ರಮ್ಯಾಗೆ ದರ್ಶನ್ ಫ್ಯಾನ್ಸ್ ಅಶ್ಲೀಲ ಮೆಸೇಜ್;"ಧೈರ್ಯ ಇದ್ದರೆ ಅದನ್ನು ಮುಂದೆ ಬಂದು ಮಾಡಬೇಕು" ಪ್ರಜ್ವಲ್ ದೇವರಾಜ್
ಕರ್ನಾಟಕದಾದ್ಯಂತ ಕನ್ನಡ ಸಿನಿಮಾ 'ಸು ಫ್ರಮ್ ಸೋ' ಸಿಕ್ಕಾಪಟ್ಟೆ ಸದ್ದು ಮಾಡುತ್ತಿರೋದು ಗೊತ್ತೇ ಇದೆ. ಎರಡೂವರೆ ಮೂರು ವರ್ಷಗಳಾದ್ಮೇಲೆ ಮತ್ತೆ ಥಿಯೇಟರ್ಗಳು ತುಂಬುತ್ತಿವೆ. ಪ್ರೇಕ್ಷಕರು ಖುಷಿಯಿಂದ ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿದ್ದಾರೆ. ಎರಡನೇ ವಾರವಾದರೂ ಥಿಯೇಟರ್ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಹಾಗೇ ಕನ್ನಡ ಚಿತ್ರರಂಗದ ಸ್ಟಾರ್ಗಳು ಕೂಡ ಸಿನಿಮಾ ನೋಡಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಕೂಡ 'ಸು ಫ್ರಮ್ ಸೋ' ಸಿನಿಮಾವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವೇಳೆ ದರ್ಶನ್ ಅಭಿಮಾನಿಗಳು ರಮ್ಯಾಗೆ ಅಶ್ಲೀಲ ಸಂದೇಶವನ್ನು ಕಳಿಸಿದ್ದರ ಬಗ್ಗೆನೂ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ದರ್ಶನ್ ಜಾಮೀನು ಅರ್ಜಿ ವಿಚಾರವಾಗಿ ಸುಪ್ರೀಂ ಕೋರ್ಟ್ ಹೇಳಿಕೆಯನ್ನು ಉಲ್ಲೇಖಿಸಿ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಇದರಿಂದ ರೊಚ್ಚಿಗೆದ್ದಿದ್ದ ದರ್ಶನ್ ಫ್ಯಾನ್ಸ್ ಅಶ್ಲೀಲ ಸಂದೇಶವನ್ನು ಕಳುಹಿಸಿದ್ದರು. ಇದರಿಂದ ರೊಚ್ಚಿಗೆದ್ದಿದ್ದ ರಮ್ಯಾ ದೂರನ್ನು ದಾಖಲಿಸಿದ್ದರು.

ಸದ್ಯ ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ದರ್ಶನ್ ಅಭಿಮಾನಿಗಳ ಪೈಕಿ 4 ಮಂದಿಯನ್ನು ಬಂಧಿಸಲಾಗಿದೆ. ರಮ್ಯಾ ನೀಡಿದ ದೂರಿನಲ್ಲಿ ಒಟ್ಟು 43 ಮಂದಿಯ ಹೆಸರು ಇತ್ತು. ಇದೇ ವಿಚಾರವಾಗಿ ಪ್ರಜ್ವಲ್ ದೇವರಾಜ್ ಬಳಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, "ಧೈರ್ಯ ಇದ್ದರೆ ಕಮೆಂಟ್ ಅನ್ನು ಮುಂದೆ ಬಂದು ಮಾಡಬೇಕು" ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಜ್ವಲ್ ದೇವರಾಜ್ ಸಾಮಾನ್ಯವಾಗಿ ವಿವಾದಗಳಿಂದ ದೂರವಿರುತ್ತಾರೆ. ಯಾವುದೇ ವಿವಾದಗಳಿಗೆ ಪ್ರತಿಕ್ರಿಯೆ ನೀಡುವುದಕ್ಕೆ ಹೋಗುವುದಿಲ್ಲ. ಆದರೆ, ದರ್ಶನ್ ಅಭಿಮಾನಿಗಳು ರಮ್ಯಾಗೆ ಸೋಶಿಯಲ್ ಮೀಡಿಯಾದಲ್ಲಿ ಕಳುಹಿಸಿದ ಅಶ್ಲೀಲ ಸಂದೇಶದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
"ನಾನು ಯಾವುದೇ ವಿಷಯದ ಬಗ್ಗೆನೂ ಕಮೆಂಟ್ ಮಾಡುವುದಿಲ್ಲ. ಆದರೆ, ಯಾರದ್ದೇ ಫ್ಯಾನ್ಸ್ ಆದರೂ ಒಂದು ಜವಾಬ್ದಾರಿಬೇಕು. ಹೆಣ್ಣು ಮಕ್ಕಳಿಗೆ ಕಿರುಕುಳ ಕೊಡಬಾರದು ಅನ್ನೋದೇ 'ಸು ಫ್ರಮ್ ಸೋ'ನಲ್ಲಿರುವ ಕಂಟೆಂಟ್. ಈಗೇನಾಗಿದೆ, ಎಲ್ಲರ ಕೈಯಲ್ಲೂ ಫೋನ್ ಇರುತ್ತೆ. ಚಿಕ್ಕ ಮಕ್ಕಳ ಕೈಯಲ್ಲಿ ಐಪ್ಯಾಡ್ ಇರುತ್ತೆ. ಅವರಿಗೆ ನಾವು ಏನು ಬೇಕಾದರೂ ಹಾಕಬಹುದು. ಏನೇ ಹಾಕಿದರೂ ಗೊತ್ತಾಗುವುದಿಲ್ಲ ಎನ್ನುವ ಧೈರ್ಯವಿದೆ. ಮುಂದೆ ಬಂದು ಏನೂ ಹೇಳುವುದಕ್ಕೆ ಆಗುವುದಿಲ್ಲ. ಹಿಂದೆಯಿಂದ ಯಾರು ಯಾರ ಹೆಸರನ್ನು ಬೇಕಾದರೂ ಹಾಕೊಂಡು ಕಮೆಂಟ್ ಮಾಡಬಹುದು. ಧೈರ್ಯ ಇದ್ದರೆ ಅದನ್ನು ಮುಂದೆ ಬಂದು ಮಾಡಬೇಕು. ಯಾರದ್ದೇ ಫ್ಯಾನ್ಸ್ ಆಗಲಿ ಹೀಗೆ ನೆಗೆಟಿವ್ ಕಮೆಂಟ್ಗಳನ್ನು ಮಾಡಬಾರದು." ಎಂದು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹೇಳಿದ್ದಾರೆ.

ಇನ್ನು ಅಶ್ಲೀಲ ಸಂದೇಶ ಕಳಿಸುವ ಕಿಡಿಗೇಡಿಗಳ ಬಗ್ಗೆ ಪ್ರಜ್ವಲ್ ದೇವರಾಜ್ ಕೂಡ ದೂರನ್ನು ದಾಖಲಿಸಲು ಮುಂದಾಗಿದ್ದಾರೆ. ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಅವರ ತಂಗಿ ಕನ್ನಿಕಾ ಅವರಿಗೆ ಕಿಡಿಗೇಡಿಯೊಬ್ಬ 280ಕ್ಕೂ ಅಧಿಕ ಫೋನ್ಕಾಲ್ಗಳನ್ನು ಮಾಡುತ್ತಿದ್ದು, ಅಶ್ಲೀಲ ಸಂದೇಶವನ್ನು ಕಳುಸುತ್ತಿದ್ದಾನೆ. ಈ ಕಾರಣಕ್ಕೆ ಆತನ ವಿರುದ್ಧ ದೂರನ್ನು ದಾಖಲಿಸುವುದಾಗಿ ಪ್ರಜ್ವಲ್ ದೇವರಾಜ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
"ರಾಗಿಣಿಯವರ ತಂಗಿ ಕನ್ನಿಕಾ ಅವರ ಸ್ಟುಡಿಯೋದು ಒಂದು ನಂಬರ್ ಇದೆ. ಅದಕ್ಕೆ ಯಾರೋ ಒಬ್ಬ 280 ಫೋನ್ ಕಾಲ್ಸ್ ಮಾಡಿದ್ದ. ರಿಸೆಂಟ್ ಆಗಿ ಅಶ್ಲೀಲವಾದ ಫೋಟೊವನ್ನು ಕಳಿಸಿದ್ದಾನೆ. ನಾವು ಏನೇ ಮಾಡಿದರೂ ಕಾನೂನು ವ್ಯವಸ್ಥೆ ಅನ್ನೋದು ಇದೆ. ಅದನ್ನು ಲೀಗಲ್ ಆಗಿ ಹೋಗಬೇಕು. ನಾನು ಇನ್ನೇನು ಹೋಗಿ ದೂರನ್ನು ಕೊಡಬೇಕು. ಏನೇ ಮಾಡಿದರೂ ಕಾನೂನು ಎನ್ನುವುದೊಂದು ದಾರಿಯಿದೆ. ಅದಕ್ಕೆ ಯಾರದ್ದೇ ಫ್ಯಾನ್ಸ್ ಆಗಿದ್ದರೂ ಜವಾಬ್ದಾರಿಯುತವಾಗಿರಿ." ಎಂದಿದ್ದಾರೆ.


Click it and Unblock the Notifications











