Don't Miss!
- News ಆಕ್ಸಿಸ್ ಬ್ಯಾಂಕ್ಗೆ ಬರೋಬ್ಬರಿ 7,129 ಕೋಟಿ ರೂಪಾಯಿ ಲಾಭ!
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಮ್ಮನ ನೆನಪು ತರುವ ರಾಜ್ ಸಿನಿಮಾಗಳು : 'ಪರಶುರಾಮ' ತಂದ ಜ್ವರ
'ನಾನು ನೋಡಿದ ಮೊದಲ ಸಿನಿಮಾ' ಲೇಖನ ಸರಣಿಯ ಐದನೇ ಲೇಖನ ಇದಾಗಿದೆ. ಈ ಲೇಖನವನ್ನು ಶ್ರೀನಿವಾಸ ಮಠ ಬರೆದಿದ್ದಾರೆ. ರಾಜ್ ಹುಟ್ಟುಹಬ್ಬದ ವಿಶೇಷವಾಗಿ 'ಪರಶುರಾಮ' ಸಿನಿಮಾ ನೋಡಿದ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
'ಮೇಯರ್ ಮುತ್ತಣ್ಣ', 'ದೂರದ ಬೆಟ್ಟ' ಇವೆರಡು ಸಿನಿಮಾಗಳ ಪೈಕಿ ಯಾವುದೇ ಬಂದರೂ ನನಗೆ ಅಮ್ಮನ ನೆನಪಾಗುತ್ತದೆ. ಅವಳ ಮುಖದ ಮೇಲೆ ನಗು ತರಿಸುತ್ತಿದ್ದ ದೃಶ್ಯಗಳು ಅಮ್ಮ ತೀರಿಕೊಂಡ ಹತ್ತು ವರ್ಷಗಳ ನಂತರವೂ ಹಾಗೇ ನೆನಪಿನಲ್ಲಿದೆ. 'ಮೇಯರ್ ಮುತ್ತಣ್ಣ' ಸಿನಿಮಾದಲ್ಲಿ ರಾಜ್ ಕುಮಾರ್ ಅವರ ಜುಟ್ಟನ್ನು ದ್ವಾರಕೀಶ್ ಕತ್ತರಿಸುವ ದೃಶ್ಯ, 'ದೂರದ ಬೆಟ್ಟ'ದಲ್ಲಿ ಚಿ ಉದಯಶಂಕರ್ ಅವರು ಅಭಿನಯಿಸಿದ ದೃಶ್ಯ ಬಂದರೆ ಅಮ್ಮನಿಗೆ ಕಣ್ಣಿನಲ್ಲಿ ನೀರು ತುಂಬಿಕೊಳ್ಳುವಷ್ಟು ನಗು ಬರುತ್ತಿತ್ತು.
ಬೆರಗುಗಣ್ಣಿನಿಂದ ಮೊದಲ ಬಾರಿ ಬೆಳ್ಳಿ ಪರದೆ ನೋಡಿದ ಕ್ಷಣ
ಅಮ್ಮ ಸಿನಿಮಾಗೆ ಹೋಗುವಾಗ ಒಂದೋ ನನ್ನ ಸೋದರಮಾವನ ಜತೆಗೆ ಅಥವಾ ತಾವೊಬ್ಬರೇ ಹೋಗುತ್ತಿದ್ದರು. ಏಕೆಂದರೆ, ಅಪ್ಪನಿಗೆ ಥೇಟರ್ ಗೆ ಹೋಗಿ ಸಿನಿಮಾ ನೋಡುವಷ್ಟು ಆಸಕ್ತಿ ಇರಲಿಲ್ಲ. ನಾನು ಅಮ್ಮನ ಜತೆಗೆ ಮೊದಲ ಸಿನಿಮಾ ನೋಡಿದ್ದು. ಅದು ಕೂಡ ರಾಜ್ ಕುಮಾರ್ ಅವರದು.
ಚಾಮರಾಜಪೇಟೆಯ ಗವೀಪುರಂ ಗುಟ್ಟಹಳ್ಳಿ ಇದೆಯಲ್ಲಾ, ಅಲ್ಲೊಂದು ಟೆಂಟ್ ಇತ್ತು. ರಾಜಲಕ್ಷ್ಮಿ ಟೆಂಟ್ ಅಂತ ಅದರ ಹೆಸರು. ಅಲ್ಲಿ ರಾಜಕುಮಾರ್ ಅವರ 'ಪರುಶುರಾಮ'' ಸಿನಿಮಾ ಹಾಕಿದ್ದರು. ಅಲ್ಲಿಗೆ ಕರೆದುಕೊಂಡು ಹೋಗಿದ್ದರು. ಸಿಕ್ಕಾಪಟ್ಟೆ ಬಿಸಿಲು. ನನಗೆ ಆಗ ಐದು ವರ್ಷ ವಯಸ್ಸಿರಬಹುದು. ಅಷ್ಟೊಂದು ಜನ, ಅವರ ಮಾತುಕತೆ ಅವೆಲ್ಲ ನೆನಪಿಸಿಕೊಂಡರೆ ಈಗಲೂ ಸರತಿ ಸಾಲಿನಲ್ಲಿ ನಿಂತಿದ್ದೀನಾ ಅನಿಸುವಂತೆ ಮಾಡುತ್ತವೆ.
'ನೀ ಓಡು ಮುಂದೆ, ನಾ ನಿನ್ನ ಹಿಂದೆ ಹಾಡು..', ಪುನೀತ್ ರಾಜಕುಮಾರ್ ಅವರು ಹಾಡಿದ್ದ 'ಕದ್ರೆ ತಪ್ಪು...' ಹಾಡೆಲ್ಲ ಬಹಳ ಚೆನ್ನಾಗಿದ್ದವು. ನನಗೆ ರಾಜ್ ಕುಮಾರ್ ಅವರ ನಗು ಬಹಳ ಇಷ್ಟವಾಗಿ ಹೋಯಿತು. ಆದರೆ, ಇಂಟರ್ ವಲ್ ಆದ ಮೇಲೆ ಸಿನಿಮಾದಲ್ಲಿ ಕೊಲೆ, ಅದರಲ್ಲೂ ಡಿಸೈನ್- ಡಿಸೈನ್ ಆಗಿ ಕೊಲೆ ಮಾಡೋದು, ಸಿ.ಆರ್.ಸಿಂಹ ಅವರನ್ನು ನಾಯಿಯಿಂದ ಕಡಿಸಿ, ಸಾಯಿಸೋದು ಇಂಥ ದೃಶ್ಯ ನೋಡಿ ಜ್ವರ ಬಂದ ಹಾಗೆ ಆಗಿ ಹೋಯಿತು.
'ಶ್' ಸಿನಿಮಾ ನೋಡಿ ಒಂದು ವಾರ ಜ್ವರ ಬಂದಿತ್ತು
ಕೊನೆ ಕೊನೆಯಲ್ಲಿ ಅಳುವುದಕ್ಕೆ ಶುರು ಮಾಡಿದೆ. ಅಮ್ಮನಿಗೆ 'ಶುಭಂ' ನೋಡುವ ತನಕ ಎದ್ದು ಬರಲು ಮನಸ್ಸಿಲ್ಲ. ನನ್ನ ರಂಪಾಟ ಕೇಳಿ, ಅಕ್ಕಪಕ್ಕದವರೆಲ್ಲ ಬಯ್ಯಲು ಶುರು ಮಾಡಿದರು. ನಿರ್ವಾಹ ಇಲ್ಲದೆ ಅಮ್ಮ ಹೊರಗೆ ಕರೆದುಕೊಂಡು ಬಂದು, ಒಂದಿಷ್ಟು ಬಯ್ದರು.
ಆದರೆ, ನಾನು ಏಳನೇ ಕ್ಲಾಸಿಗೆ ಬರುವುದರೊಳಗೆ ರಾಜ್ ಕುಮಾರ್ ಅವರ ಐವತ್ತಕ್ಕಿಂತ ಹೆಚ್ಚು ಸಿನಿಮಾ ನೋಡಿದ್ದೆ. ಅದಕ್ಕೆ ಕಾರಣ ನನ್ನ ಮನೆಯ ಪಕ್ಕ ಇದ್ದ ಶ್ರೀನಿವಾಸ್. ಅವರು ಕೂಡ ರಾಜ್ ಕುಮಾರ್ ಅಭಿಮಾನಿ. ನನ್ನ ಮನೆಯ ಹತ್ತಿರ ಕೋಕಿಲಾ ಟೆಂಟ್ ಅಂತ ಇತ್ತು. ಅಲ್ಲಿ ಹಾಕ್ತಾ ಇದ್ದಿದ್ದೇ ರಾಜ್ ಕುಮಾರ್ ರ ಹಳೇ ಸಿನಿಮಾಗಳು.
ಶ್ರೀನಿವಾಸ್ ಅವರು ಯಾವತ್ತೂ ಒಬ್ಬರೇ ಸಿನಿಮಾಗೆ ಹೋಗುತ್ತಿರಲಿಲ್ಲ. ಅದಕ್ಕೆ ನನ್ನನ್ನೂ ಜತೆಗೆ ಕರೆದುಕೊಂಡು ಹೋಗುತ್ತಿದ್ದರು. ಪ್ರತಿ ಶನಿವಾರ ಒಂದು ಸಿನಿಮಾ ಅನ್ನೋ ಹಾಗೆ ವಾರಾನುಗಟ್ಟಲೆ ರಾಜ್ ಕುಮಾರ್ ಅವರ ಸಿನಿಮಾ ನೋಡಿದ್ದೀನಿ.