ಸುದೀಪ್-ಕುಮಾರ್ ವಿವಾದ: "ಸಂಸಾರ ಹಾಳು ಮಾಡ್ಬೇಡಿ" ಚಕ್ರವರ್ತಿ ಚಂದ್ರಚೂಡ್ ವಿರುದ್ಧ ತಿರುಗಿಬಿದ್ದ ಸೂರಪ್ಪ ಬಾಬು!
ಕಳೆದ 15-20 ದಿನಗಳಿಂದ ಕಿಚ್ಚ ಸುದೀಪ್ ಹಾಗೂ ನಿರ್ಮಾಪಕ ಕುಮಾರ್ ನಡುವಿನ ವಿವಾದಕ್ಕೆ ಇನ್ನೂ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಈ ವಿವಾದಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಎಂಟ್ರಿ ಕೊಟ್ಟಿದ್ದು, ಸುಖಾಂತ್ಯಗೊಳಿಸುವ ಸಾಧ್ಯತೆಗಳು ಇವೆ. ಈಗಾಗಲೇ ರವಿಚಂದ್ರನ್ ಇಬ್ಬರನ್ನೂ ಕರೆದು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ.
ಇಷ್ಟೆಲ್ಲ ನಡೆಯುತ್ತಿರುವಾಗಲೇ ಚಕ್ರವರ್ತಿ ಚಂದ್ರಚೂಡ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಸೂರಪ್ಪ ಬಾಬು ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಈ ವಿವಾದದಲ್ಲಿ ಸೂರಪ್ಪ ಬಾಬು ಕೈವಾಡವಿದೆ ಅನ್ನುವ ಅರ್ಥದಲ್ಲಿ ಬೊಟ್ಟು ಮಾಡಿದ್ದರು. ಈ ಹೇಳಿಕೆ ವಿರುದ್ಧ ಸೂರಪ್ಪ ಬಾಬು ಕಿಡಿಕಾರಿದ್ದಾರೆ. ಚಕ್ರವರ್ತಿ ಚಂದ್ರಚೂಡ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇಂದು (ಜುಲೈ 23) ಪತ್ರಿಕಾಗೋಷ್ಠಿ ಕರೆದು ಮಾಧ್ಯಮದವರ ಮುಂದೆ ಚಂದ್ರಚೂಡ್ ಅವರನ್ನು ತರಾಟೆಗೆ ತೆಗೆದುಕೊಂಡರು. ಚಂದ್ರಚೂಡ್ ಮಾಡಿರುವ ಆರೋಪದ ವಿರುದ್ಧ ಕಿಡಿಕಾರಿದರು. ಪ್ರತಿಕಾಗೋಷ್ಠಿಯ ಸೂರಪ್ಪ ಬಾಬು ಆಡಿ ಮಾತಿನ ಹೈಲೈಟ್ ಇಲ್ಲಿದೆ.
"ನಾನು ಕ್ಲಾರಿಟ ಕೊಡಬೇಕಿರೋದು ಇಬ್ಬರಿಗೇ"
"ಚಂದ್ರಚೂಡ್ ಅನ್ನೋರು ಅವರದ್ದೇ ಆದ ಯೂಟ್ಯೂಬ್ ಚಾನೆಲ್ನಲ್ಲಿ ನನ್ನ ಬಗ್ಗೆ ಅವರಿಗೆ ಯಾವುದೇ ಹಕ್ಕಿಲ್ಲದೆ, ಅವಹೇಳನಕಾರಿಯಾಗಿ ಮಾತಾಡಿದ್ದಾರೆ. ನಾನು ಜೀವನದಲ್ಲಿ ಉತ್ತರ ಕೊಡಬೇಕಿರೋದು ಇಬ್ಬರಿಗೇನೆ. ಒಂದು ನನ್ನ ಹೆಂಡ್ತಿ ಮಕ್ಕಳಿಗೆ. ಇನ್ನೊಂದು ನನ್ನ ನಂಬಿ ಸಾಲ ಕೊಟ್ಟಿರೋರಿಗೆ. ನಿಮ್ಮ ಮುಂದೆ ಯಾಕೆ ಬಂದಿದ್ದೀನಿ ಅಂದರೆ, ಅದಕ್ಕೊಂಡು ಕ್ಲಾರಿಟಿ ಕೊಟ್ಟರೇನೆ ಸರಿ ಅಂತ."
"ಕೋಟಿಗೊಬ್ಬ ಸಿನಿಮಾದಲ್ಲಿ ಕೆಲಸ ಮಾಡಿದ್ದಾರಾ?"
"ರಾಮ್ ಬಾಬು ಫಿಕ್ಚರ್ಸ್ನಲ್ಲಿ ಬಂದ ಕೋಟಿಗೊಬ್ಬ 2 ಮತ್ತು ಕೋಟಿಗೊಬ್ಬ 3 ಸಿನಿಮಾದಲ್ಲಿ ಅವರು ಯಾವುದಾದರೂ ರೀತಿ ಸಹಾಯ ಮಾಡಿದ್ದಾರಾ? ಇಲ್ಲಾ ಟೆಕ್ನಿಷಿಯನ್ ಆಗಿ ಏನಾದರೂ ಕೆಲಸ ಮಾಡಿದ್ದಾರಾ? ಇಲ್ಲ ಯಾರಿಗಾದರೂ ಟೀ ಕೊಟ್ಟಿದ್ದಾರಾ? ಯಾರಿಗಾದರೂ ಕಾಸ್ಟ್ಯೂಮ್ ಹಾಕಿದ್ದಾರಾ? ಸುಮ್ ಸುಮ್ಮನೆ ಇನ್ನೊಬ್ಬ ವ್ಯಕ್ತಿ ಬಗ್ಗೆ ಮಾತಾಡೋಕೆ ಇವರಿಗೆ ಯಾರು ರೈಟ್ಸ್ ಕೊಟ್ಟರು?"
"ಕುಮಾರ್ 2 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ"
"ಎಂಎನ್ ಕುಮಾರ್ ಸಪೋರ್ಟ್ ಮಾಡ್ತೀನಂತೆ.. ಅವನು ನನ್ನ ಸ್ನೇಹಿತ. ಎಂಟು ತಿಂಗಳು ಅವನನ್ನು ಅವಾಯ್ಡ್ ಮಾಡಿದ್ದೀನಿ. ಎರಡು ಬಾರಿ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದ. ಅವನು ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದು ನಿಜ. ಏನೂ ಮಾಡ್ಬೇಡ ತಡಿ.. ದೇವರ ಮೇಲೆ ಭಾರ ಹಾಕಿ ತಡಿ. ಇದು ನಾಲ್ಕು ಗೋಡೆ ಮಧ್ಯೆ ನಡೆಯುವಂತಹದ್ದು ಎಂದಿದ್ದೆ. ಇದನ್ನು ಬೀದಿಗೆ ತರಬೇಕು ಅಂತ ಹೇಳಿದ್ದೆ. ಎಂಟು ತಿಂಗಳು ಆದ್ಮೇಲೆ ಹೇಳಿದ್ರು. ನನ್ನ ಕೈಯಲ್ಲಿ ಆಗ್ತಿಲ್ಲಪ್ಪ. ಬೆಳಗ್ಗೆ 4-5 ಗಂಟೆಗೆ ಬರ್ತಾರೆ ಅಂತ ಹೇಳಿದ್ರು."

"ಸಂಸಾರ ಹಾಳು ಮಾಡ್ಬೇಡಿ"
" ವಾಣಿಜ್ಯ ಮಂಡಳಿ ಯಾರಪ್ಪಂದು.. ನಾನು ಅದಕ್ಕೆ ಸದಸ್ಯ. ಇಲ್ಲಿ ಇರೋರು ಯಾರೋ ವಿಡಿಯೋ ಮಾಡಿ ಕಳಿಸುತ್ತಾರಂತೆ. ಬಾಬು ಅವರು ಕುಮಾರ್ಗೆ ಫುಲ್ ಸಪೋರ್ಟ್ ಅಂತೆ. ನಾನು ಕಾರ್ಯಕಾರಿ ಸಮಿತಿ ಸದಸ್ಯ ಆಗಿದ್ದೆ. ನಾನು ಹೋಗಬಾರದಾ ಅಲ್ಲಿಗೆ. ಚಂದ್ರಚೂಡ್ ಅವರೇ ನಿಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿ. ಇನ್ನೊಬ್ಬರಿಗೆ ಬುದ್ದಿ ಹೇಳುವಂತಹ ಮನುಷ್ಯರಲ್ಲ ನೀವು. ಸಂಸಾರ ಹಾಳು ಮಾಡ್ಬೇಡಿ. ನೀನು ಏನು ಮಾಡಿದ್ದೀರ ಅಂತ ಜಗತ್ತಿಗೆ ಗೊತ್ತಿದೆ."
"ಸುದೀಪ್ ಸಾರ್ ನನ್ನ ಬಗ್ಗೆ ಎಲ್ಲೂ ದೂರಿಲ್ವಲ್ಲ"
" 2016ರವರೆಗೂ ದೊಡ್ಡ ದೊಡ್ಡ ಸ್ಟಾರ್ ಜೊತೆ ಸಿನಿಮಾ ಮಾಡಿದ್ದೇನೆ. ಯಾರೂ ಕಂಪ್ಲೈಂಟ್ ಮಾಡಿಲ್ವಲ್ಲ. ಸುದೀಪ್ ಸಾರ್ ಕೂಡ ನನ್ನ ಬಗ್ಗೆ ಎಲ್ಲೂ ದೂರಿಲ್ವಲ್ಲ. ಆ ನಟ.. ಆ ನಟ ಅಂತಿರಾ.. ಯಾರು ಅಂತ ಹೇಳಿ.. ನಾನು ಮೂರು ಸಿನಿಮಾ ಮಾಡುತ್ತಿದ್ದೇನೆ. ಯಾರು ಅಂತ ಹೇಳಿ. ನಾನು ಇಲ್ಲಿ ವ್ಯಾಪಾರ ಮಾಡೋಕೆ ಬಂದಿದ್ದೀನಿ." ಎಂದು ಚಕ್ರವರ್ತಿ ಚಂದ್ರಚೂಡ್ ವಿರುದ್ಧ ನಿರ್ಮಾಪಕ ಸೂರಪ್ಪ ಬಾಬು ಆಕ್ರೋಶ ಹೊರಹಾಕಿದ್ದಾರೆ.


Click it and Unblock the Notifications











