ಚಿರಂಜೀವಿ ಸರ್ಜಾಗೆ ಹಂಸಲೇಖ ಭಾವಪೂರ್ಣ ನಾದನಮನ
ನಟ ಚಿರಂಜೀವಿ ಸರ್ಜಾ ಜಗತ್ತಿಗೆ ವಿದಾಯ ಹೇಳಿ ಎರಡು ವಾರಗಳಾಗುತ್ತಾ ಬಂದರೂ ಅದರ ಆಘಾತ ಇನ್ನೂ ಕಡಿಮೆಯಾಗಿಲ್ಲ. ಕಿರಿ ವಯಸ್ಸಿನಲ್ಲಿಯೇ ಹಠಾತ್ತಾಗಿ ಎಲ್ಲರನ್ನೂ ಬಿಟ್ಟು ಹೋದಾಗ ಅದನ್ನು ಸಹಿಸಿಕೊಳ್ಳುವುದು ಹೇಗೆ ಸಾಧ್ಯ? ಅದರಲ್ಲಿಯೂ ಚಿರಂಜೀವಿ ತಮ್ಮ ಸಿನಿಮಾ ಮತ್ತು ವ್ಯಕ್ತಿತ್ವದ ಮೂಲಕ ಜನರಿಗೆ ಹತ್ತಿರವಾಗಿದ್ದವರು. ಅವರ ಹೆಸರು ಕೇಳಿದಾಗ ಅವರ ನಗುಮೊಗ ಕಣ್ಣಮುಂದೆ ಬರುತ್ತದೆ.
Recommended Video
ಖ್ಯಾತ ಸಂಗೀತ ನಿರ್ದೇಶಕ, ಗೀತ ರಚನೆಕಾರ ಚಿರಂಜೀವಿ ನೆನಪಲ್ಲಿ ಭಾವಪೂರ್ಣ ಗೀತೆಯೊಂದನ್ನು ರಚಿಸಿದ್ದಾರೆ. ಚಿರಂಜೀವಿ ಅಗಲಿಕೆಯ ನೋವಿನಲ್ಲಿ ಮೂಡಿಸುವ ಈ ಹಾಡು, ಕಲಾವಿದರ ಬದುಕಿನ ಒಳಚಿತ್ರಣವೂ ಇದೆ. ಚಿರು ಸರ್ಜಾ ಮಾವ, ನಟ ಸುಂದರ್ ರಾಜ್ ಅವರೊಂದಿಗೆ ಸಂವಹಿಸುವಂತೆ ಈಗ ಸಂಗೀತ-ಸಾಹಿತ್ಯ ನಮನ ಸಲ್ಲಿಸಿರುವ ಹಂಸಲೇಖ ಅವರ ಗೀತೆ ಭಾವುಕರನ್ನಾಗಿಸುತ್ತದೆ. ಮುಂದೆ ಓದಿ...

ನಿಂಗೇ ಯಾಕಪ್ಪಾ ಇದು?
'ಸುಂದ್ರಣ್ಣ ಏನಪ್ಪಾ ಇದು, ನಿಂಗೇ ಯಾಕಪ್ಪಾ ಇದು...?' ಎಂದು ಶುರುವಾಗುತ್ತದೆ. ಹಂಸಲೇಖ ಅವರ ಧ್ವನಿಯಲ್ಲಿ ಶುರುವಾಗುವ ಸಾಲುಗಳು ಫಿಲಾಸಫಿಯಂತೆ ಕಂಡರೂ ನೋವಿನ ಸುತ್ತಲಿನ ವಾಸ್ತವ ಜಗತ್ತನ್ನು ವಿಶ್ಲೇಷಿಸುವಂತಿದೆ.

ಅರ್ಧ ನಾಟಕದಲ್ಲಿ ದೀಪ ಹೋಯಿತು..
ಅರ್ಧ ನಾಟಕದಲ್ಲಿ ದೀಪ ಹೋಯ್ತಲ್ಲಪ್ಪಾ, ಕಣ್ಣಲ್ಲಿ ಕತ್ತಲೆ ತುಂಬಿಕೊಂಡು ಹೇಗಪ್ಪಾ ನೋಡೋದು ಈ ದೃಶ್ಯವನ್ನು? ಹೇಗಪ್ಪಾ ಸಹಿಸೋದು ಈ ಕತ್ತಲೆಯನ್ನಾ? ಮನುಷ್ಯ ಜಾತಿ ತಾನೊಂದೇ ವಲಂ ಅಂದ್ರಿ, ಬಾಳ ಪೂರ್ತಿ ಕಲೆಯೊದೇ ಬಲಂ ಅಂದ್ರಿ ಕರೆದಾಗ ಬಾ ಎಂದು ಕಣ್ಣೀರಿಗೆ ಕಲಿಸಿ ಮರಣಾನ ಬೇಕೆಂದಾಗ ನಟಿಸಿ ನಟಿಸಿ ತೋರಿಸಿ ಮೇಳ ಹಿಂದಿದ್ದರೆ ಮುಂದೆ ತುಟಿಯಾಡಿಸಿ ಒಳಗೆ ನೋವಿದ್ದರೆ ಪ್ರೇಕ್ಷಕರ ನಗಿಸಿ ಎಂದು ಹಂಸಲೇಖ ಹೇಳಿದ್ದಾರೆ.

ಹೇಗೆ ಸಹಿಸುವುದು ಕತ್ತಲೆಯನ್ನು?
ರಂಗವೇ ಸ್ವರ್ಗವೆಂದ ಮನೆಗೆ ಕಲೆಯೇ ಅನ್ನವೆಂದವರ ತಟ್ಟೆಗೆ ನರಕ ಬಂದು ಬಿತ್ತಲ್ಲಪ್ಪಾ, ಹೇಗಪ್ಪಾ ನೋಡೋದು ಈ ದೃಶ್ಯಾನಾ? ಹೇಗಪ್ಪಾ ಸಹಿಸೋದು ಈ ಕತ್ತಲೇನ..? ಎಂದು ಹೇಳಿದ್ದಾರೆ. ಇಡೀ ವಿಡಿಯೋ ಉದ್ದಕ್ಕೂ ಚಿರಂಜೀವಿ ಹಾಗೂ ಕುಟುಂಬದ ಫೋಟೊ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ.

ಗೆಳೆಯಾ ಗೆಳೆಯಾ...
ಹೀಗೆ ಬಂದು ಹಾಗೆ ಹೋಗುವುದು ಏನು ಚೆಂದಾನೋ,,, ಗೆಳೆಯಾ ಗೆಳೆಯಾ ಸರಿಯಾ.. ಆತುರಾತುರವಾದ ತುತ್ತು ಏನು ಸ್ವಾದಾನೋ ಗೆಳೆಯ... ಸರಿಯಾ? ಹೂವಿಗೊಂದು ಪ್ರೀತಿ ಕೊಟ್ಟು ಎಲ್ಲಿ ಹೋದೆಯೋ ಗೆಳೆಯಾ... ಎಂಬ ಹಾಡು ಮನಸನ್ನು ಆರ್ದ್ರಗೊಳಿಸುತ್ತದೆ.

ಭಾವುಕರನ್ನಾಗಿಸುವ ಹಾಡು
5.08 ನಿಮಿಷದ ಈ ವಿಡಿಯೋ ವೈರಲ್ ಆಗಿದೆ. ಲತಾ ಹಂಸಲೇಖ, ಅಶ್ವಿನ್ ಶರ್ಮಾ ಮತ್ತು ಗೋವಿಂದ್ ಕರ್ನೂಲ್ ಈ ಹಾಡಿಗೆ ದನಿಯಾಗಿದ್ದಾರೆ. ಈ ಗೀತೆಯಲ್ಲಿನ ಸಾಲುಗಳು ಅರ್ಥಪೂರ್ಣವಾಗಿವೆ. ಪ್ರತಿ ಸಾಲುಗಳೂ ಕಣ್ಣೀರು ಜಿನುಗಿಸುವಂತಿವೆ ಎಂದು ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ.


Click it and Unblock the Notifications











