ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಲಂಡನ್ನಲ್ಲಿ ಪಡೆದ ಪದವಿ ಯಾವುದು? ಸಿನಿಮಾಗೆ ತಯಾರಿ ಹೇಗಿತ್ತು?
ಮಾಜಿ ಸಚಿನ ಗಾಲಿ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಸಿನಿಮಾ ಎಂಟ್ರಿಗೆ ಕ್ಷಣಗಣನೆ ಶುರುವಾಗಿದೆ. ಮಾರ್ಚ್ 04 ರಂದು ಕಿರೀಟಿ ಸಿನಿಮಾ ಅದ್ದೂರಿಯಾಗಿ ಲಾಂಚ್ ಆಗುತ್ತಿದೆ. ಕಳೆದೆರಡು ದಿನಗಳಿಂದ ಎಲ್ಲಿ ನೋಡಿದರೂ ಕಿರೀಟಿ ಸಿನಿಮಾ ಬಗ್ಗೆನೇ ಟಾಕ್ ಶುರುವಾಗಿದೆ. ಈ ಸಿನಿಮಾದಲ್ಲಿ ನಟಿಸುತ್ತಿರುವ ನಾಯಕಿಯರು, ತಂತ್ರಜ್ಷರು, ಮುಹೂರ್ತಕ್ಕೆ ಅತಿಥಿಗಳ್ಯಾರು? ಹೀಗೆ ಒಂದೊಂದು ದಿನಕ್ಕೂ ಒಂದೊಂದು ಸುದ್ದಿ ಬರುತ್ತಲೇ ಇದೆ. ರಾಜಕೀಯ, ಬ್ಯುಸಿನೆಸ್ ಅಂತ ಹೋಗಬೇಕಿದ್ದ ಕಿರೀಟಿ ಸಿನಿಮಾ ಕಡೆ ಮುಖ ಮಾಡಿದ್ದು ಏಕೆ? ಅನ್ನು ಪ್ರಶ್ನೆ ಕಾಡುವುದು ಸಹಜ. ಆದರೆ, ಅದಕ್ಕಿಂತ ಮುನ್ನ ಕಿರೀಟಿ ವಿದ್ಯಾಭ್ಯಾಸದ ಬಗ್ಗೆ ನಿಮಗೆ ಗೊತ್ತಾ?
ಹಣ ಇದ್ದರೆ ಸಿನಿಮಾ ಎಂಟ್ರಿ ಕೊಡುವುದು ದೊಡ್ಡ ವಿಷಯ ಅಲ್ಲ. ಆದರೆ, ಚಿತ್ರರಂಗದಲ್ಲಿ ಉಳಿದುಕೊಳ್ಳುವುದಕ್ಕೆ ಪರದಾಡಬೇಕಾಗುತ್ತೆ. ಹೀಗಾಗಿ ಯಾರೇ ಎಂಟ್ರಿ ಕೊಟ್ಟರೂ, ಪೂರ್ವ ತಯಾರಿ ಅನ್ನುವುದು ಬೇಕೇ ಬೇಕು. ಕಿರೀಟಿ ಕೂಡ ಸಿನಿಮಾಗೆ ಪೂರ್ವ ತಯಾರಿ ಮಾಡಿಕೊಂಡೇ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹಾಗಿದ್ದರೆ, ಕಿರೀಟಿ ತಯಾರಿ ಹೇಗಿತ್ತು? ಕಿರೀಟಿ ಉನ್ನತ ಶಿಕ್ಷಣ ಪಡೆದಿದ್ದು ಎಲ್ಲಿ? ಅವರ ವಿದ್ಯಾರ್ಹತೆ ಏನು? ಈ ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳಲು ಮುಂದೆ ಓದಿ.

ಲಂಡನ್ನಲ್ಲಿ ಕಿರೀಟಿ ಶಿಕ್ಷಣ
ಗಾಲಿ ಜನಾರ್ಧನ ರೆಡ್ಡಿ ಪುತ್ರ ಕಿರೀಟಿಗೆ ಚಿಕ್ಕಂದಿನಿಂದಲೇ ನಟನೆ ಮೇಲೆ ಬಗ್ಗೆ ಆಸಕ್ತಿ. ಹಾಗಂತ ಓದಿನ ಕಡೆ ನಿರ್ಲಕ್ಷ್ಯ ಕೊಡಲು ಕೊಟ್ಟಿಲ್ಲ. ವಿದೇಶದಲ್ಲಿ ಉತ್ತಮ ಶಿಕ್ಷಣವನ್ನು ಪಡೆದು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಕಿರೀಟಿ ಲಂಡನ್ನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದಾರೆ. ಅಲ್ಲಿನ ಕ್ವೀನ್ಸ್ ಮೆರಿ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿದ್ದಾರೆ. ಪೊಲಿಟಿಕಲ್ ಹಾಗೂ ಬ್ಯುಸಿನೆಸ್ ಮ್ಯಾನೇಜ್ಮೆಂಟ್ನಲ್ಲಿ ಬಿ ಎ ಪದವಿಯನ್ನು ಪಡೆದಿದ್ದಾರೆ. ಶಿಕ್ಷಣ ಮುಗಿಸಿದ ಬಳಿಕ ಸಿನಿಮಾ ಬಗ್ಗೆ ತಯಾರಿ ಪಡೆದು ಚಿತ್ರರಂಗಕ್ಕೆ ಎಂಟ್ರಿಕೊಡುತ್ತಿದ್ದಾರೆ.

ಕಿರೀಟಿ ಪೂರ್ವ ತಯಾರಿ ಹೇಗಿದೆ?
ಗಾಲಿ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ದಿಢೀರನೇ ಚಿತ್ರರಂಗ ಪ್ರವೇಶ ಮಾಡಿಲ್ಲ. ಸಿನಿಮಾಗೆ ಎಂಟ್ರಿಕೊಡುವುದಕ್ಕೂ ಮುನ್ನ ಸಂಪೂರ್ಣ ತಯಾರಿ ಮಾಡಿಕೊಂಡೇ ಬಂದಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ನಾಳೆ (ಮಾರ್ಚ್ 4) ಸಿನಿಮಾ ಲಾಂಚ್ ಕಾರ್ಯಕ್ರಮದಲ್ಲಿ ಟೀಸರ್ ಒಂದನ್ನು ಬಿಡುಗಡೆ ಮಾಡಲಾಗುತ್ತೆ. ಇದು ಕಿರೀಟಿಯ ತಯಾರಿಗೆ ಸಾಕ್ಷಿ ಒದಗಿಸಲಿದೆ. ಕನ್ನಡ ಹಾಗೂ ತೆಲುಗು ಎರಡೂ ಭಾಷೆಯಲ್ಲೂ ಸಿನಿಮಾ ನಿರ್ಮಾಣ ಆಗುತ್ತಿರುವುದರಿಂದ ಕಿರೀಟಿ ಏನೆಲ್ಲಾ ತಯಾರಿ ನಡೆಸಿದ್ದಾರೆ ಎಂಬುದು ವೇದಿಕೆ ಮೇಲೆ ಅನಾವರಣಗೊಳ್ಳಲಿದೆ.

ಮೇಕಿಂಗ್ ವಿಡಿಯೋ ರಿಲೀಸ್
ಕಿರೀಟಿ ಆಕ್ಷನ್ ಸೀನ್ಗಳಿಗೆ ಬೇಕಾಗಿರುವ ತಯಾರಿ ಪಡೆದಿದ್ದಾರೆ. ಹಾಗೆ ನಟನೆ ಡ್ಯಾನ್ಸ್ ಎಲ್ಲದರೂ ಪರಿಣಿತಿ ಪಡೆದುಕೊಂಡೇ ಎಂಟ್ರಿ ಕೊಡುತ್ತಿದ್ದಾರೆ ಎನ್ನಲಾಗಿದೆ. ಮೊದಲ ಸಿನಿಮಾಗಾಗಿ ಕಿರೀಟಿ ಹೇಗೆಲ್ಲಾ ತಯಾರಿ ನಡೆಸಿದ್ದರು ಎಂಬುದನ್ನು ಜನರ ಮುಂದಿಡಲು ಚಿತ್ರತಂಡ ನಿರ್ಧರಿಸಿದೆ. ಹೀಗಾಗಿ ಟೀಸರ್ ಬಿಡುಗಡೆಯಾದ ನಾಲ್ಕೈದು ದಿನಗಳ ಅಂತರದಲ್ಲಿ ಮತ್ತೊಂದು ಮೇಕಿಂಗ್ ವಿಡಿಯೋ ರಿಲೀಸ್ ಆಗಲಿದೆ. ಈ ವೀಡಿಯೋದಲ್ಲಿ ಕಿರೀಟಿ ತಯಾರಿಯ ಸಂಪೂರ್ಣ ವಿವರವನ್ನು ಚಿತ್ರತಂಡ ನೀಡುತ್ತಿದೆ.

ಕಿರೀಟಿ ದಿಗ್ಗಜರ ಅಭಯಹಸ್ತ
ಜನಾರ್ಧನ ರೆಡ್ಡಿ ಪುತ್ರನನ್ನು ಲಾಂಚ್ ಮಾಡಲು ಮೂವಿ ಮಾಂತ್ರಿಕ ಎಸ್ ಎಸ್ ರಾಜಮೌಳಿ ಆಗಮಿಸುತ್ತಿದ್ದಾರೆ. ಇವರೊಂದಿಗೆ ಕ್ರೇಜಿಸ್ಟಾರ್ ರವಿಚಂದ್ರನ್ ಕನ್ನಡ ಚಿತ್ರರಂಗವನ್ನು ಪ್ರತಿನಿಧಿಸಲಿದ್ದಾರೆ. ಈ ಸಿನಿಮಾ ಸಂಗೀತ ನೀಡುತ್ತಿರುವ ದೇವಿ ಶ್ರೀ ಪ್ರಸಾದ್ ಕೂಡ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಉಳಿದಂತೆ, ಬಾಹುಬಲಿ ಕ್ಯಾಮರಾಮ್ಯಾನ್ ಸೆಂಥಿಲ್ ಕುಮಾರ್ ಜೊತೆ ಇಡೀ ಚಿತ್ರತಂಡ ಭಾಗಿಯಾಗಲಿದೆ. ಹಾಗೇ ರಾಜಕೀಯ ಮುಖಂಡರೂ ಕೂಡ ಭಾಗವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.


Click it and Unblock the Notifications











