"ಜೈಲಿಂದ ಬಂದ್ಮೇಲೆ ಪಾತ್ರಗಟ್ಲೆ ಬಿರಿಯಾನಿ ಕಳ್ಸಿದ್ರು..ಪ್ರಚಾರಕ್ಕಾಗಿ ಅಣ್ಣ,ಬಾಸ್ ಅಂದ್ರು"; ಝೈದ್ ಖಾನ್ಗೆ ತಿವಿದ ಧನ್ವೀರ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಲೈಫ್ನಲ್ಲಿ ಎಲ್ಲವೂ ಸರಿಯಿದ್ದಾಗ ನೂರಾರು ಮಂದಿ ಓಡಾಡಿಕೊಂಡಿದ್ದರು. ಆದರೆ, ಈಗ ಅವರ ಟೈಮ್ ಸರಿಯಾಗಿಲ್ಲ. ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಲ್ಲಿ ಇದ್ದಾರೆ. ಈ ವೇಳೆ ಅವರ ಬೆನ್ನ ಹಿಂದೆ ಓಡಾಡಿಕೊಂಡಿದ್ದವರು ಉಲ್ಟಾ ಹೊಡೆದಿದ್ದಾರೆ. ಅವರನ್ನು ನೋಡುವುದಕ್ಕೂ ಜೈಲಿಗೆ ಹೋಗಿಲ್ಲ ಅನ್ನೋ ಆರೋಪಗಳು ಕೇಳಿಬಂದಿತ್ತು. ಅದರಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಹಾಗೂ ಅವರ ಪುತ್ರ ಝೈದ್ ಖಾನ್ ಕೂಡ ಸೇರಿದ್ದಾರೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಹೆಸರು ಬರುವುದಕ್ಕೂ ಮುನ್ನ ಇವರ ಸಂಬಂಧ ಚೆನ್ನಾಗಿತ್ತು. ಜಮೀರ್ ಅಹಮದ್ ಖಾನ್ ಮನೆಗೆ ದರ್ಶನ್ ಬಿರಿಯಾನಿ ಸವಿದು ಬಂದಿದ್ದೂ ಇದೆ. ಝೈದ್ ಖಾನ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ ಅವರ ಬೆಂಬಲಕ್ಕೆ ನಿಂತಿದ್ದೂ ಇದೆ. ಆದ್ರೀಗ ದರ್ಶನ್ ಜೈಲು ಸೇರಿದಾಗ ಅವರ ನೆರವಿಗೆ ಜಮೀರ್ ಅಹಮದ್ ಖಾನ್ ಆಗಲಿ, ಝೈದ್ ಖಾನ್ ಆಗಲಿ ಬರಲಿಲ್ಲ ಅನ್ನೋ ಆರೋಪವಿದೆ.

ಅಲ್ಲದೆ ಇತ್ತೀಚೆಗೆ ಝೈದ್ ಖಾನ್ ತಮ್ಮ ಸಿನಿಮಾ 'ಕಲ್ಟ್' ರಿಲೀಸ್ ವೇಳೆ ಆಡಿದ ಮಾತುಗಳು ದರ್ಶನ್ ಆಪ್ತವಲಯಕ್ಕೆ ಬೇಸರ ತರಿಸಿತ್ತು. ಅದರಲ್ಲೂ ಧನ್ವೀರ್ ಖಡಕ್ ಆಗಿ ಪ್ರತಿಕ್ರಿಯಿಸಿದ್ದರು. 'ಹಯಗ್ರೀವ' ಪ್ರಚಾರದಲ್ಲಿರುವ ಧನ್ವೀರ್ ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಝೈದ್ ಖಾನ್ಗೆ ತಿರುಗೇಟು ಕೊಟ್ಟಿದ್ದಾರೆ. ಏನು ಹೇಳಿದ್ದಾರೆಂದು ನೋಡುವುದಾರೇ,
"ಆನೆಗೆ ಎರಡು ಹಲ್ಲು ಇದೆ"
"ಎಲ್ಲೂ ಕೂತ್ಕೊಂಡು ಟಿವಿ ಮುಂದೆ, ಮೀಡಿಯಾ ಮುಂದೆ ನಾವು ಅದು ಮಾಡ್ಬಿಟ್ಟಿದ್ದೀವಿ. ಆನೆಗೆ ಎರಡು ಹಲ್ಲು ಇದೆ. ಅದು-ಇದು ಅಂತ ಹೇಳ್ತಾರೆ. ನಿನ್ನೆ ಮೊನ್ನೆ ಬಂದು ನೆಟ್ಟಗೆ ಕನ್ನಡವೇ ಮಾತಾಡುವುದಕ್ಕೆ ಬಾರದೆ ಇರೋರು ಬಂದು ಒಬ್ಬ ವ್ಯಕ್ತಿ ಕ್ಯಾರೆಕ್ಟರ್ ಬಗ್ಗೆ ಮಾತಾಡುತ್ತಾರೆ ಅಂದರೆ.. ಯೋಗ್ಯತೆ ಇದ್ದರೆ ಬಂದು ಮಾಡಬೇಕಿತ್ತು. ಇಲ್ವಾ ಸುಮ್ಮನಿರಬೇಕು. ನಾನು ಸುಮಾರು ದಿನ ಗಮನಿಸಿದೆ. ಯಾವಾಗ ಕ್ಯಾರೆಕ್ಟರ್ ಹಿಂಗೆ-ಹಂಗೆ ಅಂತ ಮಾತಾಡುವುದಕ್ಕೆ ಶುರುವಾಯ್ತೋ ಆಗ ಮಾತಾಡಬೇಕಾದ ಅನಿವಾರ್ಯತೆ ಬಂತು." ಎಂದು ಧನ್ವೀರ್ ಹೇಳಿದ್ದಾರೆ.
"ದೇವರು ಅಧಿಕಾರ ಕೊಟ್ಟಿದ್ದಾನೆ"
ಧನ್ವೀರ್ ಹೆಸರು ಹೇಳದೆ ಜಮೀರ್ ಅಹಮದ್ ಖಾನ್ ಹಾಗೂ ಝೈದ್ ಖಾನ್ಗೆ ತಿರುಗೇಟು ಕೊಟ್ಟಿದ್ದಾರೆ. ಅಧಿಕಾರ, ಆಸ್ತಿ ಎಲ್ಲಾ ಇದೆ. ಹೀಗಿದ್ದರೂ ಸಹಾಯಕ್ಕೆ ಬರಲಿಲ್ಲ ಎಂದಿದ್ದಾರೆ. "ಈ ಚಿತ್ರರಂಗ ಬಣ್ಣದ ಬದುಕು ಅಂತ ಕರೀತಿವಿ. ಹೊಟ್ಟೆ ಪಾಡಿಗಾಗಿ ಬಣ್ಣ ಹಾಕಿಕೊಂಡು ಮಾಡಬೇಕು ಅನಿಸುತ್ತೆ. ಇನ್ನು ಕೆಲವರು ಬಣ್ಣನೇ ಜೀವನ ಅಂದುಕೊಂಡಿದ್ದಾರೆ. ಅಂತಹವರ ಬಗ್ಗೆ ಏನು ಮಾತಾಡಿ ಏನು ಪ್ರಯೋಜನ. ಈಗ ನೋಡಿ ದೇವರು ಅಧಿಕಾರ ಕೊಟ್ಟಿದ್ದಾನೆ. ಆಸ್ತಿ ಕೊಟ್ಟಿದ್ದಾನೆ. ಐಶ್ವರ್ಯ ಕೊಟ್ಟಿದ್ದಾನೆ. ದೇವರು ಎಲ್ಲಾ ಕೊಟ್ಟಿದ್ದಾನೆ. ಈ ವ್ಯಕ್ತಿ ಕಷ್ಟದಲ್ಲಿ ಇರುವಾಗ ಏನು ಬೇಕಾದರೂ ಮಾಡಬಹುದಿತ್ತಲ್ಲ." ಎಂದು ತಿರುಗೇಟು ಕೊಟ್ಟಿದ್ದಾರೆ.
"ಜೈಲಿಂದ ಬರ್ತಿದ್ದಂತೆ ಬಿರಿಯಾನಿ ಕಳ್ಸಿದ್ರು"
"ಇಷ್ಟು ದಿನ ಆಯ್ತಲ್ಲ. ಅವರಿಗೆ ಜೈಲಿಗೆ ಹೋಗಿ ಭೇಟಿ ಮಾಡುವುದಕ್ಕೆ ಅವಕಾಶ ಇರಲಿಲ್ವ? 23ನೇ ತಾರೀಕು ಸಿನಿಮಾ ರಿಲೀಸ್ ಆಗುತ್ತೆ. ಅವರನ್ನು ನೋಡುವುದಕ್ಕೆ 21ನೇ ತಾರೀಕು ಜೈಲಿಗೆ ಯಾಕೆ ಹೋಗ್ಬೇಕು? ಇಷ್ಟು ವರ್ಷ ಗ್ಯಾಪ್ ಇರಲಿಲ್ವ ನೋಡುವುದಕ್ಕೆ. ಆರ್ಆರ್ ನಗರ ಮನೆ ಅಡ್ರೆಸ್ ಗೊತ್ತಿರಲಿಲ್ವ? ಅಧಿಕಾರ ಎಲ್ಲಾ ಇತ್ತು ಹೋಗಿ ಭೇಟಿ ಮಾಡುವುದಕ್ಕೆ ಆಗಲಿಲ್ವ? ಸಿನಿಮಾ ಪ್ರಮೋಷನ್ಗೆ ಅಣ್ಣ ಬಾಸ್ ಅಂದ್ಕೊಂಡು ಬಂದ್ಬಿಟ್ರು. ಈಗ ಬಂದು ಮೀಡಿಯಾ ಮುಂದೆ ಡೈಲಾಗ್ ಹೊಡೀತಾರೆ. ರೀಸೆಂಟ್ ಆಗಿ ಹೇಳ್ದೆ. ಅಲ್ಲಿವರೆಗೂ ಬಂದು ವಿಚಾರಿಸುವುದಕ್ಕೆ ಆಗಿಲ್ಲ. ಅವರು ಬಂದ ಮಾರನೇ ದಿನ ಪಾತ್ರಗಟ್ಲೆ ಬಿರಿಯಾನಿ ಕಳಿಸೋರು ಇವರು. ಇವರು ಕೂತ್ಕೊಂಡು ಬೇರೆಯವರ ಬಗ್ಗೆ ಮಾತಾಡುತ್ತಾರೆ." ಎಂದು ಝೈದ್ ಖಾನ್ಗೆ ಮಾತಿನಲ್ಲೇ ಧನ್ವೀರ್ ತಿವಿದಿದ್ದಾರೆ.


Click it and Unblock the Notifications











