ಕನ್ನಡಿಗರನ್ನು ಕೆಣಕಿದ ಕಮಲ್ ಹಾಸನ್ಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟ ಸಾಯಿಕುಮಾರ್ !
ಸಕಲ ಕಲಾ ವಲ್ಲಭ, ವಿಶ್ವರೂಪಿ, ಉಳಗನಾಯಗನ್ ಮುಂತಾದ ಬಿರುದುಗಳನ್ನು ಪಡೆದಿರುವವರು ಕಮಲ ಹಾಸನ್. ಅತ್ಯದ್ಭುತ ಅನ್ನಿಸುವ ಸಿನಿಮಾಗಳನ್ನು ನೀಡಿ ಭಾರತೀಯ ಚಿತ್ರರಂಗದ ಹೆಸರನ್ನು ಜಾಗತಿಕ ಮಟ್ಟಕ್ಕೆ ಕರೆದೊಯ್ದವರಲ್ಲಿ ಇವರು ಕೂಡ ಒಬ್ಬರು. ಆದರೆ, ಇಂಥಾ ಕಮಲ್ ಹಾಸನ್ ತಮ್ಮ ಥಗ್ ಲೈಫ್ ಚಿತ್ರದ ಬಿಡುಗಡೆಯ ಸಮಯದಲ್ಲಿ ಕನ್ನಡಿಗರ ಗೌರವ ಕಳೆದುಕೊಂಡಿದ್ದರು. ಆತ್ಮಾಭಿಮಾನ ಕೆಣಕಿದ್ದರು. ತಾವಾಡಿದ ಮಾತುಗಳಿಗೆ ಕ್ಷಮೆಯನ್ನು ಕೇಳದೇ ಮೊಂಡುತನದ ಪ್ರದರ್ಶನವನ್ನು ಕೂಡ ಮಾಡಿದ್ದರು.
ಥಗ್ ಲೈಫ್ ಚಿತ್ರ ತೆಗ್ಗಿಗೆ ಬಿದ್ದರೂ ಕೂಡ ಕಮಲ್ ಹಾಸನ್ ದುರಂಹಕಾರ ಕಡಿಮೆಯಾಗಲಿಲ್ಲ. ಕನ್ನಡಿಗರ ಬಳಿ ಕ್ಷಮೆಯನ್ನು ಕೂಡ ಕಮಲ್ ಹಾಸನ್ ಕೊನೆಯವರೆಗೆ ಕೇಳಲಿಲ್ಲ. ಬದಲಿಗೆ ಸುಪ್ರೀಂ ಕೋರ್ಟ್ಗೆ ಹೋಗಿ ತಮ್ಮ ಚಿತ್ರದ ಬಿಡುಗಡೆಗೆ ಪರವಾನಗಿಯನ್ನು ಕೂಡ ಪಡೆದುಕೊಂಡು ಬಂದರು.

ಆದರೆ.. ಚಿತ್ರ ಇಲ್ಲಿಯವರೆಗೆ ಬಿಡುಗಡೆಯಾಗಿಲ್ಲ. ಹೀಗಿರುವಾಗ ಇದೀಗ ಕನ್ನಡ ಚಿತ್ರರಂಗದ ಡೈಲಾಗ್ ಕಿಂಗ್ ಸಾಯಿಕುಮಾರ್ ಈ ವಿವಾದದ ಕುರಿತು ಮಾತನಾಡಿದ್ದಾರೆ. ಕಮಲ್ ಹಾಸನ್ಗೆ ತಿರುಗೇಟನ್ನು ಕೊಟ್ಟಿದ್ದಾರೆ.
ಹೌದು, ಈ ಕುರಿತು ನಿಮ್ಮ 'ಫಿಲ್ಮಿ ಬೀಟ್ ಕನ್ನಡ'ಗೆ ಪ್ರತಿಕ್ರಿಯೆಯನ್ನು ನೀಡಿರುವ ಸಾಯಿಕುಮಾರ್ ವಿವಾದವಾಗಲಿ ಎಂದೇ ಕೆಲವರು ಇತ್ತೀಚೆನ ದಿನಗಳಲ್ಲಿ ಮಾತನಾಡುತ್ತಿದ್ದಾರಾ ಎನ್ನುವ ಅನುಮಾನ ನನ್ನದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಬೇರೆಯ ಅಥವಾ ತದ್ವಿರುದ್ದ ಹೇಳಿಕೆಯನ್ನು ನೀಡಿದರೆ ಅದೊಂದು ಚರ್ಚೆಯ ವಿಷಯವಾಗುತ್ತೆ ಎಂಬ ಅರಿವು ಇದ್ದವರು ಬೇಕು ಬೇಕಂತಲೇ ಹೀಗೆ ಮಾತನಾಡುತ್ತಾರಾ ಎಂಬ ಪ್ರಶ್ನೆ ನನ್ನನ್ನೂ ಕಾಡುತ್ತಿದೆ ಎಂದಿರುವ ಸಾಯಿಕುಮಾರ್ ಅವರನ್ನು ಉಳಗನಾಯಗನ್ ಅಂತಾರೆ, ಅತ್ಯುತ್ತಮ ನಟ ಎಂದು ಕರೆಯುತ್ತಾರೆ, ನಮಗೆಲ್ಲಾ ನಮ್ಮ ರಾಜ್ ಕುಮಾರ್ ಹೇಗೆ ಆದರ್ಶ, ಪ್ರೇರಣೆಯಾದರೋ ಹಾಗೇ ಅವರು ಕೂಡ ಅನೇಕ ಜನರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ, ಕಮಲ್ ಹಾಸನ್ ಅಂದರೆ ನನಗೆ ತುಂಬಾ ಇಷ್ಟ ಅಂತಾ ನಮ್ಮ ಶಿವಣ್ಣ ಕೂಡ ಹೇಳಿದ್ದಾರೆ, ಹೀಗಿರುವಾಗ ಅವರು ಯಾಕೆ ಇದೆಲ್ಲ ಮಾತನಾಡಿದರು ಎನ್ನುವುದನ್ನೇ ನಾನು ಯೋಚನೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಮುಂದುವರೆದು ಅವರು ಮಾತನಾಡಿದ ನಂತರ ಅದು ವಿವಾದ ಆಯ್ತು, ಬಹುದೊಡ್ಡ ಚರ್ಚೆ ಕೂಡ ಆಯ್ತು, ನಾವು ಅವರ ಚಿತ್ರ ಬಿಡುಗಡೆ ಮಾಡಬಾರದು ಎಂದು ಹೇಳಿದ್ವಿ, ಅದಕ್ಕೆ ಅವರು ನ್ಯಾಯಾಲಯಕ್ಕೆ ಹೋದರು, ಅದಕ್ಕೆ ನಮ್ಮ ಕೋರ್ಟ್ ಅದಕ್ಕೆ ತುಂಬಾ ಚೆನ್ನಾಗಿ ಉತ್ತರ ನೀಡಿತ್ತು, ಆ ನಂತರ ಮತ್ತೆ ಸುಪ್ರೀಂ ಕೋರ್ಟ್ಗೆ ಹೋದರು ಎಂದು ಹೇಳಿರುವ ಸಾಯಿಕುಮಾರ್ ಏನೇ ಇದ್ದರೂ ಕೂಡ ನಾವೆಲ್ಲ ಒಂದೇ.. ನಾವೆಲ್ಲ ಕಲಾ ಸರಸ್ವತಿ ಮಕ್ಕಳೇ ಎಂದುಕೊಂಡು ನಾವು ಮುನ್ನಡೆಯುವಾಗ ಅಂತಹ ಒಂದು ಹೇಳಿಕೆ ನೋಡಿದಾಗ ಅವರು ಭಾವನಾತ್ಮಕವಾಗಿ ಆ ಮಾತು ಹೇಳಿದರಾ.. ಬೇಕು ಬೇಕಂತಲೇ ಹೇಳಿದರಾ.. ಅಥವಾ ಇತಿಹಾಸ ಅದಕ್ಕೆ ಪೂರಕವಾಗಿದೆ ಎಂದು ಹೇಳಿದರಾ ಗೊತ್ತಿಲ್ಲ. ಆದರೆ.. ಇತಿಹಾಸ ತಜ್ಞರು ಕೂಡ ಅವರ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿಲ್ಲ ಅವರ ಪರ ಹೇಳಿಕೆ ನೀಡಿಲ್ಲ , ಯಾರ ಬಳಿ ಕೂಡ ದಾಖಲೆಗಳಿಲ್ಲ ಎಂದು ಹೇಳಿದ್ದಾರೆ.

ಈಗೀಗ ಎಲ್ಲಾ ಕಡೆ ಸಿನಿಮಾ ಕಾರ್ಯಕ್ರಮಗಳಲ್ಲಿ ಏನಾದರೂ ಒಂದು ತಪ್ಪು ನಡೆಯುತ್ತಾನೇ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಸಾಯಿಕುಮಾರ್, ಸಭೆ ಅಂದ ಮೇಲೆ ಅದಕ್ಕೊಂದು ಮರ್ಯಾದೆ ಇರುತ್ತೆ. ಸಭೆ ಅಂದ ಮೇಲೆ ಅದಕ್ಕೊಂದು ಸಂಸ್ಕ್ರತಿ ಇರುತ್ತೆ.. ಸಭೆಗೆ ಬಂದ ಮೇಲೆ ನಾವು ಮಾತನಾಡುವ ಪ್ರತಿಯೊಂದು ಮಾತು ಜನರಿಗೆ ತಲುಪುತ್ತೆ, ಹೀಗಾಗಿ ಮಾತನಾಡುವಾಗ ಆಲೋಚನೆ ಮಾಡಿ ಮಾತನಾಡಬೇಕು ಎಂದು ಹೇಳಿದ್ದಾರೆ.
ಅವರದ್ದು ಇಲ್ಲಿ ತಪ್ಪು ಇದೆಯಾ ಇಲ್ವಾ ಗೊತ್ತಿಲ್ಲ. ಆದರೆ ತಪ್ಪು ಮಾಡಿದ್ದರೆ ಅವರು ಕ್ಷಮೆ ಕೇಳಬೇಕಿತ್ತು ಎಂದು ಹೇಳಿರುವ ಸಾಯಿಕುಮಾರ್, ಇದೆಲ್ಲ ನೋಡಿ ನನಗೂ ಕೂಡ ಬೇಸರವಾಯ್ತು ಆದರೆ ದುರಾದೃಷ್ಟ ಇವತ್ತು ಕೂಡ ನಾನು ಮಾತನಾಡಿದ್ದೇ ಸರಿ ಎನ್ನುವ ವಾದವನ್ನು ಅವರು ಮಾಡುತ್ತಿದ್ದಾರೆ ಆದರೆ ಇದೇ ಸಮಯದಲ್ಲಿ ನಾವು ಕನ್ನಡಿಗರೆಲ್ಲ ನಮ್ಮ ಒಗ್ಗಟ್ಟನ್ನು ಪ್ರದರ್ಶನ ಮಾಡಿದ್ದೇವೆ, ನಾವೇನು ಎನ್ನುವುದು ತೋರಿಸಿದ್ದೇವೆ ಎಂದು ಸಾಯಿಕುಮಾರ್ ಹೇಳಿದ್ದಾರೆ.
ಇನ್ನುಳಿದಂತೆ ಜೂನ್ 5ರಂದು ಕರ್ನಾಟಕ ಹೊರತುಪಡಿಸಿ ಬೇರೆ ಕಡೆಗಳಲ್ಲಿ 'ಥಗ್ ಲೈಫ್' ಸಿನಿಮಾ ತೆರೆಗಪ್ಪಳಿಸಿತ್ತು. ಆದರೆ ನೀರಸ ಪ್ರತಿಕ್ರಿಯೆ ಸಿಕ್ಕಿತ್ತು. ಸಿನಿಮಾ ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿತು.
ಚಿತ್ರದ ಈ ಸೋಲಿಗೆ ಮಣಿರತ್ನಂ ಕೂಡ ತಮ್ಮ ಅಭಿಮಾನಿಗಳಲ್ಲಿ ಕ್ಷಮೆಯನ್ನು ಕೇಳಿದರು. ನಮ್ಮಿಬ್ಬರಿಂದ ಮತ್ತೊಂದು 'ನಾಯಗನ್' ನಿರೀಕ್ಷಿಸುತ್ತಿದ್ದವರಿಗೆ ನಾನು ಕ್ಷಮಿಸಿ ಎಂದು ಕೇಳುತ್ತಿದ್ದೇನೆ. ನಾವು ಇದನ್ನು ನಿರೀಕ್ಷಿರಲಿಲ್ಲ. ನಾವು ಸಂಪೂರ್ಣವಾಗಿ ವಿಭಿನ್ನವಾದ ಸಿನಿಮಾ ಮಾಡಲು ಬಯಸಿದ್ದೆವು. ಅತಿಯಾದ ನಿರೀಕ್ಷೆಗಿಂತ ಹೆಚ್ಚಿನ ನಿರೀಕ್ಷೆ ಇದಾಗಿತ್ತು ಎಂದು ನಾನು ಭಾವಿಸುತ್ತೇನೆ. ಪ್ರೇಕ್ಷಕರು ನಾವು ಅವರ ಮುಂದಿಟ್ಟದ್ದಕ್ಕಿಂತ ಬಹಳ ಭಿನ್ನವಾದದ್ದನ್ನು ನಿರೀಕ್ಷಿಸಿದ್ದರು ಎಂದು ಮಾಧ್ಯಮವೊಂದಕ್ಕೆ ಮಣಿರತ್ನಂ ಪ್ರತಿಕ್ರಿಯೆಯನ್ನು ನೀಡಿದ್ದರು.


Click it and Unblock the Notifications











