ಕನ್ನಡದ 'ಆಹನ' ಹಾಡಿನ ಸದ್ದು; ಕೇವಲ 14 ಗಂಟೆಗಳಲ್ಲಿ ಬೃಹತ್ ಸೆಟ್ಗಳನ್ನು ನಿರ್ಮಿಸಿ ಚಿತ್ರೀಕರಿಸಿದ ಮ್ಯೂಸಿಕ್ ಅಲ್ಬಮ್
ಒಂದು ಕಾಲದಲ್ಲಿ ಮ್ಯೂಸಿಕ್ ಅಲ್ಬಮ್ಗಳು ಸಂಗೀತ ಪ್ರಿಯರನ್ನು ರಂಜಿಸುತ್ತಿದ್ದವು. ಗಾಯಕರು, ಸಂಗೀತ ನಿರ್ದೇಶಕರು ಸ್ವತಂತ್ರವಾಗಿ ಮ್ಯೂಸಿಕ್ ಅಲ್ಬಮ್ಗಳನ್ನು ಹೊರಗೆ ತರುತ್ತಿದ್ದರು. ಆ ಮೂಲಕ ಹಾಡುಗಳನ್ನು ಇಷ್ಟ ಪಡುವವರನ್ನು ರಂಜಿಸುತ್ತಿದ್ದರು. ಈ ಸಂಸ್ಕೃತಿ ಬಾಲಿವುಡ್ನಲ್ಲಿ ಹೆಚ್ಚಿತ್ತು. ನಂತರ ಅದು ಬೇರೆ ಬೇರೆ ಭಾಷೆಗಳಿಗೂ ವಿಸ್ತರಿಸಿತ್ತು. ಅದು ಕನ್ನಡಕ್ಕೂ ಕಾಲಿಟ್ಟಿತ್ತು.
ಕೆಲವೊಮ್ಮೆ ಮೆಲೋಡಿ ಹಾಡುಗಳ ಅಲ್ಬಮ್ ಬಂದರೆ, ಇನ್ನು ಕೆಲವೊಮ್ಮೆ ರಾಪ್ ಸಾಂಗ್ಗಳು ಬಂದವು. ಒಂದು ಕಾಲಘಟ್ಟದಲ್ಲಿ ಒಂದೊಂದು ರೀತಿಯ ಹಾಡುಗಳು ಬಂದವು. ಆದರೆ, ಕನ್ನಡದಲ್ಲಿ ಅದ್ಯಾವುದೂ ಹೆಚ್ಚು ದಿನ ನಿಲ್ಲಲಿಲ್ಲ. ಕನ್ನಡದಲ್ಲಿ ಮ್ಯೂಸಿಲ್ ಅಲ್ಬಮ್ಗಳ ಸಂಖ್ಯೆ ಇತ್ತೀಚೆಗೆ ಕಡಿಮೆಯಾಗಿದೆ. ಆದ್ರೀಗ ಮತ್ತೆ ಅಂತಹದ್ದೇ ಮ್ಯೂಸಿಕ್ ಅಲ್ಬಮ್ ಒಂದು ಸಂಗೀತ ಪ್ರಿಯರನ್ನು ಸೆಳೆಯುವುದಕ್ಕೆ ಮುಂದಾಗಿದೆ.

ಕನ್ನಡದ ಸ್ವತಂತ್ರ ಸಂಗೀತ ಕ್ಷೇತ್ರದಲ್ಲಿ ಹೊಸ ಅಲೆ ಮೂಡಿಸುವುದಕ್ಕೆ 'ಆಹನ' ಎಂಬ ವಿಭಿನ್ನ ಆಲ್ಬಂ ಸಾಂಗ್ ಅನ್ನು ಸಿದ್ಧಪಡಿಸಲಾಗಿದೆ. ಈ 'ಆಹನ' ಮ್ಯೂಸಿಕ್ ಅಲ್ಬಮ್ನಲ್ಲಿ ಭಾವನಾತ್ಮಕ ಕಥೆ ಹಾಗೂ ವಿನೂತನ ಸಂಗೀತದ ಸಮ್ಮಿಲನವಾಗಿ ಹೊರತರುತ್ತಿದೆ. ವೈಷ್ಣವಿ ಫಿಲಂಸ್ನ ವಿಜಯ್ ಲೋಹಿತ್ ನಿರ್ಮಾಣ ಹಾಗೂ ಸತೀಶ್ ಹೆಚ್ ಗೌಡ ಇಬ್ಬರೂ ಸೇರಿಕೊಂಡು ಈ 'ಆಹನ' ಎನ್ನುವ ಮ್ಯೂಸಿಕ್ ಅಲ್ಬಮ್ ಅನ್ನು ನಿರ್ಮಾಣ ಮಾಡಿದ್ದಾರೆ. ಈ ಆಲ್ಬಂಗೆ ರಜತ್ ಹೆಗಡೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ಈ ಮ್ಯೂಸಿಕ್ ಅಲ್ಬಮ್ನ ವಿಶೇಷತೆ ಎಂದರೆ, ಪ್ರತಿಭಾವಂತ ಕಲಾವಿದ ರಜತ್ ಹೆಗಡೆ ಅವರೇ ಈ ಹಾಡಿಗೆ ಸಂಗೀತ ನೀಡಿದ್ದಾರೆ. ಅಷ್ಟೇ ಅಲ್ಲದೆ ಅವರೇ ಗಾಯಕರಾಗಿ ಧ್ವನಿಯನ್ನೂ ನೀಡಿರೋದು ವಿಶೇಷ. ಇದರೊಂದಿಗೆ ಈ ವಿಡಿಯೋದಲ್ಲಿ ನಾಯಕ ನಟನಾಗಿಯೂ ಕಾಣಿಸಿಕೊಳ್ಳುವ ಮೂಲಕ ಈ ಭಾವನಾತ್ಮಕ ಪ್ರಯಾಣಕ್ಕೆ ಜೀವ ತುಂಬಿದ್ದಾರೆ. ಹೀಗಾಗಿ 'ಆಹನ' ಸಂಗೀತ ಪ್ರಿಯರನ್ನು ಸೆಳೆಯಬಹುದೆಂಬ ನಿರೀಕ್ಷೆ ದುಪ್ಪಟ್ಟಾಗಿದೆ.
'ಆಹನ' ಒಬ್ಬ ಕಲಾವಿದ ಹಾಗೂ ಸಂಗೀತದ ನಡುವಿನ ಸಂಬಂಧವನ್ನು ಹೇಳುವುದಕ್ಕೆ ಹೊರಟಿದೆ. "ಒಬ್ಬ ಕಲಾವಿದ ಸಂಗೀತವನ್ನು ತಲುಪಲು ಹಾತೊರೆಯುತ್ತಿರುವಾಗ, ಸಂಗೀತವೇ ಅವನನ್ನು ನಿರಾಕರಿಸಿದರೆ ಏನಾಗಬಹುದು?" ಎನ್ನುವ ಆಳವಾದ ಪ್ರಶ್ನೆಯೇ ಈ ಹಾಡಿನ ಜೀವಾಳ. ಈ ಕಥೆಯು ರಜತ್ ಹೆಗಡೆ ಅವರ ಸ್ವಂತ ಸೃಜನಾತ್ಮಕ ಅನುಭವಗಳಿಂದ ಮೂಡಿಬಂದಿರುವುದರಿಂದ, ಅವರ ಅಭಿನಯ ಮತ್ತು ಸಂಗೀತದಲ್ಲಿ ಒಂದು ವಿಶೇಷವಾದ ಆಪ್ತತೆ ಇದೆ. 'ಆಹನ' ಎಂದರೆ "ಸೂರ್ಯನ ಮೊದಲ ಕಿರಣ". ಇದು ಜಾಗೃತಿ, ಭರವಸೆ ಮತ್ತು ಹೊಸ ಆರಂಭವನ್ನು ಸೂಚಿಸುತ್ತದೆ.

ನಾರಾಯಣ ಶರ್ಮ ಅವರು ಈ ಹಾಡಿಗೆ ವಿಶಿಷ್ಟವಾದ 'ರೆಟ್ರೋ-ಮಾಡರ್ನ್' ಶಬ್ದ ನೀಡಿದ್ದಾರೆ. ಆಲ್ಬಂ ನ ವಿಶೇಷವೆಂದರೆ ಭಾರತೀಯ ಶಾಸ್ತ್ರೀಯ ಸಂಗೀತದ ತಂಬೂರಿಯನ್ನು ಆಧುನಿಕ ಸಿಂತ್ (Synth) ಮ್ಯೂಸಿಕ್ ಜೊತೆ ಸಮರ್ಥವಾಗಿ ಬೆರೆಸಲಾಗಿದೆ. ಕಂಠೀರವ ಸ್ಟುಡಿಯೋದಲ್ಲಿ ಕೇವಲ 14 ಗಂಟೆಗಳ ಅವಧಿಯಲ್ಲಿ ಬೃಹತ್ ಸೆಟ್ಗಳನ್ನು ನಿರ್ಮಿಸಿ ಈ ಹಾಡನ್ನು ಚಿತ್ರೀಕರಿಸಿರುವುದು ಮತ್ತೊಂದು ವಿಶೇಷ.
"ಪ್ರಸ್ತುತ ಕನ್ನಡದಲ್ಲಿ ಸ್ವತಂತ್ರ ಸಂಗೀತ ಆಲ್ಬಂಗಳು ಬರುತ್ತಿರುವುದು ಕಡಿಮೆ. ರಜತ್ ಹೆಗಡೆ ಅವರಂತಹ ಬಹುಮುಖ ಪ್ರತಿಭೆಗಳ ಮೂಲಕ ನಾವು ಹೊಸ ಆಲೋಚನೆಗಳನ್ನು ಪ್ರೇಕ್ಷಕರಿಗೆ ತಲುಪಿಸಲು ಬಯಸಿದ್ದೇವೆ. ಹೊಸಬರಿಗೆ ವೇದಿಕೆ ಕಲ್ಪಿಸುವುದೇ ನಮ್ಮ ಸಂಸ್ಥೆಯ ಮುಖ್ಯ ಉದ್ದೇಶ." ಎಂದು ನಿರ್ಮಾಪಕರ ಮಾತು ವೈಷ್ಣವಿ ಫಿಲಂಸ್ ನ ನಿರ್ಮಾಪಕ ವಿಜಯ್ ಲೋಹಿತ್ ತಿಳಿಸಿದ್ದಾರೆ.


Click it and Unblock the Notifications











