ಅಭಿ-ಅವಿವಾ ಆರತಕ್ಷತೆಗೆ ಎಚ್ಡಿಕೆ, ನಿಖಿಲ್ ಗೈರು.. ಆರಿಲ್ಲ ಮುನಿಸು: ರಮ್ಯಾ ಹಾಜರಿಯೇ ಅಚ್ಚರಿ!
ನಿನ್ನೆ (ಜೂನ್ 7) ತಾನೇ ಸುಮಲತಾ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಆರತಕ್ಷತೆ ಅದ್ಧೂರಿಯಾಗಿ ನಡೆದಿದೆ. ಗಣ್ಯಾತೀಗಣ್ಯರು ರಿಸೆಪ್ಷನ್ಗೆ ಆಗಮಿಸಿ, ನವ ಜೋಡಿಗೆ ಶುಭ ಹಾರೈಸಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್, ಸಿಎಂ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ರಿಷಬ್ ಶೆಟ್ಟಿ ಸೇರಿದಂತೆ ಸಿನಿಮಾ ಹಾಗೂ ರಾಜಕೀಯ ಕ್ಷೇತ್ರಕ್ಕೆ ಸೇರಿದ ಗಣ್ಯರು ಆಗಮಿಸಿ, ನವ ಜೋಡಿಗೆ ಶುಭ ಹಾರೈಸಿದ್ದಾರೆ.

ಆದರೆ, ಆರತಕ್ಷತೆಗೆ ಮೂವರು ವಿಶೇಷ ಅತಿಥಿಗಳ ಮೇಲೆ ನಿರೀಕ್ಷೆಯಿತ್ತು. ಸುಮಲತಾ ಅಂಬರೀಶ್ ಅವರ ರಾಜಕೀಯ ಎದುರಾಳಿ ಎಚ್ಡಿ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಹಾಗೂ ಮೋಹಕತಾರೆ ರಮ್ಯಾ. ಈ ಮೂವರಲ್ಲಿ ಮುನಿಸು ಮುರಿದು ಬರೋರು ಯಾರು? ಅನ್ನೋ ಪ್ರಶ್ನೆಗೆ ನಿನ್ನೆನೇ(ಜೂನ್ 7) ಉತ್ತರನೂ ಸಿಕ್ಕಿದೆ.
ಅಭಿ-ಅವಿವಾ ಆರತಕ್ಷತೆಗೆ ರಮ್ಯಾ
ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಆರತಕ್ಷತೆ ಮೇಲೆ ರಾಜಕೀಯ ಹಾಗೂ ಸಿನಿಮಾ ವಲಯ ಒಂದು ಕಣ್ಣಿಟ್ಟಿತ್ತು. ಸುಮಲತಾ ಸಿನಿಮಾ ಅಷ್ಟೇ ಅಲ್ಲ ರಾಜಕೀಯವಾಗಿಯೂ ಬೆಳೆದಿದ್ದಾರೆ. ಮುಂದೆ ಅಭಿಷೇಕ್ ಕೂಡ ರಾಜಕೀಯಕ್ಕೆ ಧುಮುಕಲಿದ್ದಾರೆ. ಹೀಗಾಗಿ ವೇದಿಕೆ ಈಗಿನಿಂದಲೇ ರೆಡಿಯಾಗುತ್ತಿದೆ. ಹೀಗಾಗಿ ಅಂಬಿ ಕುಟುಂಬದ ರಾಜಕೀಯ ಎದುರಾಳಿಗಳು ಮದುವೆಗೆ ಬರಬಹುದೇ? ಅನ್ನೋ ಲೆಕ್ಕಾಚಾರ ಹಾಕಲಾಗಿತ್ತು.
ಅಂಬರೀಶ್ ನಿಧನರಾದಾಗ ಬಾರದ ರಮ್ಯಾ, ಮಗನ ಮದುವೆಗೆ ಬರುತ್ತಾರಾ? ಅನ್ನೋ ಅನುಮಾನವಿತ್ತು. ಆದರೆ, ರಮ್ಯಾ ವೈಮನಸ್ಸನ್ನು ಮರೆತು ಅಭಿ ಹಾಗೂ ಅವಿವಾ ಆರತಕ್ಷತೆಗೆ ಬಂದು ಶುಭ ಹಾರೈಸಿದ್ದಾರೆ. ಇದೇ ವೇಳೆ ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನೂ ನೆನೆಪಿಸಿಕೊಂಡಿದ್ದಾರೆ. ಹೀಗಾಗಿ ಮತ್ತೆ ಸಾಮರಸ್ಯ ಮೂಡುವ ಲಕ್ಷಣಗಳು ಗೋಚರವಾಗುತ್ತಿವೆ.

ಎಚ್ಡಿಕೆ,ನಿಖಿಲ್ ಗೈರು.. ಆರಿಲ್ಲ ಮುನಿಸು
ಕಳೆದ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಎದುರು ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಸ್ಪರ್ಧಿಸಿದ್ದರು. ಅಲ್ಲಿಂದ ಎಚ್ಡಿಕೆ,ನಿಖಿಲ್ ಹಾಗೂ ಸುಮಲತಾ ನಡುವೆ ವೈಮನಸ್ಸು ಏರ್ಪಟ್ಟಿತ್ತು. ಇಂತಹ ಶುಭ ಸಂದರ್ಭದಲ್ಲಿ ಮುನಿಸನ್ನು ಮರೆತು ಎಚ್ಡಿಕೆ, ನಿಖಿಲ್ ಬರಬಹುದು ಎಂದು ನಿರೀಕ್ಷಿಸಲಾಗಿತ್ತು.
ಆದರೆ, ಎಚ್ ಡಿ ಕುಮಾರಸ್ವಾಮಿ ಹಾಗೂ ನಿಖಿಲ್ ಇಬ್ಬರೂ ಗೈರಾಗಿದ್ದಾರೆ. ಈ ಮೂಲಕ ಎರಡು ಕುಟುಂಬಗಳ ನಡುವಿನ ವೈಮನಸ್ಸು ಸದ್ಯಕ್ಕೆ ಶಮನ ಆಗುವ ಹಾಗೇ ಕಾಣಿಸುತ್ತಿಲ್ಲ. ಇದು ಮುಂದಿನ ಲೋಕಸಭಾ ಚುನಾವಣೆಗೂ ಮುಂದುವರೆಯುವ ಸಾಧ್ಯತೆಯಿದೆ.
ರಮ್ಯಾ Vs ತೇಜಸ್ವಿ Or ಸುಮಲತಾ?
ರಮ್ಯಾ ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಸುಮಲತಾ ವಿರುದ್ಧ ರಮ್ಯಾರನ್ನು ಕಣಕ್ಕೆ ಇಳಿಸಬಹುದೆಂದು ಗುಲ್ಲೆದ್ದಿತ್ತು. ಆದ್ರೀಗ ಬೇರೆನೇ ಸುದ್ದಿ ಓಡಾಡುತ್ತಿದೆ. ಬೆಂಗಳೂರು ದಕ್ಷಿಣದಿಂದ ಕಣಕ್ಕಿಳಿಸಲು ಡಿಕೆ ಶಿವಕುಮಾರ್ ಪ್ಲ್ಯಾನ್ ಮಾಡಿದ್ದಾರೆನ್ನಲಾಗಿದೆ.
ಬೆಂಗಳೂರು ದಕ್ಷಿಣದಿಂದ ತೇಜಸ್ವಿ ಸೂರ್ಯ ವಿರುದ್ಧ ರಮ್ಯಾರನ್ನು ಕಣಕ್ಕಿಳಿಸಿ, ಕಾಂಗ್ರೆಸ್ ಪತಾಕೆ ಹಾರಿಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಈ ಬೆನ್ನಲ್ಲೇ ರಮ್ಯಾ ಮುನಿಸು ಮರೆತು ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಮದುವೆಗೆ ಬಂದಿದ್ದು ಸಿನಿಮಾ ಹಾಗೂ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ.


Click it and Unblock the Notifications











