ದರ್ಶನ್ ಸ್ಥಿತಿ ಈಗ ಹೇಗಿದೆ?: ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್ ಆಗಲ್ಲ
Recommended Video

ರಸ್ತೆ ಅಪಘಾತದಿಂದ ನಟ ದರ್ಶನ್ ಆಸ್ಪತ್ರೆ ಸೇರಿದ್ದಾರೆ. ನಿನ್ನೆಯಿಂದ ಅವರಿಗೆ ಚಿಕಿತ್ಸೆ ನಡೆಯುತ್ತಿದೆ. ಸದ್ಯ ದರ್ಶನ್ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಅವರನ್ನು ಸ್ಪೆಷಲ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ.
ದರ್ಶನ್ ಆರೋಗ್ಯವಾಗಿ ವಾಪಸ್ ಬರಲಿ ಎಂದು ಎಲ್ಲರೂ ಪ್ರಾರ್ಥನೆ ಮಾಡುತ್ತಿದ್ದಾರೆ. ನಿರ್ದೇಶಕ ತರುಣ್ ಸುಧೀರ್, ನಟ ಸೃಜನ್ ಲೋಕೇಶ್, ನಿರ್ಮಾಪಕ ಸಂದೇಶ್ ನಾಗರಾಜ್, ನಟ ಪ್ರೇಮ್ ಸೇರಿದಂತೆ ಅನೇಕರು ಆಸ್ಪತ್ರೆಗೆ ಹೋಗಿ ದರ್ಶನ್ ಅವರೊಂದಿಗೆ ಮಾತನಾಡಿ ಬಂದಿದ್ದಾರೆ.
ಅಂದಹಾಗೆ, ಇಂದು ದರ್ಶನ್, ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಅವರಿಗೆ ಎರಡನೇ ದಿನ ಚಿಕಿತ್ಸೆ ಇಂದು ಶುರು ಆಗಿದೆ. ಅದರ ಮಾಹಿತಿಗಳು ಮುಂದಿವೆ ನೋಡಿ...

ದರ್ಶನ್ ಅರೋಗ್ಯ ಚೇತರಿಕೆ
ನಿನ್ನೆಗೆ ಹೋಲಿಸಿದರೆ ಇಂದು ದರ್ಶನ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ನಿನ್ನೆ ಐ ಸಿ ಯು ವಾರ್ಡ್ ನಲ್ಲಿ ಇದ್ದ ದರ್ಶನ್ ಇಂದು 123ನೇ ನಂಬರ್ ನ ಸ್ಪೆಷಲ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಸ್ತ್ರ ಚಿಕಿತ್ಸೆ ಮಾಡಿ ಅವರ ಕೈಗೆ ಪ್ಲೇಟ್ ಹಾಕಲಾಗಿದೆ. ಯಾವುದೇ ರೀತಿಯ ತೊಂದರೆ ಇಲ್ಲ ಎಂದು ಡಾಕ್ಟರ್ ಗಳು ತಿಳಿಸಿದ್ದಾರೆ.

ಇಂದು ಡಿಸ್ಚಾರ್ಜ್ ಆಗಲ್ಲ
ದರ್ಶನ್ ಇಂದೂ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಗಿದೆ. ಇಂದು ಸಂಜೆ ವೇಳೆಗೆ ಡಿಸ್ಚಾರ್ಜ್ ಆಗಬಹುದು ಎಂದು ನಿನ್ನೆ ಹೇಳಲಾಗಿತ್ತಾದರೂ ದರ್ಶನ್ ಗೆ ಇನ್ನು ಚಿಕಿತ್ಸೆ ಬಾಕಿ ಇದೆ. ಇನ್ನೂ ಎರಡು ದಿನಗಳ ಕಾಲ ದರ್ಶನ್ ಆಸ್ಪತ್ರೆಯಲ್ಲಿಯೇ ಇರಬೇಕಾಗಿದೆ.

ವಿಶ್ರಾಂತಿ ಅಗತ್ಯವಿದೆ
ದರ್ಶನ್ ಅವರಿಗೆ ಆಸ್ಪತ್ರೆಯಿಂದ ಬಂದ ಮೇಲೆಯೂ ಹೆಚ್ಚು ವಿಶ್ರಾಂತಿಯ ಅಗತ್ಯ ಇದೆಯಂತೆ. ಎರಡು ವಾರಗಳ ಕಾಲ ಅವರು ಸಿನಿಮಾ ಕೆಲಸಗಳಲ್ಲಿ ತೊಡಗುವಂತಿಲ್ಲ. ದರ್ಶನ್ ಕೈಗೆ ಹೊಡೆತ ಬಿದ್ದಿದ್ದು, ಯಾವುದೇ ಬಾರದ ವಸ್ತುವನ್ನು ಎತ್ತುವ ಹಾಗಿಲ್ಲ ಎಂದು ವೈದ್ಯರು ಸೂಚನೆ ನೀಡಿದ್ದಾರಂತೆ.

ದೇವರಾಜ್, ಪ್ರಜ್ವಲ್ ದೇವರಾಜ್ ಗುಣಮುಖ
ದರ್ಶನ್ ಜೊತೆಗೆ ಕಾರಿನಲ್ಲಿ ಪ್ರಯಾಣ ಮಾಡಿದ್ದ ನಟ ದೇವರಾಜ್ ಮತ್ತು ಅವರ ಪುತ್ರ ಪ್ರಜ್ವಲ್ ದೇವರಾಜ್ ಗೆ ಕೂಡ ಪಟ್ಟು ಬಿದ್ದಿತ್ತು. ಚಿಕಿತ್ಸೆಯ ಬಳಿಕ ಈಗ ಅವರು ಸಂಪೂರ್ಣ ಚೇತರಿಕೆ ಕಂಡಿದ್ದಾರೆ. ಇಂದು ಸಂಜೆ ವೇಳೆಗೆ ತಂದೆ ಮತ್ತು ಮಗ ಇಬ್ಬರು ಮನೆಗೆ ಮರಳಲಿದ್ದಾರೆ.

ಎಲ್ಲ ಸೇಫ್ ಆಗಿದ್ದಾರೆ ಎಂದ ಸೃಜನ್
ನಿನ್ನೆ ರಾತ್ರಿ ದರ್ಶನ್ ಆರೋಗ್ಯದ ಬಗ್ಗೆ ಮಾತನಾಡಿದ ನಟ ಸೃಜನ್ ''ಶಸ್ತ್ರ ಚಿಕಿತ್ಸೆ ಆಗಿದ್ದ ಕಾರಣ ಅವರಿಗೆ ವಿಶ್ರಾಂತಿ ಬೇಕಿದೆ. ದರ್ಶನ್, ದೇವರಾಜ್ ಸರ್ ಹಾಗೂ ಪ್ರಜ್ವಲ್ ಮೂರು ಜನರು ಚೆನ್ನಾಗಿ ಇದ್ದಾರೆ. ಅಭಿಮಾನಿಗಳು ಆತಂಕ ಪಡಬೇಡಿ ಎಲ್ಲ ಸೇಫ್ ಆಗಿದ್ದಾರೆ. ಅವರಿಗಾಗಿ ಪ್ರಾರ್ಥನೆ ಮಾಡಿ. ಇನ್ನೆರಡು ದಿನಗಳಲ್ಲಿ ದರ್ಶನ್ ಮನೆಗೆ ಬರುತ್ತಾರೆ.'' ಎಂದು ಹೇಳಿದ್ದರು.

ಅಭಿಮಾನಿಗಳಿಗೆ ದರ್ಶನ್ ಮನವಿ
ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ನಿನ್ನೆ ಮಾತನಾಡಿದ್ದ ದರ್ಶನ್ ''ನಿಮ್ಮ ದಯೆಯಿಂದ ನಾನು ಆರಾಮಾಗಿದ್ದೇನೆ. ನನಗೆ ಏನು ಆಗಿಲ್ಲ. ದಯವಿಟ್ಟು ಆಸ್ಪತ್ರೆಗೆ ಯಾರು ಬರಬೇಡಿ. ಇದು ನನ್ನ ಮನವಿ ಅಂತ ತಿಳಿದುಕೊಳ್ಳಿ. ಆಸ್ಪತ್ರೆಯಲ್ಲಿ ಇರುವ ಬೇರೆಯರಿಗೆ ನಮ್ಮಿಂದ ತೊಂದರೆ ಆಗಬಾರದು. ಇಂದು ಸಂಜೆ ಅಥವಾ ನಾಳೆ ನಿಮ್ಮ ಮುಂದೆ ನಾನೇ ಬರುತ್ತೇನೆ'' ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.


Click it and Unblock the Notifications











