ಕನ್ನಡಿಗರೆಲ್ಲ ಒಂದು, ಕನ್ನಡ ಚಿತ್ರರಂಗ ಒಂದಾಯಿತು ಇಂದು!
ಕನ್ನಡದ ಪ್ರಮುಖ ನಟರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಸುದ್ದಿಗಳಿಗೆ ಒಂದೊಂದಾಗಿಯೇ ತೆರೆಬೀಳುವ ಒಳ್ಳೆಯ ಲಕ್ಷಣಗಳು ಕಾಣುತ್ತಿದೆ.
ಕಳೆದ ವಾರ ರಾಕಿಂಗ್ ಸ್ಟಾರ್ ಯಶ್, ಸುದೀಪ್ ಅಭಿನಯದ ರನ್ನ ಚಿತ್ರವನ್ನು ಮೈಸೂರು ಶಾಂತಲಾ ಚಿತ್ರಮಂದಿರದಲ್ಲಿ ನೋಡಿ ನಾವೆಲ್ಲಾ ಒಂದೇ ಎಂದು ಸಾರಿದ್ದರು. (ರನ್ನ ಚಿತ್ರ ನೋಡಿದ ಯಶ್)
ರನ್ನ ಬಿಡುಗಡೆಗೆ ಮುನ್ನ ಸಮಯ ನ್ಯೂಸ್ ವಾಹಿನಿ ಜೊತೆಗಿನ ಸಂದರ್ಶನದಲ್ಲಿ ಸುದೀಪ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಗ್ಗೆ ಗೌರವದ ಮಾತನ್ನಾಡಿದ್ದರು.
ಈಗ ಶಿವರಾಜ್ ಕುಮಾರ್ ಸರದಿ. ಸುದೀಪ್ ಮತ್ತು ನಾನು ಉತ್ತಮ ಸ್ನೇಹಿತರು. ನಮ್ಮಿಬ್ಬರ ನಡುವೆ ಸರಿಯಿಲ್ಲ ಎನ್ನುವುದು ಎಲ್ಲಾ ಗಾಳಿಸುದ್ದಿ, ಇದನ್ನು ನಂಬಬೇಡಿ ಎಂದು ಶಿವಣ್ಣ ಮನವಿ ಮಾಡಿದ್ದಾರೆ.
ವಜ್ರಕಾಯ ಬಿಡುಗಡೆ ಸಂಬಂಧ ನಡೆದ ಪತ್ರಿಕೋಗೋಷ್ಠಿಯಲ್ಲಿ ಮಾತನಾಡಿದ ಶಿವಣ್ಣ, ಸಾಮಾಜಿಕ ಜಾಲ ತಾಣದಿಂದ ಇಂತಹ ಬೇಡವಾದ ಸುದ್ದಿಗಳು ಹೆಚ್ಚು ಹರಡುತ್ತಿದೆ, ಸುದೀಪ್ ಜೊತೆ ಸೇರಿ ಸಿನಿಮಾ ಮಾಡುತ್ತೇನೆಂದು ಶಿವಣ್ಣ, ಇಬ್ಬರ ನಡುವೆ ಎದ್ದಿರುವ ಊಹಾಪೋಹಗಳಿಗೆ ತಿಲಾಂಜಲಿಯಿಡುವ ಕೆಲಸಕ್ಕೆ ಮುಂದಾಗಿದ್ದಾರೆ. (ಶಿವಣ್ಣನ ಮೇಲೆ ಅಪಾರ ಗೌರವವಿದೆ)
ಸುದೀಪ್ ಬಗ್ಗೆ ಶಿವಣ್ಣನ ಬಾಯಿಯಿಂದ ಹರಿದು ಬಂದ ಪುಂಖಾನುಪುಂಖ ಮೆಚ್ಚುಗೆಯ ಮಾತುಗಳು, ಸ್ಲೈಡಿನಲ್ಲಿ..

ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ
ನನ್ನ ಮತ್ತು ಸುದೀಪ್ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಲ್ಲ. ನಾವಿಬ್ಬರೂ ಚೆನ್ನಾಗಿದ್ದೇವೆ. ನಮ್ಮಿಬ್ಬರ ಮಧ್ಯೆ ಯಾವುದೇ ಜಗಳವಾಗಿಲ್ಲ. ನಾವಿಬ್ಬರೂ ಒಳ್ಳೆಯ ಸ್ನೇಹಿತರು. ವಿನಾಕಾರಣ ನಮ್ಮಿಬ್ಬರ ನಡುವೆ ಸುಳ್ಳುಸುದ್ದಿ ಹರಡಿಸಬೇಡಿ. ನಮಗೆ ಕನ್ನಡ ಚಿತ್ರೋದ್ಯಮ ಮುಖ್ಯ.

ಮುಕ್ತವಾಗಿ ಚರ್ಚಿಸುತ್ತೇವೆ
ಯಾವುದೇ ವಿಷಯವಿರಲಿ, ನಾವಿಬ್ಬರೂ ಮುಕ್ತವಾಗಿ ಮಾತನಾಡುತ್ತೇವೆ. ನಮ್ಮಲ್ಲಿ ಗುಂಪುಗಾರಿಕೆ, ಹೀರೋಯಿಸಂ ಇದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಸುದೀಪ್ ನಿರ್ದೇಶನದ ಶಾಂತಿನಿವಾಸ ಚಿತ್ರದಲ್ಲಿ ಅತಿಥಿ ನಟನಾಗಿ ಕಾಣಿಸಿಕೊಂಡಿದ್ದೆ. ಅಲ್ಲದೇ ನಮ್ಮಿಬ್ಬರಿಗೂ ಒಟ್ಟಿಗೆ ನಟಿಸುವ ಯೋಚನೆ ಕೂಡಾಯಿತ್ತು. ಆದರೆ ಪೂರ್ವ ನಿಯೋಜಿತ ಕೆಲಸಗಳಿಂದಾಗಿ ಇದು ಸಾಧ್ಯವಾಗಲಿಲ್ಲ.

ವಜ್ರಕಾಯ
ವಜ್ರಕಾಯ ಚಿತ್ರಕ್ಕೆ ಮೈನ್ ಥಿಯೇಟರ್ ಸಂತೋಷ್, ರನ್ನ ಚಿತ್ರಕ್ಕೆ ನರ್ತಕಿ. ಸುದೀಪ್ ಜೊತೆಗಿನ ಪೈಪೋಟಿಯಿಂದಲೇ ಸಂತೋಷ್ ಚಿತ್ರಮಂದಿರದಲ್ಲಿ ವಜ್ರಕಾಯ ಬಿಡುಗಡೆ ಮಾಡಲಾಗುತ್ತಿದೆ ಎಂದು ಸುಳ್ಳು ಸುದ್ದಿ ಹರಡಲಾಗುತ್ತಿದೆ. ಒಂದು ತಿಂಗಳ ಹಿಂದೆಯೇ ಸಂತೋಷ್ ಚಿತ್ರಮಂದಿರವನ್ನು ಕಾಯ್ದಿರಿಸಲಾಗಿತ್ತು.

ಮನೆಗೆ ಸುದೀಪ್ ಬರುತ್ತಾರೆ
ಅಣ್ಣಾ ನಿಮ್ಮ ಮನೆಗೆ ಬರಬೇಕೆಂದು ಕಾಯುತ್ತಿದ್ದೇನೆ. ಕೆಲಸದ ಒತ್ತಡದಿಂದ ಬರಲು ಆಗುತ್ತಿಲ್ಲ. ಗೀತಕ್ಕನಿಗೆ ಬೇಜಾರು ಮಾಡಿಕೊಳ್ಳಬಾರದೆಂದು ಹೇಳಿ. ಪತ್ನಿ ಗೀತಾ ಎಂದರೆ ಸುದೀಪ್ ಗೆ ಬಹಳ ಗೌರವ. ನನ್ನ ಪತ್ನಿ ಮಾಡುವ ಅಕ್ಕಿ ರೊಟ್ಟಿ ಅವರಿಗೆ ಬಹಳ ಇಷ್ಟ ಎಂದು ಸುದೀಪ್ ಜೊತೆಗಿನ ಒಡನಾಟವನ್ನು ಸ್ಮರಿಸಿಕೊಂಡಿದ್ದಾರೆ.

ಈಗ ಚಿತ್ರದ ಬಗ್ಗೆ ನಾಗಾರ್ಜುನ
ಹೈದರಾಬಾದಿಗೆ ಇತ್ತೀಚೆಗೆ ಹೋಗಿದ್ದಾಗ ನಾಗಾರ್ಜುನ ಅವರನ್ನು ಭೇಟಿ ಮಾಡಿದ್ದೆ. 'ಈಗ' ಚಿತ್ರದಲ್ಲಿ ಸುದೀಪ್ ನಟನೆಯ ಬಗ್ಗೆ ನಾಗಾರ್ಜುನ ಮೆಚ್ಚುಗೆಯ ಮಾತನ್ನಾಡಿದ್ದರು. ಇದನ್ನು ಸುದೀಪುಗೂ ತಿಳಿಸಿದ್ದೆ. ನಮ್ಮ ಚಿತ್ರೋದ್ಯಮದವರ ಬಗ್ಗೆ ಬೇರೆ ಚಿತ್ರೋದ್ಯಮದವರು ಮೆಚ್ಚುಗೆಯ ಮಾತನಾಡಿದಾಗ ಹೆಮ್ಮೆಯೆನಿಸುತ್ತದೆ - ಶಿವಣ್ಣ

ರಣವಿಕ್ರಮ
ರಣವಿಕ್ರಮ ಚಿತ್ರದ ಮೊದಲ ಶೋ ಸಂದರ್ಭದಲ್ಲಿ ನಡೆದ ಘಟನೆಯ ಬಗ್ಗೆ ನನಗೆ ತೀವ್ರ ಬೇಸರವಿದೆ. ಈ ಘಟನೆಯನ್ನು ನಾನು ಖಂಡಿಸುತ್ತೇನೆ. ನಟರು ಯಾರೇ ಇರಲಿ, ಎಲ್ಲದಕ್ಕಿಂತ ಹೆಚ್ಚಾಗಿ ಅದು ಕನ್ನಡ ಸಿನಿಮಾ ಎನ್ನುವುದನ್ನು ಪ್ರೇಕ್ಷಕರು ಅರ್ಥ ಮಾಡಿಕೊಳ್ಳಬೇಕು.

ಸೋಶಿಯಲ್ ಮಿಡಿಯಾ ಬಂದ ಮೇಲೆನೇ ಹೀಗಾಗುತ್ತಿರುವುದು
ಈ ಗೊಂದಲಗಳು ಫೇಸ್ ಬುಕ್, ಟ್ವಿಟರ್ ಬಂದ ನಂತರ ಆಗುತ್ತಿರುವುದು. ಹಿಂದೆ ಚಿತ್ರದ ಗಳಿಕೆಯ ಬಗ್ಗೆ ಮಾತ್ರ ಜನ ಆಸಕ್ತರಾಗಿದ್ದರು. ಈಗ ಹಾಗಲ್ಲಾ.. ನನ್ನ ಹೆಸರಿನ ಮುಂದೆ ರಾಜಕುಮಾರ್ ಎನ್ನುವ ದೊಡ್ಡ ಹೆಸರಿದೆ. ಯಾರೂ ಅವರ ಹೆಸರಿಗೆ ಚ್ಯುತಿ ತರಬಾರದು ಎಂದು ಶಿವಣ್ಣ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ವಜ್ರಕಾಯ ಚಿತ್ರ
ವಜ್ರಕಾಯ ಚಿತ್ರ ವೀಕ್ಷಿಸಲು ಸುದೀಪ್ ಅವರಿಗೆ ವಿಶೇಷವಾಗಿ ಆಹ್ವಾನಿಸುತ್ತೇನೆ. ನಾವಿಬ್ಬರು ಜೊತೆಯಾಗಿ ಚಿತ್ರ ವೀಕ್ಷಿಸುತ್ತೇವೆಂದು ಶಿವಣ್ಣ ಹೇಳಿದ್ದಾರೆ. ಕ್ಷುಲ್ಲಕ ವಿಚಾರವನ್ನು ದೊಡ್ಡದು ಮಾಡಬೇಡಿ..ಪ್ಲೀಸ್.. ಎಂದು ಶಿವಣ್ಣ ಪ್ರೇಕ್ಷಕರಲ್ಲಿ ಮನವಿ ಮಾಡಿದ್ದಾರೆ.


Click it and Unblock the Notifications











