ಆಮಿರ್ ಖಾನ್ ಮೆಚ್ಚಿದ 'ತಿಥಿ' ಗಡ್ಡಪ್ಪನ ಬದುಕು ಬದಲಿಸಲಿಲ್ಲ; ಈ ಸಿನಿಮಾಗೆ ಸಿಕ್ಕಿದ್ದ ಸಂಭಾವನೆ ಎಷ್ಟು ಗೊತ್ತೇ?
'ತಿಥಿ' ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದ ಸಿನಿಮಾ. ಈಗಿನಂತೆ ಪ್ಯಾನ್ ಇಂಡಿಯಾ ಟ್ರೆಂಡ್ ಇದ್ದಿದ್ದರೆ, ಇನ್ನೂ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿತ್ತು. ಹಾಗಂತ ಈ ಸಿನಿಮಾ ದೇಶದ ಗಮನ ಸೆಳೆಯುವಲ್ಲಿ ಯಶಸ್ವಿ ಆಯ್ತು. ಯುವ ಪ್ರತಿಭೆಗಳಾದ ನಿರ್ದೇಶಕ ರಾಮ್ ರೆಡ್ಡಿ ಹಾಗೂ ಚಿತ್ರಕಥೆ ಬರೆದಿದ್ದ ಈರೇಗೌಡ ದಿಗ್ಗಜರ ಗಮನ ಸೆಳೆದಿದ್ದರು. ಈ ಸಿನಿಮಾ ಥಿಯೇಟರ್ಗೆ ಲಗ್ಗೆ ಇಡುವುದಕ್ಕೂ ಮುನ್ನ ಸಾಕಷ್ಟು ಫಿಲ್ಮ್ ಫೆಸ್ಟಿವಲ್ಗಳಲ್ಲಿ ಗೆದ್ದು ಬಂದಿತ್ತು.
ಅದ್ಯಾವಾಗ ಥಿಯೇಟರ್ಗೆ ಲಗ್ಗೆ ಇಟ್ಟಿತೋ ಅಲ್ಲಿಂದ ಈ ಸಿನಿಮಾ ಕ್ರೇಜ್ ಇನ್ನೋ ಹೆಚ್ಚು ಸದ್ದು ಮಾಡಿತ್ತು. ಈ ಸಿನಿಮಾ ಮಂಡ್ಯದ ಸಣ್ಣ ಗ್ರಾಮದ ಹಣ್ಣು ಮುದುಕನ ಬದುಕನ್ನು ದೇಶದ ಜನರ ಮುಂದೆ ತಂದು ನಿಲ್ಲಿಸಿತ್ತು. ನಟನೆಯ ಗಂಧ ಗಾಳಿಯೂ ಗೊತ್ತಿರದ ತೀರಾ ಕಡು ಬಡತನ ಇಳಿ ವಯಸ್ಸಿನ ಗಡ್ಡಪ್ಪ ಅಲಿಯಾಸ್ ಚನ್ನೇಗೌಡ ದೇಶಾದ್ಯಂತ ಫೇಮಸ್ ಆಗಿದ್ದರು. ಸಿನಿಮಾ ನೋಡಿ ಜನರು ಹೊಗದ್ದೇ ಹೊಗಳಿದ್ದು. ಹೊಗಳಿ ಅಟ್ಟಕ್ಕೆ ಏರಿಸಿದ್ದರು.

ಮಂಡ್ಯದ ನೊದೆಕೊಪ್ಪಲು ಗ್ರಾಮದ ಚನ್ನೇಗೌಡ ರಾತ್ರೋ ರಾತ್ರಿ ಗಡ್ಡಪ್ಪನಾಗಿ ಫೇಮಸ್ ಆಗಿಬಿಟ್ಟಿದ್ದರು. ತನ್ನ ಬದುಕಿನ ಕೊನೆಯ ಘಟ್ಟದಲ್ಲಿ ಸಿಕ್ಕಿದ ಈ ಜನಪ್ರಿಯತೆಯನ್ನು ಹೇಗೆ ತೆಗೆದುಕೊಳ್ಳಬೇಕು ಅನ್ನೋ ಗೊಂದಲ. ತನ್ನನ್ನು ಹುಡುಕಿಕೊಂಡು ಬರುವ ಸಿನಿಮಾ ಮಂದಿಗಳ ಜೊತೆ ಹೇಗೆ ಮಾತಾಡಬೇಕು ಅಂತ ತಿಳಿಯದ ಮುಗ್ಧ ಮನಸ್ಸು. ಇಂತಹ ಮನಸ್ಸುಗಳನ್ನು ಬಳಸಿಕೊಳ್ಳುವುದಕ್ಕೆ ಕಾಯುತ್ತಿದ್ದ ಸಿನಿಮಾ ಮಂದಿ. ಇವೆಲ್ಲದರ ನಡುವೆ ಗಡ್ಡಪ್ಪನ ಬದುಕು ಬದಲಾಗಲೇ ಇಲ್ಲ.
ಬದುಕು ಬದಲಿಸಿತೇ 'ತಿಥಿ'?
'ತಿಥಿ' ಬಂದು ಫೇಮಸ್ ಆಯ್ತು. ಇಡೀ ರಾಷ್ಟ್ರವೇ ಮೆಚ್ಚಿದ್ದಕ್ಕೆ ರಾಷ್ಟ್ರ ಪ್ರಶಸ್ತಿನೂ ಬಂದಿತ್ತು. ಬಾಲಿವುಡ್ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಕೂಡ ಸಿನಿಮಾ ಮೆಚ್ಚಿಕೊಂಡಾಡಿದ್ದರು. 'ತಿಥಿ' ಸಿನಿಮಾವನ್ನು ಗಡ್ಡಪ್ಪನ ಪರ್ಫಾಮೆನ್ಸ್ ಅನ್ನು ಬಾಯ್ತುಂಬ ಹೊಗಳಿದ್ದರು. ಇಲ್ಲಿಂದ ಗಡ್ಡಪ್ಪನ ಬದುಕು ಬದಲಾಯ್ತು. ಇಳಿ ವಯಸ್ಸಿನಲ್ಲಿ ಬಡತನಕ್ಕೆ ಮುಕ್ತಿ ಸಿಕ್ಕಿತು ಅಂತೆಲ್ಲ ಮಾತಾಡಿಕೊಂಡರು. ಅಸಲಿಗೆ ಗಡ್ಡಪ್ಪನ ಬದುಕೇನು ಬದಲಾಗಲಿಲ್ಲ ಅನ್ನೋದು ವಿಪರ್ಯಾಸ.
'ತಿಥಿ'ಗೆ ಸಿಕ್ಕಿದ ಸಂಭಾವನೆಯೇ ಹೆಚ್ಚು!
2016ರಲ್ಲಿ ತೆರೆಕಂಡ ಸಿನಿಮಾ 'ತಿಥಿ' ಮೂಲಕ ಗಡ್ಡಪ್ಪ ಜನಪ್ರಿಯತೆ ಗಳಿಸಿದರು. ಈ ಸಿನಿಮಾದಲ್ಲಿ ನಟನೆ ಬಾರದ ಸ್ಥಳೀಯರನ್ನೇ ಇಟ್ಟುಕೊಂಡು ಸಿನಿಮಾ ಮಾಡುವುದಕ್ಕೆ ನಿರ್ದೇಶಕ ರಾಮ್ ರೆಡ್ಡಿ ಮುಂದಾಗಿದ್ದರು. ಹೀಗೆ ಹುಡುಕಾಟದಲ್ಲಿ ಇದ್ದಾಗ ಚಿತ್ರತಂಡಕ್ಕೆ ಅವರ ಕಲ್ಪನೆಯಂತೆ ಗಡ್ಡ ಬಿಟ್ಟುಕೊಂಡು ಮಂಡ್ಯದ ನೊದೆಕೊಪ್ಪಲು ಗ್ರಾಮದಲ್ಲಿ ಓಡಾಡಿಕೊಂಡಿದ್ದವರು ಚೆನ್ನೇಗೌಡರು. ಕೊನೆಗೆ ಇವರನ್ನೇ ಒಪ್ಪಿಸಿ ಗಡ್ಡಪ್ಪನನ್ನಾಗಿ ಪರಿವರ್ತಿಸಿದರು. ಈಗಾಗಲೇ ಕೆಲವೆಡೆ ವರದಿಯಾಗಿರುವಂತೆ 'ತಿಥಿ' ಸಿನಿಮಾಗೆ ಗಡ್ಡಪ್ಪನಿಗೆ ಸಿಕ್ಕಿದ ಸಂಭಾವನೆ 50 ಸಾವಿರ ರೂಪಾಯಿ. ಇದೇ ಅವರ ವೃತ್ತಿ ಬದುಕಿನಲ್ಲಿ ಪಡೆದ ಅತೀ ದೊಡ್ಡ ಸಂಭಾವನೆ.

ಗಡ್ಡಪ್ಪನನ್ನು ಬಳಿಸಿಕೊಂಡವರೇ ಒಬ್ಬಿಬ್ಬರಲ್ಲ
'ತಿಥಿ' ಗಡ್ಡಪ್ಪ ಅಂತಲೇ ಜನಪ್ರಿಯತೆ ಸಿಕ್ಕಿದ ಮೇಲೆ ಸೆಲ್ಫಿಗಾಗಿ ಮನೆ ಮುಂದೆ ಬರುತ್ತಿದ್ದವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ಇನ್ನೊಂದು ಕಡೆ ಸಿನಿಮಾ ಮಂದಿಯ ಸಂಖ್ಯೆಯೂ ಹೆಚ್ಚಾಯ್ತು. ರಾಷ್ಟ್ರ ಮಟ್ಟದಲ್ಲಿ ಹೆಸರು ಸಿಕ್ಕಿದ ಮುಗ್ಧ ಜೀವವನ್ನು ಬಳಸಿಕೊಳ್ಳುವ ಖಯಾಲಿ ಇಲ್ಲಿಂದ ಶುರುವಾಗಿತ್ತು. ಬಾಯಿಗೆ ಬಂದ ಸಂಭಾವನೆ ಕೊಟ್ಟರು. ಮೂಲಗಳ ಪ್ರಕಾರ, 'ತಿಥಿ' ಬಳಿಕ ಗಡ್ಡಪ್ಪಗೆ ಸಿಗುತ್ತಿದ್ದ ಸಂಭಾವನೆ ಬರೀ ಐದು ಸಾವಿರ ಅಷ್ಟೇ. ಹೀಗಾಗಿ ಕೊನೆಯ ಕ್ಷಣಗಳಲ್ಲಿ ಅವರು ಅರ್ಥಿಕವಾಗಿ ಸಬಲರಾಗಿರಲಿಲ್ಲ ಅನ್ನೋದು ಬಲ್ಲವರ ಮಾತು.
ಅನಾರೋಗ್ಯ.. ತಿರಸ್ಕಾರ
'ತಿಥಿ' ಬಳಿಕ ಸಿನಿಮಾ ಮಾಡುವುದಕ್ಕೆ ಅದೆಷ್ಟೋ ಮಂದಿ ಗಡ್ಡಪ್ಪನನ್ನು ಇಟ್ಟುಕೊಂಡು ಸಿನಿಮಾ ಮಾಡುವುದಕ್ಕೆ ಬಂದಿದ್ದರು. ಕೆಲವರು ಅವರ ಜೊತೆ ಸಿನಿಮಾವನ್ನೂ ಮಾಡಿದರು. ಡಬಲ್ ಮೀನಿಂಗ್ ಡೈಲಾಗ್ ಹೇಳಿಸಿದರು. ಅವರ ಇಮೇಜ್ ಡ್ಯಾಮೇಜ್ ಮಾಡಿದರು. ಇದೇ ವೇಳೆ ಗಡ್ಡಪ್ಪ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಇದಕ್ಕೆ ಸರಿಯಾಗಿ ಸ್ಟ್ರೋಕ್ ಆಗಿ ಹಾಸಿಗೆ ಹಿಡಿದರು. ಸೆಲ್ಫಿಗೆ ಹುಡುಗಿಕೊಂಡು ಬರುವವರು ಸಹಾಯಕ್ಕೆ ಬರಲಿಲ್ಲ. ಸಿನಿಮಾದವರು ಹತ್ತಿರಕ್ಕೂ ಸುಳಿಯಲಿಲ್ಲ. ಗಡ್ಡಪ್ಪ ಅವತಾರದ ಚನ್ನೇಗೌಡ ಕೊನೆಯ ದಿನಗಳಲ್ಲಿ ಪ್ರೀತಿಸಿದ್ದಕ್ಕಿಂತ ತಿರಸ್ಕಾರಕ್ಕೆ ಒಳಗಾದವರೇ ಹೆಚ್ಚು.


Click it and Unblock the Notifications











