"ಹೇ ಸ್ವಾಮಿ ನಮ್ಮ ಜನರನ್ನು ಸಾಯಿಸ್ತಾರೆ ಅಂದರೆ ಯುದ್ಧ ಮಾಡಲೇಬೇಕು.. ಮೋದಿ ಸಾಹೇಬ್ರು ಇದ್ದಾರೆ": ಜೋಗಿ ಪ್ರೇಮ್
ಪೆಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕರ ಅಟ್ಟಹಾಸಕ್ಕೆ ಪ್ರತಿಕಾರ ತೀರಿಸಿಕೊಳ್ಳುವತ್ತ ಭಾರತ ದಿಟ್ಟ ಹೆಜ್ಜೆ ಇಡುತ್ತಿದೆ. ಯಾವಾಗ ಬೇಕಾದರೂ ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧ ನಡೆಯುವ ಸಾಧ್ಯತೆಯಿದೆ. ಪಾಕಿಸ್ತಾನ ಯುದ್ಧಕ್ಕೆ ಬಂದರೆ ತಕ್ಕ ಪ್ರತ್ಯುತ್ತರ ನೀಡುವುದಕ್ಕೆ ಗಡಿಯಲ್ಲಿ ಭಾರತೀಯ ಸೇನೆ ಸನ್ನದ್ಧವಾಗಿ ನಿಂತಿದೆ.
ಅಮಾಯಕ ಪ್ರವಾಸಿಗರನ್ನು ಉಗ್ರರು ಹತ್ಯೆ ಮಾಡಿದ್ದನ್ನು ಇಡೀ ವಿಶ್ವವೇ ಖಂಡಿಸುತ್ತಿದೆ. ಹಾಗೇ ದೇಶದಲ್ಲೂ ಆಕ್ರೋಶ ಕಿಚ್ಚು ಹೆಚ್ಚಾಗಿದೆ. ಕೇಂದ್ರ ಸರ್ಕಾರ ಭಯೋತ್ಪಾದಕರ ಹತ್ತಿಕ್ಕಲೇಬೇಕು ಅಂತ ಪಣ ತೊಟ್ಟು ನಿಂತಿದೆ. ಸಿನಿಮಾ ತಾರೆಯರು ಕೂಡ ತಮ್ಮ ನಿಲುವುವೇನು ಅನ್ನೋದನ್ನು ಈಗಾಗಲೇ ಹೇಳಿದ್ದಾರೆ. ಹಾಗೇ ಕನ್ನಡದ ನಿರ್ದೇಶಕ ಜೋಗಿ ಪ್ರೇಮ್ ಕೂಡ ಯುದ್ಧ ಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

'ನಾನು ಮತ್ತು ಗುಂಡ 2' ಸಿನಿಮಾದ ಇವೆಂಟ್ನಲ್ಲಿ ಭಾಗಿಯಾಗಿದ್ದ ಜೋಗಿ ಪ್ರೇಮ್ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕರ ಹೇಯ ಕೃತ್ಯವನ್ನು ಖಂಡಿಸಿದ್ದಾರೆ. ಸೆಂಟಿಮೆಂಟ್ಗಳಿಗೆಲ್ಲ ಬಗ್ಗಲೇ ಬಾರದು. ಅಮಾಯಕ ಜೀವಗಳನ್ನು ತೆಗೆದವರನ್ನು ಸುಮ್ಮನೆ ಬಿಡಬಾರದು ಎಂದು ನಿರ್ದೇಶಕ ಜೋಗಿ ಪ್ರೇಮ್ ಹೇಳಿದ್ದಾರೆ. ಅಲ್ಲದೆ ಕಾಶ್ಮೀರದಲ್ಲಿ ಸಿನಿಮಾವನ್ನು ಚಿತ್ರೀಕರಿಸಿದ್ದನ್ನು ನೆನಪಿಸಿಕೊಂಡಿದ್ದಾರೆ.
ಸೆಂಟಿಮೆಂಟ್ ಎಲ್ಲಾ ಏನಿಲ್ಲ
ಪೆಹಲ್ಗಾಮ್ನಲ್ಲಿ ಅಮಾಯಕರನ್ನು ಹತ್ಯೆ ಮಾಡಿದ ಉಗ್ರರ ವಿರುದ್ಧ ಜೋಗಿ ಪ್ರೇಮ್ ಆಕ್ರೋಶ ಹೊರ ಹಾಕಿದ್ದಾರೆ. ಯಾವುದು ರೀತಿಯ ಸೆಂಟಿಮೆಂಟ್ ಏನೂ ಇಲ್ಲ. ಹೋಗಿ ಭಯೋತ್ಪಾದಕರನ್ನು ಹೊಡೆಯಲೇಬೇಕು ಎಂದಿದ್ದಾರೆ. "ಸೆಂಟಿಮೆಂಟ್ ಎಲ್ಲಾ ಹೋಗಲೇ ಬಾರದು. ಹೊಡಿ, ಕಡಿ ಅಷ್ಟೇ. ಅಮಾಯಕ ಜೀವನಗಳನ್ನ ತೆಗೆದಿದ್ದಾರೆ ಅಂದರೆ, ಅವನು ಯಾವನೋ ಹೋಗಿ ಮೋದಿಗೆ ಹೇಳು ಅಂತಾನೆ ಅಂದರೆ, ಅವರನ್ನು ಕತ್ತರಿಸಿ ನಾಲ್ಕು ಪೀಸ್ ಪೀಸ್ ಮಾಡಿ ಎಸೆಯಬೇಕು. ಅಷ್ಟು ಕ್ರೂರತನ ಅದು. ಅವರು ಹೇಡಿಗಳೇ ಬಿಡಿ." ಎನ್ನುತ್ತಾರೆ.
"ಬದುಕಬೇಕು ಅಂದ್ರೆ ಯುದ್ಧ ಮಾಡಬೇಕು"
"ಅವರಿಗೇನು ಎಮೋಷನ್ಸ್ ತೋರಿಸುವುದು. ಆಮೇಲೆ ಯಾರೋ ಹೇಳುತ್ತಾರಲ್ಲ ಯುದ್ಧ ಬೇಡ ಅಂತ. ಹೇ ಸ್ವಾಮಿ ಮಾಡಲೇಬೇಕು. ನಾವು ಬದುಕಬೇಕು ಅಂದರೆ ಯುದ್ಧ ಮಾಡಲೇಬೇಕು. ಏನು ಮಾಡುವುದಕ್ಕೆ ಆಗುವುದಿಲ್ಲ. ನಮ್ಮ ಜನರನ್ನು ಸಾಯುಸುತ್ತಾರೆ ಅಂದರೆ, ಯುದ್ಧ ಮಾಡಲೇಬೇಕು. ಮೋದಿ ಸಾಹೇಬ್ರು ಇದ್ದಾರೆ. 100 ಪರ್ಸೆಂಟ್ ಹ್ಯಾಂಡಲ್ ಮಾಡೇ ಮಾಡುತ್ತಾರೆ. ನಮ್ಮ ಮಿಲಿಟರಿಯವರು ಹೊಡೆದೇ ಹೊಡೆಯುತ್ತಾರೆ. ನಮ್ಮವರೇನು ಸಾಮಾನ್ಯ ಅಲ್ಲ. ಯಾವುದೇ ಕಾರಣಕ್ಕೂ ಬಿಡೋದಿಲ್ಲ. ಹೊಡೆದೇ ಹೊಡೆಯುತ್ತಾರೆ." ಎನ್ನುತ್ತಾರೆ.

ಎಲ್ಲಾ ಸಿನಿಮಾ ಶೂಟ್ ಮಾಡಿದ್ದೇನೆ
"ನಾನು ಕಾಶ್ಮೀರದಲ್ಲಿ ಅಲ್ಮೋಸ್ಟ್ ಎಲ್ಲಾ ಸಿನಿಮಾಗಳನ್ನು ಮಾಡಿದ್ದೇನೆ. ಏಕಲವ್ಯ ಮಾಡಿದ್ದೀನಿ, ರಾಜ್ ದಿ ಶೋ ಮ್ಯಾನ್ ಮಾಡಿದ್ದೀನಿ, ಆ ಕಡೆ ಬಾರ್ಡರ್ನಲ್ಲಿ ಹೋಗಿ ಜೋಗಿ ಮಾಡಿದ್ದೀನಿ. ಏನೋ ಗೊತ್ತಿಲ್ಲ, ಕೆಡಿ ಸಿನಿಮಾವನ್ನು ಹೊರಗಡೆ ಮಾಡುತ್ತಿದ್ದೇನೆ. ಏಕಲವ್ಯ ಮಾಡಿಲ್ಲ ಅಂದರೆ, ಕೆಡಿಯನ್ನು ಇಲ್ಲೇ ಮಾಡುತ್ತಿದ್ದೆನೋ ಏನೋ. ಯಾರೂ ಹೆದರುವ ಅವಶ್ಯಕತೆಯಿಲ್ಲ. ಯಾಕೆಂದರೆ, ಕೇಂದ್ರದಲ್ಲಿ ಮೋದಿ ಸಾಹೇಬ್ರು ಕೂತಿರುವುದರಿಂದ ಯಾವನಿಗೂ ಹೆದರುವ ಹಾಗಿಲ್ಲ." ಎಂದು ಜೋಗಿ ಪ್ರೇಮ್ ಅಭಿಪ್ರಾಯ ಪಟ್ಟಿದ್ದಾರೆ.
ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್ನ ಪ್ರವಾಸಿ ತಾಣವಾಗಿದ್ದ ಬೈಸರನ್ ವ್ಯಾಲಿಯಲ್ಲಿ ಉಗ್ರರು 26 ಮಂದಿಯನ್ನು ಗುಂಡಿಟ್ಟು ಹತ್ಯೆಗೈದಿದ್ದರು. ಪ್ರವಾಸಕ್ಕೆಂದು ತೆರಳಿದ್ದ ಮುಗ್ಧರ ಮೇಲೆ ಭಯೋತ್ಪಾದಕರು ನಡೆಸಿದ ಈ ದಾಳಿಯನ್ನು ವಿಶ್ವದ ಮೂಲೆ ಮೂಲೆಯಲ್ಲಿ ಖಂಡಿಸಲಾಗುತ್ತಿದೆ. 2008ರ ಬಳಿಕ ನಡೆದ ಉಗ್ರರ ಅತೀ ದೊಡ್ಡ ಕೃತ್ಯ ಎಂದು ಹೇಳಲಾಗುತ್ತಿದೆ. ಈ ಘಟನೆಯ ಹಿನ್ನೆಲೆಯಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಬಂಧ ಮತ್ತಷ್ಟು ಬಿಗಡಾಯಿಸಿದ್ದು, ಯುದ್ಧದ ವಾತಾವರಣ ಸೃಷ್ಟಿಯಾಗಿದೆ. ಇನ್ನೊಂದು ಕಡೆ ಭಾರತೀಯ ಸೇನೆ ಕಾಶ್ಮೀರದಲ್ಲಿ ಉಗ್ರರ ಮನೆಗಳನ್ನು ಹುಡುಕಿ ಹುಡುಕಿ ನೆಲ ಸಮ ಮಾಡುತ್ತಿದೆ.


Click it and Unblock the Notifications











