ದೊಡ್ಮನೆ ಸೊಸೆಗೆ ಶಿವಮೊಗ್ಗದ 'ಕೈ' ಟಿಕೆಟ್; 2ನೇ ಬಾರಿ ಗೆಲ್ಲಬಹುದೇ?
ಲೋಕಸಭೆಯ ಚುನಾವಣಾ ಕಾವು ಈಗ ಶುರುವಾಗಿದೆ. ರಾಜಕೀಯ ಪಕ್ಷಗಳು ಯಾವ್ಯಾವ ಕ್ಷೇತ್ರಕ್ಕೆ ಯಾವ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಅಂತ ತಲೆ ಕೆಡಿಸಿಕೊಂಡಿದೆ. ಪ್ರಮುಖ ಪಕ್ಷಗಳು ರಾಜ್ಯದಲ್ಲಿ ಯಾವ ಅಭ್ಯರ್ಥಿ ನಿಲ್ಲಿಸಿದರೆ ಉತ್ತಮ ಅನ್ನೋದನ್ನು ಲೆಕ್ಕ ಹಾಕುತ್ತಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಪಕ್ಷ ರಾಜ್ಯದ 6 ಲೋಕಸಭಾ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆಯಾಗಿದೆ.
ಶಿವಮೊಗ್ಗ, ಹಾಸನ, ತುಮಕೂರು, ಮಂಡ್ಯ, ವಿಜಯಪುರ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಇದರಲ್ಲಿ ದೊಡ್ಮನೆ ಸೊಸೆ ಗೀತಾ ಶಿವರಾಜ್ಕುಮಾರ್ಗೆ ಶಿವಮೊಗ್ಗದಿಂದ ಟಿಕೆಟ್ ಸಿಕ್ಕಿದೆ. ಹೀಗಾಗಿ ಈ ಬಾರಿ ಶಿವಮೊಗ್ಗದಲ್ಲಿ ಹೊಸ ಲೆಕ್ಕಾಚಾರ ಶುರುವಾಗಿದೆ.

ಕಳೆದ ವರ್ಷ ಗೀತಾ ಶಿವರಾಜ್ಕುಮಾರ್ ಜೆಡಿಎಸ್ಗೆ ಗುಡ್ ಬೈ ಹೇಳಿ, ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದರು. ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ 'ಕೈ' ಹಿಡಿದಿದ್ದರು. ಅಂದಿನಿಂದಲೂ ಗೀತಾ ಶಿವರಾಜ್ಕುಮಾರ್ ಕಾಂಗ್ರೆಸ್ನ ಶಿವಮೊಗ್ಗದ ಅಭ್ಯರ್ಥಿ ಎಂದು ಹೇಳಲಾಗುತ್ತಿತ್ತು. ನಿರೀಕ್ಷೆಯಂತೆ ಇಂದು (ಮಾರ್ಚ್ 8) ಕಾಂಗ್ರೆಸ್ ಪ್ರಕಟಿಸಿದ ಪಟ್ಟಿಯಲ್ಲಿ ಶಿವಮೊಗ್ಗದಿಂದ ಗೀತಾ ಶಿವರಾಜ್ಕುಮಾರ್ ಹೆಸರು ಘೋಷಣೆಯಾಗಿದೆ.
ದೊಡ್ಮನೆ ಸೊಸೆ ಗೀತಾ ಶಿವರಾಜ್ಕುಮಾರ್ಗೆ ರಾಜಕೀಯಕ್ಕೆ ಹೊಸದೇನು ಅಲ್ಲ. ಅವರ ಕುಟುಂಬವೇ ರಾಜಕೀಯದಲ್ಲಿದೆ. ಗೀತಾ ಶಿವರಾಜ್ಕುಮಾರ್ ತಂದೆ ಮಾಜಿ ಮುಖ್ಯ ಮಂತ್ರಿ ದಿವಂಗತ ಎಸ್ ಬಂಗಾರಪ್ಪ, ಸಹೋದರರಾದ ಮಧು ಬಂಗಾರಪ್ಪ ಹಾಗೂ ಕುಮಾರ ಬಂಗಾರಪ್ಪ ಇಬ್ಬರೂ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮಧು ಬಂಗಾರಪ್ಪ ಅವರೇ ಗೀತಾ ಶಿವರಾಜ್ಕುಮಾರ್ ಅವರನ್ನು ರಾಜಕೀಯಕ್ಕೆ ಕರೆದುಕೊಂಡು ಬಂದಿದ್ದರು. ಮಧು ಬಂಗಾರಪ್ಪ ಜೆಡಿಎಸ್ನಲ್ಲಿ ಇದ್ದಾಗ ಜೆಡಿಎಸ್ ಸೇರ್ಪಡೆಯಾಗಿದ್ದರು. ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದಾಗ ಗೀತಾ ಶಿವರಾಜ್ಕುಮಾರ್ ಕೂಡ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.
2014ರ ಲೋಕಸಭಾ ಚುನಾವಣೆಯಲ್ಲಿ ಗೀತಾ ಶಿವರಾಜ್ಕುಮಾರ್ ಕಣಕ್ಕೆ ಇಳಿದಿದ್ದರು. ಜೆಡಿಎಸ್ ಪಕ್ಷದಿಂದ ಗೀತಾ ಶಿವರಾಜ್ಕುಮಾರ್ ಕಣಕ್ಕೆ ಇಳಿದಿದ್ದರು. ಸ್ವತ: ಶಿವರಾಜ್ಕುಮಾರ್ ಬಂದು ಪ್ರಚಾರ ಮಾಡಿದ್ದರೂ, ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ವಿರುದ್ಧ ಪರಾಭಾವಗೊಂಡಿದ್ದರು. ಹೀಗಾಗಿ ಎರಡನೇ ಬಾರಿ ಚುನಾವಣಾ ಕಣಕ್ಕೆ ಇಳಿಯುತ್ತಿದ್ದಾರೆ. ಈ ಬಾರಿಯಾದರೂ ಶಿವಮೊಗ್ಗ ಕ್ಷೇತ್ರದಿಂದ ಗೆಲ್ಲುತ್ತಾರಾ? ಅನ್ನೋ ಲೆಕ್ಕಾಚಾರ ಶುರುವಾಗಿದೆ.


Click it and Unblock the Notifications











