ನಟಿಸಿದ ಮೊದಲ ಸಿನಿಮಾದಲ್ಲೇ ಗಣೇಶ್ ವಿಲನ್: ಅದ್ಯಾವುದು ಗೊತ್ತೇ? ಆ ಚಿತ್ರದ ಹೀರೋ ನೆನಪಿದೆಯಾ?
ಪ್ರತಿಯೊಬ್ಬ ಸ್ಟಾರ್ ನಟನ ಹಿಂದೆನೂ ಒಂದು ಕಥೆ ಇರುತ್ತೆ. ಅವರದ್ದೇ ಆದ ಒಂದು ಜರ್ನಿ ಇರುತ್ತೆ. ಗಣೇಶ್ ಗೋಲ್ಡನ್ ಸ್ಟಾರ್ ಆಗುವುದಕ್ಕೂ ಮುನ್ನ ಒಂದು ಜರ್ನಿ ಇತ್ತು. ಈಗಾಗಲೇ ಸಾಕಷ್ಟು ಬಾರಿ ಸಂದರ್ಶನದಲ್ಲಿ ಅವರ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಮಧ್ಯಮ ವರ್ಗದ ಒಬ್ಬ ಹುಡುಗ ಗೋಲ್ಡನ್ ಸ್ಟಾರ್ ಆಗಿದ್ದು ಹೇಗೆ ಅನ್ನೋದನ್ನು ಕೇಳಿಕೊಂಡಿದ್ದಾರೆ.
ಗಣೇಶ್ ಹೀರೋ ಆಗುವುದಕ್ಕೂ ಮುನ್ನ ಚಿಕ್ಕ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು. ಹೀರೋಗೆ ಸ್ನೇಹಿತರಾಗಿ, ಕೆಲವು ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಅಂತ ಅಷ್ಟೇ ಗೊತ್ತು. ಆದರೆ, ಗಣೇಶ್ ನಟಿಸಿದ ಮೊದಲ ಸಿನಿಮಾದಲ್ಲೇ ಅವರು ವಿಲನ್ ಪಾತ್ರದಲ್ಲಿ ಕಂಡಿದ್ದರು. ಬಹುಶ: ಆ ಸಿನಿಮಾ ಯಾವುದು ಅನ್ನೋದು ಹೆಚ್ಚಿನ ಜನರಿಗೆ ಗೊತ್ತಿರಲಿಕ್ಕಿಲ್ಲ.

ಇಷ್ಟು ವರ್ಷ ಗಣೇಶ್ ಅನ್ನು ತೆರೆಮೇಲೆ ಲವರ್ ಬಾಯ್ ಆಗಿ ನೋಡಿದ್ದಾರೆ. ಇವರನ್ನು ಜನರು ವಿಲನ್ ಆಗಿ ನೋಡುತ್ತೇವೆ ಅಂತ ಊಹೆನೂ ಮಾಡಿಕೊಂಡಿರಲಿಲ್ಲ. ಆದರೆ, ಗಣೇಶ್ ಮೊದಲ ಸಿನಿಮಾದಲ್ಲೇ ವಿಲನ್ ಆಗಿದ್ದರು. ಆ ಸಿನಿಮಾ ಬಗ್ಗೆ ಸ್ವತ: ಗಣೇಶ್ ಅವರೇ ಇತ್ತೀಚೆಗೆ ಲಾಂಗ್ ಆದ ಪಿನಾಕ ಟೀಸರ್ ರಿಲೀಸ್ ವೇಳೆ ರಿವೀಲ್ ಮಾಡಿದ್ದಾರೆ. ತನಗೆ ರಗಡ್ ಪಾತ್ರಗಳು ತುಂಬಾನೇ ಇಷ್ಟ ಎಂದು ಹೇಳಿಕೊಂಡಿದ್ದಾರೆ. ಹಾಗಿದ್ದರೆ, ಗಣೇಶ್ ವಿಲನ್ ಆಗಿ ನಟಿಸಿದ ಆ ಸಿನಿಮಾ ಯಾವುದು ನೆನಪಿಗೆ ಬಂತಾ? ಗಣೇಶ್ ಆ ಸಿನಿಮಾ ಬಗ್ಗೆ ಏನಂದಿದ್ದಾರೆ ತಿಳಿಯಲು ಮುಂದೆ ಓದಿ.
ಹೌದು, ಗಣೇಶ್ ವಿಲನ್ ಪಾತ್ರದಲ್ಲಿ ನಟಿಸಿದ್ದರು ಅಂದರೆ, ಯಾರೂ ನಂಬುವುದಿಲ್ಲ. ಅವರನ್ನು ಲವರ್ ಬಾಯ್ ನೋಡಿನೇ ಅಭ್ಯಾಸ. ಅದು 'ಮುಂಗಾರು ಮಳೆ' ಬಳಿಕ ಆ ಇಮೇಜ್ ಜನರ ಮನಸ್ಸಿನಲ್ಲಿ ಕೂತಿದೆ. ಅದು ಇಷ್ಟು ವರ್ಷ ಆದರೂ ಜನರಿಂದ ಮರೆಯಾಗುತ್ತಲೇ ಇಲ್ಲ. ಅದಕ್ಕೆ ಈಗ ಹೊಸ ಅವತಾರದಲ್ಲಿ ರಗಡ್ ಲುಕ್ ಕೊಟ್ಟು ರಂಜಿಸುವುದಕ್ಕೆ ನಿರ್ಧರಿಸಿದ್ದಾರೆ.

"ನಾನು ಮೊದಲ ಸಿನಿಮಾ ಮಾಡಿದ್ದೇ ವಿಲನ್ ಆಗಿ. ಆದರೆ, ಆ ಸಿನಿಮಾ ಫ್ಲಾಪ್ ಆಗಿ ಹೋಯ್ತು. ಆ ಮೇಲೆ ತುಂಬಾನೇ ಸೈಕಲ್ ಹೊಡೆದು ಹೀರೋಗಳಲ್ಲಿ ಒಬ್ಬರಾಗಿ ನಟಿಸುವುದಕ್ಕೆ ಶುರು ಮಾಡಿದೆ. ಮುಂಗಾರು ಮಳೆ ಆದ್ಮೇಲೆ ನಾನು ಏನು ಅಲ್ಲವೋ ಅದನ್ನು ಮಾಡಿದೆ." ಎಂದು ಪಿನಾಕ ಸಿನಿಮಾದ ಟೀಸರ್ ವೇಳೆ ಗೋಲ್ಡನ್ ಸ್ಟಾರ್ ಗಣೇಶ್ ಹೇಳಿಕೊಂಡಿದ್ದಾರೆ.
ಅಂದ್ಹಾಗೆ ಗಣೇಶ್ ಮೊದಲು ವಿಲನ್ ಆಗಿ ನಟಿಸಿದ ಸಿನಿಮಾ 'ಟಪೋರಿ'. ಕನ್ನಡ ಜನಪ್ರಿಯ ನಿರ್ದೇಶಕ ಬಿ. ಸುರೇಶ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು. ನಾದ ಬ್ರಹ್ಮ ಹಂಸಲೇಖ ಅವರ ಪುತ್ರ ಅಲಂಕಾರ್ ಹಾಗೂ ಪ್ರೇಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಗಣೇಶ್ ಖಳನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಆದರೆ, ಈ ಸಿನಿಮಾ ಬಾಕ್ಸಾಫೀಸ್ನಲ್ಲಿ ಹೀನಾಯವಾಗಿ ಸೋಲುಂಡಿತ್ತು. ಹೀಗಾಗಿ ಗಣೇಶ್ ಸಿನಿಪ್ರಿಯರ ಗಮನ ಸೆಳೆಯಲು ಸಾಧ್ಯವಾಗಿಲ್ಲ.
ಈಗ ಮತ್ತೆ ನೆಗೆಟಿವ್ ಶೇಡ್ ಇರುವಂತಹ ಪಾತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಸಿನಿಮಾ ಮೂಲಕ ತಮ್ಮ ಅಭಿಮಾನಿಗಳಿಗೆ ರಂಜಿಸುವುದಕ್ಕೆ ಹೊರಟಿದ್ದಾರೆ. ಈ ಸಿನಿಮಾದ ಟೀಸರ್ ರಿಲೀಸ್ ವೇಳೆ ಮಧ್ಯಮ ವರ್ಗದಿಂದ ಬಂದ ತನ್ನ ಇಮೇಜ್ ಶ್ರೀಮಂತ ಮನೆಯ ಹುಡುಗನ ಹಾಗೇ ಬದಲಾಗಿದ್ದು ಹೇಗೆ ಎಂದು ಹೇಳಿಕೊಂಡಿದ್ದಾರೆ.
"ನಾನು ಬಂದಿದ್ದು ಒಂದು ಮಿಡಲ್ ಕ್ಲಾಸ್ ಕುಟುಂಬದಿಂದ. ನೆಲಮಂಗಲ.. ಅಲ್ಲಿ ಹೋಗಿಬಿಟ್ಟು ಪರಪರ ಅಂತ ಕೆರೆದುಕೊಳ್ಳುವಷ್ಟು ಟೈಮ್ ಇರಲಿಲ್ಲ ನಮಗೆ. ಕೆಲಸ ಮಾಡಬೇಕು. ಡ್ರಾಮಾ ಸಿಕ್ಕಿದರೆ ಡ್ರಾಮಾ ಮಾಡಬೇಕು. ಸ್ಟೇಜ್ ಸಿಕ್ಕಿದರೆ ಸ್ಟೇಜ್ ಮೇಲೆ ಆಕ್ಟ್ ಮಾಡಬೇಕು. ಜನ ಶಿಳ್ಳೆ ಹೊಡೆಯಬೇಕು. ಜನ ಚಪ್ಪಾಳೆ ತಟ್ಟಬೇಕು ಅಂತ ಅಷ್ಟೇ ಇದ್ದಿದ್ದು. ಅಂತಹವನನ್ನು ಕರೆದುಕೊಂಡು ಹೋಗಿ ಮುಂಗಾರು ಮಳೆಯಲ್ಲಿ ಶ್ರೀಮಂತ ಕುಟುಂಬದ ಹೈ ಕ್ಲಾಸ್ ಮಗನನ್ನಾಗಿ ಮಾಡಿದರು. ಜನ ಕಲರ್ ಇದ್ದಾನೆ. ಹೈ ಕ್ಲಾಸ್ ಹುಡುಗ ಅಂತ ಸೂಪರ್ ಹಿಟ್ ಆಯ್ತು. ಅದಾದ್ಮೇಲೆ ಜನ ಏನು ಇಷ್ಟ ಪಡುತ್ತಾರೋ ಅದನ್ನೇ ಕೊಡಬೇಕಾಗುತ್ತೆ." ಎಂದು ಗಣೇಶ್ ಹೇಳಿಕೊಂಡಿದ್ದಾರೆ.


Click it and Unblock the Notifications











