Breaking News: ಫಿಲ್ಮ್ ಚೇಂಬರ್ನಲ್ಲಿ ಪ್ರಮುಖ ಕಡತಗಳು ಮಿಸ್ಸಿಂಗ್: ನೂತನ ಅಧ್ಯಕ್ಷ ಪೊಲೀಸ್ ಠಾಣೆಗೆ ದೂರು!
ಫಿಲ್ಮ್ ಚೇಂಬರ್ನಲ್ಲಿ ಕೆಲವು ದಿನಗಳ ಹಿಂದಷ್ಟೇ ಚುನಾವಣೆ ನಡೆದಿದೆ. ಹೊಸ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ನಿರ್ಮಾಪಕ ಭಾ ಮಾ ಹರೀಶ್ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಮೊದಲಿನಿಂದಲೂ ಫಿಲ್ಮಿಚೇಂಬರ್ ವಿವಾದಗಳ ಗೂಡು. ಒಂದಲ್ಲ ಒಂದು ಕಾರಣಕ್ಕೆ ಫಿಲ್ಮ್ ಚೇಂಬರ್ನಲ್ಲಿ ಗಲಾಟೆ, ಪ್ರತಿಭಟನೆಗಳು ನಡೆಯುತ್ತಲೇ ಇರುತ್ತವೆ. ಹೊಸ ಅಧ್ಯಕ್ಷರಾಗಿ ಭಾ ಮಾ ಹರೀಶ್ ಅಧಿಕಾರ ವಹಿಸಿಕೊಂಡ ಮೊದ ಮೊದಲೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅದು ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕಡತಗಳು ಮಿಸ್ ಆಗಿವೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಫಿಲ್ಮಿಬೀಟ್ ಜೊತೆ ಫಿಲ್ಮ್ ಚೇಂಬರ್ನ ನೂತನ ಅಧ್ಯಕ್ಷ ಭಾ ಮಾ ಹರೀಶ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಅಧ್ಯಕ್ಷ ಭಾ ಮಾ ಹರೀಶ್ ಹೇಳೋದೇನು?
"ಚುನಾವಣೆ ನಡೆಯುವುದಕ್ಕೂ ಮುನ್ನ ಫಿಲ್ಮ್ ಚೇಂಬರ್ನಲ್ಲಿ ಹಲವು ವರ್ಷಗಳಿಂದ ಇರುವ ಪ್ರಮುಖ ದಾಖಲಾತಿಗಳು ಮಿಸ್ ಆಗಿವೆ. ಯಾರೋ ಕಡತಗಳನ್ನು ಫಿಲ್ಮ್ ಚೇಂಬರ್ನಿಂದ ಹೊರಗೆ ತೆಗೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಈ ಕಾರಣಕ್ಕೆ ಹೈಗ್ರೌಂಡ್ ಪೊಲೀಸ್ ಠಾಣೆಗೆ ದೂರನ್ನು ದಾಖಲಿಸಿದ್ದೇವೆ. ಇದು ನಾನು ಅಧ್ಯಕ್ಷನಾಗುವುದಕ್ಕೂ ಮುನ್ನ ಈಗ ನಡೆದ ಘಟನೆ. ಅದಕ್ಕೆ ಪದಾಧಿಕಾರಿಗಳ ಸಭೆ ಕರೆದು ಅಲ್ಲಿ ದೂರು ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ."

ಪೊಲೀಸರಿಂದ ದೂರು ದಾಖಲು
ಫಿಲ್ಮ್ ಚೇಂಬರ್ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಜೊತೆಯಾಗಿ ಹೈಗ್ರೌಂಡ್ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕೂಡ ದೂರನ್ನು ಸ್ವೀಕರಿಸಿ, ಎನ್ಸಿಆರ್ ಹಾಕಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಫಿಲ್ಮ್ ಚೇಂಬರ್ ಕಡತಗಳು ಮಿಸ್ ಆಗಿದ್ದೇಗೆ? ಯಾರು ತೆಗೆದುಕೊಂಡು ಹೋಗಿದ್ದಾರೆ? ಇಂತಹದ್ದೇ ಒಂದಿಷ್ಟು ವಿಷಯಗಳು ಬಹಿರಂಗ ಆಗುವ ಎಲ್ಲಾ ಸಾಧ್ಯತೆಗಳೂ ಇದ್ದು, ಅವ್ಯವಹಾರ ನಡೆದಿದ್ದರೆ ಬಹಿರಂಗಗೊಳ್ಳಲಿದೆ.

ಮಾಜಿ ಪದಾಧಿಕಾರಿಗಳ ವಿರುದ್ಧ ಆರೋಪ
ಫಿಲ್ಮ್ ಚೇಂಬರ್ ಚುನಾವಣೆಗೂ ಮುನ್ನವೇ ಭಾಮಾ ಹರೀಶ್ ಹಾಗೂ ಅವರ ಬೆಂಬಲಿಗರು ಮಾಜಿ ಪದಾಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದರು. ಫಿಲ್ಮ್ ಚೇಂಬರ್ನಲ್ಲಿ ಅವ್ಯವಹಾರ ನಡೆದಿದೆ ಎಂದು ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಆರೋಪ ಮಾಡಿದ್ದರು. ಚುನಾವಣೆ ಬಳಿಕ ಭಾ ಮಾ ಹರೀಶ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆ ಬಳಿಕ ಚಲನ ಚಿತ್ರ ವಾಣಿಜ್ಯ ಮಂಡಳಿಯ ಪ್ರಮುಖ ಕಡತಗಳು ಮಿಸ್ ಆಗಿರುವುದು ಗಮನಕ್ಕೆ ಬಂದು ದೂರು ನೀಡಲಾಗಿದೆ.

ಫಿಲ್ಮ್ ಚೇಂಬರ್ ಚುನಾವಣೆ ನಡೆದಿರಲಿಲ್ಲ
ಫಿಲ್ಮ್ ಚೇಂಬರ್ ಚುನಾವಣೆ ಅವಧಿ ಮುಗಿದರೂ ನಡೆದಿರಲಿಲ್ಲ. ಕೊರೊನಾ ಕಾರಣದಿಂದ ಚುನಾವಣೆ ನಡೆಸದೆ ಮುಂದೂಡಲಾಗಿತ್ತು. ಕೊರೊನಾ ಕಡಿಮೆಯಾದ ಬಳಿಕವೂ ಚುನಾವಣೆ ನಡೆಸದೆ ಇದ್ದಿದ್ದಕ್ಕೆ ಭಾ ಮಾ ಹರೀಶ್ ಹಾಗೂ ತಂಡ ವಿರೋಧ ವ್ಯಕ್ತಪಡಿಸಿತ್ತು. ಹೀಗಾಗಿ ಮಾಜಿ ಹಾಗೂ ಹಾಲಿ ಪದಾಧಿಕಾರಿಗಳ ನಡುವೆ ಜಟಾಪಟಿಯೇ ಏರ್ಪಟ್ಟಿತ್ತು. ಆ ಬಳಿಕವೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ನಡೆಸಲು ಮುಂದಾಗಿತ್ತು.


Click it and Unblock the Notifications











