ಕರುನಾಡಿನ ಮನೆ ಮನೆಗೂ ಪತ್ರ ಬರೆಯಲು ಮುಂದಾದ ಚಿತ್ರತಂಡ:'ಹೊಂದಿಸಿ ಬರೆಯಿರಿ' ನೋಡಲು ಸಿನಿಮಾ ಆಮಂತ್ರಣ
ಹೊಸ ಸಿನಿಮಾ ರಿಲೀಸ್ ಆಗುತ್ತಿದೆ ಅಂದ್ರೆ, ಎರಡು ಮೂರು ತಿಂಗಳಿನಿಂದಲೇ ಪ್ರಚಾರ ಆರಂಭಿಸಿರುತ್ತಾರೆ. ಇನ್ನು ಕೆಲವು ತಂಡ ವಿನೂತನವಾಗಿ ಪ್ರಚಾರ ಮಾಡುತ್ತಾ, ಪ್ರೇಕ್ಷಕರನ್ನು ತನ್ನ ಸೆಳೆಯುತ್ತೆ. ಇಲ್ಲೊಂದು ತಂಡ ಕೂಡ ಇಂತಹದ್ದೇ ಒಂದು ವಿಭಿನ್ನ ಪ್ರಚಾರಕ್ಕೆ ಮುಂದಾಗಿದೆ.
'ಹೊಂದಿಸಿ ಬರೆಯಿರಿ' ಅನ್ನೋ ಕನ್ನಡ ಸಿನಿಮಾ ಬಿಡುಗಡೆ ಸಿದ್ಧವಾಗಿದೆ. ಇದೇ ಫೆಬ್ರವರಿ 10ರಂದು ಈ ಸಿನಿಮಾ ಬಿಡುಗಡೆಯಾಗುತ್ತಿದೆ. ರಾಮೇನಹಳ್ಳಿ ಜಗನ್ನಾಥ್ ನಿರ್ದೇಶಿಸಿದ ಈ ಸಿನಿಮಾ ಈಗಾಗಲೇ ಹಾಡುಗಳ ಮೂಲಕ ಪ್ರೇಕ್ಷಕರನ್ನು ಸೆಳೆದಿದೆ.

ಈಗ ಸಿನಿಮಾ ಬಿಡುಗಡೆ ಸನಿಹವಾಗುತ್ತಿದ್ದಂತೆ ವಿನೂತನವಾಗಿ ಪ್ರಚಾರ ಮಾಡಲು ನಿರ್ಧರಿಸಿದೆ. ವಿಭಿನ್ನ ಆಲೋಚನೆಯ ಮೂಲಕ ಪ್ರೇಕ್ಷಕರಿಗೆ ಸಿನಿಮಾವನ್ನು ತಲುಪಿಸುವ ಕೆಲಸದಲ್ಲಿ ಇಡೀ ಚಿತ್ರತಂಡ ನಿರತವಾಗಿದೆ. ಅದೇನಂದ್ರೆ, ಅಂಚೆ ಪತ್ರದ ಮೂಲಕ ಕರುನಾಡಿನ ಮನೆ ಮನೆಗಳಿಗೆ ಸಿನಿಮಾದ ಆಮಂತ್ರಣ ಪತ್ರವನ್ನು ತಲುಪಿಸಲಿದೆ.
'ಹೊಂದಿಸಿ ಬರೆಯಿರಿ' ಸಿನಿಮಾ ಮಾಡಿದ ಬಳಿಕ ಅದನ್ನು ಪ್ರೇಕ್ಷಕರಿಗೆ ತಲುಪಿಸಲೇ ಬೇಕಿದೆ. ಈ ಕಾರಣಕ್ಕೆ 'ಹೊಂದಿಸಿ ಬರೆಯಿರಿ' ಸಿನಿಮಾತಂಡ ಕ್ರಿಯೇಟಿವ್ ಆಗಿ ಸಿನಿಮಾವನ್ನು ಪ್ರಚಾರ ಮಾಡುವುದಕ್ಕೆ ಮುಂದಾಗಿದೆ. ಅಂಚೆ ಪತ್ರದಲ್ಲಿ ತಮ್ಮ ಸಿನಿಮಾ ಬಗ್ಗೆ ಬರೆದು ಅದನ್ನು ಕರುನಾಡಿನ ಮನೆ ಮನೆಗೆ ಕೊಡುವ ತಲುಪಿಸುವ ಮೂಲಕ ಸಿನಿಮಾಗೆ ಆಮಂತ್ರಣ ನೀಡುತ್ತಿದೆ. ಈಗಾಗಲೇ ಚಿತ್ರತಂಡ ಹದಿನೈದು ಸಾವಿರಕ್ಕೂ ಅಧಿಕ ಮನೆಗಳ ವಿಳಾಸಗಳನ್ನು ಸಂಗ್ರಹಿಸಿ, ಆ ಮನೆಗಳಿಗೆ ಪೋಸ್ಟ್ ಕಾರ್ಡ್ ಕಳಿಸಿಕೊಡಲಿದೆ. ಈ ಮೂಲಕ ತಮ್ಮ ಸಿನಿಮಾ ನೋಡಲು ಆಮಂತ್ರಣ ನೀಡುವ ಕೆಲಸ ಮಾಡುತ್ತಿದೆ.
ಈಗ ಪತ್ರ ಬರೆಯುವುದು ಬಹುತೇಕ ಕಡಿಮೆಯಾಗಿದೆ. ಒಂದೆರಡು ದಶಕಗಳ ಹಿಂದೆ ಇದೇ ಪತ್ರ ವ್ಯವಹಾರದ ಮೂಲಕ ಅದೆಷ್ಟೋ ಮಂದಿ ಸಂಪರ್ಕ ಮಾಡುತ್ತಿದ್ದರು. ಹೀಗಾಗಿ ಪತ್ರದ ಮೂಲಕವೇ ಚಿತ್ರತಂಡ ಬಗ್ಗೆ ಆತ್ಮೀಯತೆಯನ್ನು ಮೂಡಿಸಲು ಮುಂದಾಗಿದೆ. ಈಗಾಗಲೇ ಸಂಗ್ರಹಿಸಿರುವ ವಿಳಾಸವನ್ನಿಟ್ಟುಕೊಂಡು ಪ್ರಚಾರಕ್ಕೆ ಚಾಲನೆ ನೀಡಲಾಗಿದೆ. ಬೆಂಗಳೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಗೂ ಪತ್ರ ತಲುಪಲಿದೆ.

'ಹೊಂದಿಸಿ ಬರೆಯಿರಿ' ಸಿನಿಮಾದಲ್ಲಿ ಪ್ರವೀಣ್ ತೇಜ್, ಭಾವನಾ ರಾವ್, ಸಂಯುಕ್ತ ಹೊರನಾಡು, ಐಶಾನಿ ಶೆಟ್ಟಿ, ನವೀನ್ ಶಂಕರ್, ಶ್ರೀ ಮಹಾದೇವ್, ಅರ್ಚನಾ ಜೋಯಿಸ್, ಅನಿರುದ್ಧ್ ಆಚಾರ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೋ ಕೋಸ್ಟ ಸಂಗೀತ ನಿರ್ದೇಶನ ಮಾಡಿದ್ದಾರೆ. ಕೆ. ಕಲ್ಯಾಣ್, ಹೃದಯ ಶಿವ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಸಾಹಿತ್ಯ ರಚಿಸಿದ್ದಾರೆ. ಮಾಸ್ತಿ, ಪ್ರಶಾಂತ್ ರಾಜಪ್ಪ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಸಿನಿಮಾಗೆ ಸಂಭಾಷಣೆ ಬರೆದಿದ್ದಾರೆ.


Click it and Unblock the Notifications











