ಬಿಗ್ ಬಾಸ್ ಟ್ರೋಫಿ ಗೆದ್ದ ಹಳ್ಳಿ ಹೈದನಿಗೆ ಆಘಾತ; ಕುಟುಂಬದ ಪ್ರಮುಖ ಸದಸ್ಯನನ್ನು ಕಳೆದುಕೊಂಡು ಹನುಮಂತ
ಬಿಗ್ ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಫಿನಾಲೆ ಮುಗಿದು ಹನುಮಂತ ವಿನ್ನರ್ ಆಗಿ ಹೊರಬಂದಿದ್ದಾರೆ. ಸುಮಾರು ಐದು ಕೋಟಿಗೂ ಅಧಿಕ ವೋಟ್ಗಳನ್ನು ಪಡೆದುಕೊಂಡು ಅದ್ಭುತ ಗೆಲುವು ಕಂಡಿದ್ದ ಹನುಮಂತ ಸೆಲೆಬ್ರೆಷನ್ ಮೂಡ್ನಲ್ಲಿ ಇದ್ದ. ಆದರೆ, ಈ ಸಂಭ್ರಮಕ್ಕೀಗ ಬ್ರೇಕ್ ಬಿದ್ದಿದೆ. ಹನುಮಂತ ತನ್ನ ಕುಟುಂಬದ ಪ್ರಮುಖ ಸದಸ್ಯನನ್ನು ಕಳೆದುಕೊಂಡಿದ್ದು, ದು:ಖ ಆವರಿಸಿದೆ.
ನಿನ್ನೆಯಷ್ಟೇ (ಜನವರಿ 26) ಹನುಮಂತ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಗೆದ್ದಿದ್ದ. ಹಳ್ಳಿ ಹೈದನ ಆಟಕ್ಕೆ ಕರುನಾಡಿನ ಜನತೆ ಮನ ಸೋತಿದ್ದರು. ಇದೇ ಖುಷಿಯನ್ನು ಅವರ ಹುಟ್ಟೂರಿನಲ್ಲಿ ಸೆಲೆಬ್ರೆಟ್ ಮಾಡಬೇಕು ಅಂತ ಅಭಿಮಾನಿ ಬಳಗ, ಊರಿನ ಗ್ರಾಮಸ್ಥರು ಹಾಗೂ ಕುಟುಂಬ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಆದರೆ, ಇದೇ ಹೊತ್ತಲ್ಲೇ ಅವರ ಚಿಕ್ಕಪ್ಪ ನಿಧನರಾದ ಸುದ್ದಿ ಬರಸಿಡಿಲಿನಂತೆ ಬಂದು ಅಪ್ಪಳಿಸಿದೆ.

ಹನುಮಂತನ ಚಿಕ್ಕಪ್ಪ ದೇವಪ್ಪ ಎನ್ನುವವರು ನಿಧನರಾಗಿದ್ದಾರೆ. ಹೀಗಾಗಿ ಅವರ ಕುಟುಂಬದಲ್ಲಿ ನೀರವ ಮೌನ ಆವರಿಸಿದೆ. ಹುಟ್ಟೂರು ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರುಬಡ್ನಿ ಗ್ರಾಮದ ಗ್ರಾಮಸ್ಥರು ಹಾಗೂ ಅಭಿಮಾನಿಗಳು ಹನುಮಂತನ ಸೆಲೆಬ್ರೆಷನ್ ಅನ್ನು ಮುಂದೂಡಿಸಿದ್ದಾರೆ. ಚಿಕ್ಕಪ್ಪ ದೇವಪ್ಪ ಅವರ ಸಾವಿಗೆ ನಿಖರವಾದ ಕಾರಣ ಇನ್ನಷ್ಟೇ ತಿಳಿಯಬೇಕಿದೆ.
ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಇದ್ದಿದ್ದರಿಂದ ಹನುಮಂತ ಹಾಗೂ ಅವರ ಅಪ್ಪ ಅಮ್ಮ ಇಬ್ಬರೂ ಬೆಂಗಳೂರಿನಲ್ಲಿಯೇ ಇದ್ದಾರೆ. ಊರಿನಲ್ಲಿ ಹನುಮಂತನ ಗೆಲುವನ್ನು ದೊಡ್ಡ ಮಟ್ಟದಲ್ಲಿ ಸೆಲೆಬ್ರೆಟ್ ಮಾಡಬೇಕು ಎಂದು ನಿರ್ಧಾರ ಮಾಡಲಾಗಿತ್ತು. ಹನುಮಂತ ಊರಿಗೆ ಹಿಂತಿರುಗುವುದನ್ನು ಎದುರು ನೋಡುತ್ತಿದ್ದರು. ಅಷ್ಟರಲ್ಲೇ ಅವರ ಚಿಕ್ಕಪ್ಪ ನಿಧನರಾಗಿದ್ದಾರೆ. ಈ ವಿಷಯ ಹನುಮಂತ ಹಾಗೂ ಅವರ ಕುಟುಂಬಕ್ಕೆ ಅಘಾತವನ್ನು ಉಂಟು ಮಾಡಿದೆ.
ನಿನ್ನೆ (ಜನವರಿ 26) ರಾತ್ರಿಯಿಂದಲೇ ಹನುಮಂತನ ಊರಿನಲ್ಲಿ ಅಭಿಮಾನಿಗಳು ಹಾಗೂ ಗ್ರಾಮಸ್ಥರು ಸಂಭ್ರಮವನ್ನು ಆಚರಿಸಿದ್ದರು. ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದ್ದರು. ಹಳ್ಳಿ ಹೈದನ ಗೆಲುವನ್ನು ತಮ್ಮದೇ ಗೆಲುವು ಎಂದು ಭಾವಿಸಿದ್ದರು. ರಾತ್ರಿಯಿಂದಲೇ ಹನುಮಂತನನ್ನು ನೋಡುವುದಕ್ಕೆ ಅವರ ಅಭಿಮಾನಿಗಳು ಗ್ರಾಮದಲ್ಲಿ ಜಮಾಯಿಸಿದ್ದರು. ಆದ್ರೀಗ ಅವರ ಆಸೆಗಳಿಗೆ ನಿರಾಸೆಯಾಗಿದೆ.
ಹನುಮಂತನ ಕುಟುಂಬದಲ್ಲಿ ದು:ಖದಲ್ಲಿ ಇರುವಾಗ ಹನುಮಂತನ ಸಂಭ್ರಮವನ್ನು ಆಚರಣೆ ಮಾಡದೇ ಇರುವ ನಿರ್ಧಾರಕ್ಕೆ ಬಂದಿದ್ದಾರೆ. ಚಿಕ್ಕಪ್ಪನ ಮೂರು ದಿನಗಳ ಕಾರ್ಯ ಮುಗಿದ ಬಳಿಕ ಸಂಭ್ರಮಾಚರಣೆ ಮಾಡುವುದಕ್ಕೆ ಅಭಿಮಾನಿಗಳು ಹಾಗೂ ಗ್ರಾಮಸ್ಥರು ನಿರ್ಧರಿಸಿದ್ದಾರೆ ಎಂದು ಫಸ್ಟ್ ನ್ಯೂಸ್ ವರದಿ ಮಾಡಿದೆ. ಸದ್ಯ ಬೆಂಗಳೂರಿನಲ್ಲಿರುವ ಹನುಮಂತನಿಗಾಗಿ ಕುಟುಂಬ ಹಾಗೂ ಗ್ರಾಮಸ್ಥರು ಎದುರು ನೋಡುತ್ತಿದ್ದಾರೆ.
ಇನ್ನೊಂದು ಕಡೆ ಹನುಮಂತನ ಗೆಲುವಿಗೆ ತ್ರಿವಿಕ್ರಮ್ ಹಾಗೂ ರಜತ್ ಖುಷಿ ವ್ಯಕ್ತಪಡಿಸಿದ್ದರು. ಹನುಮಂತು ಕಷ್ಟ ಪಟ್ಟು ಮೇಲೆ ಬಂದಿದ್ದಾನೆ. ಮನೆಯೊಳಗೆ ಅವನ ಹಾಗೆ ಇದ್ದರೇ ಗೆಲ್ಲುವುದಕ್ಕೆ ಸಾಧ್ಯ. ಈ ಬಾರಿ ಹನುಮಂತನೇ ಗೆಲ್ಲೋದು ಅಂತ ಗೊತ್ತಿತ್ತು. ಅವನ ಮುಂದೆ ಗಾಂಧಿಜೀನೆ ನಿಂತಿದ್ದರೂ ಕರ್ನಾಟಕದಲ್ಲಿ ಹನುಮಂತನೇ ಗೆಲ್ಲುತ್ತಿದ್ದ. ಅವನು ಬಿಗ್ ಬಾಸ್ ಟೈಟಲ್ ಗೆದ್ದಿದ್ದಕ್ಕೆ ಖುಷಿಯಿದೆ ಎಂದು ರಜತ್ ಹೇಳಿದ್ದಾರೆ. ಇನ್ನು ರನ್ನರ್ ಅಪ್ ಆಗಿರುವ ತ್ರಿವಿಕ್ರಮ್ ಕೂಡ ಇದೇ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಮನೆಯೊಳಗೆ ಹನುಮಂತನ ಹಾಗೆ ಇದ್ದರೆ ಗೆಲ್ಲುವುದಕ್ಕೆ ಸಾಧ್ಯ ಪ್ರತಿಕ್ರಿಯಿಸಿದ್ದರು.


Click it and Unblock the Notifications











