ಕ್ಯಾನ್ಸರ್ ಗೆದ್ದ ಶಿವಣ್ಣನಿಗೆ ಅದ್ಧೂರಿ ಸ್ವಾಗತ; 'ಮಾಸ್ ಮೃತ್ಯುಂಜಯ'ನ ವೆಲ್ಕಮ್ಗೆ ಫ್ಯಾನ್ಸ್ ಪ್ಲ್ಯಾನ್ ಏನು?
ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಈಗ ಯುಎಸ್ಎನಲ್ಲಿ ಇದ್ದಾರೆ. ಅನಾರೋಗ್ಯ ನಿಮಿತ್ತ ಶಿವಣ್ಣ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಗೆ ತೆರಳಿದ್ದರು. ಇವರೊಂದಿಗೆ ಪತ್ನಿ ಗೀತಾ ಶಿವರಾಜ್ಕುಮಾರ್ ಹಾಗೂ ಪುತ್ರಿ ನಿವೇದಿತಾ ಕೂಡ ತೆರಳಿದ್ದರು. ಆ ವೇಳೆ ಶಿವಣ್ಣ ಸೇರಿದಂತೆ ಅವರ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಲಿ ಅಂತ ಶಿವಣ್ಣನ ಫ್ಯಾನ್ಸ್ ಮನಸಾರೆ ಹರಸಿದ್ದರು.
ಅತ್ತ ಶಿವಣ್ಣ ಅಮೆರಿಕಗೆ ತೆರೆಳುತ್ತಿದ್ದಂತೆ ಇತ್ತ ಅಭಿಮಾನಿಗಳು ಹೋಮ ಹವನಗಳನ್ನು ಹಮ್ಮಿಕೊಂಡಿದ್ದರು. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಲಿ ಅಂತ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದರು. ಅಭಿಮಾನಿಗಳು ಬಯಸಿದಂತೆ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಶಿವಣ್ಣ ಈಗ ಕ್ಯಾನ್ಸರ್ ಪ್ರೀಯಾಗಿದ್ದು, ಆರೋಗ್ಯವಾಗಿ ಇದ್ದಾರೆ. ಶಸ್ತ್ರ ಚಿಕಿತ್ಸೆಯ ಬಳಿಕ ನಡೆಸಲಾದ ಎಲ್ಲಾ ಪರೀಕ್ಷೆಯಿಂದಲೂ ಬಂದ ರಿಸಲ್ಟ್ನಲ್ಲಿ ಯಾವುದೇ ತೊಂದರೆ ಕಾಣಿಸಿಕೊಂಡಿಲ್ಲ.

ಈ ವಿಷಯವನ್ನು ಸ್ವತ: ಶಿವರಾಜ್ಕುಮಾರ್ ಹಾಗೂ ಗೀತಕ್ಕ ವಿಡಿಯೋ ಮೂಲಕ ಹಂಚಿಕೊಂಡಿದ್ದರು. ಮೊದಲೇ ನಿಗದಿಯಾದಂತೆ ಸುಮಾರು ಒಂದು ತಿಂಗಳ ಬಳಿಕ ಶಿವಣ್ಣ ಬೆಂಗಳೂರಿಗೆ ಹಿಂತಿರುಗಲಿದ್ದಾರೆ. ಹೀಗಾಗಿ ಶಿವಣ್ಣನಿಗೆ ಅದ್ಧೂರಿ ಸ್ವಾಗತ ಕೋರುವುದಕ್ಕೆ ಅವರ ಅಭಿಮಾನಿ ಬಳಗ ದೊಡ್ಡ ಮಟ್ಟದಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಶಿವಣ್ಣನಿಗೆ ಸ್ವಾಗತ ಹೇಗಿರುತ್ತೆ? ಯಾರೆಲ್ಲ ಇರುತ್ತಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಶಿವಣ್ಣ ಅಭಿಮಾನಿಗಳ ಹರ್ಷ
ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಶಸ್ತ್ರ ಚಿಕಿತ್ಸೆ ಯಶಸ್ವಿಯಾದ ವಿಷಯ ಕೇಳಿ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದರು. ತಮ್ಮ ನೆಚ್ಚಿನ ನಟನ ಯಾವಾಗ ಕಣ್ತುಂಬಿ ಕೊಳ್ಳುತ್ತೇವೋ ಅಂತ ಬಯಸಿದ್ದರು. ಇನ್ನೇನು ಇದೇ ತಿಂಗಳು (ಜನವರಿ 26) ಶಿವಣ್ಣ ಅಮೆರಿಕದಿಂದ ಬೆಂಗಳೂರಿಗೆ ಬಂದಿಳಿಯುತ್ತಾರೆ. ಅದೇ ದಿನದಂದು ಶಿವಣ್ಣನನ್ನು ಅದ್ಧೂರಿಯಾಗಿ ಸ್ವಾಗತಿಸುವುದಕ್ಕೆ ಫ್ಯಾನ್ಸ್ ತುದಿಗಾಲಿಲ್ಲಿ ನಿಂತಿದ್ದಾರೆ.
ಶ್ರೀಮುತ್ತು ನಿವಾಸದಲ್ಲಿ ಸ್ವಾಗತ
ಅಖಿಲ ಕರ್ನಾಟಕ ಡಾ.ಶಿವರಾಜ್ಕುಮಾರ್ ಸೇನಾ ಸಮಿತಿ ಹಾಗೂ ಗಂಡಗಲಿ ಡಾ.ಶಿವರಾಜ್ಕುಮಾರ್ ಅಭಿಮಾನಿಗಳ ಸಂಘ ಜಂಟಿಯಾಗಿ ಸೇರಿಕೊಂಡು ಶಿವಣ್ಣನಿಗೆ ಅದ್ಧೂರಿ ಸ್ವಾಗತವನ್ನು ಕೋರುತ್ತಿದ್ದಾರೆ. ಈಗಾಗಲೇ ಬ್ಯಾನರ್ಗಳನ್ನು ರೆಡಿ ಮಾಡಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ. ಶಿವಣ್ಣನ ನಿವಾಸದಲ್ಲಿ ಅದ್ಧೂರಿ ಸ್ವಾಗತವನ್ನು ಇಟ್ಟುಕೊಂಡಿದ್ದು ಸರ್ವರಿಗೂ ಸ್ವಾಗತವನ್ನು ಕೋರಲಾಗಿದೆ.

ಸ್ಯಾಂಡಲ್ವುಡ್ ದಿಗ್ಗಜ ಆಗಮನ?
ಜನವರಿ 26ರಂದು ಕೇವಲ ಅಭಿಮಾನಿಗಳು ಅಷ್ಟೇ ಅಲ್ಲ. ಅಂದು ಚಿತ್ರರಂಗದ ಗಣ್ಯರೂ ಆಗಮಿಸುವ ಸಾಧ್ಯತೆಯಿದೆ. ಶಿವರಾಜ್ಕುಮಾರ್ ಅಮೆರಿಕಗೆ ತೆರಳುವ ಮುನ್ನ ಕಿಚ್ಚ ಸುದೀಪ್ ಸೇರಿದಂತೆ ಹಲವು ಮಂದಿ ಗಣ್ಯರು ಶುಭ ಹಾರೈಸಿ ಕಳುಹಿಸಿದ್ದರು. ಹೀಗಾಗಿ ಶಿವಣ್ಣ ಬೆಂಗಳೂರಿಗೆ ಬರುತ್ತಿದ್ದಂತೆ ಕನ್ನಡ ಚಿತ್ರರಂಗದ ನಟ-ನಟಿಯರು ಕೂಡ ಬಂದು ಭೇಟಿ ಮಾಡುವ ಸಾಧ್ಯತೆಯಿದೆ.
ಫಿಲ್ಮ್ ಚೇಂಬರ್ನಿಂದಲೂ ಪ್ಲ್ಯಾನ್?
ಶಿವರಾಜ್ಕುಮಾರ್ ಬೆಂಗಳೂರಿಗೆ ಬಂದ್ಮೇಲೆ ಶಿವಣ್ಣನಿಗಾಗಿ ಕಾರ್ಯಕ್ರಮ ಹಮ್ಮಿಕೊಳ್ಳುವ ಆಲೋಚನೆ ಮಾಡುತ್ತಿದೆ ಫಿಲ್ಮ್ ಚೇಂಬರ್ ಎನ್ನಲಾಗಿದೆ. ಒಂದು ವಾರದ ಬಳಿಕ ಅಂದರೆ, ಫೆಬ್ರವರಿ ತಿಂಗಳಲ್ಲಿ ಈ ಕಾರ್ಯಕ್ರಮ ಮಾಡಬಹುದು. ಅದು ಫಿಲ್ಮ್ ಚೇಂಬರ್ನಲ್ಲಿಯೇ ಆಗುತ್ತಾ? ಇಲ್ಲ ಬೇರೆ ಕಡೆ ಆಗುತ್ತಾ ಅನ್ನೋದು ಇನ್ನೂ ನಿರ್ಧಾರ ಆಗಿಲ್ಲ. ಈಗಾಗಲೇ ಶಿವಣ್ಣ ಕಾರ್ಯಕ್ರಮಕ್ಕೆ ಪ್ಲಾನ್ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಫಿಲ್ಮ್ ಚೇಂಬರ್ ಅಧಿಕೃತವಾಗಿ ಹೇಳಿಕೆ ಕೊಟ್ಟಿಲ್ಲ.


Click it and Unblock the Notifications











