Upendra: ಜಾತಿ ನಿಂದನೆ ಪ್ರಕರಣ.. 2ನೇ FIRಗೆ ಹೈಕೋರ್ಟ್ನಿಂದ ಉಪ್ಪಿಗೆ ಬಿಗ್ ರಿಲೀಫ್!
ರಿಯಲ್ ಸ್ಟಾರ್ ಉಪೇಂದ್ರ ಫೇಸ್ಬುಕ್ ಲೈವ್ನಲ್ಲಿ ಮಾತಾಡುವಾಗ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪ ಮಾಡಿದೆ. ಈ ಸಂಬಂಧ ವಿವಿಧ ಸಂಘಟನೆಗಳು ರಾಜ್ಯದ ಹಲವೆಡೆ ದೂರನ್ನು ದಾಖಲಿಸಿದ್ದರು. ಅಲ್ಲದೆ ಬೆಂಗಳೂರಿನಲ್ಲಿಯೇ ಎರಡು ಕಡೆಗಳಲ್ಲಿ FIR ಕೂಡ ದಾಖಲಾಗಿತ್ತು. ಈ ಸಂಬಂಧ ಉಪೇಂದ್ರಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.
ಉಪೇಂದ್ರ ವಿರುದ್ಧ ಚನ್ನಮ್ಮನ ಕೆರೆ ಅಚ್ಚುಕಟ್ಟು ಹಾಗೂ ಹಲಸೂರು ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿತ್ತು. ಈ ಸಂಬಂಧ ಉಪೇಂದ್ರ ಹೈಕೋರ್ಟ್ ಮೆಟ್ಟಿಲೇರಿದ್ದರು. ಮೊದಲ FIRಗೆ ಮಧ್ಯಂತರ ತಡೆಯಾಜ್ಞೆ ನೀಡಲಾಗಿತ್ತು. ಇದೇ ಆಧಾರದ ಮೇಲೆ ಉಪ್ಪಿ ಎರಡನೇ FIR ಅನ್ನೂ ರದ್ದು ಮಾಡುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಇಂದು (ಆಗಸ್ಟ್ 17) ಉಪೇಂದ್ರ ಅರ್ಜಿಯನ್ನು ವಿಚಾರಣೆ ನಡೆಸಿದ ಕೋರ್ಟ್ 2ನೇ ಎಫ್ಐಆರ್ಗೂ ಮಧ್ಯಂತರ ತಡೆಯಾಜ್ಞೆಯನ್ನು ನೀಡಿದೆ.

ಹೈ ಕೋರ್ಟ್ ನೀಡಿದ ಆದೇಶದಿಂದ ಬೆಂಗಳೂರು ನಗರದ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ಮತ್ತು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡೂ FIRಗಳಿಗೂ ತಡೆ ಸಿಕ್ಕಿದ್ದು, ಸದ್ಯಕ್ಕೆ ಉಪೇಂದ್ರ ಸಂಕಷ್ಟದಿಂದ ಪಾರಾಗಿದ್ದಾರೆ.
ಪ್ರಜಾಕೀಯ ಸ್ಥಾಪನೆಯಾಗಿ ಆರು ವರ್ಷ ಆದ ಖುಷಿಯಲ್ಲಿ ಉಪೇಂದ್ರ ಫೇಸ್ಬುಕ್ ಲೈವ್ ಬಂದಿದ್ದರು. ಈ ವೇಳೆ ಪರಿಶಿಷ್ಟ ಜಾತಿಯ ಒಂದು ಪಂಗಡದ ಬಗ್ಗೆ ಇರುವ ಗಾದೆಯನ್ನು ಬಳಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಆಕ್ರೋಶಗೊಂಡ ಕೆಲವು ಸಂಘಟನೆಗಳು ದೂರನ್ನು ದಾಖಲಿಸಿದ್ದವು. ವಿಡಿಯೋ ವಿವಾದಕ್ಕೆ ಸಿಲುಕುತ್ತಿದ್ದಂತೆ ಉಪೇಂದ್ರ ಆ ವಿಡಿಯೋವನ್ನು ಡಿಲೀಟ್ ಕೂಡ ಮಾಡಿದ್ದರು.

ಅಷ್ಟರೊಳಗೆ ಚನ್ನಮ್ಮನಕೆರೆ ಅಚ್ಚುಕಟ್ಟು ಹಾಗೂ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೆಲವು ದಿನಗಳ ಹಿಂದಷ್ಟೇ ಮೊದಲನೇ ಪ್ರಕರಣದಲ್ಲಿ ಮಧ್ಯಂತರ ತಡೆ ನೀಡಲಾಗಿತ್ತು. ಅದೇ ಆದೇಶವನ್ನು 2ನೇ ಪ್ರಕರಣದಲ್ಲೂ ನೀಡಬೇಕು ಉಪೇಂದ್ರ ಹೈಕೋರ್ಟ್ನಲ್ಲಿ ಮನವಿ ಮಾಡಿದ್ದರು. ಆ ಸಂಬಂಧ ನಡೆದ ವಿಚಾರಣೆಯಲ್ಲಿ ನ್ಯಾಯಾಧೀಶರು ಇಂದು (ಆಗಸ್ಟ್ 17) ಉಪ್ಪಿ ಬಿಗ್ ರಿಲೀಫ್ ಕೊಟ್ಟಿದ್ದಾರೆ.
ಉಪೇಂದ್ರ ಸಲ್ಲಿಸಿದ್ದ ಅರ್ಜಿಯಲ್ಲಿ "ಆಕಸ್ಮಿಕವಾಗಿ ಈ ಗಾದೆಯನ್ನು ಬಳಕೆ ಮಾಡಲಾಗಿದೆ. ಗಾದೆ ಬಳಕೆ ಮಾಡುವುದು ಪರಿಶಿಷ್ಟ ಜಾತಿ, ಪಂಗಡಗಳ ಕಾಯಿದೆಯಡಿ ಅಪರಾಧವಲ್ಲ. ಹೀಗಾಗಿ ಪ್ರಕರಣಕ್ಕೆ ತಡೆ ನೀಡಬೇಕು" ಎಂದು ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿತ್ತು. ಉಪೇಂದ್ರ ಫೇಸ್ಬುಕ್ ಲೈವ್ನಲ್ಲಿ ನೀಡಿದ ವಿವಾದಾತ್ಮಕ ಹೇಳಿಕೆ ಬಳಿಕ ಕರ್ನಾಟಕ ರಣಧೀರ ಪಡೆಯ ರಾಜ್ಯಾಧ್ಯಕ್ಷ ಭೈರಪ್ಪ ಹರೀಶ್ ಕುಮಾರ್ ದೂರು ದಾಖಲಿಸಿದ್ದರು.


Click it and Unblock the Notifications











