"ನನ್ನ ಮಾತೃ ಭಾಷೆಯನ್ನ ನಾನು ಚೆನ್ನಾಗಿ ಮಾತನಾಡದೆ ಇನ್ಯಾರು ಮಾತಾಡುತ್ತಾರೆ"; ಗೋಲ್ಡನ್ ಸ್ಟಾರ್ ಗಣೇಶ್
'ಕೃಷ್ಣಂ ಪ್ರಣಯ ಸಖಿ' ಸಿನಿಮಾ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಮತ್ತೆ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಸಿನಿಮಾ ಹಿಟ್ ಆಗುತ್ತಿದ್ದಂತೆ ವಿಭಿನ್ನ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲಿ 'ಪಿನಾಕ' ಸಿನಿಮಾ ಕೂಡ ಒಂದು. ಈಗಾಗಲೇ ಈ ಚಿತ್ರದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಬೃಹತ್ ಸೆಟ್ಟುಗಳನ್ನ ಹಾಕಿ ಸಿನಿಮಾದ ಚಿತ್ರೀಕರಣ ಮಾಡಲಾಗುತ್ತಿದೆ. ಸ್ಯಾಂಡಲ್ವುಡ್ನ ಹಿರಿಯ ಕಲಾವಿದರು 'ಪಿನಾಕ'ದಲ್ಲಿ ನಟಿಸುತ್ತಿದ್ದಾರೆ.
ಈ ಸಿನಿಮಾದ ಶೂಟಿಂಗ್ ನಡೆಯುವ ಸ್ಥಳದಲ್ಲಿ ಮಾಧ್ಯಮದವರನ್ನು ಭೇಟಿ ಮಾಡಿದ್ದರು. ಈ ವೇಳೆ ಗೋಲ್ಡನ್ ಸ್ಟಾರ್ ಗಣೇಶ್ 'ಪಿನಾಕ' ಸಿನಿಮಾದ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹಾಗೇ ಕನ್ನಡ ಚಿತ್ರರಂಗದ ಹಿರಿಯ ನಟ ಶ್ರೀನಿವಾಸ್ ಮೂರ್ತಿ ಕೂಡ ಗೋಲ್ಡನ್ ಸ್ಟಾರ್ ಗಣೇಶ್ ಅವನ್ನು ಹಾಡಿ ಹೊಗಳಿದ್ದಾರೆ. ಗಣೇಶ್ ಅವರ ಭಾಷೆಯ ಸ್ಪಷ್ಟತೆಯನ್ನು ಮೆಚ್ಚಿಕೊಂಡಿದ್ದಾರೆ.

'ಪಿನಾಕ' ಸಿನಿಮಾದಲ್ಲಿ ಶ್ರೀನಿವಾಸ್ ಮೂರ್ತಿಯವರು ಪೋಷಕ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಕೆಲವು ದೃಶ್ಯಗಳಿಗೆ ಐತಿಹಾಸಿಕ ಟಚ್ ಕೊಡಲಾಗಿದೆ. ಹೀಗಾಗಿ ಶ್ರೀನಿವಾಸ್ ಮೂರ್ತಿಯವರನ್ನು ಈ ಸಿನಿಮಾದ ಪ್ರಮುಖ ಪಾತ್ರಕ್ಕೆ ಹಾಕಿಕೊಳ್ಳುವಂತೆ ಸ್ವತ: ಗೋಲ್ಡನ್ ಸ್ಟಾರ್ ಗಣೇಶ್ ಅವರೇ ನಿರ್ದೇಶಕರಿಗೆ ಸಲಹೆ ನೀಡಿದ್ದರು. ಈ ವೇಳೆ ಗಣೇಶ್ಗೆ ಕನ್ನಡ ಭಾಷೆಯಲ್ಲಿರುವ ಹಿಡಿತದ ಬಗ್ಗೆ ಶ್ರೀನಿವಾಸ್ ಮೂರ್ತಿ ಹಾಡಿ ಹೊಗಳಲಿದ್ದರು. ಆಗ ಗಣೇಶ್ ನನ್ನ ಮಾತೃಭಾಷೆಯನ್ನು ನಾನು ಮಾತಾಡದೇ ಇನ್ಯಾರು ಮಾತಾಡುತ್ತಾರೆಂದು ಹೇಳಿದ್ದಾರೆ. ಅದ್ಯಾಕೆ ಹಾಗೆ ಹೇಳಿದರು ಅನ್ನೋದನ್ನು ತಿಳಿಯಲು ಮುಂದೆ ಓದಿ.
ಬಿಗ್ ಬಜೆಟ್ ಸಿನಿಮಾ 'ಪಿನಾಕ'ದಲ್ಲಿ ಗಣೇಶ್ಗೆ ಉದ್ದುದ್ದದ ಡೈಲಾಗ್ಗಳು ಇವೆ. ಅದನ್ನು ಅಷ್ಟೇ ನಿರರ್ಗಳವಾಗಿ ಗಣೇಶ್ ಹೇಳಿದ್ದನ್ನು ಹಿರಿಯ ನಟ ಶ್ರೀನಿವಾಸಮೂರ್ತಿ ರಿವೀಲ್ ಮಾಡಿದ್ದಾರೆ. "ಗಣೇಶ್ ಎರಡು ಪುಟದ ಡೈಲಾಗ್ಗಳನ್ನು ಒಂದೇ ಟೇಕ್ನಲ್ಲಿ ಹೇಳಿ ಮುಗಿಸಿದರು. ಇಡೀ ಸೆಟ್ನಲ್ಲಿ ಚಪ್ಪಾಳೆ ತಟ್ಟಿದರು.ಇವರ ಭಾಷಾ ಜ್ಞಾನ ಎಷ್ಟಿದೆ ಎಂದರೆ, ನಾನು ಹೀರೋಗಳಲ್ಲಿ ಇಷ್ಟಪಡುವ ನಟ ಇವರು. ಅವನ ಬಾಯಲ್ಲಿ ಒಂದೇ ಒಂದು ಅಪಶಬ್ಧನೇ ಬರೋದಿಲ್ಲ. ರಾಜ್ಕುಮಾರ್ ಅವರು ಇವತ್ತಿಗೂ ಯಾಕೆ ಎಲ್ಲರ ಹೃದಯದಲ್ಲಿ ನಲೆಸಿದ್ದಾರೆ ಎಂದರೆ, ಅವರ ಬಾಯಲ್ಲಿ ಬರುತ್ತಿದ್ದ ಸಂಭಾಷಣೆ. ಅವರ ಬಾಯಿಯಲ್ಲಿ ಬರುತ್ತಿದ್ದ ಕನ್ನಡ. ಆ ನಿಟ್ಟಿನಲ್ಲಿ ಭಾಷೆಯನ್ನು ಅಷ್ಟು ಚೆನ್ನಾಗಿ ಬಳಸುವಂತ ನಿಸ್ಸೀಮ ಎಂಬುದು ನನ್ನ ಅಭಿಪ್ರಾಯ." ಎಂದು ಹಿರಿಯ ನಟ ಶ್ರೀನಿವಾಸ್ ಮೂರ್ತಿ ಹೇಳಿದ್ದರು.
ಶ್ರೀನಿವಾಸ್ ಮೂರ್ತಿ ಅವರು ಹೊಗಳಿಕೆಗೆ ಗಣೇಶ್ ಕೊಟ್ಟ ಉತ್ತರ ಹೀಗಿತ್ತು. "ಸೀನಣ್ಣ (ಶ್ರೀನಿವಾಸ್ ಮೂರ್ತಿ) ಗಣೇಶನ ಭಾಷೆ ಚೆನ್ನಾಗಿದೆ ಅಂತ ಹೇಳಿದರು. ರವೀಂದ್ರ ಸರ್ ತುಂಬಾನೇ ಸ್ಪುಟವಾಗಿದೆ ಅಂತ ಹೇಳಿದರು. ನನ್ನ ಮಾತೃ ಭಾಷೆಯನ್ನ ನಾನು ಚೆನ್ನಾಗಿ ಮಾತನಾಡದೆ ಇನ್ಯಾರು ಚೆನ್ನಾಗಿ ಮಾತಾಡುತ್ತಾರೆ. ಇದು ನನ್ನ ಭಾಷೆ." ಎಂದು ಕನ್ನಡ ಭಾಷೆಯ ಬಗ್ಗೆ ಗಣೇಶ್ ಅಭಿಮಾನ ಹೊರಹಾಕಿದ್ದಾರೆ.

ಹಾಗೇ ಐತಿಹಾಸ ಪಾತ್ರಗಳನ್ನು ನಿರ್ವಹಿಸುತ್ತಿರುವುದಕ್ಕೆ ರಾಜ್ಕುಮಾರ್, ವಿಷ್ಣುವರ್ಧನ್ ಹಾಗೂ ಶ್ರೀನಿವಾಸ್ ಮೂರ್ತಿಯವರೇ ಪ್ರೇರಣೆ ಎಂದಿದ್ದಾರೆ. "ನಾನು ಡಾ.ರಾಜ್ಕುಮಾರ್ ಅವರ ಸಿನಿಮಾ, ಸಾಹಸ ಸಿಂಹ ವಿಷ್ಣುವರ್ಧನ್ ಅಂತಹವರ ಸಿನಿಮಾ, ಭೋಜರಾಜನ ಸಿನಿಮಾ ನೋಡಿ ಭಾಷೆಯನ್ನು ಕಲಿತು ಬೆಳೆದವನು. ಭೋಜರಾಜನ ಕೈಯಲ್ಲೇ ಗಣೇಶನ ಭಾಷೆ ಚೆನ್ನಾಗಿದೆ ಅಂದರೆ, ಇದಕ್ಕಿಂತ ಅವಾರ್ಡ್ ಇನ್ನೇನಿದೆ." ಎಂದಿದ್ದಾರೆ ಗಣೇಶ್.
ಇನ್ನು ಶ್ರೀನಿವಾಸ್ ಮೂರ್ತಿಯವರು 'ಪಿನಾಕ' ಸಿನಿಮಾವನ್ನು ಅಣ್ಣಾವ್ರು ನಟಿಸಿದ 'ಮಯೂರ' ಸಿನಿಮಾಗೆ ಹೋಲಿಕೆ ಮಾಡಿದ್ದಾರೆ. "ನೀವು ಹಿಂದೆ ರಾಜ್ಕುಮಾರ್ ಅಭಿನಯದ ಮಯೂರ ನೋಡಿದ್ದೀರಿ. ಕವಿರತ್ನ ಕಾಳಿದಾಸ ನೋಡಿದ್ದೀರಿ. ಇನ್ನೂ ಅನೇಕ ಐತಿಹಾಸಿ ಹಾಗೂ ಪೌರಾಣಿಕ, ಭಕ್ತಿ ಪ್ರಧಾನವಾದ ಸಿನಿಮಾಗಳನ್ನು ನೋಡಿದ್ದೀರಿ. ನನಗೆ ಅನಿಸೋದು ಪಿನಾಕದಲ್ಲಿ ನಮ್ಮ ಎಪಿಸೋಡ್ ಏನಿದೆ ಅದು ಮಯೂರ ಲೆವೆಲ್ಗಿಂತ ಒಂದು ಜಾಸ್ತಿನೇ ಅಂತ ನನಗೆ ಅನಿಸುತ್ತೆ. ನಾನ್ಯಾಕೆ ಮಯೂರಗೆ ಹೋಲಿಸುತ್ತಿದ್ದೇನೆ ಅಂದರೆ, ಅಲ್ಲಿ ವಜ್ರಮುನಿ ಇದ್ದರೆ, ಶ್ರೀನಾಥ್ ಇದ್ದರು. ಎಲ್ಲರಿಗೂ ಸರಿಸಮನಾದ ಪ್ರಾಮುಖ್ಯತೆಯಿತ್ತು. ಇಲ್ಲೂ ಹಾಗೇ ಎಲ್ಲಾ ಪಾತ್ರಗಳಿಗೂ ಸರಿ ಸಮನಾದ ಪ್ರಾಮುಖ್ಯತೆ ನೀಡಿದ್ದಾರೆ." ಎಂದು ಶ್ರೀನಿವಾಸ್ ಮೂರ್ತಿ ಹೇಳಿದ್ದಾರೆ.


Click it and Unblock the Notifications











