"ಡಿಕೆ ಶಿವಕುಮಾರ್ ಸರ್.. ನಿಮ್ಮನ್ನು ಜೀವನದಲ್ಲಿ ಮರೆಯೋದಿಲ್ಲ.. ಈ ಜೀವ ನಿಮಗೆ ಅರ್ಪಣೆ"- ರವಿಚಂದ್ರನ್
ಸ್ಯಾಂಡಲ್ವುಡ್ನ ಕ್ರೇಜಿಸ್ಟಾರ್ ರವಿಚಂದ್ರನ್ ನೇರ ನುಡಿಯ ಸರದಾರ. ತಮಗೆ ಅನಿಸಿದ್ದನ್ನು ಫಿಲ್ಟರ್ ಇಲ್ಲದೆ ನೇರವಾಗಿ ಹೇಳುತ್ತಾರೆ. ಸೂಪರ್ಸ್ಟಾರ್ಗಳು ಸಾಮಾನ್ಯವಾಗಿ ಸೋಲುಗಳನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ, ರವಿಚಂದ್ರನ್ ಮುಜುಗರ ಪಟ್ಟುಕೊಳ್ಳದೇ ಸೋಲನ್ನು ಒಪ್ಪಿಕೊಂಡವರು. ಹಾಗೇ ಗೆಲುವನ್ನು ಸಂಭ್ರಮಿಸಿದವರು.
ರವಿಚಂದ್ರನ್ ಯಾವುದೇ ವೇದಿಕೆ ಏರಿದರೂ, ಅಲ್ಲಿ ತಮ್ಮ ಗೆಲುವಿನ ಬಗ್ಗೆ ಮಾತಾಡುವುದಕ್ಕಿಂತ ಸೋಲಿನ ಬಗ್ಗೆ ಮಾತಾಡುವುದೇ ಹೆಚ್ಚು. ನಿನ್ನೆ (ಮೇ 6) ಕೂಡ 'ಮದ್ದೂರು ಉತ್ಸವ' ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ವೇದಿಕೆ ಮೇಲೆ ಸೋತಾಗ ಯಾವತ್ತೂ ಯಾರ ಬಳಿಯೂ ಕೈ ಚಾಚಿಲ್ಲ ಎಂದು ಹೇಳುತ್ತಾ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾಡಿದ ಸಹಾಯವನ್ನು ನೆನಪಿಸಿಕೊಂಡಿದ್ದಾರೆ.

ಮದ್ದೂರಿನ ಅದ್ದೂರಿ ಉತ್ಸವವನ್ನು ನೋಡಿ ಥ್ರಿಲ್ ಆಗಿದ್ದಾರೆ. ವೈಭವವನ್ನು ನೋಡಿ ಕಣ್ತಂಪು ಮಾಡಿಕೊಂಡಿದ್ದಾರೆ. "ಮದ್ದೂರು ಉತ್ಸವ ಹೇಗಿರುತ್ತೆ ಅನ್ನೋದು ಶುರುವಿನಲ್ಲೇ ಗೊತ್ತಾಗುತ್ತೆ. ದಾರಿಯುದ್ದಕ್ಕೂ ಬೆಳಗುತ್ತಿದೆ. ಹಾಗೇ ಪ್ರತಿಯೊಂದು ಮನೆಯೂ ಬೆಳಗಿದಾಗ ಸಂತೋಷ ಆಗುತ್ತೆ. ಜನರನ್ನು ನೋಡಿದರೆ ಖುಷಿ ಆಗುತ್ತೆ. ನಾನು ಮೊನ್ನೆ ಕೂಡ ಒಂದು ಕಾರ್ಯಕ್ರಮದಲ್ಲಿ ಹೇಳುತ್ತಿದ್ದೆ. ನನಗೆ ಫಾರಿನ್ ಸುತ್ತಬೇಕು ಅಂತ ಆಸೆ ಇರಲಿಲ್ಲ. ಪೂರ್ತಿ ಕರ್ನಾಟಕ ಸುತ್ತಬೇಕು ಅಂತ ಆಸೆಯಿತ್ತು. ಅದನ್ನು ಮಾಡುತ್ತಿದ್ದೇನೆ" ಎಂದಿದ್ದಾರೆ.
ಈ ಜೀವ ಯಾವತ್ತೂ ಕರ್ನಾಟಕಕ್ಕೋಸರ
ಇದೇ ವೇಳೆ ತಮ್ಮ ಈಶ್ವರಿ ಪ್ರೊಡಕ್ಷನ್ 60 ವರ್ಷಗಳನ್ನು ಪೂರೈಸಿದನ್ನು ನೆನಪಿಸಿಕೊಂಡಿದ್ದಾರೆ. ಈ ಜೀವ ಕರ್ನಾಟಕಕ್ಕೋಸ್ಕರ ಎಂದಿದ್ದಾರೆ. "ಈಶ್ವರಿ ಪ್ರೊಡಕ್ಷನ್ ಕನ್ನಡ ಚಿತ್ರರಂಗಕ್ಕೆ ಬಂದು 60 ವರ್ಷ ಆಯ್ತು. ಅಲ್ಲಿಂದ ನಮಗೂ ನಿಮಗೂ ಋಣವಿದೆ. ನಿಮ್ಮ ತಾತನಿಗೂ ಗೊತ್ತು ನಮ್ಮ ಅಪ್ಪ. ಅಲ್ಲಿಂದ ನೋಡಿಕೊಂಡು ಬಂದಿದ್ದೇವೆ. ಹಾಗಾಗಿ ಈ ಋಣವನ್ನು ಯಾವತ್ತೂ ಮರೆಯುವುದಿಲ್ಲ. ಈ ಜೀವ ಯಾವತ್ತೂ ಕರ್ನಾಟಕಕ್ಕೋಸರ, ಕನ್ನಡಿಗರಿಗೋಸ್ಕರ ಉಸಿರಾಡುತ್ತಲೇ ಇರುತ್ತೆ. ಸಿನಿಮಾ ಬಿಟ್ಟರೆ ಬೇರೆ ಗೊತ್ತಿಲ್ಲ ರವಿಚಂದ್ರನ್ಗೆ ಅದನ್ನು ಮಾಡುವುದಕ್ಕೆ ಬಂದಿದ್ದೇನೆ." ಎಂದು ಕ್ರೇಜಿಸ್ಟಾರ್ ಹೇಳಿದ್ದಾರೆ.
"ಈ ಜೀವ ನಿಮಗೆ ಅರ್ಪಣೆ ಸರ್"
ಈ ವೇದಿಕೆ ಮೇಲೆ ತಮ್ಮ 40 ವರ್ಷಗಳ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಹಾಗೇ ಕಷ್ಟಕಾಲದಲ್ಲಿ ಡಿಕೆ ಶಿವಕುಮಾರ್ ಮಾಡಿದ ಸಹಾಯವನ್ನು ನೆನಪಿಸಿಕೊಂಡಿದ್ದಾರೆ. "ಪ್ರತಿಯೊಬ್ಬರ ಜೀವನದಲ್ಲೂ ಕೆಟ್ಟ ಘಳಿಗೆ ಅನ್ನೋದು ಬರುತ್ತೆ. ಆ ಸಂದರ್ಭದಲ್ಲಿ ಯಾರು ಕೈ ಹಿಡಿಯುತ್ತಾರೆ ಅನ್ನೋದನ್ನು ನೋಡುತ್ತಿರುತ್ತೇವೆ. ಈ ರವಿಚಂದ್ರನ್ಗೆ ಕೈ ಚಾಚೋ ಅಭ್ಯಾಸನೇ ಇಲ್ಲ. ಆದರೆ, ನಾನು ಕೈ ಚಾಚುವುದಕ್ಕೂ ಮುಂಚೆ, ನನ್ನ ಕೈ ಹಿಡಿದವರು ಡಿಕೆ ಶಿವಕುಮಾರ್ ಅವರು. ಸರ್ ನಾನು ನಿಮ್ಮನ್ನು ಜೀವನದಲ್ಲಿ ಮರೆಯೋದಿಲ್ಲ. ಈ ಜೀವ ನಿಮಗೆ ಅರ್ಪಣೆ ಸರ್.." ಎಂದು ಕ್ರೇಜಿಸ್ಟಾರ್ ಹೇಳಿದ್ದಾರೆ.

"ಈ ಸ್ನೇಹವನ್ನು ಬಳಸಿಕೊಂಡಿಲ್ಲ"
"ಡಿಕೆ ಶಿವಕುಮಾರ್ ಕೇಳಿದ್ದು ಒಂದೇ ಪ್ರಶ್ನೆ. ನಾನು ಏನು ಮಾಡಬೇಕು ಹೇಳಪ್ಪ ಅಂದರು. ಸಾಕು ಸರ್, ನಮ್ಮ ಅಪ್ಪ ನೆನಪಾದರು. ಈ ಜನ ನೆನಪಾದರು. ನಾನು ಕೆಳಗೆ ಬಿದ್ದಾಗಲೂ ಹೆದರಿದವನಲ್ಲ. ರಾಮಚಾರಿಯಲ್ಲಿ ಪಂಚೆ ಹಾಕಿಕೊಂಡು ಬಂದಾಗ ಜನರು ನಿಲ್ಲಿಸಿದ್ದಾರೆ. ಆತರ ನನಗೆ ಮತ್ತೆ ಬೆನ್ನು ತಟ್ಟಿ ನಿಲ್ಲಿಸಿದ್ದಾರೆ ಅಂದರೆ, ಅದು ಡಿಕೆ ಶಿವಕುಮಾರ್. ಅವರನ್ನು ನೋಡಿದಾಗ ಖುಷಿ ಆಗುತ್ತೆ. ಯಾರೋ ಇದ್ದಾರೆ ನಮ್ಮ ಜೊತೆ ಒಬ್ಬರು ಅಂತ ಅನಿಸುತ್ತೆ. ಈ ಸ್ನೇಹವನ್ನು ನಾನು ಯಾವತ್ತು ಬಳಸಿಕೊಂಡಿಲ್ಲ. ಆದರೆ, ಮೊನ್ನೆ ಮೊನ್ನೆ ಅವರು ಮಾಡಿದ ಸಹಾಯವನ್ನು ನಾನು ಎಂದೂ ಮರೆಯುವುದಿಲ್ಲ" ಎಂದಿದ್ದಾರೆ.
ಮದ್ದೂರಿನಲ್ಲಿ ಶೂಟಿಂಗ್
ಈ ವೇಳೆ ಮದ್ದೂರಿನಲ್ಲಿ ಶೂಟಿಂಗ್ ಮಾಡಿದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. "ಮದ್ದೂರಿಗೆ ಬಂದು ರಾಮಾಚಾರಿ ಮಾಡಿದ್ದೆ, ಹಳ್ಳಿ ಮೇಷ್ಟ್ರು ಮಾಡಿದ್ದೆ. ತುಂಬಾ ವರ್ಷಗಳು ಆದ್ಮೇಲೆ ಮತ್ತೆ ಮದ್ದೂರಿಗೆ ಬಂದಿದ್ದೇನೆ ಎಂದು ಅನಿಸುತ್ತೆ. ಒಟ್ನಲ್ಲಿ ನಿಮ್ಮ ನಗುವನ್ನು ಹೊತ್ತುಕೊಂಡು ತುಂಬಾ ಖುಷಿಯಿಂದ ಹೋಗುತ್ತಿದ್ದೇನೆ." ಎಂದು ಮದ್ದೂರಿನ ಜನರಿಗೆ ಧನ್ಯವಾದಗಳನ್ನು ಹೇಳಿದ್ದಾರೆ.


Click it and Unblock the Notifications
