ಗುರುಪ್ರಸಾದ್ ಪತ್ನಿ ಸುಮಿತ್ರಾ ನೀಡಿದ ಸುದೀರ್ಘ ದೂರಿನಲ್ಲಿ ಏನಿದೆ? ಪತಿ ಸಾವಿನ ಬಗ್ಗೆ ಹೇಳಿದ್ದೇನು?
'ಮಠ' ಚಿತ್ರದ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಿನಿಮಾಗಾಗಿ ಸಿಕ್ಕಾಪಟ್ಟೆ ಸಾಲವನ್ನು ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಾಲಗಾರರ ಕಾಟವನ್ನು ತಾಳಲಾರದೆ ಗುರುಪ್ರಸಾದ್ ನೇಣಿಗೆ ಶರಣಾಗಿರುವ ಸಾಧ್ಯತೆಯಿದೆ ಎಂದು ಊಹಿಸಲಾಗುತ್ತಿದೆ. ಈಗಾಗಲೇ ಗುರುಪ್ರಸಾದ್ ಮೃತದೇಹವನ್ನು ಪೋಸ್ಟ್ ಮಾರ್ಟಮ್ ಮಾಡಲಾಗಿದೆ.
ಗುರುಪ್ರಸಾದ್ ಮೊದಲನೇ ಪತ್ನಿ ಆರತಿಯವರಿಗೆ ವಿಚ್ಛೇದನ ನೀಡಿದ್ದು, ಸುಮಿತ್ರಾ ಎಂಬುವವರನ್ನು ಮದುವೆ ಆಗಿದ್ದರು. ಕೆಲವು ತಿಂಗಳಿನಿಂದ ಎರಡನೇ ಪತ್ನಿಯಿಂದಲೂ ದೂರವಿದ್ದರು. ಮಾದನಾಯಕಹಳ್ಳಿ ಸಮೀಪದ ಅಪಾರ್ಟ್ಮೆಂಟ್ ಒಂದರಲ್ಲಿ ಬಾಡಿಗೆ ಪಡೆದು ವಾಸವಿದ್ದರು. ಕಳೆದ ಆರು ತಿಂಗಳಿನಿಂದ ಗುರುಪ್ರಸಾದ್ ಒಂಟಿಯಾಗಿದ್ದರು.

ಪತಿ ಗುರುಪ್ರಸಾದ್ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯೋ? ಅಲ್ಲವೋ? ಅನ್ನುವ ಅನುಮಾನ ವ್ಯಕ್ತವಾಗಿತ್ತು. ಸದ್ಯ ಗುರುಪ್ರಸಾದ್ ಎರಡನೇ ಪತ್ನಿ ಸುಮಿತ್ರಾ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನಲ್ಲಿ ಗುರುಪ್ರಸಾದ್ ಹಾಗೂ ಅವರ ನಡುವಿನ ಸಂಬಂಧ, ಇಬ್ಬರ ನಡುವಿನ ಬಾಂಧವ್ಯ, ಸಾಲ ಸೇರಿದಂತೆ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಸುಮಿತ್ರಾ ನೀಡಿದ ದೂರಿನಲ್ಲಿ ಈ ಎಲ್ಲಾ ಅಂಶಗಳಿವೆ.
'ನಾಲ್ಕು ವರ್ಷಗಳ ಹಿಂದೆ ಮದುವೆ ಆಗಿದ್ದೆ'
2020ರಲ್ಲಿ ಅಂದರೆ, ನಾಲ್ಕು ವರ್ಷಗಳ ಹಿಂದೆ ಗುರುಪ್ರಸಾದ್ ಚಲನಚಿತ್ರ ನಿರ್ದೇಶಕರನ್ನು ವಿವಾಹವಾಗಿರುತ್ತೇನೆ. ನಮಗೆ ನಗು ಶರ್ಮಾ ಎಂಬ ಮೂರುವರೆ ವರ್ಷದ ಹೆಣ್ಣು ಮಗು ಇದೆ. ಈ ಹಿಂದೆ ಪತಿ ಗುರುಪ್ರಸಾದ್ ಅವರಿಗೆ ಆರತಿ ಎಂಬುವವರೊಂದಿಗೆ ಮದುವೆಯಾಗಿತ್ತು. ಸದರಿ ಮದುವೆಯು ವಿಚ್ಛೇದನವಾಗಿರುತ್ತದೆ. ಅವರು ಸಿನಿಮಾ ನಿರ್ದೇಶಕರಗಿದ್ದರಿಂದ ನಾನು ಅವರೊಂದಿಗೆ ಜೀವನ ನಡೆಸುತ್ತಿದ್ದೇನೆ. ನಾಲ್ಕು ವರ್ಷ ನಾವು ಜೊತೆಗೆ ಇದ್ದೆವು ಎಂದು ದೂರಿನಲ್ಲಿ ತಿಳಿಸಿದ್ದಾರೆ.

"6 ತಿಂಗಳಿನಿಂದ ದೂರವಾಗಿದ್ದೆವು"
ಇದೇ ದೂರಿನಲ್ಲಿ ಇಬ್ಬರ ನಡುವೆ ಆಗಾಗ ಸಣ್ಣ ಪುಟ್ಟ ವಿಚಾರಗಳಿಗೆ ಜಗಳ ಆಗುತ್ತಿತ್ತು. ಹೀಗಾಗಿ 6 ತಿಂಗಳಿಂದ ದೂರವಾಗಿದ್ದೆವು. ನನಗೆ ಆರೋಗ್ಯ ಸರಿ ಇರಲಿಲ್ಲ. ಆ ಕಾರಣದಿಂದ ನಮ್ಮ ಯಜಮಾನ್ರು ನನ್ನ ತಾಯಿಯ ಮನೆಯಲ್ಲಿ ಇರಲು ಹೇಳಿದ್ದರು. 6 ತಿಂಗಳ ಹಿಂದೆ ಹುಸ್ಕೂರಿನ ನ್ಯೂ ಅವೆನ್ ಅಪಾರ್ಟ್ಮೆಂಟ್ಗೆ ಬಂದಿದ್ದು, ಟವರ್ ನಂ 27ರ ನಲ್ಲಿರುವ ಮನೆ ನಂ 11 ಮೊದಲನೇ ಮಹಡಿಯಲ್ಲಿ ಬಾಡಿಗೆಗೆ ವಾಸವಿದ್ದೆವು. ಲೋಕಸಭಾ ಚುನಾವಣೆಯಲ್ಲಿಯೇ ಕೊನೆಯ ಬಾರಿ ಇಬ್ಬರು ಒಟ್ಟಿಗೆ ಸಿಕ್ಕಿದ್ದೆವು ಎಂದು ಹೇಳಿದ್ದಾರೆ.
"ಸಂಪರ್ಕಕ್ಕೆ ಸಿಗಲಿಲ್ಲ"
ನಮ್ಮ ಯಜಮಾನರು ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದರು. ಹೀಗಾಗಿ ದೂರವಾಣಿ ಮೂಲಕ ಸಂಪರ್ಕದಲ್ಲಿ ಇದ್ದೆವು. ದಿನಾಂಕ 25-10-2024 ರಂದು ನನ್ನ ಯಜಮಾನರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೆವು. ಆದರೆ, ಅವರು ಕರೆಯನ್ನು ಸ್ವೀಕರಿಸಲಿಲ್ಲ. ಹೀಗಾಗಿ ಬ್ಯುಸಿ ಇರಬಹುದೆಂದು ಸುಮ್ಮನಾದೆ. ಇಂದು ( 3-11-2024) ಬೆಳಗ್ಗೆ ಅಪಾರ್ಟ್ಮೆಂಟ್ನ ನಿವಾಸಿಯಾಗಿದ್ದ ಜಯರಾಮ್ ಅವರು ಕರೆ ಮಾಡಿ, ನಿಮ್ಮ ಮನೆಯ ಬಾಗಿಲ ಬಳಿ ದುರ್ವಾಸನೆ ಬರುತ್ತಿದೆ. ಬಾಗಿಲು ತಟ್ಟಿದರೂ ತೆಗೆಯುತ್ತಿಲ್ಲ. ಬಂದು ನೋಡಿದಾಗ ಆತ್ಮಹತ್ಯೆಗೆ ಶರಣಾಗಿದ್ದರೆಂದು ಗುರುಪ್ರಸಾದ್ ಪತ್ನಿ ಸುಮಿತ್ರಾ ದೂರಿನಲ್ಲಿ ಹೇಳಿಕೆ ಕೊಟ್ಟಿದ್ದಾರೆ.
"ನನ್ನ ಗಂಡನ ಸಾವಿನಲ್ಲಿ ಅನುಮಾನ ಇಲ್ಲ"
ಸಿನಿಮಾ ವಿಚಾರದಲ್ಲಿ ಸಾಲ ಮಾಡಿಕೊಂಡಿದ್ದರು. ಈ ವಿಚಾರ ತಿಳಿದ ಬಳಿಕ ನಾನು ನಮ್ಮ ಯಜಮಾನರಿಗೆ ಸಾಲವನ್ನು ತೀರಿಸೋಣ ಎಂದು ಧೈರ್ಯ ಹೇಳುತ್ತಿದ್ದೆ. ಆದರೂ ನನ್ನ ಪತಿ ಸಾಲದ ಬಾಧೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ನನ್ನ ಗಂಡನ ಸಾವಿನಲ್ಲಿ ನನಗೆ ಅನುಮಾನ ಇಲ್ಲ. ನೇಣು ಹಾಕೊಂಡಿರುವ ಬಗ್ಗೆ ನಿಖರವಾದ ಕಾರಣವೇನೆಂದು ತನಿಖೆ ಮಾಡಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.


Click it and Unblock the Notifications











