'ಸಪ್ತಸಾಗರದಾಚೆ ಎಲ್ಲೋ' ಹೊರಟ ರಕ್ಷಿತ್ ಶೆಟ್ಟಿ ಮತ್ತು ಹೇಮಂತ್ ರಾವ್ ಹೊಸ ಸಿನಿಮಾ
'777 ಚಾರ್ಲಿ' ಸಿನಿಮಾಕ್ಕಾಗಿ ದಕ್ಷಿಣ ಭಾರತದಿಂದ ಶುರುವಾಗಿ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಓಡಾಡಿಕೊಂಡು ಬಂದಿರುವ ರಕ್ಷಿತ್ ಶೆಟ್ಟಿ, ಈಗ ಸಪ್ತಸಾಗರದ ಆಚೆಗೆ ಹೊರಡಲಿದ್ದಾರೆ. ನಿಜ. ಅವರ ಮುಂಬರುವ ಸಿನಿಮಾದ ಹೆಸರು 'ಸಪ್ತಸಾಗರದಾಚೆ ಎಲ್ಲೋ'. ಸಿನಿಮಾ ಪ್ರೇಮಿಗಳಲ್ಲಿ ಕುತೂಹಲ ಹೆಚ್ಚಿಸುವ ಮತ್ತೊಂದು ಸಂಗತಿಯೆಂದರೆ ಇದಕ್ಕೆ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು', 'ಕವಲುದಾರಿ' ಖ್ಯಾತಿಯ ನಿರ್ದೇಶಕ ಹೇಮಂತ್ ರಾವ್ ಆಕ್ಷನ್ ಕಟ್ ಹೇಳುತ್ತಿರುವುದು.
'ಯಾವ ಮೋಹನ ಮುರಳಿ ಕರೆಯಿತೋ...' ಹಾಡನ್ನು ಮೆಚ್ಚದವರು ಯಾರು? ಅದರಲ್ಲಿ ಬರುವ 'ಸಪ್ತಸಾಗರದಾಚೆ ಎಲ್ಲೋ ಸುಪ್ತಸಾಗರ ಕಾದಿದೆ... ಎಂಬ ಸಾಲಿನ ಭಾವತೀವ್ರತೆ ಎಂತಹವರನ್ನೂ ಅರೆ ಕ್ಷಣ ಕಾಡದೆ ಇರದು. ಅಂತಹ ಸಾಲು ಈಗ ಸಿನಿಮಾ ಶೀರ್ಷಿಕೆಯಾಗುತ್ತಿದೆ ಎನ್ನುವುದು ವಿಶೇಷ. ಹಾಗೆಯೇ 'ಗೋಧಿ ಬಣ್ಣ...' ಸಿನಿಮಾದ ಬಳಿಕ ಹೇಮಂತ್ ರಾವ್ ಮತ್ತು ರಕ್ಷಿತ್ ಶೆಟ್ಟಿ ಮತ್ತೆ ಜೋಡಿಯಾಗುತ್ತಿದೆ ಎಂಬುದು ಮತ್ತೊಂದು ವಿಶೇಷ.
ಹೊಸ ಪ್ರಯಾಣ
'ಗೋಧಿಬಣ್ಣ ಸಾಧಾರಣ ಮೈಕಟ್ಟು' (ಜಿಬಿಎಸ್ಎಂ) ಚಿತ್ರದ ಅದ್ಭುತ ಪ್ರಯಾಣದ ಬಳಿಕ, 'ಸಪ್ತಸಾಗರದಾಚೆ ಎಲ್ಲೋ (ಎಸ್ಎಸ್ವೈ) ರಕ್ಷಿತ್ ಶೆಟ್ಟಿ ಹಾಗೂ ಪುಷ್ಕರ ಮಲ್ಲಿಕಾರ್ಜುನಯ್ಯ ಅವರೊಂದಿಗೆ ಸೇರಿಕೊಳ್ಳುತ್ತಿರುವುದು ನನಗೆ ಅಪಾರ ಅನಂದ ಮತ್ತು ಸಂತಸ ನೀಡಿದೆ. ಪೋಸ್ಟರ್ನ ಮೊದಲ ಲುಕ್ ಇಲ್ಲಿದೆ ಎಂದು ನಿರ್ದೇಶಕ ಹೇಮಂತ್ ರಾವ್ ಟ್ವೀಟ್ ಮಾಡಿದ್ದಾರೆ.
ಜೂನ್ನಲ್ಲಿ ಚಿತ್ರೀಕರಣ ಆರಂಭ
ಜಿಬಿಎಸ್ಎಂಗೆ ನೀವೆಲ್ಲ ಪ್ರೀತಿಯನ್ನು ಸುರಿಸಿದ ನಂತರ ಹೇಮಂತ್ ರಾವ್, ಪುಷ್ಕರ ಮಲ್ಲಿಕಾರ್ಜುನಯ್ಯ ಮತ್ತು ನಾನು ಎಸ್ಎಸ್ವೈ ಮೂಲಕ ಮತ್ತೆ ಜತೆಯಾಗಿ ಬರುತ್ತಿದ್ದೇವೆ. ಜೂನ್ನಲ್ಲಿ ಚಿತ್ರೀಕರಣ ಅರಂಭವಾಗಲಿದೆ ಎಂದು ರಕ್ಷಿತ್ ಶೆಟ್ಟಿ ತಿಳಿಸಿದ್ದಾರೆ.
ರೋಮಾಂಚನಕಾರಿ ಸಂಗತಿ
'ನಾವು ಆರಂಭಿಸಿದ ಜಾಗಕ್ಕೆ ಮತ್ತೆ ಮರಳಿ ಹೋಗುವುದಕ್ಕಿಂತ ರೋಮಾಂಚನಕಾರಿ ಸಂಗತಿ ಮತ್ತೊಂದಿಲ್ಲ. ಪುಷ್ಕರ ಫಿಲಂಸ್ ಮತ್ತೊಮ್ಮೆ ನಮ್ಮ ಚಿತ್ರರಂಗದ ಅದ್ಭುತ ಪ್ರತಿಭೆಗಳಾದ ರಕ್ಷಿತ್ ಶೆಟ್ಟಿ ಹಾಗೂ ಹೇಮಂತ್ ರಾವ್ ಅವರೊಂದಿಗೆ ಸಹಯೋಗದಲ್ಲಿ ಹೊಸ ಸಿನಿಮಾ ಮಾಡಲಿದೆ ಎಂದು ತಿಳಿಸುವುದಕ್ಕೆ ಖುಷಿಯಾಗುತ್ತಿದೆ' ಎಂದು ಪುಷ್ಕರ ತಿಳಿಸಿದ್ದಾರೆ.

ಮತ್ತೆ ಸೇರಿದ ಮೂವರ ಜೋಡಿ
'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದಲ್ಲಿ ರಕ್ಷಿತ್ ಮತ್ತು ಹೇಮಂತ್ ರಾವ್ ಜೋಡಿ ಮೊದಲ ಬಾರಿ ಒಟ್ಟಿಗೆ ಕೆಲಸ ಮಾಡಿತ್ತು. ಪುಷ್ಕರ್ ಮಲ್ಲಿಕಾರ್ಜುನಯ್ಯ ಸಿನಿಮಾಕ್ಕೆ ಬಂಡವಾಳ ಹೂಡಿದ್ದರು. ಇದರಲ್ಲಿ ಅನಂತ್ ನಾಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈಗ ಮತ್ತೆ ಈ ಮೂವರು ಒಟ್ಟಾಗಿದ್ದಾರೆ.

ಚಿತ್ರತಂಡದಲ್ಲಿ ಯಾರಿದ್ದಾರೆ?
ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ ಮಾಡಲಿದ್ದಾರೆ. ಹೇಮಂತ್ ಅವರ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಚರಣ್ ರಾಜ್ ಅವರೇ ಸಂಗೀತ ಸಂಯೋಜನೆ ಮಾಡಲಿದ್ದಾರೆ. ರಕ್ಷಿತ್ ಹೊರತಾಗಿ ಚಿತ್ರದಲ್ಲಿ ಇನ್ನು ಯಾರು ನಟಿಸಲಿದ್ದಾರೆ ಎಂಬ ಮಾಹಿತಿಯನ್ನು ಇನ್ನೂ ಬಹಿರಂಗಪಡಿಸಿಲ್ಲ. 'ಅವನೇ ಶ್ರೀಮನ್ನಾರಾಯಣ' ಚಿತ್ರ ಬಿಡುಗಡೆಯಾದ ಡಿ. 27ರಂದೇ ಈ ಚಿತ್ರ ತೆರೆಗೆ ತರಲು ಉದ್ದೇಶಿಸಲಾಗಿದೆ.

'ತೆನಾಲಿ' ಸಿನಿಮಾ ಮುಂದಕ್ಕೆ
'ಗೋಧಿ ಬಣ್ಣ...' ಬಿಡುಗಡೆಯಾದ ಬಳಿ ಹೇಮಂತ್ ಮತ್ತು ರಕ್ಷಿತ್ ಶೆಟ್ಟಿ 'ತೆನಾಲಿ' ಚಿತ್ರದಲ್ಲಿ ಜತೆಯಾಗಿ ಕೆಲಸ ಮಾಡಲಿದ್ದಾರೆ ಎನ್ನಲಾಗಿತ್ತು. 1947ರ ಕಾಲಘಟ್ಟದ ಡಿಟೆಕ್ಟಿವ್ ಕಥೆ ಇದಾಗಿತ್ತು. ರಕ್ಷಿತ್ ಶೆಟ್ಟಿ ಅವರ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿತ್ತು. ಆದರೆ ಸಿನಿಮಾ ಪ್ರಕ್ರಿಯೆ ನಡೆದಿರಲಿಲ್ಲ. ಹೆಚ್ಚಿನ ಶ್ರಮ ಮತ್ತು ಬಜೆಟ್ ಇದಕ್ಕೆ ಬೇಕಿರುವುದರಿಂದ 'ತೆನಾಲಿ' ಮುಂದಕ್ಕೆ ಹೋಗಿದೆ. ಈಗ ಈ ಜೋಡಿ ಹೊಸ ಸಿನಿಮಾಕ್ಕೆ ಕೈಹಾಕಿದೆ.

ಇದು ಲವ್ ಸ್ಟೋರಿ
ಹೇಮಂತ್ ಅವರಿಗೆ ಈ ಶೀರ್ಷಿಕೆಯನ್ನು ಸಜೆಸ್ಟ್ ಮಾಡಿದವರು ಅವರ ಸಹ ಬರಹಗಾರ ಗುಂಡು ಶೆಟ್ಟಿ. ಶೀರ್ಷಿಕೆ ಕಥೆಗೆ ಬಹಳ ಆಪ್ತವಾಗಿದೆ ಎನ್ನುವುದು ಅವರ ಅನಿಸಿಕೆ. ತಮ್ಮ ಮೊದಲ ಎರಡು ಸಿನಿಮಾಗಳಲ್ಲಿ ಸಸ್ಪೆನ್ಸ್, ಥ್ರಿಲ್ಲರ್ ಕಥೆಯನ್ನು ಹೇಳಿದ್ದ ಹೇಮಂತ್ ರಾವ್, ಈ ಬಾರಿ ಲವ್ ಸ್ಟೋರಿಯನ್ನು ಹೇಳಲಿದ್ದಾರಂತೆ. 'ಸಪ್ತಸಾಗರದಾಚೆ...' ಚಿತ್ರದಲ್ಲಿ ರಕ್ಷಿತ್ ಅವರದ್ದು ಎರಡು ಛಾಯೆಯ ಪಾತ್ರವಂತೆ. ಒಂದು ಕಾಲೇಜು ವಿದ್ಯಾರ್ಥಿ ಮತ್ತೊಂದು ಕಾಲೇಜು ಮುಗಿಸಿ ಹೊರಬಂದ ಯುವಕನ ಪಾತ್ರ.


Click it and Unblock the Notifications











