'ಕೆಂಪಾಂಬುಧಿ' ಸಿನಿಮಾದಲ್ಲಿ ನೆನೆಪಿರಲಿ ಪ್ರೇಮ್; ಹೊಂಬಾಳೆಯ ವಿಜಯ್ ಕಿರಗಂದೂರು ಏನಂದ್ರು?
ಇಂದಿನ ಐಟಿ ರಾಜಧಾನಿ ಬೆಂಗಳೂರಿಗೆ ಭದ್ರ ಬುನಾದಿ ಹಾಕಿದ ನಾಡಪ್ರಭು ಕೆಂಪೇಗೌಡರು. ಅವರ ದೂರ ದೃಷ್ಟಿ, ಸಾಹಸಮಯ ಬದುಕು, ಜನಪರ ಆಡಳಿತ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ತೆರೆಯ ಮೇಲೆ ತರುವ ಪ್ರಯತ್ನವೊಂದು ನಡೆಯುತ್ತಿದೆ. ಹೌದು, ಕೆಂಪೇಗೌಡರ ದೂರದೃಷ್ಟಿಯ ಸಂಕೇತ ಬೆಂಗಳೂರಿನ ಐತಿಹಾಸಿಕ ಕೆರೆಯ 'ಕೆಂಪಾಂಬುಧಿ' ಹೆಸರನ್ನೇ ಇಟ್ಟು ಸಿನಿಮಾ ಮಾಡಲಾಗುತ್ತಿದೆ.
ಇತ್ತೀಚೆಗೆ 'ಕೆಂಪಾಂಬುಧಿ' ಸಿನಿಮಾದ ಟೀಸರ್ ಕೂಡ ಬಿಡುಗಡೆಯಾಗಿದ್ದು, ಇತಿಹಾಸ ಇಷ್ಟು ಪಡುವವರಲ್ಲಿ ಕುತೂಹಲವನ್ನು ಮೂಡಿಸಿದೆ. ಬೆಂಗಳೂರನ್ನು ಕೇವಲ ಒಂದು ನಗರ ಮಾಡುವುದಷ್ಟೇ ಅಲ್ಲದೆ, ಕೆರೆ-ಕಟ್ಟೆಗಳು, ಕೋಟೆಗಳು ಹಾಗೂ ಹಸಿರಿನಿಂದ ಸಮೃದ್ಧ ನಗರವಾಗಿ ನಿರ್ಮಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ಲೇಖಕ ಜಾಣಗೆರೆ ವೆಂಕಟರಾಮಯ್ಯ ಅವರ ಜನಪ್ರಿಯ ಐತಿಹಾಸಿಕ ಕಾದಂಬರಿಯನ್ನು ಆಧರಿಸಿ 'ಕೆಂಪಾಂಬುಧಿ' ಸಿನಿಮಾ ರೂಪುಗೊಂಡಿದೆ.

ಬೆಂಗಳೂರಿನ ಇತಿಹಾಸ, ಜನಪದ ದಂತಕಥೆಗಳು ಸೇರಿದಂತೆ ಸಾಂಸ್ಕೃತಿಕ ನೆನಪುಗಳನ್ನು ಸೇರಿಸಿ ವಿಶಿಷ್ಟ ಐತಿಹಾಸಿಕ ಕಥನವಾಗಿ 'ಕೆಂಪಾಂಬುಧಿ' ಮೂಡಿಬಂದಿದೆ. ಪ್ರಶಾಂತ್ ಪ್ರಕಾಶ್ ಫ್ಯಾಮಿಲಿ ಫೌಂಡೇಶನ್ ಈ ಸಿನಿಮಾ ನಿರ್ಮಾಣ ಮಾಡಿದ್ದು, ಹೊಂಬಾಳೆ ಮ್ಯೂಸಿಕ್ ಕೈ ಜೋಡಿಸಿದೆ. ಇದೇ ವೇಳೆ ವಿಜಯ್ ಕಿರಗಂದೂರು ಈ ಸಿನಿಮಾ ಬಗ್ಗೆ "ಇತಿಹಾಸವನ್ನು ಗೌರವಿಸುವ ಅದ್ಭುತ ಪ್ರಯತ್ನ" ಎಂದು ಹೇಳಿದ್ದಾರೆ.
ಇತಿಹಾಸ ಮತ್ತು ವರ್ತಮಾನದ ಕೊಂಡಿ
'ಕೆಂಪಾಂಬುಧಿ' ಸಿನಿಮಾ ಗತಕಾಲದ ಇತಿಹಾಸವನ್ನು ನೆನಪಿಸುವುದಷ್ಟೇ ಅಲ್ಲ, ಕೆಂಪೇಗೌಡರ ಅಂದಿನ ಬೆಂಗಳೂರು ಇಂದಿನ ಆಧುನಿಕ ಬೆಂಗಳೂರಿಗೂ ಇರುವ ವ್ಯತ್ಯಾಸವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತೆ. ಕಾಂಕ್ರೀಟ್ ಕಾಡಾಗಿ ಬೆಳೆದು ನಿಂತಿರುವ ಇಂದಿನ ನಗರದಲ್ಲಿ ನಾಶವಾಗುತ್ತಿರುವ ಪ್ರಕೃತಿಯನ್ನು ಕಂಡು ಮರುಗುವ ಇಂದಿನ ಪೀಳಿಗೆಗೆ ಕೆಂಪೇಗೌಡರು ನೀಡಿದ್ದ ಮಹತ್ವವನ್ನು ಈ ಸಿನಿಮಾ ನೆನಪಿಸಲಿದೆ. ಬೆಂಗಳೂರಿನ ಇತಿಹಾಸ ಹಾಗೂ ಹಸಿರಿನ ಮಹತ್ವವನ್ನು ಮುಂದಿನ ಪೀಳಿಗೆಗೆ ದಾಟಿಸುವುದಕ್ಕೆ ಪ್ರಶಾಂತ್ ಪ್ರಕಾಶ್ ಫ್ಯಾಮಿಲಿ ಫೌಂಡೇಶನ್ ಈ ಪ್ರಯತ್ನ ಮಾಡುತ್ತಿದೆ.
'ಕೆಂಪಾಂಬುಧಿ' ಟೀಮ್
ಈ ಐತಿಹಾಸಿಕ ಸಿನಿಮಾಗೆ ಜೀವ ತುಂಬಲು ಸ್ಯಾಂಡಲ್ವುಡ್ ತಾರೆಯರು ಕೈ ಜೋಡಿಸಿದ್ದಾರೆ. ನಟ ನೆನಪಿರಲಿ ಪ್ರೇಮ್, ಮೇಘನಾ ಗಾಂವ್ಕರ್, ರಾಜೇಶ್ ನಟರಂಗ, ಸುಧಾ ಬೆಳವಾಡಿ, ಸಂಯುಕ್ತಾ ಹೊರನಾಡು, ನಾಗಶ್ರೀ ಬೇಗಾರ್, ರಾಜೇಂದ್ರ ಕಾರಂತ್, ಬಿ.ಎ.ಎಲ್. ರವಿಕುಮಾರ್ ಮತ್ತು ನಟರಾಜ್ ರಾವ್ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸಿನಿಮಾದ ತಾಂತ್ರಿಕ ವರ್ಗ ಹೀಗಿದೆ
ಕಥೆ, ಚಿತ್ರಕಥೆ ಹಾಗೂ ನಿರ್ದೇಶನ: ರಮೇಶ್ ಬೇಗಾರ್
ಸಂಗೀತ ಮತ್ತು ಹಿನ್ನೆಲೆ ಸಂಗೀತ: ವೀರ್ ಸಮರ್ಥ್
ಛಾಯಾಗ್ರಹಣ: ಶಶೀರ್ ಶೃಂಗೇರಿ
ಸಂಕಲನ: ಅವಿನಾಶ್ ಶೃಂಗೇರಿ
ಕಲಾ ನಿರ್ದೇಶನ: ಅಭಿಷೇಕ್ ಹೆಬ್ಬಾರ್
ವಿಜಯ ಕಿರಗಂದೂರು ಏನಂತಾರೆ?
'ಕೆಂಪಾಂಬುಧಿ' ಸಿನಿಮಾದ ಟೀಸರ್ ಬಿಡುಗಡೆಗೆ ಬಳಿಕ ಹೊಂಬಾಳೆ ಫಿಲ್ಮ್ಸ್ ವಿಜಯ ಕಿರಗಂದೂರು ಸಿನಿಮಾದ ಮಹತ್ವದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. "ನಮ್ಮ ಸಮಾಜಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಮಹನೀಯರನ್ನು ಮತ್ತು ಅವರ ಆದರ್ಶಗಳನ್ನು ನೆನಪಿಸುವ ಕೆಂಪಾಂಬುಧಿಯಂತಹ ಕಥೆಗಳು ನಿಜಕ್ಕೂ ಮೌಲ್ಯಯುತವಾದವು. ನಾಡಪ್ರಭು ಕೆಂಪೇಗೌಡರ ಅಪ್ರತಿಮ ಕೊಡುಗೆ ಹಾಗೂ ಬೆಂಗಳೂರಿನ ಭವ್ಯ ಇತಿಹಾಸವನ್ನು ಗೌರವಿಸುವ ಇಂತಹದೊಂದು ಚಿತ್ರಕ್ಕೆ ಕೈಜೋಡಿಸಿದ ಪ್ರಶಾಂತ್ ಪ್ರಕಾಶ್ ಫ್ಯಾಮಿಲಿ ಫೌಂಡೇಶನ್ನ ಕಾಳಜಿ ಶ್ಲಾಘನೀಯ. ನಮ್ಮ ಹೆಮ್ಮೆಯ ನಗರದ ಇತಿಹಾಸವನ್ನು ಇಂದಿನ ತಲೆಮಾರಿಗೆ ಪರಿಚಯಿಸುತ್ತಾ, ಅದರ ಹಸಿರು ಭವಿಷ್ಯವನ್ನು ಕಾಪಾಡುವ ಜವಾಬ್ದಾರಿಯನ್ನು ಮುಂದಿನ ಪೀಳಿಗೆಯಲ್ಲಿ ಮೂಡಿಸುತ್ತಿರುವ ಈ ಪ್ರಯತ್ನ ಮನಸ್ಸಿಗೆ ತುಂಬ ಹತ್ತಿರವೆನಿಸುತ್ತದೆ." ಎಂದು ಹೇಳಿದ್ದಾರೆ.
'ಕೆಂಪಾಂಬುಧಿ' ಟೀಸರ್ ಈಗಾಗಲೇ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಕರ್ನಾಟಕದ ಇತಿಹಾಸ ಪುರುಷನ ಸಿನಿಮಾಗೆ ಪ್ರೇಕ್ಷಕರಿಂದ ಯಾವ ರೀತಿ ಪ್ರತಿಕ್ರಿಯೆ ಸಿಗುತ್ತೆ ಅನ್ನೋದು ನೋಡಬೇಕಿದೆ.


Click it and Unblock the Notifications