ರೋರಿಂಗ್ ಸ್ಟಾರ್ ಶ್ರೀಮುರಳಿಯ 'ಬಘೀರ' ನೋಡಲು ವೀಕ್ಷಕರ ಮುಂದಿರುವ 5 ಕಾರಣಗಳು; ಏನದು?
ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ 'ಬಘೀರ' ಸಿನಿಮಾ ನಾಳೆ (ಅಕ್ಟೋಬರ್ 31) ಅದ್ಧೂರಿಯಾಗಿ ರಿಲೀಸ್ ಆಗುತ್ತಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಸಿನಿಮಾ ಕಳೆದ ಕೆಲವು ದಿನಗಳಿಂದ ಭರ್ಜರಿ ಪ್ರಚಾರ ಮಾಡಿದೆ. ಶ್ರೀಮುರಳಿಯ ಸಿನಿಮಾ ಮೂರು ವರ್ಷಗಳ ಬಳಿಕ ರಿಲೀಸ್ ಆಗುತ್ತಿರುವುದರಿಂದ ಸಿನಿಪ್ರಿಯರು 'ಬಘೀರ'ನಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ.
ಬಿಗ್ ಬಜೆಟ್ನಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ ಬಾಕ್ಸಾಫೀಸ್ನಲ್ಲಿ ಹೇಗೆ ಸದ್ದು ಮಾಡುತ್ತೆ ಅನ್ನೋ ಕುತೂಹಲವಿದೆ. ಈ ವರ್ಷದ ಕನ್ನಡದ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಹೀನಾಯವಾಗಿ ಸೋತಿವೆ. ಹೀಗಾಗಿ 'ಬಘೀರ' ಹೊಸ ಹುರುಪು ಕೊಡಬಹುದೆಂಬ ನಿರೀಕ್ಷೆಯಿದೆ. ಒಂದು ವೇಳೆ ಈ ಸಿನಿಮಾ ಬಾಕ್ಸಾಫೀಸ್ನಲ್ಲಿ ಜಾದು ಮಾಡಿದರೆ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುವ ಸಾಧ್ಯತೆಯಿದೆ. ಹಾಗಿದ್ದರೆ, ಈ ಸಿನಿಮಾವನ್ನು ಪ್ರೇಕ್ಷಕರು ನೋಡಲು ಇರುವ 5 ಪ್ರಮುಖ ಕಾರಣಗಳು ಇಲ್ಲಿವೆ.

ಮೊದಲ ಸೂಪರ್ ಹೀರೋ ಸಿನಿಮಾ
ಹಾಲಿವುಡ್ನ ಸೂಪರ್ ಹೀರೋ ಸಿನಿಮಾಗಳನ್ನು ನೋಡಿ ಇಂತಹದ್ದೊಂದು ಕನ್ನಡದಲ್ಲಿ ಬರಬಾರದಿತ್ತಾ? ಅನ್ನೋ ಪ್ರಶ್ನೆಯನ್ನು ಅದೆಷ್ಟೋ ಮಂದಿ ಕೇಳಿದ್ದಿರಬಹುದು. ಕನ್ನಡದಲ್ಲಿ ಸೂಪರ್ ಹೀರೋ ಸಿನಿಮಾ ಬರೋಕೆ ಅದೆಷ್ಟು ವರ್ಷ ಬೇಕೋ ಅಂತ ಅಂದುಕೊಂಡವರ ಕನಸು ಈಗ ನನಸಾಗಿದೆ. ಹಾಲಿವುಡ್ನ ಬ್ಯಾಟ್ ಮ್ಯಾನ್ ಅಂತಹ ಸೂಪರ್ ಹೀರೋ ಸಿನಿಮಾ ಇಷ್ಟ ಪಡುವವರಿಗೆ 'ಬಘೀರ' ಇಷ್ಟ ಆಗಬಹುದು.
ಪ್ರಶಾಂತ್ ನೀಲ್ ಸ್ಟೋರಿ
'ಕೆಜಿಎಫ್', 'ಸಲಾರ್' ಅಂತಹ ಮೆಗಾ ಪ್ಯಾನ್ ಇಂಡಿಯಾ ಸಿನಿಮಾವನ್ನು ನಿರ್ದೇಶಿಸಿರುವ ಪ್ರಶಾಂತ್ ನೀಲ್ ಕಥೆ ಕೊಟ್ಟಿದ್ದಾರೆ. ಡಾ.ಸೂರಿ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಪ್ರಶಾಂತ್ ನೀಲ್ ಸಲಹೆಗಳು ಇವೆ. ಈ ಕಾರಣಕ್ಕೆ 'ಬಘೀರ' ಪ್ರೇಕ್ಷಕರನ್ನು ತೆರೆಮೇಲೆ ರಂಜಿಸಬಹುದು. ಆಕ್ಷನ್, ಸೆಂಟಿಮೆಂಟ್ಗಳು ಇಲ್ಲೂ ಇದ್ದೇ ಇರುತ್ತೆ. ಈ ಕಾರಣಕ್ಕೆ 'ಬಘೀರ' ನೋಡಬಹುದು.

ಹೊಂಬಾಳೆ ಫಿಲ್ಮ್ಸ್ ನಿರ್ಮಾಣ
ಪ್ಯಾನ್ ಇಂಡಿಯಾ ಸಿನಿಮಾಗಳನ್ನು ನಿರ್ಮಾಣ ಮಾಡುವ ಕನ್ನಡದ ಸಂಸ್ಥೆ ಹೊಂಬಾಳೆ ಫಿಲ್ಮ್ಸ್. 'ಕೆಜಿಎಫ್', 'ಕಾಂತಾರ', 'ಸಲಾರ್' ಅಂತಹ ಯಶಸ್ಸಿ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಅನುಭವವಿದೆ. ಹೀಗಾಗಿ 'ಬಘೀರ' ಸಿನಿಮಾವನ್ನೂ ಅದ್ಧೂರಿಯಾಗಿಯೇ ನಿರ್ಮಾಣ ಮಾಡಿರುತ್ತಾರೆಂಬ ನಂಬಿಕೆಯಿದೆ. ಅಲ್ಲದೆ ಮೂರು ವರ್ಷಗಳ ಕಾಲ ಈ ಸಿನಿಮಾ ನಿರ್ಮಾಣ ಆಗಿದ್ದು, ಚಿತ್ರತಂಡದ ಶ್ರದ್ಧೆಯನ್ನು ಹೇಳುತ್ತಿದೆ.
ಶ್ರೀಮುರಳಿ-ರುಕ್ಮಿಣಿ ವಸಂತ್
'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಮೂಲಕ ತನ್ನದೇ ಅಭಿಮಾನಿ ಬಳಗವನ್ನು ಹುಟ್ಟಾಕಿಕೊಂಡಿರುವ ರುಕ್ಮಿಣಿ ವಸಂತ್ ಈ ಸಿನಿಮಾದ ಹೀರೋಯಿನ್. ಶ್ರೀಮುರಳಿ ಹಾಗೂ ರುಕ್ಮಿಣಿ ವಸಂತ್ ಕಾಂಬಿನೇಷನ್ ಈ ಸಿನಿಮಾದ ಪ್ರಮುಖ ಆಕರ್ಷಣೆ. 'ಬಘೀರ'ದಲ್ಲಿ ಕೇವಲ ಆಕ್ಷನ್, ಸೆಂಟಿಮೆಂಟ್ ಅಷ್ಟೇ ಅಲ್ಲ ಸುಂದರವಾಗಿ ಲವ್ ಸ್ಟೋರಿ ಕೂಡ ಇರುತ್ತೆ. ಇವರಿಬ್ಬರ ಕಾಂಬಿನೇಷನ್ ಹೇಗಿರುತ್ತೆ ಅನ್ನೋದನ್ನು ಒಂದು ಹಾಡು ಈಗಾಗಲೇ ಸಾಬೀತು ಮಾಡಿದೆ.
ಅಜನೀಶ್ ಲೋಕನಾಥ್ ಸಂಗೀತ
'ಬಘೀರ' ಸಿನಿಮಾದ ಮತ್ತೊಂದು ಹೈಲೈಟ್ ಅಂದರೆ ಅಜನೀಶ್ ಬಿ ಲೋಕನಾಥ್ ಅವರ ಸಂಗೀತ. ಕನ್ನಡ ಸಾಕಷ್ಟು ಸಿನಿಮಾಗಳಿಗೆ ಸಂಗೀತ ನೀಡಿ ಮನಸ್ಸು ಗೆದ್ದಿರುವ ಅಜನೀಶ್ ಲೋಕನಾಥ್ 'ಬಘೀರ' ಸಿನಿಮಾಗೂ ಹಾಡುಗಳನ್ನು ಕಂಪೋಸ್ ಮಾಡಿದ್ದಾರೆ. ಹಾಗೇ ಹಿನ್ನೆಲೆ ಸಂಗೀತವನ್ನು ನೀಡಿದ್ದಾರೆ. ಈಗಾಗಲೇ ಪ್ರಶಾಂತ್ ನೀಲ್ ಕೂಡ ಅಜನೀಶ್ ಹಿನ್ನೆಲೆ ಸಂಗೀತವನ್ನು ಮೆಚ್ಚಿಕೊಂಡಿದ್ದಾರೆ. ಈ ಎಲ್ಲಾ ಅಂಶಗಳು 'ಬಘೀರ' ಸಿನಿಮಾಗೆ ಒಂದೊಳ್ಳೆ ಓಪನಿಂಗ್ ನೀಡಬಹುದು.


Click it and Unblock the Notifications











