"ಎಷ್ಟೇ ಕಷ್ಟ ಪಟ್ರೂ ರಾತ್ರಿ ನೆಮ್ಮದಿಯಾಗಿ ನಿದ್ದೆ ಬರ್ತಿಲ್ಲ ಅಂದ್ರೆ, ನಾವು ಮಾಡಿದ್ದೆಲ್ಲ ವೇಸ್ಟ್"; ಯುವ ರಾಜ್ಕುಮಾರ್
ರಾಜವಂಶದ ಅಭಿಮಾನಿಗಳ ನಿರೀಕ್ಷೆ ಯುವ ರಾಜ್ಕುಮಾರ್. ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಗಲಿಕೆ ಬಳಿಕ ಅವರ ಅಭಿಮಾನಿಗಳಿಗೆ ಯುವ ಸ್ಟಾರ್ ಆಗಿ ಕಾಣುತ್ತಿದ್ದಾರೆ. ಮೊದಲ ಸಿನಿಮಾ 'ಯುವ'ದಲ್ಲಿ ಆ ಆಸೆಯನ್ನು ಪೂರೈಸಿದ್ದೇನೋ ಆಗಿತ್ತು. ಆದರೂ, ಅಭಿಮಾನಿಗಳಿಗೆ ಇನ್ನೂ ಸಾಲುತ್ತಿಲ್ಲ ಅಂತ ಅನಿಸಿದ್ದು ನಿಜ. ಅದಕ್ಕೆ ಯುವ ರಾಜ್ಕುಮಾರ್ ಪಕ್ಕಾ ಮಾಸ್ ಅಂಡ್ ಎಂಟರ್ಟೈನಿಂಗ್ ಲುಕ್ನಲ್ಲಿ ಅಖಾಡಕ್ಕೆ ಇಳಿದಿದ್ದಾರೆ.
ಅಣ್ಣಾವ್ರ ಮೊಮ್ಮಗನ ಸಿನಿಮಾ ಎಂಟ್ರಿ ಅಂದರೆ, ಮೊಮ್ಮಕ್ಕಳಿಗಷ್ಟೇ ಅಲ್ಲ. ಅವರ ಸಿನಿಮಾವನ್ನು ನಿರ್ದೇಶಿಸುವ ನಿರ್ದೇಶಕರಿಂದ ಹಿಡಿದು ಇಡೀ ತಂಡಕ್ಕೆ ಒಂದು ರೀತಿ ಟೆನ್ಷನ್ ಇರುತ್ತೆ. ಅದನ್ನೇ ಆ ಹಂತವನ್ನು ಮುಗಿಸಿ, ಎರಡನೇ ಸಿನಿಮಾದಲ್ಲೂ ನಟಿಸಿ ಮುಗಿಸಿದ್ದಾರೆ. 'ಎಕ್ಕ' ಇನ್ನೇನು ರಿಲೀಸ್ಗೆ ರೆಡಿಯಾಗಿದೆ. ಜುಲೈ 18ರಂದು ಅದ್ಧೂರಿಯಾಗಿ ಥಿಯೇಟರ್ಗೆ ಲಗ್ಗೆ ಇಡುತ್ತಿದೆ.

'ಎಕ್ಕ' ಸಿನಿಮಾದ ಪ್ರಮೋಷನ್ನಲ್ಲಿ ಯುವ ರಾಜ್ಕುಮಾರ್ ಬ್ಯುಸಿಯಾಗಿದ್ದಾರೆ. ರೇಡಿಯೋ ಸಿಟಿ ಕನ್ನಡ ಯೂಟ್ಯೂಬ್ ಚಾನೆಲ್ನಲ್ಲಿ ಆರ್ಜೆ ನೇತ್ರಾ ಅವರ ಸಂದರ್ಶನದಲ್ಲಿ ಯುವ ರಾಜ್ಕುಮಾರ್ ತಮ್ಮ ಸವಾಲಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಜೊತೆ ನೆಮ್ಮದಿ, ನಿದ್ದೆ ಬಗ್ಗೆನೂ ಮಾತಾಡಿದ್ದಾರೆ. ಯುವ ರಾಜ್ಕುಮಾರ್ ಅವರ ಆ ಫಿಲಾಸಫಿಕಲ್ ಮಾತುಗಳು ಹೀಗಿವೆ.
ಕುಟುಂಬ ಜೊತೆಗಿದ್ದರೆ..
ಜೀವನದಲ್ಲಿ ಏನೇ ಸವಾಲು ಬಂದರೂ ಕುಟುಂಬ ಜೊತೆಯಲ್ಲಿ ಇರಬೇಕು. ಅವರಿದ್ದರೆ ಎಂತಹದ್ದೇ ಸವಾಲುಗಳನ್ನು ಬೇಕಿದ್ದರೂ ಎದುರಿಸಬಹುದೆಂದು ಅಭಿಪ್ರಾಯ ಪಟ್ಟಿದ್ದಾರೆ. "ಕುಟುಂಬ ಅಂದರೆ ಒಂದು ಶಕ್ತಿ. ನಿಮ್ಮ ಫ್ಯಾಮಿಲಿಯಿಂದ ನಿಮಗೆ ಸಿಗುವ ಸಪೋರ್ಟ್ ಯಾರಿಂದಲೂ ಸಿಗುವುದಕ್ಕೆ ಸಾಧ್ಯವಿಲ್ಲ. ನಾನು ಫ್ಯಾಮಿಲಿ ಅಂದರೆ, ಸ್ನೇಹಿತರು ಕೂಡ ಹೌದು. ಯಾಕಂದ್ರೆ, ತುಂಬಾ ಹತ್ತಿರದವರೇ ಆದರೂ ಫ್ಯಾಮಿಲಿನೇ ಆಗುತ್ತಾರೆ. ಅವರಿಂದ ಸಿಗುವ ಬೆಂಬಲ ಜೀವನದಲ್ಲಿ ಏನೇ ಸವಾಲುಗಳು ಬಂದರೂ ನಿಮ್ಮ ಕುಟುಂಬ ಜೊತೆಯಲ್ಲಿ ಇದ್ದರೆ ಎಲ್ಲದನ್ನೂ ನಡೆಸಬಹುದು. ಫ್ಯಾಮಿಲಿ ಜೊತೆಯಲ್ಲಿ ಇದ್ದರೆ ಏನು ಬೇಕಾದರೂ ಸಾಧಿಸಬಹುದು. ಅದು ನನಗೆ ಅನುಭವಕ್ಕೆ ಬಂದಿದೆ." ಎಂದು ಯುವ ರಾಜ್ಕುಮಾರ್ ಹೇಳಿದ್ದಾರೆ.

ರಾಘವೇಂದ್ರ ರಾಜ್ಕುಮಾರ್ ಹುಷಾರು ತಪ್ಪಿದ ಸಂದರ್ಭ ಯುವ ತನ್ನ ಜೀವನದಲ್ಲಿ ಎದುರಿಸಿದ ಮೊದಲ ಸವಾಲು. ಆಗ ಅವರು ಇನ್ನೂ ಕಾಲೇಜಿನಲ್ಲಿ ಓದುತ್ತಿದ್ದರು. ಅಲ್ಲಿವರೆಗೂ ರಾಘಣ್ಣ ಅವರೇ ಎಲ್ಲವೂ ನೋಡಿಕೊಳ್ಳುತ್ತಿದ್ದರು. ಮನೆ, ಪ್ರೊಡಕ್ಷನ್ ಎಲ್ಲವನ್ನೂ ಅವರೇ ನೋಡಿಕೊಳ್ಳುತ್ತಿದ್ದರು. ಆಗ ಯುವ ಇನ್ನೂ ಓದುತ್ತಿದ್ದರು. ವಿಜಯ್ ರಾಜ್ಕುಮಾರ್ ಆಗತಾನೇ ಮೊದಲ ಸಿನಿಮಾ ಶುರುವಾಗಿತ್ತು. "ನನ್ನ ಜೀವನದಲ್ಲಿ ಅದು ನನ್ನ ಮೊದಲ ಚಾಲೆಂಜ್. ನಮ್ಮ ತಂದೆ ಹುಷಾರು ತಪ್ಪಿದರೂ, ಅವರು ಅವರ ಕೆಲಸ ಮಾಡುವುದನ್ನು ನಿಲ್ಲಿಸಲಿಲ್ಲ. ಅವರು ವರ್ಕ್ಔಟ್ ಮಾಡುವುದನ್ನು ನಿಲ್ಲಿಸಲಿಲ್ಲ. ಡಯೆಟ್ ಮಾಡುವುದನ್ನು ನಿಲ್ಲಿಸಲಿಲ್ಲ. ಅವರು ಫಿಸಿಯೋಥೆರಪಿ ನಿಲ್ಲಿಸಲಿಲ್ಲ. ಅವರೇ ನನಗೆ ಸ್ಪೂರ್ತಿ." ಎನ್ನುತ್ತಾರೆ.
ಇನ್ನು ಅವರ ಜೀವನದಲ್ಲಿ ನಡೆದ ಅತೀ ಹೆಚ್ಚು ಘಳಿಗೆ ಅಂದರೆ ಪುನೀತ್ ರಾಜ್ಕುಮಾರ್ ಅಗಲಿಕೆ ಎನ್ನುತ್ತಾರೆ. "ನನ್ನ ಜೀವನದ ಇನ್ನೊಂದು ಕೆಟ್ಟ ಸಂಗತಿ ಅಂದರೆ ನಮ್ಮ ಚಿಕ್ಕಪ್ಪನ (ಪುನೀತ್ ರಾಜ್ಕುಮಾರ್) ಘಟನೆ. ಅದಾದ ನಂತರ ಜೀವನದಲ್ಲಿ ಇನ್ನು ಏನೇ ಆದರೂ ಅದು ಕಷ್ಟ ಅಂತ ಅನಿಸಲೇ ಇಲ್ಲ. ಇವಾಗಲೂ ನೆನಪಿಸಿಕೊಂಡರೆ ಕೆಲವು ಸಲ ಮಾತು ಬರುವುದಿಲ್ಲ. ಎಲ್ಲದಕ್ಕೂ ದೊಡ್ಡ ಶಕ್ತಿ ಅಂದರೆ ಕುಟುಂಬ." ಎಂದು ಅಪ್ಪು ನೆನಪಿಸಿಕೊಂಡಿದ್ದಾರೆ.
ಇದೇ ಸಂದರ್ಶನದಲ್ಲಿ ಯುವ ರಾಜ್ಕುಮಾರ್ ನೆಮ್ಮದಿಯ ನಿದ್ದೆ ಬಗ್ಗೆನೂ ಮಾತಾಡಿದ್ದಾರೆ. "ನಾನು ಕಥೆ ಬಗ್ಗೆ ಆಗಲೇ ಸುಮಾರು ಹೇಳಿದೆ. ಈ ಮುತ್ತು ಪಾತ್ರಕ್ಕೆ ಇರೋದು ಒಂದೇ ಒಂದು ಆಸೆ. ಇಡೀ ಸಿನಿಮಾದಲ್ಲಿ ಅವನು ಹುಡುಕುತ್ತಿರೋದು ಒಂದೇ ಒಂದು ವಿಷಯ. ರಾತ್ರಿ ಮಲಗಿಕೊಂಡಾಗ ನೆಮ್ಮದಿಯಾಗಿ ನಿದ್ದೆ ಬರಬೇಕು ಅಷ್ಟೇ. ನಾವು ಏನೇ ಸಾಧಿಸಿದರೂ, ಏನೇ ಕಷ್ಟ ಪಟ್ಟರೂ ರಾತ್ರಿ ನೆಮ್ಮದಿಯಾಗಿ ನಿದ್ದೆ ಬರುತ್ತಿಲ್ಲ ಅಂದರೆ, ನಾವು ಮಾಡುತ್ತಿರುವುದೇ ವೇಸ್ಟ್. ಎಷ್ಟೇ ದುಡ್ಡು ಇರಬಹುದು. ಎಷ್ಟೇ ದೊಡ್ಡ ಹಿಟ್ ಆಗಿರಬಹುದು. ನೆಮ್ಮದಿಯಾಗಿ ನಿದ್ದೆ ಬರಲಿಲ್ಲ ಅಂದರೆ ಏನು? ನನ್ನನ್ನು ಕೇಳಿದರೆ, ಲೈಫ್ನಲ್ಲಿ ಕಷ್ಟ ಅನ್ನೋದು ಈಗಲೂ ಇದೆ. ಮುಂದೇನೂ ಇರುತ್ತೆ. ಹಿಂದೆನೂ ಇತ್ತು. ಇವತ್ತು ನೆಮ್ಮದಿಯಾಗಿ ಇದ್ದೀಯಾ ಅಂತ ಕೇಳಿದರೆ, ಖಂಡಿತವಾಗಿ ನೆಮ್ಮದಿಯಾಗಿ ನಿದ್ದೆ ಮಾಡುತ್ತಿದ್ದೇನೆ." ಎಂದು ಯುವ ರಾಜ್ಕುಮಾರ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.


Click it and Unblock the Notifications











