'ಭೀಮ' ಸಿನಿಮಾ ನೋಡಿ ದುನಿಯಾ ವಿಜಯ್ ಹ್ಯಾಟ್ಸಾಫ್ ಎಂದ ಇತಿಹಾಸ ತಜ್ಞ ಧರ್ಮೇಂದ್ರ ಕುಮಾರ್?
ದುನಿಯಾ ವಿಜಯ್ ಸಿನಿಮಾ 'ಭೀಮ' ಬಾಕ್ಸಾಫೀಸ್ನಲ್ಲಿ ಸದ್ದು ಮಾಡುತ್ತಿದೆ. ಕನ್ನಡ ಚಿತ್ರರಂಗಕ್ಕೆ 2024ರ ಮೊದಲ ಹಿಟ್ ಸಿನಿಮಾ ಸಿಕ್ಕಿದೆ. ಈ ಬೆನ್ನಲ್ಲೇ ಸೆಲೆಬ್ರೆಟಿಗಳು 'ಭೀಮ' ಸಿನಿಮಾದ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ. ಅದರಲ್ಲೂ ಸ್ಥಳೀಯ ಪ್ರದೇಶಗಳ ಇತಿಹಾಸವನ್ನು ಜನರಿಗೆ ತಿಳಿಸುತ್ತಿರುವ ಧರ್ಮೇಂದ್ರ ಕುಮಾರ್ ಅವರ ಮನಸ್ಸನ್ನು 'ಭೀಮ' ಗೆದ್ದಿದೆ.
ಇತ್ತೀಚೆಗೆ ದುನಿಯಾ ವಿಜಯ್ 'ಭೀಮ' ಸಿನಿಮಾ ನೋಡಿದ ಧರ್ಮೇಂದ್ರ ಕುಮಾರ್ ವಿಡಿಯೋ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸಿನಿಮಾ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಬೆಂಗಳೂರಿನ ಕರಾಳತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಡ್ರಗ್ ಮಾಫಿಯಾವನ್ನು ಹಸಿ ಬಿಸಿಯಾಗಿ ತೋರಿಸಿರುವುದಕಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಧರ್ಮೇಂದ್ರ ಕುಮಾರ್ ವಿಡಿಯೋದಲ್ಲಿ ಏನು ಹೇಳಿದ್ದಾರೆ? ಅನ್ನುವ ಡಿಟೈಲ್ಸ್ ಇಲ್ಲಿದೆ.

'ಭೀಮ' ಸಿನಿಮಾ ನೋಡಿದ ಬಳಿಕ ಬೆಂಗಳೂರಿನ ಕರಾಳತೆ ಬಗ್ಗೆ ಬೆಚ್ಚಿಬಿದ್ದಿರುವ ಧರ್ಮೇಂದ್ರ ಕುಮಾರ್ ಕನ್ನಡಿಗರಿಗೆ ಸಿನಿಮಾ ನೋಡುವಂತೆ ಮನವಿ ಮಾಡಿಕೊಂಡಿದ್ದಾರೆ. "ನಮ್ಮ ಹಳೆ ಕಾಲದ ಸಿಂಗಲ್ ಸ್ಕ್ರೀನ್ ಥಿಯೇಟರ್ ಅನ್ನು ಹುಡುಕಿಕೊಂಡು ಹೋಗಿ ಬೆಂಗಳೂರಿನಲ್ಲಿ. ಟಿಕೆಟ್ ತಗೊಳ್ಳಿ, ಮೊಬೈಲ್ ಫೋನ್ ಆಫ್ ಮಾಡಿ ಗಾಡಿಯೊಳಗೆ ಇಟ್ಬಿಡಿ. ಒಳಗೆ ಹೋಗಿ ಎರಡೂವರೆ ಗಂಟೆ ಸಿನಿಮಾ ನೋಡಿ. ಭೀಮ ನೋಡಿಕೊಂಡು ಬನ್ನಿ. ಅವತ್ತಿನ ರಾತ್ರಿ ನೀವು ನಿದ್ದೆ ಮಾಡುವುದಿಲ್ಲ. ದುನಿಯಾ ವಿಜಿ ಹ್ಯಾಟ್ಸ್ ಆಫ್ ನಿಮಗೆ. ಪ್ರಪಂಚದ, ಬೆಂಗಳೂರಿನ ಕರಾಳತೆಯನ್ನು ಹಸಿ ಹಸಿಯಾಗಿ ಎತ್ತಿ ಕೊಟ್ಟಿದ್ದಾರೆ. ಇಂತಹದ್ದೊಂದು ಬೆಂಗಳೂರು ನಮ್ಮ ಜೊತೆಯಿದೆ ಅಂತ ಇಂತಹ ಪಿಕ್ಚರ್ ನೋಡಿದರೇನೆ ಗೊತ್ತಾಗುವುದು." ಎಂದಿದ್ದಾರೆ.
ಬೆಳಗ್ಗೆ ಎದ್ದು ಜನರು ಆಫೀಸ್ಗೆ ಹೋಗುತ್ತಾರೆ. ಮಕ್ಕಳು ಸ್ಕೂಲ್ಗೆ ಹೋಗುತ್ತಾರೆ. ನೀವೆಲ್ಲರೂ ಹ್ಯಾಪಿ. ಆದರೆ, ಇಂತಹದ್ದೊಂದು ಕರಾಳ ಬದುಕನ್ನು ನಮ್ಮ ಮಕ್ಕಳು ಬದುಕುತ್ತಿದ್ದಾರೆ ಅಂತ ಗೊತ್ತಾಗುವುದೇ ಇಲ್ಲ. ಮಕ್ಕಳು ಓದುತ್ತಿರುವ ಸ್ಕೂಲ್ ಮುಂದೆ ಗಾಂಜಾ, ಡ್ರಗ್ಸ್ ಮತ್ತು ಟ್ಯಾಬ್ಲೆಟ್ಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದರ ಹಿಂದೆ ದೊಡ್ಡದೊಂದು ನೆಟ್ವರ್ಕ್ ಇದೆ. ದೊಡ್ಡದೊಂದು ದುನಿಯಾನೇ ಇದೆ ಅನ್ನೋದನ್ನು ದುನಿಯಾ ವಿಜಿ ತುಂಬಾ ಹಸಿಯಾಗಿ ತೋರಿಕೊಟ್ಟಿದ್ದಾರೆಂದು ಧರ್ಮೇಂದ್ರ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.
ಹಾಗೇ ಬಾಲಿವುಡ್ ಸಿನಿಮಾವನ್ನು ಉದಾಹರಣೆಯಾಗಿ ಕೊಟ್ಟಿದ್ದಾರೆ. "1971ನಲ್ಲಿ ಒಂದು ಸಿನಿಮಾ ಬಂದಿತ್ತು. ಹರೇ ರಾಮ ಹರೇ ಕೃಷ್ಣ ಅನ್ನೋ ಸಿನಿಮಾ. ದೇವ್ ಆನಂದ್ ಹಾಗೂ ಜೀನತ್ ಅಮಾನ್ ನಟಿಸಿದ್ದರು. ಬಹಳ ಫೇಮಸ್ ಸಾಂಗ್ ಬಂದಿತ್ತು. ಧಮ್ ಮಾರೋ ಧಮ್ ಅನ್ನೋ ಹಾಡು. ಆ ಪಿಕ್ಚರ್ ಅನ್ನು ನೋಡಿದ್ವಿ. ಅದಾದ್ಮೇಲೆ ಅಂತಹ ಸಾಮಾಜಿಕ ಸಂದೇಶ ಇರುವ ಸಿನಿಮಾವನ್ನು ದುನಿಯಾ ವಿಜಯ್ ತೋರಿಸಿದ್ದಾರೆ. ಇಂತಹ ಕಮರ್ಷಿಯಲ್ ದುನಿಯಾದಲ್ಲೂ ರಿಸ್ಕ್ ತಗೊಂಡು ಸಿನಿಮಾ ತೋರಿಸಿದ್ದಾರೆ." ಎಂದು ಹೇಳಿದ್ದಾರೆ.
ಕಮರ್ಷಿಯಲ್ ಸಿನಿಮಾ ಹಿಟ್ ಆಗಬೇಕು ಅನ್ನುವ ಫಾರ್ಮೂಲದ ಜೊತೆ ಹೋಗುವ ಫಿಲ್ಮ್ ಮೇಕರ್ಗಳೇ ಹೆಚ್ಚು. ಈ ಮಧ್ಯೆ ಬೆಂಗಳೂರಿನ ಡ್ರಗ್ ಮಾಫಿಯಾವನ್ನು ತೋರಿಸುವುದಕ್ಕೆ ಹೊರಟಿರೋ ದುನಿಯಾ ವಿಜಯ್ ಧೈರ್ಯವನ್ನು ಮೆಚ್ಚಿದ್ದಾರೆ. ಅಲ್ಲದೆ ಈ ಸಿನಿಮಾದಲ್ಲಿ ನಟಿಸಿದ ಕಲಾವಿದರನ್ನೆಲ್ಲ ನೋಡಿದರೆ, ಇವರು ಕಲಾವಿದರು ಅಂತನೇ ಅನಿಸುವುದಿಲ್ಲ. ಮಾರ್ಕೆಟ್ಗಳಲ್ಲಿ, ಸ್ಲಮ್ಗಳಲ್ಲಿ ಫುಟ್ಪಾತ್ಗಳಲ್ಲಿ ಓಡಾಡುತ್ತಿರುವ ಹುಡುಗರು ಹಾಗೆ ಅನಿಸುತ್ತೆ ಎಂದಿದ್ದಾರೆ.
"ಅಯ್ಯಯ್ಯೋ ಎಂತಹ ಪ್ರಪಂಚ, ಎಂತಹ ಬೆಂಗಳೂರು, ಎಂತಹ ಕರಾಳತೆಗೆ ನಾವೆಲ್ಲ ಸಾಕ್ಷಿ ಆಗಿದ್ದೇವೆ. ಯಾವತ್ತಪ್ಪ ಇದೆಲ್ಲ ನಾಶ ಆಗುವುದು ಅಂತ ಅನಿಸುತ್ತೆ. ಅಂತಹ ಗಾಢವಾದ ವಿಷಾದವನ್ನು ಬಿತ್ತುವುದರಲ್ಲಿ ದುನಿಯಾ ವಿಜಯ್ ಯಶಸ್ವಿಯಾಗಿದ್ದಾರೆ. ಇಂತಹ ಸಿನಿಮಾಗಳನ್ನು ನೋಡಬೇಕು. ಕನ್ನಡ ಚಿತ್ರರಂಗವನ್ನು ನಾವೇ ಉಳಿಸಬೇಕು." ಎಂದು ಧರ್ಮೇಂದ್ರ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.


Click it and Unblock the Notifications











