ಕೆ.ಶಿವರಾಂಗೆ 'ಬಾ ನಲ್ಲೆ ಮಧುಚಂದ್ರಕೆ' ಸಿನಿಮಾ ಸಿಕ್ಕಿದ್ದೇಗೆ? ರಾಹುಕಾಲದಲ್ಲೇ ಮುಹೂರ್ತ ಮಾಡಿದ್ದೇಕೆ?
ಕನ್ನಡ ಚಿತ್ರರಂಗದ ಎವರ್ಗ್ರೀನ್ ಸಿನಿಮಾಗಳಲ್ಲಿ 'ಬಾ ನಲ್ಲೆ ಮಧುಚಂದ್ರಕೆ' ಕೂಡ ಒಂದು. ಇದು ದಿವಂಗತ ಕೆ ಶಿವರಾಂ ನಟಿಸಿದ್ದ ಮೊದಲ ಸಿನಿಮಾ. ಐಎಎಸ್ ಅಧಿಕಾರಿಯೊಬ್ಬರು ಸಿನಿಮಾದಲ್ಲಿ ಹೀರೊ ಆಗುತ್ತಿರೋ ವಿಷಯ ಆ ದಿನಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಹಾಗೆ ಸಿನಿಮಾ ರಿಲೀಸ್ ಆದ್ಮೇಲೂ ಅಷ್ಟೇ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು.
ಐಎಎಸ್ ಅಧಿಕಾರಿಯಾಗಿದ್ದವರು ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದೇಕೆ ಅನ್ನೋದೇ ಒಂದು ಇಂಟ್ರೆಸ್ಟಿಂಗ್ ಕಥೆ. ಕೆ ಶಿವರಾಂಗೆ ಮೊದಲಿನಿಂದಲೂ ಎರಡು ಗುರಿ ಇಟ್ಟುಕೊಂಡಿದ್ದರು. ಒಂದು ಐಎಎಸ್ ಮಾಡಬೇಕು. ಇನ್ನೊಂದು ಸಿನಿಮಾದಲ್ಲಿ ನಟಿಸಬೇಕು ಅನ್ನೋ ಆಸೆಯಿತ್ತು. ಕೆ.ಶಿವರಾಂ ಈ ಎರಡೂ ಆಸೆ ಹಾಗೂ ಗುರಿಗಳನ್ನು ಈಡೇರಿಸಿಕೊಂಡಿದ್ದರು.

ಸಿನಿಮಾಗೆ ಎಂಟ್ರಿ ಕೊಡುವುದಕ್ಕೂ ಮುನ್ನ ಐಎಎಸ್ ಅಧಿಕಾರಿಯಾಗಿ ಜನಪ್ರಿಯತೆ ಪಡೆದಿದ್ದರು. ಕನ್ನಡದಲ್ಲಿ ಪರೀಕ್ಷೆ ಬರೆದು ಪಾಸಾದ ಮೊದಲ ಐಎಎಸ್ ಅಧಿಕಾರಿ ಅಂತಲೇ ಫೇಮಸ್ ಆಗಿದ್ದರು. ಜೊತೆ ಅಧಿಕಾರಿಯಾಗಿಯೂ ಜನಮೆಚ್ಚುಗೆ ಗಳಿಸಿದ್ದರು. ಆ ವೇಳೆಗೆ ಕೆ.ಶಿವರಾಂ ಸಿನಿಮಾ ಮಾಡಲು ನಿರ್ಧರಿಸಿದ್ದರು. ಅದಕ್ಕೆ ಕಾರಣ ತರಂಗದಲ್ಲಿ ಬಂದಿದ್ದ ಇದೇ 'ಬಾ ನಲ್ಲೆ ಮಧುಚಂದ್ರಕೆ' ಕಥೆ. ರಘುರಾಮ್ ಯೂಟ್ಯೂಬ್ ಚಾನೆಲ್ನಲ್ಲಿ ಸ್ವತ: ಕೆ ಶಿವರಾಂ ಎರಡು ವರ್ಷಗಳ ಹಿಂದೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದರು.
ಕೆ. ಶಿವರಾಂಗೆ ಸಿನಿಮಾ ಮೇಲೆ ಆಸಕ್ತಿಯಿತ್ತು. ಅವರ ಡಿವೈಎಸ್ಪಿ ಆಗಿದ್ದಾಗ, ನಾಗತಿಹಳ್ಳಿ ಚಂದ್ರಶೇಖರ್ ಬರೆದಿದ್ದ ಕಥೆ ತರಂಗದಲ್ಲಿ ಪ್ರಕಟವಾಗಿತ್ತು. ಅದು ಓದಿ ಕೆ. ಶಿವರಾಂ ರೋಮಾಂಚನಗೊಂಡಿದ್ದರು. ಅವರ ಸ್ನೇಹಿತರು ಕೂಡ ಮೆಚ್ಚುಗೆ ಸೂಚಿಸಿದ್ದರು.

"ನನಗೆ ಕಾಮಣ್ಣ ಅಂತ ಸ್ನೇಹಿತರಿದ್ದಾರೆ. ನಾನು ಮೊದಲ ಡಿವೈಎಸ್ಪಿ ಆಗಿದ್ದಾಗ ತರಂಗದಲ್ಲಿ ಬಾ ನಲ್ಲೆ ಮಧುಚಂದ್ರಕ್ಕೆ ಕಥೆ ಬಂತು. ಆಗ ಕಥೆ ನೋಡಿ ರೊಮಾಂಚನ ಆಗಿತ್ತು. ಅದ್ಭುತವಾದ ಕಥೆ ಅದು. ನಾನು ಸಿನಿಮಾ ಮಾಡಿದ್ರೆ ಇಂತಹದ್ದು ಮಾಡಬೇಕು ಅಂದುಕೊಂಡಿದ್ದೆ. ನಮ್ಮ ಬ್ಯಾಚ್ನಲ್ಲಿದ್ದ ಸಬ್ಇನ್ಸ್ಪೆಕ್ಟರ್ಗಳೆಲ್ಲ ಮಾಡಿದ್ರೆ ಇಂತಹ ಕಥೆ ಮಾಡಬೇಕು ಅನ್ನೋರು. ಅದರಲ್ಲಿ ಜಗದೀಶ್ ಅನ್ನೋ ನಮ್ಮ ಶಿಷ್ಯರೊಬ್ಬರು ಎಸ್ಪಿ ಆಗಿ ನಿವೃತ್ತಿಯಾದರು. ಅವರು ನೀವು ಸಿನಿಮಾ ಮಾಡಿದ್ರೆ, ಇದನ್ನು ಮಾಡಿ ಅನ್ನೋರು." ಎಂದು ಕಥೆಯ ಬಗ್ಗೆ ಹೇಳಿಕೊಂಡಿದ್ದಾರೆ.
ಕೆ.ಶಿವರಾಂ ಐಎಎಸ್ ಅಧಿಕಾರಿಯಾಗಿ ಕೆಲಸ ಆರಂಭಿಸಿದ್ದರು. ಬೆಂಗಳೂರಿನ ಕಾರ್ಪೋರೆಷನ್ನ ಡಿಸಿಯಾಗಿದ್ದಾಗ ಈ ಸಿನಿಮಾ ಮಾಡಬೇಕು ಅಂತ ನಿರ್ಧರಿಸಿದ್ದರು. "ಐಎಎಸ್ ಎಲ್ಲಾ ಮುಗಿಸಿಕೊಂಡು ಬಂದ್ಮೇಲೆ ಬೆಂಗಳೂರು ಕಾರ್ಪೋರೆಷನ್ ಡಿಸಿ ಆಗಿದ್ದೆ. ಆಗ ನಮ್ಮ ಕಾಮಣ್ಣ ಅನ್ನೋರು, ನೀನು ಪಿಕ್ಚರ್ ಮಾಡುತ್ತೀನಿ ಅಂತಿದ್ಯಲ್ಲ ಇದನ್ನು ಮಾಡು ಕಥೆ ಕೊಡಿಸುತ್ತೇನೆ ಅಂದರು. ನಾಗತಿಹಳ್ಳಿಗೆ ಹೇಳುತ್ತೇನೆ ಮಾಡು ಅಂದರು. ಅವರು ಬಂದು ಕಥೆ ಹೇಳಿದ್ರು. ಅದು ನನಗೆ ಇಷ್ಟ ಆಯ್ತು. ಅವರು ಕೂಡ ಬೇರೆಯವರ ಬಳಿ ಬೇಕಿದ್ರೆ ಸಿನಿಮಾ ಮಾಡಿಸಿಕೊಳ್ಳಿ ಕಥೆ ಕೊಡುತ್ತೇನೆ ಅಂದ್ರು. ನೀವೆ ಮಾಡಿ ಅಂದೆ. ಹಾಗೆ ಶುರುವಾಯ್ತು ." ಎಂದು ಬಾನಲ್ಲೆ ಮಧುಚಂದ್ರಕೆ ಸಿನಿಮಾ ಶುರುವಾದ ಬಗ್ಗೆ ಹೇಳಿದ್ದರು.
ಸಿನಿಮಾವೇನೋ ಶುರುವಾಗಿತ್ತು. ಆದರೆ, ರಾಹುಕಾಲದಲ್ಲೇ ಸಿನಿಮಾ ಮಾಡೋಣ ಅಂತ ಕೆ. ಶಿವರಾಂ ಪಟ್ಟು ಹಿಡಿದಿದ್ದರು. "ಕನಕಪುರದಲ್ಲಿ ಮೊದಲ ಶಾಟ್ ತೆಗೆದಿದ್ದು, ನಾನು ಅವರಿಗೆ ರಾಹುಕಾಲದಲ್ಲಿ ಮುಹೂರ್ತ ಮಾಡೋಣ ಅಂತ ಹೇಳಿದೆ. ಆಯ್ತು ಸರ್ ನಿಮ್ಮಿಷ್ಟ ಅಂದ್ರು. ನಾವು ಯಾರನ್ನು ಕರೆದಿರಲಿಲ್ಲ. ನನಗೆ ಇಬ್ಬರು ಮಕ್ಕಳು. ಒಬ್ಬರು ಇಂಚರ ಸ್ವೀಚ್ ಆನ್ ಮಾಡಿದ್ಲು. ಅಂಕುರ ಕ್ಲ್ಯಾಪ್ ಮಾಡಿದ್ಲು. ಸುಮ್ಮನೆ ಶುರು ಮಾಡಿದ್ವಿ." ಎಂದು ಹೇಳಿದ್ದಾರೆ.
'ಬಾ ನಲ್ಲೆ ಮಧುಚಂದ್ರಕೆ' ಸಿನಿಮಾ ಇಷ್ಟೊಂದು ಯಶಸ್ಸು ಕಾಣುತ್ತೆ ಯಾರೂ ಅಂದುಕೊಂಡಿರಲಿಲ್ಲ. ಆದರೆ, ಹಾಡುಗಳು ಹಿಟ್ ಆಗಿದ್ದವು. ಹಂಸಲೇಖ ನಾಲ್ಕು ಅದ್ಭುತ ಹಾಡುಗಳನ್ನು ಕಂಪೋಸ್ ಮಾಡಿಕೊಟ್ಟರು. "ಈ ಸಿನಿಮಾಗೆ ವಿ. ಸೋಮಣ್ಣ ಅವರೇ ಹಂಸಲೇಖ ಬಳಿ ಮಾತಾಡಿ ಮ್ಯೂಸಿಕ್ ಮಾಡಿಸಿಕೊಟ್ಟಿದ್ದರು. ಹಂಸಲೇಖ ಅವರು ನಾನು ಐಎಎಸ್ ಅಧಿಕಾರಿ ಅಂತ ಸ್ವಲ್ಪ ವಿಶೇಷವಾಗಿ ಮಾಡಿಕೊಟ್ಟರು." ಎಂದು ಆ ದಿನವನ್ನು ನೆನಪಿಸಿಕೊಂಡಿದ್ದರು.


Click it and Unblock the Notifications











