ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ: 'ಹರಿ' ವ್ಯಕ್ತಿಯಲ್ಲ, ಪಾತ್ರವಲ್ಲ, ತತ್ವ ಎಂದ ನಿರ್ದೇಶಕ
ರಿಷಬ್ ಶೆಟ್ಟಿ ಹಾಗೂ ರಾಜ್ ಬಿ. ಶೆಟ್ಟಿ ಜೋಡಿ ಕನ್ನಡಕ್ಕೊಂದು ಟ್ರೆಂಡ್ ಸೆಟ್ಟಿಂಗ್ ಸಿನಿಮಾ ನೀಡಿದೆ. 'ಗರುಡ ಗಮನ ವೃಷಭ ವಾಹನ' ಸಿನಿಮಾ ಬಿಡುಗಡೆಯಾಗಿ ರಾಜ್ಯಾದ್ಯಂತ ಮೆಚ್ಚುಗೆ ಗಳಿಸಿದೆ. ಒಂದು ಹೊಸ ಪ್ರಯತ್ನಕ್ಕೆ ಸಿನಿಪ್ರಿಯರು ಭೇಷ್ ಅಂತ ಬೆನ್ನು ತಟ್ಟಿದ್ದಾರೆ. ಹರಿ ಮತ್ತು ಶಿವನ ಪಾತ್ರಗಳು ತೆರೆಮೇಲೆ ಅಬ್ಬರಿಸುತ್ತಿವೆ. ಈ ಬೆನ್ನಲ್ಲೇ ಕೆಲವೆಡೆ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂಬ ಅಪಸ್ವರವೂ ಕೇಳಿಬರುತ್ತಿದೆ.
ಸ್ಯಾಂಡಲ್ವುಡ್ನಲ್ಲಿ 'ಗರುಡ ಗಮನ ವೃಷಭ ವಾಹನ' ಹೊಸ ಟ್ರೆಂಡ್ ಅನ್ನು ಸೃಷ್ಟಿಸಿದೆ. ಸಿನಿಮಾ ನೋಡಿದ ಬಹುತೇಕ ಮಂದಿಗೆ 'ಗರುಡ ಗಮನ ವೃಷಭ ವಾಹನ' ಸಿನಿಮಾ ಇಷ್ಟ ಆಗಿದೆ. ಅಲ್ಲಲ್ಲಿ ರಕ್ತಸಿಕ್ತ ಚರಿತ್ರೆ ಅನಾವರಣ ಆಗಿದ್ದರೂ ಸಿನಿಮಾ ವಿಮರ್ಶಾತ್ಮಕವಾಗಿ ಭೇಷ್ ಎನಿಸಿಕೊಂಡಿದೆ. ನಿರ್ದೇಶಕ ರಾಜ್ ಬಿ ಶೆಟ್ಟಿ ಕಥೆ ಹೇಳಿದ ರೀತಿ. ಹಿನ್ನೆಲೆ ಸಂಗೀತ ಎಲ್ಲವೂ ಮೆಚ್ಚುಗೆ ಗಳಿಸಿದೆ. ಹೀಗಿದ್ದರೂ, ಸಿನಿಮಾ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದೆ ಅನ್ನುವ ಆರೋಪ ಕೂಡ ಕೇಳಿಬಂದಿದೆ. ಇದಕ್ಕೆ ರಾಜ್ ಬಿ ಶೆಟ್ಟಿ ಹರಿ ಪಾತ್ರದ ಬಗ್ಗೆ ವಿವರಣೆ ಸಮಸ್ಯೆ ನಿವಾರಿಸಿದಂತಿದೆ.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿತಾ ಸಿನಿಮಾ
'ಗರುಡ ಗಮನ ವೃಷಭ ವಾಹನ' ಸಿನಿಮಾ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಕೆಲವರು ಈ ಸಿನಿಮಾ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿದ್ದಾರೆ. ಗ್ಯಾಂಗ್ಸ್ಟರ್ ಸಿನಿಮಾಗೆ ಪುರಾಣದ ಹೆಸರು ಯಾಕೆ ಇಡಬೇಕಿತ್ತು? ಸಿನಿಮಾದಲ್ಲಿ ಕೊಲೆ ನಡೆಯುವಾಗ ಶ್ಲೋಕಗಳು ಯಾಕೆ ಬೇಕು? ಕೊಲೆ ಮಾಡುವ ವ್ಯಕ್ತಿಗೆ ಮಾದೇವ ಸಾಂಗ್ ಹಿನ್ನೆಲೆ ಸಂಗೀತವಾಗಿ ಬಳಸಿದ್ದೇಕೆ? ಅನ್ನುವುದು ಸಿನಿಮಾದ ವಿರುದ್ಧ ಕೇಳಿ ಬರುತ್ತಿರುವ ಆರೋಪ.

ಪಾತ್ರಗಳಿಗೆ ಹರಿ-ಶಿವ ಹೆಸರು ಯಾಕೆ?
ಹಿಂಸೆ ಹೆಚ್ಚಿರುವ ಸಿನಿಮಾದಲ್ಲಿ ಕೇವಲ ದೃಶ್ಯಗಳ ಮೇಲಷ್ಟೇ ಆರೋಪ ಕೇಳಿಬಂದಿಲ್ಲ. ಈ ಸಿನಿಮಾ ಕೊಲೆ-ಧಮ್ಕಿಯನ್ನೇ ಕಸುಬಾಗಿಸಿಕೊಂಡಿರುವ ಪಾತ್ರಗಳಿಗೆ ಶಿವ ಮತ್ತು ಹರಿ ಎಂಬ ಹೆಸರು ಯಾಕಿಟ್ಟರು? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ರಿಷಬ್ ಶೆಟ್ಟಿ 'ಹರಿ' ಪಾತ್ರದಲ್ಲೂ ಹಾಗೂ ರಾಜ್ ಬಿ ಶೆಟ್ಟಿ ಶಿವನ ಪಾತ್ರದಲ್ಲೂ ನಟಿಸಿದ್ದಾರೆ. ಈ ಪಾತ್ರಗಳ ಹೆಸರು ಮೇಲೂ ಟೀಕೆಗಳನ್ನು ಮಾಡಿತ್ತಿದ್ದಾರೆ. ಅದಕ್ಕೆ ರಾಜ್ ಬಿ ಶೆಟ್ಟಿ 'ಹರಿ' ಪಾತ್ರವೇನು ಅನ್ನುವುದನ್ನು ವಿವರಿಸಿದ್ದಾರೆ.

'ಹರಿ' ಪಾತ್ರದ ಬಗ್ಗೆ ರಾಜ್ ಬಿ ಶೆಟ್ಟಿ ಹೇಳಿದ್ದೇನು?
'ಗರುಡ ಗಮನ ವೃಷಭ ವಾಹನ' ಸಿನಿಮಾದ ಸ್ಟೋರಿ, ಸ್ಕ್ರೀನ್ ಪ್ಲೇ, ಎರಡು ವಿಭಿನ್ನ ಪಾತ್ರಗಳು ಪ್ರೇಕ್ಷಕರ ಮನಸ್ಸಿಗೆ ಹಿಡಿಸಿದೆ. ಅದರಲ್ಲೂ ಹರಿ ಹಾಗೂ ಶಿವನ ಪಾತ್ರಗಳನ್ನು ಪುರಾಣದ ಪಾತ್ರಗಳಿಗೆ ಹೋಲಿಕೆ ಮಾಡಿದ್ದನ್ನು ಕೆಲವರು ಮೆಚ್ಚಿಕೊಂಡಿದ್ದಾರೆ. ಕೆಲವರು ವಿರೋಧಿಸುತ್ತಿದ್ದಾರೆ. ರಾಜ್ ಬಿ ಶೆಟ್ಟಿ ಈ ಸಿನಿಮಾದಲ್ಲಿ ಹರಿ ಏನು? ಅನ್ನವುದನ್ನು ವಿವರಿಸಿದ್ದಾರೆ. " ಹರಿ ಅನ್ನುವಂತದ್ದು ಒಂದು ವ್ಯಕ್ತಿಯಲ್ಲ. ಒಂದು ಪಾತ್ರವಲ್ಲ. ಹರಿ ಅನ್ನುವಂತದ್ದು ಒಂದು ತತ್ವ. ಯಾವ ತತ್ವ ಹೂವಿಗಿಂತ ಮೃಧುವಾಗಬಲ್ಲದೋ, ಅದೇ ರೀತಿ ಯಾವ ತತ್ವ ಕಠಿಣಕ್ಕಿಂತ ಕಠಿಣ ಆಗಬಲ್ಲದೋ, ಆ ತತ್ವವನ್ನು ಈ ಸಿನಿಮಾದಲ್ಲಿ ನಾನು ಹರಿ ಎಂದು ಭಾವಿಸುತ್ತೇನೆ." ಎಂದು ರಾಜ್ ಬಿ ಶೆಟ್ಟಿ ಹೇಳಿದ್ದಾರೆ.

ಬದಲಾವಣೆ ಅನ್ನುವಂತಹದ್ದೇ 'ಹರಿ'ಯ ತತ್ವ
ವೃಷಭ ವಾಹನ ಅವನು ಯಾವಾಗಲೂ ಬದಲಾಗಲ್ಲ. ಗರುಡ ಗಮನ ಯಾವಾಗಲೂ ಸಂಚರಿಸುತ್ತಿರುತ್ತಾನೆ. ಇದರಲ್ಲಿ ರಿಷಭ್ ತುಂಬಾ ಕಡೆ ಮುಗ್ಧರಾಗಿ ಕಾಣಿಸಿಕೊಂಡಿದ್ದಾರೆ. ಅವರ ನಡಿಗೆ, ಭಾಷೆ, ನೋಡುವ ರೀತಿಯಲ್ಲಿ ಮುಗ್ಧತೆ ಇತ್ತು. ಇನ್ನೊಂದು ಕಡೆ ಅವರು ಯಾವ ಭಾವನೆಯನ್ನು ಹೊರ ಹಾಕದೆ ಕಠಿಣಕ್ಕಿಂತ ಕಠಿಣ ತುಂಬಾ ಸ್ಟ್ರಾಂಗ್ ಆಗಿ ಕಾಣಿಸಿಕೊಂಡಿದ್ದಾರೆ." ಎಂದು ಹರಿ ಪಾತ್ರದ ಬಗ್ಗೆ ನಿರ್ದೇಶಕ ರಾಜ್ ಬಿ ಶೆಟ್ಟಿ ಸಮಜಾಯಿಷಿ ಕೊಟ್ಟಿದ್ದಾರೆ.


Click it and Unblock the Notifications











