ಪವಿತ್ರಾ ಗೌಡ ಯಾವ ಆಧಾರದ ಮೇಲೆ ಜಾಮೀನು ಅರ್ಜಿ ಸಲ್ಲಿಸಿದ್ದು? ವಿಚಾರಣೆ ಮುಂದೂಡಿಕೆಗೇನು ಕಾರಣ?
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಗೆಳತಿ ಪವಿತ್ರಾ ಗೌಡ ಜೈಲು ಸೇರಿ ಎರಡು ತಿಂಗಳು ಆಗಿದೆ. ಜೈಲು ವಾಸ ಪವಿತ್ರಾ ಗೌಡಗೆ ಕಷ್ಟ ಆಗುತ್ತಿದ್ದು, ಜಾಮೀನು ಪಡೆಯುವುದಕ್ಕೆ ಮುಂದಾಗಿದ್ದಾರೆ. ಪವಿತ್ರಾ ಗೌಡ ಪರ ವಕೀಲರು ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು. ಆದರೆ, ಸಿಸಿಎಚ್ 57ನೇ ಕೋರ್ಟ್ ಈ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿದೆ.
ರೇಣುಕಾಸ್ವಾಮಿ ಹತ್ಯೆ ಗಂಭೀರ ಪ್ರಕರಣ ಆಗಿದ್ದರಿಂದ ಎರಡನೇ ಬಾರಿಗೆ ಪವಿತ್ರಾ ಗೌಡ ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದೆ. ನ್ಯಾಯಾಧೀಶ ಜೈಶಂಕರ್ ಅವರು ಪವಿತ್ರಾ ಗೌಡ ಜಾಮೀನು ಅರ್ಜಿಯನ್ನು ಆಗಸ್ಟ್ 27ರವರೆಗೂ ಮುಂದೂಡಿ ಆದೇಶ ನೀಡಿದ್ದಾರೆ. ಇತ್ತ ಪೊಲೀಸರ ಪರ ಎಸ್ಪಿಪಿ ಪವಿತ್ರಾ ಗೌಡಗೆ ಜಾಮೀನು ನೀಡದಂತೆ ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ಕಾರಣಕ್ಕಾಗಿ ಪವಿತ್ರಾ ಗೌಡಗೆ ಆಗಸ್ಟ್ 27ರವರೆಗೂ ಜೈಲಿನಲ್ಲಿಯೇ ಕಾಲ ಕಳೆಯಬೇಕು. ಒಂದು ವೇಳೆ ಮುಂದಿನ ವಿಚಾರಣೆ ವೇಳೆನೂ ನ್ಯಾಯಾಧೀಶರು ಜಾಮೀನು ಅರ್ಜಿಯನ್ನು ನಿರಾಕರಿಸಿದರೆ, ಇನ್ನಷ್ಟು ದಿನ ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಇರಬೇಕಾಗುತ್ತೆ. ಅಷ್ಟಕ್ಕೂ ಪವಿತ್ರಾ ಗೌಡ ಯಾವ ಆಧಾರದ ಮೇಲೆ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು? ಎಸ್ಪಿಪಿಯವರ ವಾದ ಏನಾಗಿತ್ತು?
ಜಾಮೀನು ಸಿಕ್ಕರೆ ಸಾಕ್ಷಿ ನಾಶ ಸಾಧ್ಯತೆ
ಪವಿತ್ರಾ ಗೌಡಗೆ ಜಾಮೀನು ಅರ್ಜಿ ವಿಚಾರಣೆ ವೇಳೆ ಎಸ್ಪಿಪಿ ಆಕ್ಷೇಪಣೆ ವ್ಯಕ್ತಪಡಿಸಿದ್ದರು. ತನಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಎನ್ನುವ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಕೊಲೆ ಮಾಡಿಸಿದ ಆರೋಪ ಹೊತ್ತಿದ್ದಾರೆ. ಈ ಕೇಸ್ನಲ್ಲಿ ಪ್ರಭಾವಿಯಾಗಿರುವ ದರ್ಶನ್ ಕೂಡ ಪ್ರಮುಖ ಆರೋಪಿ. ಈ ಕಾರಣಕ್ಕೆ ಪವಿತ್ರಾ ಗೌಡಗೆ ಜಾಮೀನು ಸಿಕ್ಕರೆ, ಸಾಕ್ಷಿ ನಾಶಕ್ಕೆ ಯತ್ನಿಸುವ ಸಾಧ್ಯತೆಯಿದ್ದು, ಜಾಮೀನು ನೀಡಬಾರದು ಎಂದು ಆಕ್ಷೇಪಿಸಿದ್ದರು.

ಯಾವ ಆಧಾರದ ಮೇಲೆ ಅರ್ಜಿ ಸಲ್ಲಿಕೆ?
ಪವಿತ್ರಾ ಗೌಡ ಗಂಭೀರ ಪ್ರಕರಣದಲ್ಲಿ ಆರೋಪಿ ನಂ 1 ಆಗಿದ್ದಾರೆ. ಹೀಗಿದ್ದೂ ಯಾವ ಆಧಾರದ ಮೇಲೆ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು? ಅನ್ನೋ ಪ್ರಶ್ನೆ ಹುಟ್ಟಿಕೊಳ್ಳುತ್ತೆ. ಪವಿತ್ರಾ ಗೌಡ CrPC 437 ಅಡಿಯ ಪವಿತ್ರಾ ಗೌಡ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಈ ಸೆಕ್ಷನ್ ಅಡಿ ಮಹಿಳೆಯರಿಗೆ ಜಾಮೀನು ಅರ್ಜಿ ಸಲ್ಲಿಸಲು ಅವಕಾಶವಿದೆ.
ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ ದರ್ಶನ್
ಪವಿತ್ರಾ ಗೌಡ ಜಾಮೀನಿ ಅರ್ಜಿ ಸಲ್ಲಿಸಿ ಅಚ್ಚರಿ ಮೂಡಿಸಿದ್ದರೆ, ಅತ್ತ ದರ್ಶನ್ ಮಾತ್ರ ಸೈಲೆಂಟ್ ಆಗಿಯೇ ಇದ್ದಾರೆ. ಬಹುಶ: ಪೊಲೀಸರು ಜಾರ್ಜ್ ಶೀಟ್ ಸಲ್ಲಿಸಿದ ಬಳಿಕ ದರ್ಶನ್ ಜಾಮೀನು ಅರ್ಜಿಯನ್ನು ಸಲ್ಲಿಸುವ ಸಾಧ್ಯತೆಯಿದೆ. ಅಲ್ಲಿವರೆಗೂ ಜೈಲಿನಿಂದ ಹೊರಬರುವುದಕ್ಕೆ ಬೇಕಿರುವ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಆದರೆ, ಇದೇ ವೇಳೆ ದರ್ಶನ್ ಪರ ಹಿರಿಯ ವಕೀಲರಾದ ಸಿವಿ ನಾಗೇಶ್ ವಾದ ಮಾಡುತ್ತಾರೆ ಎಂದು ಹೇಳಲಾಗಿತ್ತು. ಈಗ ಅವರು ಈ ಕೇಸ್ನಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.
4 ಸಾವಿರ ಪುಟಗಳ ಜಾರ್ಜ್ಶೀಟ್
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಸಾವಿರ ಪುಟಗಳ ಜಾರ್ಜ್ಶೀಟ್ ಅನ್ನು ಪೊಲೀಸರು ಸಿದ್ದಪಡಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ದರ್ಶನ್ ವಿರುದ್ಧ ಹೆಚ್ಚು ಸಾಕ್ಷ್ಯಗಳು ಸಿಕ್ಕಿದ್ದು, ಎ 2 ಆರೋಪಿಯಿಂದ ಅವರನ್ನು ಎ 1 ಆರೋಪಿಯಾಗಿ ಪರಿವರ್ತಿಸಲು ಪೊಲೀಸರು ಮುಂದಾಗಿದ್ದಾರೆ ಅನ್ನೋ ಮಾತು ಕೂಡ ಕೇಳಿ ಬರುತ್ತಿದೆ. ಹೀಗಾಗಿ ಜಾರ್ಜ್ಶೀಟ್ ಸಲ್ಲಿಸಿದ ಮೇಲೆ ದರ್ಶನ್ಗೆ ಮತ್ತಷ್ಟು ಸಂಕಷ್ಟ ಎದುರಾಗುತ್ತೆ ಅನ್ನೋ ಮಾತು ಕೇಳಿ ಬರುತ್ತಿದೆ.


Click it and Unblock the Notifications











