ನಾನೂ ಕನ್ನಡ ಇಂಡಸ್ಟ್ರಿಗೆ ಸೇರಿದವನು ಎಂಬುದೇ ಸಂತಸದ ವಿಷಯ ಎಂದ ಕಮಲ್ ಹಾಸನ್!
2022 ಮುಕ್ತಾಯದ ಸಮಯಕ್ಕೆ ತಲುಪುತ್ತಿದ್ದಂತೆ ಸಿನಿಮಾ ರಂಗದಲ್ಲಿ ಈ ವರ್ಷ ಅಬ್ಬರಿಸಿದ ಚಿತ್ರಗಳ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಸಾಮಾಜಿಕ ಜಾಲತಾಣದಲ್ಲಿ ಸಿನಿ ಪ್ರೇಮಿಗಳು ಈ ವರ್ಷದಲ್ಲಿ ಗೆದ್ದ ಹಾಗೂ ಬಿದ್ದ ಚಿತ್ರಗಳ ಬಗ್ಗೆ ಪೋಸ್ಟ್ ಮಾಡುತ್ತಾ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರೆ, ಸಿನಿ ಕಲಾವಿದರು, ನಿರ್ದೇಶಕರು ಹಾಗೂ ನಿರ್ಮಾಪಕರು ಸಂದರ್ಶನಗಳಲ್ಲಿ ಈ ವರ್ಷದ ಉತ್ತಮ ಚಿತ್ರಗಳ ಬಗ್ಗೆ ಮಾತನಾಡುತ್ತಾ ತಮ್ಮ ಅನಿಸಿಕೆಗಳನ್ನು ತಿಳಿಸುತ್ತಿದ್ದಾರೆ.
ಇನ್ನು ವಿವಿಧ ಮಾಧ್ಯಮಗಳು ಸ್ಟಾರ್ ನಟ ಹಾಗೂ ನಟಿಯರು, ಚಿತ್ರ ನಿರ್ಮಾಕರು ಮತ್ತು ನಿರ್ದೇಶಕರನ್ನು ಒಂದೇ ಸಂದರ್ಶನಕ್ಕೆ ಕರೆತಂದು ರೌಂಡ್ ಟೇಬಲ್ ಚರ್ಚೆಯನ್ನು ಏರ್ಪಡಿಸಲಾಗುತ್ತಿದ್ದು, ಇದು ಸಿನಿ ಪ್ರೇಮಿಗಳನ್ನು ಆಕರ್ಷಿಸಿದೆ. ಪ್ರಸಿದ್ಧ 'ಫಿಲ್ಮ್ ಕಂಪ್ಯಾನಿಯನ್' ಕೂಡ ಇದೇ ರೀತಿ ಪ್ರಖ್ಯಾತ ನಟ, ನಟಿ, ನಿರ್ಮಾಕರು ಹಾಗೂ ನಿರ್ದೇಶಕರನ್ನು ಒಂದೆಡೆ ಸೇರಿಸಿ ರೌಂಡ್ ಟೇಬಲ್ ಚರ್ಚೆಯನ್ನು ಏರ್ಪಡಿಸಿದೆ.
ನಟ ಪೃಥ್ವಿರಾಜ್ ಸುಕುಮಾರನ್, ಕಮಲ್ ಹಾಸನ್, ಸೀತಾ ರಾಮಮ್ ಚಿತ್ರದ ನಿರ್ಮಾಪಕಿ ಸ್ವಪ್ನ ದತ್ತ್, ನಿರ್ದೇಶಕರಾದ ಲೋಕೇಶ್ ಕನಕರಾಜ್, ಗೌತಮ್ ವಾಸುದೇವ್ ಮೆನನ್ ಹಾಗೂ ಎಸ್ ಎಸ್ ರಾಜಮೌಳಿ ಫಿಲ್ಮ್ ಕಂಪ್ಯಾನಿಯನ್ ರೌಂಡ್ ಟೇಬಲ್ ಚರ್ಚೆಯಲ್ಲಿ ಭಾಗವಹಿಸಿದ್ರು. ಈ ಚರ್ಚೆಯಲ್ಲಿ ಈ ವರ್ಷ ಚಿತ್ರರಂಗದಲ್ಲಿ ಆದ ಬದಲಾವಣೆಗಳು, ವಿವಿಧ ಚಿತ್ರರಂಗಗಳಲ್ಲಿ ಮೂಡಿ ಬಂದ ಸಿನಿಮಾಗಳ ಬಗ್ಗೆ ಇವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಇದೇ ವೇಳೆ ಈ ವರ್ಷ ಬಿಡುಗಡೆಗೊಂಡ ಚಿತ್ರಗಳ ಪೈಕಿ ತಮಗೆ ಇಷ್ಟವಾದ ಚಿತ್ರಗಳ ಬಗ್ಗೆ ಮಾತನಾಡಿದ ಕಮಲ್ ಹಾಸನ್ ತನ್ನ ಫೇವರಿಟ್ ಚಿತ್ರವನ್ನು ತಿಳಿಸಿದರು.

ಕಾಂತಾರ ಹೊಗಳಿ ನಾನೂ ಸಹ ಕನ್ನಡ ಚಿತ್ರರಂಗದವನು ಎಂದ ಕಮಲ್
ಹೀಗೆ ಈ ವರ್ಷ ಕಾಂತಾರ ಚಿತ್ರ ಬಹಳ ಇಷ್ಟವಾಯಿತು ಎಂದು ತಿಳಿಸದ ಕಮಲ್ ಹಾಸನ್ ತಾನು ಕನ್ನಡ ಚಿತ್ರರಂಗಕ್ಕೆ ಸೇರಿದ ಕಲಾವಿದ ಎಂಬುದನ್ನು ಹೇಳಿಕೊಳ್ಳುವುದಕ್ಕೆ ಸಂತಸವಾಗುತ್ತದೆ ಎಂದು ತಿಳಿಸಿದರು. ಈ ಹಿಂದೆ ವಂಶವೃಕ್ಷ, ಒಂದಾನೊಂದು ಕಾಲದಲ್ಲಿ ಹಾಗೂ ಕಾಡು ರೀತಿಯ ಅತ್ಯುತ್ತಮ ಕಂಟೆಂಟ್ ಉಳ್ಳ ಚಿತ್ರಗಳನ್ನು ನೀಡಿದ್ದ ಕನ್ನಡ ಚಿತ್ರರಂಗದ ಹಳೆಯ ದಿನಗಳು ಮರುಕಳಿಸುತ್ತಿವೆ ಎಂದೇ ಹೇಳಬಹುದು ಎಂದು ಕಮಲ್ ಹಾಸನ್ ತಿಳಿಸಿದರು.

ಕಾಂತಾರ ವೀಕ್ಷಿಸಿ ರಿಷಬ್ಗೆ ಕರೆ ಮಾಡಿದ್ರು ಕಮಲ್
ಇನ್ನು ಈ ಸಂದರ್ಶನದಲ್ಲಿ ಮಾತ್ರವಲ್ಲದೇ ಕಾಂತಾರ ಚಿತ್ರ ವೀಕ್ಷಿಸಿದ ಕೂಡಲೇ ರಿಷಬ್ ಶೆಟ್ಟಗೆ ಕರೆ ಮಾಡಿ ವಿಶೇಷವಾಗಿ ಶುಭಾಶಯವನ್ನು ಕೋರಿದ್ದರು ಕಮಲ್ ಹಾಸನ್. ಈ ವಿಷಯವನ್ನು ಸ್ವತಃ ರಿಷಬ್ ಶೆಟ್ಟಿ ನೆಟ್ಫ್ಲಿಕ್ಸ್ ನಡೆಸಿದ ಸಂದರ್ಶನದಲ್ಲಿ ತಿಳಿಸಿದ್ದರು. ಕಮಲ್ ಹಾಸನ್ ಸರ್ ಕರೆ ಮಾಡಿ ಕಾಂತಾರ ವೀಕ್ಷಿಸಿದ ನಂತರ ನನಗೆ ಗಿರೀಶ್ ಕಾರ್ನಾಡ್ ಅವರ ಕಾಡು ಚಿತ್ರ ನೆನಪಿಗೆ ಬಂತು, ಆಗಿನ ಚಿತ್ರಗಳ ರೀತಿ ಈಗ ಕಾಂತಾರ ಸ್ಪೂರ್ತಿದಾಯಕ ಚಿತ್ರವಾಗಿದೆ ಎಂದು ಹೇಳಿದ್ದರು ಎಂದು ರಿಷಬ್ ಶೆಟ್ಟಿ ತಿಳಿಸಿದ್ದರು.

ಕನ್ನಡ ಚಿತ್ರರಂಗದಲ್ಲೂ ಕೆಲಸ ಮಾಡಿದ್ರು ಕಮಲ್
ಇನ್ನು ಕಮಲ್ ಹಾಸನ್ ನಾನೂ ಸಹ ಕನ್ನಡ ಚಿತ್ರರಂಗಕ್ಕೆ ಸೇರಿದವನು ಎಂದು ಹೇಳಿಕೊಳ್ಳಲು ಕಾರಣ ಈ ಹಿಂದೆ ಅವರು ಕನ್ನಡದ ಚಿತ್ರಗಳಲ್ಲಿ ಅಭಿನಯಿಸಿದ್ದು. 1977ರಲ್ಲಿ ಬಿಡುಗಡೆಗೊಂಡಿದ್ದ ಬಾಲು ಮಹೇಂದ್ರ ನಿರ್ದೇಶನದ ಕೋಕಿಲ ಎಂಬ ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಕಮಲ್ ಹಾಸನ್ ನಂತರ ತಪ್ಪಿದ ತಾಳ ಎಂಬ ಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸಿದರು ಹಾಗೂ ಮರಿಯಾ ಮೈ ಡಾರ್ಲಿಂಗ್, ಬೆಂಕಿಯಲ್ಲಿ ಅರಳಿದ ಹೂವು, ಪುಷ್ಪಕ ವಿಮಾನ ಹಾಗೂ ರಾಮ ಶಾಮ ಭಾಮ ಚಿತ್ರಗಳಲ್ಲೂ ಸಹ ಕಮಲ್ ಹಾಸನ್ ನಟಿಸಿದ್ದರು.


Click it and Unblock the Notifications











