ಅಂತೂ, ರನ್ನ ಚಿತ್ರದ ಲಾಭನಷ್ಟದ ಲೆಕ್ಕಾಚಾರ ಇತ್ಯರ್ಥ!
ಕಿಚ್ಚ ಸುದೀಪ್ ಅಭಿನಯದ 'ರನ್ನ' ಚಿತ್ರ ಬಿಡುಗಡೆಯಾದ ಒಂದು ತಿಂಗಳ ನಂತರವೂ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಮುಂದುವರಿಸಿದೆ.
ಚಿತ್ರ ಬಿಡುಗಡೆಯಾದ ನಂತರ ನಿರ್ಮಾಪಕ ಮತ್ತು ಹಂಚಿಕೆದಾರರ ನಡುವೆ ಆರ್ಥಿಕ ಬಟವಾಡೆ ವಿಚಾರದಲ್ಲಿ ಮನಸ್ತಾಪ ಉಂಟಾಗಿ ಕೆಲವೊಂದು ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ರದ್ದಾದ ಉದಾಹರಣೆಗಳೂ ಇವೆ. (ರನ್ನ ಚಿತ್ರಕ್ಕೆ ಬಿತ್ತು ಬ್ರೇಕ್)
ಬಿಕೆಟಿ ಭಾಗದ ಬೆಂಗಳೂರು, ಕೋಲಾರ ಮತ್ತು ಚನ್ನಪಟ್ಟಣ ಸೇರಿದಂತೆ ಸುಮಾರು 25 ಚಿತ್ರಮಂದಿರಗಳಲ್ಲಿ ರನ್ನ ಚಿತ್ರವನ್ನು ಡೌನ್ ಲೋಡ್ ಮಾಡಲಾಗದೇ, ಚಿತ್ರಮಂದಿರದ ಮಾಲೀಕರು ಟಿಕೆಟ್ ಖರೀದಿಸಿದ್ದ ಪ್ರೇಕ್ಷಕ ಬಂಧುಗಳಿಗೆ ದುಡ್ಡು ರಿಫಂಡ್ ಮಾಡಿದ ಘಟನೆಯೂ ವರದಿಯಾಗಿತ್ತು.
ರನ್ನ ಚಿತ್ರದ ನಿರ್ಮಾಪಕ ಚಂದ್ರಶೇಖರ್ ಮತ್ತು ಹಂಚಿಕೆದಾರ ಗೋಕುಲ್ ಫಿಲಂಸಿನ ಬಲರಾಮ್ ನಡುವೆ ಆರ್ಥಿಕ ಲೆಕ್ಕಾಚಾರಕ್ಕೆ ಸಂಬಂಧಿಸಿದಂತೆ ಗೊಂದಲವೇ ಇದಕ್ಕೆಲ್ಲಾ ಮೂಲ ಕಾರಣವಾಗಿತ್ತು.
ಅಂತೂ, ಈಗ ಕನ್ನಡ ಚಲನಚಿತ್ರ ಮಂಡಳಿ ಇಬ್ಬರ ನಡುವಿನ ಮನಸ್ತಾಪಕ್ಕೆ ಮಂಗಳ ಹಾಡುವಲ್ಲಿ ಕೊನೆಗೂ ಯಶಸ್ವಿಯಾಗಿದೆ..

ಬಿಡುಗಡೆಗೆ ಮುನ್ನ
ಕನ್ನಡ ಚಿತ್ರೋದ್ಯಮದಲ್ಲಿ ಇದೇ ಮೊದಲ ಬಾರಿಗೆ ಎನ್ನುವಂತೆ ರನ್ನ ಚಿತ್ರ ಮೂನ್ನರಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆ ಕಂಡಿತ್ತು. ಅಲ್ಲದೇ,ನಿರ್ಮಾಪಕ ಅಥವಾ ಹಂಚಿಕೆದಾರ ಡೈರೆಕ್ಟಾಗಿ ಚಿತ್ರಮಂದಿರಕ್ಕೆ ಚಿತ್ರದ ರೈಟ್ಸನ್ನು ಮಾರಾಟ ಮಾಡುವ ಹೊಸ ಪದ್ದತಿ ಆರಂಭವಾಗುತ್ತೆ ಎಂದು ಸುದ್ದಿಯಾಗಿತ್ತು.

ಗಮನಿಸಬೇಕಾದ ಅಂಶ
ರನ್ನ ಚಿತ್ರ ಮೊದಲ ವಾರದ ವೀಕೆಂಡ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು.ಒಂದು ವಾರದ ಗ್ಯಾಪ್ ನಲ್ಲಿ ಶಿವಣ್ಣ ಅಭಿನಯದ ವಜ್ರಕಾಯ ಚಿತ್ರ ಬಿಡುಗಡೆಯಾದರೂ ರನ್ನ ಚಿತ್ರದ ಗಳಿಕೆಗೆ ತೊಂದರೆಯಾಗಿರಲಿಲ್ಲ. ಎರಡೂ ಚಿತ್ರಗಳು ಉತ್ತಮ ಕಲೆಕ್ಷನ್ ಮಾಡಿದ್ದು ಒಂದು ಉತ್ತಮ ಬೆಳವಣಿಗೆ ಅನ್ನೋಬಹುದು.

ಮಂಡಳಿಯಲ್ಲಿ ರನ್ನ ಚಿತ್ರದ ನಿರ್ಮಾಪಕರು
ರನ್ನ ಚಿತ್ರದ ಪ್ರಾಫಿಟ್ ಶೇರಿಂಗ್ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ ಎಂದು ನಿರ್ಮಾಪಕರು ಮತ್ತು ಡಿಸ್ಟ್ರಿಬ್ಯೂಟರ್ ಮಂಡಳಿ ಮೆಟ್ಟಲೇರಿದ್ದರು. ಈ ವಿವಾದಕ್ಕೆ ಒಂದು ಮಟ್ಟಿನ ಪರಿಹಾರ ನೀಡುವಲ್ಲಿ ಯಶಸ್ವಿಯಾಗಿದ್ದು ಮಂಡಳಿಯ ಸಾಧನೆ ಎಂದರೆ ತಪ್ಪಾಗಲಾರದು.

ಇತ್ಯರ್ಥವಾಗಿದ್ದು ಹೀಗೆ..
ಚಿತ್ರದ ನಿರ್ಮಾಪಕ ನಿಮಿಷಾಂಬ ಚಂದ್ರಶೇಖರ್ ಮತ್ತು ಗೋಕುಲ್ ಫಿಲಂಸಿನ ಬಲರಾಮ್ ಒಂದು ಇತ್ಯರ್ಥಕ್ಕೆ ಬಂದಿದ್ದಾರೆ. ಮಂಡಳಿಯ ಅಧ್ಯಕ್ಷ ಡಿಸೋಜ ಮತ್ತು ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು ಇಬ್ಬರ ಮನಸ್ತಾಪವನ್ನು ತಣ್ಣಗೆಗೊಳಿಸುವಲ್ಲಿ ಸಫಲರಾಗಿದ್ದಾರೆ.

ದುಡ್ಡಿನ ಲೆಕ್ಕಾಚಾರ ಹೇಗೆಂದರೆ..
ಗ್ರಾಸ್ ಆದಾಯದಲ್ಲಿ ಶೇ.ಹತ್ತು ಮತ್ತು ಲಾಭದಲ್ಲಿ ಶೇ. 45 ಹಂಚಿಕೆದಾರರಿಗೆ. ಲಾಭದ ಶೇ. 55 ನಿರ್ಮಾಪಕರಿಗೆ ಎನ್ನುವ ನಿರ್ಧಾರಕ್ಕೆ ಮಂಡಳಿ ಬಂದಿದೆ, ಇದಕ್ಕೆ ಇಬ್ಬರೂ ಒಪ್ಪಿಗೆ ಸೂಚಿಸಿದ್ದಾರೆ.(ಮಾಹಿತಿ ಕೃಪೆ: ಚಿತ್ರಲೋಕ)


Click it and Unblock the Notifications











