ಅಣ್ಣಾವ್ರ ವ್ಯಕ್ತಿತ್ವವೇ ಸ್ಪೂರ್ತಿಯ ಚಿಲುಮೆ ಎಂದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ
'ಅಣ್ಣಾವ್ರು' ಎಂದೇ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದ ವರನಟ, ನಟ ಸಾರ್ವಭೌಮ ಡಾ. ರಾಜಕುಮಾರ್ ನಮ್ಮನ್ನು ದೈಹಿಕವಾಗಿ ಅಗಲಿ ಇಂದಿಗೆ 14 ವರ್ಷ. ಈ ಹದಿನಾಲ್ಕು ವರ್ಷದಲ್ಲಿ ಕರ್ನಾಟಕದ ಜನತೆ ಅವರನ್ನು ಒಂದಿಲ್ಲೊಂದು ಸಂದರ್ಭಗಳಲ್ಲಿ ನೆನೆಯದ ದಿನವಿಲ್ಲ. ಅದರಲ್ಲಿಯೂ ಚಿತ್ರರಂಗದ ಬಿಕ್ಕಟ್ಟು, ಕನ್ನಡ ಭಾಷೆ, ಕಾವೇರಿ ಹೋರಾಟ ಮುಂತಾದವು ಎದುರಾದಾಗ ಈ ಹದಿನಾಲ್ಕು ವರ್ಷಗಳಲ್ಲಿ ಡಾ. ರಾಜಕುಮಾರ್ ಅವರ ಸ್ಥಾನದಲ್ಲಿ ನಾಯಕತ್ವದ ಕೊರತೆಯನ್ನು ತುಂಬಲು ಯಾವ ನಟರೂ ಮುಂದೆ ಬಂದಿಲ್ಲ.
Recommended Video
ರಾಜಕುಮಾರ್ ಅವರ ನಿಧನದ ಬಳಿಕ ಚಿತ್ರರಂಗ ಒಂದು ಬಗೆಯ ನಿರ್ವಾತ ಎದುರಿಸುತ್ತಿದೆ ಎಂದೇ ಹೇಳಬಹುದು. ಅದನ್ನು ಚಿತ್ರರಂಗದ ಅನೇಕ ತಾರೆಯರೇ ಒಪ್ಪಿಕೊಂಡಿದ್ದಾರೆ. ನಟರು ಅಥವಾ ನಿರ್ದೇಶಕ/ನಿರ್ಮಾಪಕರು ಚಿತ್ರರಂಗವನ್ನು ಮುನ್ನಡೆಸುವ ಜವಾಬ್ದಾರಿ ತೆಗೆದುಕೊಳ್ಳಲು ಮುಂದಾಗುತ್ತಿಲ್ಲ. ಹಾಗೊಮ್ಮೆ ಬಂದರೂ ತಾರಾ ಸಂಘರ್ಷದಲ್ಲಿ ಅದಕ್ಕೆ ಬೆಂಬಲವೂ ಸಿಗುವುದಿಲ್ಲ. ಇಂತಹ ಸನ್ನಿವೇಶದಲ್ಲಿ ರಾಜಕುಮಾರ್ ಅವರ ಅಗಲುವಿಕೆ ಅತಿ ಹೆಚ್ಚು ಕಾಡುತ್ತಿದೆ. ಅವರು ನಮ್ಮನ್ನು ಬಿಟ್ಟು ದೂರ ಹೋದ ದಿನವಾದ ಇಂದು ಅನೇಕರು ಅವರನ್ನು ಸ್ಮರಿಸಿಕೊಂಡಿದ್ದಾರೆ. ಅವರಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಕೂಡ ಸೇರಿದ್ದಾರೆ. ಮುಂದೆ ಓದಿ...

ಅಣ್ಣಾವ್ರ ವ್ಯಕ್ತಿತ್ವವೇ ಸ್ಫೂರ್ತಿಯ ಚಿಲುಮೆ
ಬಳ್ಳಾರಿಯು ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿ ಭಾಗದಲ್ಲಿರುವುದರಿಂದ ಅಲ್ಲಿನವರಿಗೆ ಕನ್ನಡ ಮತ್ತು ತೆಲುಗು ಈ ಎರಡೂ ಭಾಷೆಗಳ ಪ್ರಭಾವ ಇದ್ದೇ ಇದೆ. ಆದ್ದರಿಂದಲೇ ಸಿನೆಮಾ ವಿಷಯ ಬಂದರೆ ಬಳ್ಳಾರಿಯ ಜನರು ಹೆಚ್ಚಾಗಿ ಕನ್ನಡ ಚಿತ್ರಗಳನ್ನು ಮತ್ತು ತೆಲುಗು ಚಿತ್ರಗಳನ್ನು ನೋಡುತ್ತಾರೆ ಎಂದು ಜನಾರ್ದನ ರೆಡ್ಡಿ ತಿಳಿಸಿದ್ದಾರೆ.

ರಾಜಕುಮಾರ್, ಎನ್ಟಿಆರ್
ಒಂದೆಡೆ ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ ಅವರನ್ನು ಇಷ್ಟಪಟ್ಟರೆ ಇನ್ನೊಂದೆಡೆ ತೆಲುಗು ಚಿತ್ರರಂಗದ ಎನ್.ಟಿ.ಆರ್, ಕೃಷ್ಣ ಅವರ ಚಿತ್ರಗಳನ್ನು ಇಷ್ಟಪಡುತ್ತಾರೆ. ಅದರಲ್ಲೂ ರಾಜ್ ಕುಮಾರ್ ಮತ್ತು ಎನ್.ಟಿ.ಆರ್ ಇಬ್ಬರನ್ನೂ ಅತೀವವಾಗಿ ಪ್ರೀತಿಸುತ್ತಾರೆ. ಈ ಇಬ್ಬರು ನಟರ ಚಿತ್ರಗಳು ಬಿಡುಗಡೆಗೊಂಡರೆ ಅವು ಶತದಿನೋತ್ಸವವನ್ನು ಆಚರಿಸುತ್ತಿದ್ದವು ಎಂದು ಹಿಂದಿನ ಕಾಲದ ಇಬ್ಬರು ಮೇರು ನಟರನ್ನು ನೆನಪಿಸಿಕೊಂಡಿದ್ದಾರೆ.

ನಾನೂ ಇವರ ಸಿನಿಮಾ ನೋಡಿ ಬೆಳೆದೆ
ನಾನೂ ಕೂಡ ಈ ಮೇರುನಟರ ಚಿತ್ರಗಳನ್ನು ನೋಡುತ್ತಾ ಬೆಳೆದೆ. ನನಗೆ ವರನಟ ಡಾ.ರಾಜ್ ಕುಮಾರ್ ಎಂದರೆ ಅಚ್ಚುಮೆಚ್ಚು. ಅಣ್ಣಾವ್ರ ನಟನೆಯ ಜೊತೆಗೆ ಅವರ ಸರಳತೆ ಮತ್ತು ವ್ಯಕ್ತಿತ್ವ ಕೂಡ ನನ್ನ ಮೇಲೆ ಬಹಳಷ್ಟು ಪ್ರಭಾವ ಬೀರಿದೆ. ಅಣ್ಣಾವ್ರು ಎಂದರೆ ಸ್ಫೂರ್ತಿಯ ಚಿಲುಮೆ ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ.
ಅಭಿಮಾನಿಗಳ ಆರಾಧ್ಯ ದೈವ
ಚಿತ್ರರಂಗದ ಎಲ್ಲಾ ಕಲಾವಿದರಿಗೂ ಇವರೇ ಆಧಾರ ಸ್ಥಂಭ. ಕೋಟಿ ಕೋಟಿ ಅಭಿಮಾನಿಗಳ ಮನದಲ್ಲಿ ನೆಲೆಸಿರುವ ಆರಾಧ್ಯದೈವ. ಎಲ್ಲರೂ ಇಂದಿನ ಕೊರೋನಾ ವೈರೆಸ್ ಪರಿಸ್ಥಿತಿಯನ್ನು ಅರಿತು ತಮ್ಮ ತಮ್ಮ ಮನೆಗಳಲ್ಲಿಯೇ ಇದ್ದುಕೊಂಡು ಅಣ್ಣಾವ್ರ ಸ್ಮರಣೆ ಮಾಡೋಣ ಎಂದು ಸಲಹೆ ನೀಡಿದ್ದಾರೆ.


Click it and Unblock the Notifications











