ಪುನೀತ್ ನಮನ ಹೆಸರಲ್ಲಿ ಚಂದಾ: ಏನಿದು ನಿರ್ಮಾಪಕನ ಆರೋಪ?
ಪುನೀತ್ ರಾಜ್ಕುಮಾರ್ ಅಗಳಿಕೆಯ ನೋವಿನಲ್ಲೇ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ಪುನೀತ್ ನುಡಿ ನಮನ ಕಾರ್ಯಕ್ರಮ ನಡೆಸು ಮುಂದಾಗಿದೆ. ಈಗಾಗಲೇ ನುಡಿ ನಮನ ಕಾರ್ಯಕ್ರಮದ ಬಗ್ಗೆ ಭರದಿಂದ ಸಿದ್ಧತೆಗಳು ಆರಂಭ ಆಗಿವೆ. ಸಿನಿಮಾ ಸೆಲೆಬ್ರೆಟಿಗಳಿಗೆ, ತೆಲುಗು, ತಮಿಳು, ಮಲಯಾಳಂ ಚಿತ್ರರಂಗದ ಗಣ್ಯರಿಗೆ, ರಾಜಕೀಯ ಮುಖಂಡರಿಗೆ, ಪುನೀತ್ ರಾಜ್ಕುಮಾರ್ ಆಪ್ತರಿಗೆ ಆಹ್ವಾನ ನೀಡಲಾಗುತ್ತಿದೆ. ಈಗಾಗಲೇ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು ಸೇರಿದಂತೆ ದೊಡ್ಡ ದೊಡ್ಡ ತಾರೆಯರಿಗೆ ಆಹ್ವಾನವನ್ನು ನೀಡಲಾಗಿದೆ.
ಪುನೀತ್ ನಮನ ಕಾರ್ಯಕ್ರಮಕ್ಕೆ ಭರದಿಂದ ಸಿದ್ಧತೆ ನಡೆಯುತ್ತಿದೆ. ನಿರ್ಮಾಪಕ ಸಾರಾ ಗೋವಿಂದು ಮುಂದಾಳತ್ವದಲ್ಲಿ ಫಿಲ್ಮ್ ಚೇಂಬರ್ ಸದಸ್ಯರು ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದ್ದಾರೆ. ಈ ಮಧ್ಯೆ ಕನ್ನಡದ ಇಬ್ಬರು ನಿರ್ಮಾಪಕರು ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಹಾಗಿದ್ರೆ, ವಾಣಿಜ್ಯ ಮಂಡಳಿ ವಿರುದ್ಧ ಆರೋಪ ಮಾಡುತ್ತಿರುವ ನಿರ್ಮಾಪಕರು ಯಾರು? ಅವರ ಆರೋಪವೇನು? ಫಿಲ್ಮ್ ಚೇಂಬರ್ ವಿರುದ್ಧ ತಿರುಗಿಬಿದ್ದಿದ್ದು ಏಕೆ? ಸಂಪೂರ್ಣ ಮಾಹಿತಿ ಇಲ್ಲಿದೆ

ವಿವಾದದ ಸುಳಿಯಲ್ಲಿ ಫಿಲ್ಮ್ ಚೇಂಬರ್ 'ಪುನೀತ್ ನಮನ' ಕಾರ್ಯಕ್ರಮ
ದಿವಂಗತ ನಟ ಪುನೀತ್ ರಾಜ್ಕುಮಾರ್ ಅವರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಹಮ್ಮಿಕೊಂಡಿರುವ ನುಡಿನಮನ ಕಾರ್ಯಕ್ರಮ ವಿವಾದಕ್ಕೀಡಾಗಿದೆ. ಕನ್ನಡದ ಇಬ್ಬರು ನಿರ್ಮಾಪಕರು ಫಿಲ್ಮ್ ಚೇಂಬರ್ ವಿರುದ್ಧ ತಿರುಗಿಬಿದ್ದಿದ್ದಾರೆ. "ಪುನೀತ್ ನುಡಿನಮನ ಕಾರ್ಯಕ್ರಮದ ಹೆಸರಲ್ಲಿ ಫಿಲ್ಮ್ ಚೇಂಬರ್ ಚಂದಾ ಎತ್ತುತ್ತಿದ್ದಾರೆ. ಪುನೀತ್ ರಾಜ್ಕುಮಾರ್ ಅಂತಹ ನಟರಿಗೆ ಬೇರೆಯವರಿಂದ ಚಂದಾ ಎತ್ತಿ ಕಾರ್ಯಕ್ರಮ ನಡೆಸಬೇಕಾ? ಇದು ಪುನೀತ್ ಅವರಿಗೆ ಮಾಡುತ್ತಿರುವ ಅವಮಾನ. ಅಸಲಿಗೆ ಫಿಲ್ಮ್ ಚೇಂಬರ್ನಲ್ಲಿ ಹಣ ಇಲ್ಲವೇ?. ನಾವು ಕಟ್ಟಿದ ಹಣವೆಲ್ಲಾ ಎಲ್ಲಿಗೆ ಹೋಯ್ತು?" ಅಂತ ನಿರ್ಮಾಪಕ ಜೆಜೆ ಶ್ರೀನಿವಾಸ್ ಫಿಲ್ಮ್ ಚೇಂಬರ್ ವಿರುದ್ಧ ನೇರ ಆರೋಪ ಮಾಡಿದ್ದಾರೆ.

'ಚಂದಾ ಎತ್ತಿದ್ದ ಹಣ ಖಾಸಗಿ ಖಾತೆಗೆ ಜಮಾ ಆಗುತ್ತಿದೆ'
"ಕೆಲವರು ಈ ಕಾರ್ಯಕ್ರಮದ ಹೆಸರಲ್ಲಿ ಚಂದಾ ಎತ್ತುತ್ತಿರುವುದು ನಮಗೆ ಗೊತ್ತಿದೆ. ಇದರೊಂದಿಗೆ ಚಂದಾ ಎತ್ತಿದ ಹಣವನ್ನು ತಮ್ಮ ಹೆಸರಿನಲ್ಲಿ ಚೆಕ್ ಪಡೆದು, ತಮ್ಮ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆ. ಇದರ ಲೆಕ್ಕ ಹೇಗೆ ಸಿಗುತ್ತೆ? ಒಬ್ಬ ಮೇರು ನಟನಿಗೆ ನುಡಿನಮನ ಸಲ್ಲಿಸಲು ಫಿಲ್ಮ್ ಚೇಂಬರ್ ಬಳಿ ಹಣ ಇಲ್ಲದಿದ್ದರೆ, ನಾವು ಸದಸ್ಯರೇ ಸೇರಿ ಹಣ ಒಟ್ಟು ಮಾಡಿ ಕೊಡುತ್ತೇವೆ." ಎಂದು ನಿರ್ಮಾಪಕರಾದ ಜೆಜೆ ಶ್ರೀನಿವಾಸ್ ಹಾಗೂ ಕುಮಾರ್ ವಾಣಿಜ್ಯ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಫಿಲಂ ಚೇಂಬರ್ನಲ್ಲಿ ನಡೆದ ಸಭೆಯಲ್ಲಿ ಆಗಿದ್ದೇನು?
ಪುನೀತ್ ನಮನ ಕಾರ್ಯಕ್ರಮಕ್ಕೆ ಚಂದಾ ಎತ್ತುತ್ತಿರುವ ಬಗ್ಗೆ ಸದಸ್ಯರು ಸಭೆಯಲ್ಲಿ ಚರ್ಚೆ ಮಾಡಿದ್ದಾರೆ. ಈ ವೇಳೆ ಫಿಲ್ಮ್ ಚೇಂಬರ್ ಸದಸ್ಯರು ತಾವು ಚಂದಾ ಎತ್ತುತ್ತಿಲ್ಲ. ಅವರಾಗೇ ಬಂದು ಹಣ ನೋಡುತ್ತಿದ್ದಾರೆ ಎಂದು ಸಮಜಾಯಿಷಿ ನೀಡಿದ್ದಾರೆ. ಅಲ್ಲದೆ ವಾಣಿಜ್ಯ ಮಂಡಳಿಯ ಹಣದಲ್ಲೇ ಪುನೀತ್ ನಮನ ಕಾರ್ಯಕ್ರಮ ಮಾಡೋಣ ಅಂತಲೂ ಹೇಳಿದ್ದಾರೆ ಎಂಬ ಮಾತು ಹೇಳಿ ಬಂದಿದೆ. ಪುನೀತ್ ನಮನ ಕಾರ್ಯಕ್ರಮಕ್ಕೂ ಮುನ್ನವೇ ಫಿಲ್ಮ್ ಚೇಂಬರ್ ವಿವಾದಕ್ಕೆ ಸಿಲುಕಿದೆ. ಹೀಗಾಗಿ ನಿಜಕ್ಕೂ ಫಿಲ್ಮ್ ಚೇಂಬರ್ ಸದಸ್ಯರು ಚಂದಾ ಎತ್ತುತ್ತಿದ್ದಾರಾ? ಇಲ್ಲಾ ವಾಣಿಜ್ಯ ಮಂಡಳಿ ಹಣದಲ್ಲೇ ಪುನೀತ್ ನಮನ ಕಾರ್ಯಕ್ರಮ ಮಾಡುತ್ತಿದ್ದಾರಾ? ಅನ್ನುವುದನ್ನು ವಾಣಿಜ್ಯ ಮಂಡಳಿ ಸದಸ್ಯರು ಹೇಳಬೇಕಿದೆ.

ಅನ್ನ ಸಂತರ್ಪಣೆ ನಡೆಸಲಿರುವ ರಾಜ್ ಕುಟುಂಬ
ಇದೇ ನವೆಂಬರ್ 16 ರಂದು ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಯಿಂದ ಪುನೀತ್ ನಮನ ಕಾರ್ಯಕ್ರಮ ನೆರೆವೇರಲಿದೆ. ಈಗಾಗಲೇ ಅರಮನೆ ಮೈದಾನದಲ್ಲಿ ಸಕಲ ಸಿದ್ಧತೆಗಳು ಆರಂಭ ಆಗಲಿದ್ದು, ಈ ಕಾರ್ಯಕ್ರಮಕ್ಕೂ ಮುನ್ನ ಪುನೀತ್ ರಾಜ್ಕುಮಾರ್ 11ನೇ ದಿನ ಪುಣ್ಯಸ್ಮರಣೆ ಅಂಗವಾಗಿ ಅಭಿಮಾನಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.


Click it and Unblock the Notifications











