"ಇಂತಹ ಘಟನೆ ನಮಗೆ ನಾಚಿಗೇಡು.. ಒಬ್ಬರಿಂದ ಕೆಟ್ಟ ಹೆಸರು"; ನಂದ ಕಿಶೋರ್ ಪ್ರಕರಣಕ್ಕೆ ಫಿಲ್ಮ್ ಚೇಂಬರ್ ಅಧ್ಯಕ್ಷ ಪ್ರತಿಕ್ರಿಯೆ
ಕಳೆದ ಕೆಲವು ದಿನಗಳಿಂದ ನಟಿ ಶಬರೀಶ್ ಶೆಟ್ಟಿ ನಿರ್ದೇಶಕ ನಂದ ಕಿಶೋರ್ ವಿರುದ್ಧ ವಂಚನೆ ಮಾಡಿರುವ ಆರೋಪ ಮಾಡಿದ್ದರು. ಸಿನಿಮಾದಲ್ಲಿ ಅವಕಾಶ ಕೊಡುತ್ತೇನೆ. ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿಸುತ್ತೇನೆ. ಸಿಸಿಎಲ್ಗೆ ಅವಕಾಶ ಕೊಡಿಸುತ್ತೇನೆ ಎಂದು ಸ್ನೇಹ ಬೆಳೆಸಿದ್ದರು. ಅದರ ಆಧಾರ ಮೇಲೆ ಲಕ್ಷ ಲಕ್ಷದಲ್ಲಿ ತನ್ನಿಂದ ಹಣವನ್ನು ಪೀಕಿದ್ದಾರೆಂದು ಶಬರೀಶ್ ಶೆಟ್ಟಿ ಗಂಭೀರ ಆರೋಪ ಮಾಡಿದ್ದರು.
ನಂದ ಕಿಶೋರ್ ಕನ್ನಡದಲ್ಲಿ 'ಅಧ್ಯಕ್ಷ'. 'ರನ್ನ', 'ಮುಕುಂದ ಮುರಾರಿ', 'ಪೊಗರು' ಅಂತಹ ಸ್ಟಾರ್ ನಟರ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇವರು ಸುದೀಪ್ ಅವರ ಹೆಸರನ್ನು ಬಳಸಿಕೊಂಡು ಯುವ ನಟ ಶಬರೀಶ್ ಶೆಟ್ಟಿಯಿಂದ ಸುಮಾರು ₹22 ಲಕ್ಷ ರೂಪಾಯಿ ಹಣವನ್ನು ವಂಚಿಸಿದ್ದಾರೆಂದು ಆರೋಪಿಸಲಾಗಿದೆ. ನಂದ ಕಿಶೋರ್ ಅವರಿಂದ ತಾನು ಮೋಸ ಹೋಗಿದ್ದು ಹೇಗೆ ಎಂದು ಶರೀಶ್ ಕೆಲವು ದಿನಗಳ ಹಿಂದೆ ಮಾಧ್ಯಮಗಳ ಮುಂದೆ ಮಾಹಿತಿಯನ್ನು ಹಂಚಿಕೊಂಡಿದ್ದರು.

ಶಬರೀಶ್ ಶೆಟ್ಟಿಯವರಿಗೆ ನಿರ್ದೇಶಕ ನಂದ ಕಿಶೋರ್ 2016ರಲ್ಲಿ ಜಿಮ್ನಲ್ಲಿ ಪರಿಚಯವಾಗಿದ್ದರು. ಆ ವೇಳೆ ಶಬರೀಶ್ ಸಿನಿಮಾದಲ್ಲಿ ನಟಿಸಬೇಕು, ಸಿಸಿಎಲ್ ಆಡಬೇಕು ಎನ್ನುವ ಕನಸನ್ನು ವ್ಯಕ್ತ ಪಡಿಸಿದ್ದರು. ಹಾಗೇ ಕಿಚ್ಚ ಸುದೀಪ್ ಅವರ ದೊಡ್ಡ ಅಭಿಮಾನಿ ಎಂದೂ ಹೇಳಿದ್ದರು. ಇದನ್ನೇ ಮುಂದಿಟ್ಟುಕೊಂಡು ಮೊದಲು ಮೂರು ಲಕ್ಷ ಕೇಳಿದಾಗ ಕೊಟ್ಟಿದ್ದರು. ಹಾಗೇ ಪದೇ ಪದೇ ಹಣವನ್ನು ಕೇಳಿದ್ದರು. ಅದೀಗ ಎಲ್ಲಾ ಸೇರಿ ₹22 ಲಕ್ಷಕ್ಕೆ ಬಂದು ನಿಂತಿದೆ. ಹಾಗೇ ಕೊಟ್ಟಿದ್ದ ಚೆಕ್ ಕೂಡ ಫೇಕ್ ಎಂದು ಶಬರೀಶ್ ಆರೋಪಿಸಿದ್ದರು. ಈ ಸಂಬಂಧ ಶಬರೀಶ್ ನಿರ್ದೇಶಕ ನಂದ ಕಿಶೋರ್ ವಿರುದ್ಧ ಫಿಲ್ಮ್ ಚೇಂಬರ್ಗೆ ದೂರನ್ನು ಸಲ್ಲಿಸಿದ್ದಾರೆ.
ಫಿಲ್ಮ್ ಚೇಂಬರ್ ಅಧ್ಯಕ ನರಸಿಂಹಲು ಅವರು ಲಿಖಿತ ರೂಪದಲ್ಲಿ ದೂರನ್ನು ನೀಡಿದ್ದು, ಈ ಪ್ರಕರಣವನ್ನು ಇತ್ಯರ್ಥ ಮಾಡಿಕೊಡುವಂತೆ ಮಾಹಿತಿ ಮಾಡಿಕೊಂಡಿದ್ದಾರೆ. ಶಬರೀಶ್ ಶೆಟ್ಟಿ ಮತ್ತೆ ನಿರ್ದೇಶಕ ನಂದ ಕಿಶೋರ್ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. "ನಮ್ಮದು ಸಿನಿಮಾ ಕುಟುಂಬ. ಮೊದಲು ಇಲ್ಲಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳೋಣ. ಇಲ್ಲಿ ಆಗದೇ ಇದ್ದ ಪಕ್ಷಕ್ಕೆ, ಹಣ ತೆಗೆದುಕೊಂಡ ವ್ಯಕ್ತಿ ನಾನು ತೆಗೆದುಕೊಂಡೇ ಇಲ್ಲ ಅಂತ ಹೇಳಿದಾಗ ನಾನು ಕಾನೂನು ಮೊರೆ ಹೋಗುತ್ತೇನೆ. ಅಣ್ಣಾವ್ರು ಹಾಕಿದ ಬುನಾದಿ. ಯಾವುದೇ ಕಾರಣಕ್ಕೂ ದೂರ ಆಗಬಾರದು ಅಂತ ನಾನು ಚೇಂಬರ್ಗೆ ಬಂದಿದ್ದೇನೆ. ನನಗೆ ಚೇಂಬರ್ ಮೇಲೆ ನಂಬಿಕೆಯಿದೆ. ಆದರೆ, ಹಣ ತೆಗೆದುಕೊಂಡ ವ್ಯಕ್ತಿ ಯಾವುದೇ ಕಾರಣಕ್ಕೂ ಚೇಂಬರ್ಗೆ ಸಪೋರ್ಟ್ ಮಾಡಿಲ್ಲ ಅಂದರೆ, ನಾನು ಕಾನೂನು ಹೋರಾಟ ಮಾಡುತ್ತೇನೆ. ಅದನ್ನೂ ಅಧ್ಯಕ್ಷರ ಗಮನಕ್ಕೆ ತಂದು ಮಾಡುತ್ತೇನೆ." ಎಂದು ಶಬರೀಶ್ ಶೆಟ್ಟಿ ಫಿಲ್ಮ್ ಚೇಂಬರ್ನಲ್ಲಿ ಹೇಳಿದ್ದಾರೆ.
ಇದೇ ವೇಳೆ ನಂದ ಕಿಶೋರ್ ವಂಚನೆ ಮಾಡಿದ್ದಕ್ಕೂ ಕಿಚ್ಚ ಸುದೀಪ್ ಅವರಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಹೇಳಿದ್ದಾರೆ. "ಇದರಲ್ಲಿ ಸುದೀಪ್ ಸರ್ದು ಏನೂ ಇಲ್ಲ. ನಾನು ಅವರ ಅಭಿಮಾನಿ ಅನ್ನೋದನ್ನು ತಿಳಿದುಕೊಂಡು ವಂಚನೆ ಮಾಡುವುದಕ್ಕೆ ಬಳಸಿಕೊಂಡಿದ್ದಾರೆ. ಸಿನಿಮಾಗೆ ಅವಕಾಶ ಕೊಡುತ್ತೇನೆ. ಸುದೀಪ್ ಸರ್ ಅನ್ನು ಪರಿಚಯಿಸುತ್ತೇನೆ. ಸಿಸಿಎಲ್ಗೆ ಅವಕಾಶ ಕೊಡಿಸುತ್ತೇನೆ ಅಂತ ಹೇಳಿ, ಅವರ ಹೆಸರನ್ನು ಸ್ವಾರ್ಥಕ್ಕೆ ಬಳಸಿಕೊಂಡು ನನ್ನನ್ನು ಬಕ್ರ ಮಾಡಿದರು. ನನಗೆ ಚೇಂಬರ್ ಅಧ್ಯಕ್ಷರ ಮೇಲೆ ನಂಬಿಕೆಯಿದೆ. ನನ್ನ ಕುಟುಂಬದಲ್ಲಿಯೇ ಇದು ಬಗೆಹರಿಯುತ್ತೆ. ನಂದ ಕಿಶೋರ್ ಅವರನ್ನು ಕರೆದು ಸಮಸ್ಯೆ ಬಗೆಹರಿಸುತ್ತಾರೆಂಬ ನಂಬಿಕೆಯಿದೆ." ಎಂದಿದ್ದಾರೆ ನಟ ಶಬರೀಶ್ ಶೆಟ್ಟಿ.
ಹಾಗೇ ಶಬರೀಶ್ ಶೆಟ್ಟಿ ದೂರನ್ನು ಸ್ವೀಕರಿಸಿದ ಬಳಿಕ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಕೂಡ ನಂದ ಕಿಶೋರ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. "ಇವತ್ತು ಸಿನಿಮಾಗಳಿಗೆ ಜನರೇ ಬರುತ್ತಿಲ್ಲ. ಇಂತಹ ಸಮಯದಲ್ಲಿ ಈ ಘಟನೆಗಳು ಇದ್ದಾವಲ್ಲ. ಅದರಲ್ಲೂ ಅಲ್ಲಿ ಚಾನ್ಸ್ ಕೊಡಿಸುತ್ತೀನಿ, ಇಲ್ಲಿ ಕೊಡಿಸುತ್ತೇನೆ ಎಂದು ಚೀಟಿಂಗ್ ಮಾಡುತ್ತಿದ್ದಾರಲ್ಲ ಇದು ಎಷ್ಟು ಸರಿ. ಯಾರೋ ಹೊಸಬರು ಮಾಡಿದ್ದಾರೆ ಎಂದಾಗ ಒಂದು ಅರ್ಥ ಇರುತ್ತೆ. ಬೆಳೆಯಬೇಕು, ದುಡ್ಡು ಮಾಡಬೇಕು ಎಂದು ಮಾಡಿಕೊಂಡು ಹೋಗುತ್ತಾರೆ. ಹೆಸರಾಂತ ಗಣ್ಯ ವ್ಯಕ್ತಿ ನಿಮಗೆ ಆಕ್ಟಿಂಗ್ ಮಾಡಿಸುತ್ತೀನಿ, ಯಾವುದೋ ಕಲಾವಿದನನ್ನು ತೋರಿಸುತ್ತೇನೆ ಎಂದು ಹೇಳಿ ಹೀಗೆ ಮಾಡುತ್ತಾರಲ್ಲ ಇದು ಅಕ್ಷಮ್ಯ ಅಪರಾಧ." ಎಂದು ಬೇಸರ ಹೊರಹಾಕಿದ್ದಾರೆ.
ಹಾಗೇ "ನಮ್ಮ ಹಿರಿಯರು ಕಟ್ಟಿರುವ ಇಂಡಸ್ಟ್ರಿ ಇದು. ಇಂತಹ ಘಟನೆಗಳು ನಡೆಯುತ್ತಿರೋದು ನಮಗೆ ನಾಚಿಗೇಡು. ಮುಂದಿನ ದಿನಗಳಲ್ಲಿ ಅವರನ್ನು ಕರೆದು ಮಾತಾಡಿಸುತ್ತೇವೆ. ಒಬ್ಬರಿಂದ ಇಡೀ ಚಿತ್ರರಂಗಕ್ಕೆ ಕಪ್ಪು ಮಚ್ಚೆ ಬರೋದು ಬೇಡ. ಅದಕ್ಕೆ ಕಟ್ಟು ನಿಟ್ಟಾಗಿ ಅವರಿಗೆ ಸಂಪರ್ಕ ಮಾಡಿ ಇಬ್ಬರನ್ನೂ ಕರೆಸಿ ಇತ್ಯರ್ಥ ಮಾಡುವುದಕ್ಕೆ ಪ್ರಯತ್ನ ಪಡುತ್ತೇನೆ." ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಭರವಸೆ ಕೊಟ್ಟಿದ್ದಾರೆ.


Click it and Unblock the Notifications











