀಳು ಮಟ್ಟದ ಪದಗಳನ್ನು ಬಳಸಿ, ಸೋಶಿಯಲ್ ಮೀಡಿಯಾದಲ್ಲಿ ತನ್ನ ಅಸಲಿ ಗುರುತನ್ನು ಬಚ್ಚಿಟ್ಟು ಕೆಟ್ಟ ಸಂದೇಶವನ್ನು ಹರಡುತ್ತಿದ್ದಾರೆ. ಇದಕ್ಕೆ ಸಂಬಂಧ ಪಟ್ಟ ಹಾಗೇ ಕಳೆದ ಏಳೆಂಟು ದಿನಗಳ ಅವಧಿಯಲ್ಲಿ ಇಡೀ ರಾಜ್ಯದ 73 ಪೊಲೀಸ್ ಠಾಣೆಗಳಲ್ಲಿ 1090ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ಈಗಾಗಲೇ ಡಾ.ರಾಜ್ಕುಮಾರ್ ಅಭಿಮಾನಿಗಳು ಹಾಗೂ ಕನ್ನಡ ಪರ ಸಂಘಟನೆಗಳು ದಾಖಲು ಮಾಡಿವೆ." ಎಂದು ಡಾ.ರಾಜ್ಕುಮಾರ್ ಅಭಿಮಾನಿ ಎನ್ ಆರ್ ರಮೇಶ್ ಹೇಳಿದ್ದಾರೆ.

17 ಮಂದಿ ವಿರುದ್ಧ ಮಾನನಷ್ಟ ಮೊಕದ್ದಮೆ
"ಎರಡನೇ ತಾರೀಕಿನಿಂದ ಬೆಂಗಳೂರು,ಮಂಗಳೂರು, ಮೈಸೂರು ನ್ಯಾಯಾಲಯಗಳಲ್ಲಿ ನಾವು ಈಗಾಗಲೇ ಗುರುತು ಮಾಡಿಕೊಂಡಿರುವ 17 ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ದಾಖಲು ಮಾಡುತ್ತಿದ್ದೇವೆ. ಪ್ರತಿಯೊಬ್ಬರ ಮೇಲೂ ಕನಿಷ್ಠ 50 ಮಂದಿ ಕೇಸ್ ದಾಖಲು ಮಾಡಲಿದ್ದೇವೆ. 5 ಲಕ್ಷ ರೂಪಾಯಿ ಪರಿಹಾರವನ್ನು ಕೇಳುತ್ತೇವೆ." ಎಂದು ಕನ್ನಡ ಪರ ಸಂಘಟನೆಗಳು ಹಾಗೂ ರಾಜವಂಶದ ಅಭಿಮಾನಿಗಳ ಪರವಾಗಿ ಎನ್ ಆರ್ ರಮೇಶ್ ಆಕ್ರೋಶ ಹೊರ ಹಾಕಿದ್ದಾರೆ.


Click it and Unblock the Notifications











