"ಕಾಟೇರ' ಗೆದ್ಮೇಲೆ ಈ ಬೆಳವಣಿಗೆ ಬೇಕಿರಲಿಲ್ಲ"; ದರ್ಶನ್-ಉಮಾಪತಿ ಕಿತ್ತಾಟಕ್ಕೆ ಇಂದ್ರಜಿತ್ ಲಂಕೇಶ್ ಪ್ರತಿಕ್ರಿಯೆ
ಕಳೆದ ಕೆಲವು ದಿನಗಳಿಂದ ಕನ್ನಡ ಚಿತ್ರರಂಗದಲ್ಲಿ ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ನಡುವಿನ ಕಿತ್ತಾಟದ ಬಗ್ಗೆನೇ ಚರ್ಚೆಯಾಗುತ್ತಿದೆ. ನಿರ್ಮಾಪಕ ಉಮಾಪತಿಗೆ 'ಕಾಟೇರ' 50 ದಿನ ಪೂರೈಸಿದ ಸಂಭ್ರಮದ ವೇದಿಕೆ ಮೇಲೆ 'ತಗಡು' ಎಂದಿದ್ದರು. ಈ ಪದ ಬಳಕೆ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಈ ಹೇಳಿಕೆ ವಿರುದ್ಧ ನಿರ್ಮಾಪಕ ಉಮಾಪತಿ ಕೂಡ ತಿರುಗಿಬಿದ್ದಿದ್ದರು.
ದರ್ಶನ್ 'ತಗಡು' ಎಂದಿದ್ದಕ್ಕೆ ನಿರ್ಮಾಪಕ ಉಮಾಪತಿ ಪ್ರತಿಕ್ರಿಯೆಗಳು ಕೂಡ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದವು. ಇವರಿಬ್ಬರ ಕಿತ್ತಾಟಕ್ಕೆ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಕೆಲವರು ಪ್ರತಿಕ್ರಿಯೆ ನೀಡಿದ್ದರು. ಈಗ ನಿರ್ದೇಶಕ, ನಿರ್ಮಾಪಕ ಜೊತೆಗೆ ಪತ್ರಕರ್ತರೂ ಆಗಿರುವ ಇಂದ್ರಜಿತ್ ಲಂಕೇಶ್ ಇವರಿಬ್ಬರ ಕಿತ್ತಾಟದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಇಂದ್ರಜಿತ್ ಲಂಕೇಶ್ ತಮ್ಮ ಪುತ್ರ ಸಮರ್ಜಿತ್ ಲಂಕೇಶ್ರನ್ನು ಚಿತ್ರರಂಗಕ್ಕೆ ಪರಿಚಿಯಿಸುತ್ತಿದ್ದಾರೆ. ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ನಿಮಿತ್ತ ಗೌರವ ನೀಡುವುದಕ್ಕೆ ಮಗನಿಂದ ಒಂದು ಹಾಡನ್ನು ಅರ್ಪಿಸಲು ನಿರ್ಧರಿಸಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್ ಹಾಗೂ ಉಮಾಪತಿ ಕಿತ್ತಾಟದ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಿದ್ದರೆ, ದರ್ಶನ್-ಉಮಾಪತಿ ಕಿತ್ತಾಟದ ಬಗ್ಗೆ ಏನಂದಿದ್ದಾರೆ? ಪುನೀತ್ ರಾಜ್ಕುಮಾರ್ ಬರ್ತ್ಡೇ ಬಗ್ಗೆ ಹೇಳಿದ್ದೇನು? ತಿಳಿಯಲು ಮುಂದೆ ಓದಿ.
ಇಂದ್ರಜಿತ್ ಲಂಕೇಶ್ ಚಿತ್ರರಂಗದ ಬೆಳೆವಣಿಗಳ ಬಗ್ಗೆ ಆಗಾಗ ಮಾತಾಡುತ್ತಲೇ ಇರುತ್ತಾರೆ. ವಿವಾದಗಳು ಎದ್ದಾಗ ಅವರ ಅಭಿಪ್ರಾಯಗಳನ್ನು ಮಂಡಿಸುವುದರಲ್ಲಿ ಹಿಂದೆ ಮುಂದೆ ನೋಡುವುದಿಲ್ಲ. ಆದರೆ, ಈ ಬಾರಿ ಪುತ್ರನನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿರುವುದರಿಂದ ಕೊಂಚ ಬ್ಯುಸಿಯಾಗಿದ್ದರು. ಈಗ ದರ್ಶನ್ ಹಾಗೂ ಉಮಾಪತಿ ಕಿತ್ತಾಟದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

"ಚಿತ್ರರಂಗಕ್ಕೆ ಹಲವಾರು ದಿನಗಳ ನಂತರ , ವರ್ಷಗಳೇ ಆಗಿ ಹೋಗಿತ್ತು ಕಾಟೇರದಂತಹ ಯಶಸ್ವಿ ಸಿನಿಮಾ ಸಿಕ್ಕಿತು. ಕಾಟೇರ ಬಗ್ಗೆ ನಾನು ಹೇಳಬೇಕಿಲ್ಲ. 50 ದಿನಗಳನ್ನು ಕಂಡಿದೆ ಜನರೇ ಯಶಸ್ವಿ ಮಾಡಿದ್ದಾರೆ. ಕಾಟೇರದಲ್ಲಿ ಕೆಲಸ ಮಾಡಿದ ತಂತ್ರಜ್ಞರೆಲ್ಲರೂ ಈ ಹಿಂದೆ ನನ್ನ ಸಿನಿಮಾದಲ್ಲೂ ಮಾಡಿದ್ದಾರೆ. ದರ್ಶನ್ ಕೂಡ ನನ್ನ ಪ್ರೀತಿಯ ರಾಮು ಹಾಗೂ ಸಂಗೊಳ್ಳಿರಾಯಣ್ಣ ಬಳಿಕ ಅದ್ಭುತ ಅಭಿನಯ ನೀಡಿರುವ ಸಿನಿಮಾವಿದು. ಈಗ ಕಾಟೇರನೂ ಹಿಟ್ ಆಗಿದೆ. ಈ ಸಂದರ್ಭದಲ್ಲಿ ಇಂತಹದ್ದೊಂದು ಬೆಳವಣಿಗೆ ಬೇಕಾಗಿರಲಿಲ್ಲ." ಎಂದು ಅಭಿಪ್ರಾಯ ಪಟ್ಟಿದ್ದಾರೆ.
ನಿರ್ಮಾಪಕ ಉಮಾಪತಿ ಹಾಗೂ ದರ್ಶನ್ ನಡುವಿನ ಕಿತ್ತಾಟ ಚಿತ್ರರಂಗಕ್ಕೆ ಶೋಭೆ ತರುವುದಿಲ್ಲ ಅಂತಾನೂ ಪ್ರತಿಕ್ರಿಯೆ ನೀಡಿದ್ದಾರೆ. "ಈ ಸಮಸ್ಯೆಯನ್ನು ಅವರವರೇ ಕೂತು ಬಗೆ ಹರಿಸಿಕೊಳ್ಳಬೇಕು. ಇದು ಚಿತ್ರರಂಗಕ್ಕೆ ಶೋಭೆ ತರವಂತಹದ್ದು ಅಲ್ಲ. ಹಿಂದೆ ನಾನು ಕೆಲವು ವಿಷಯಗಳ ಬಗ್ಗೆ ಮಾತಾಡಿದ್ದೆ. ಈ ಸಂದರ್ಭದಲ್ಲಿ ನನಗೆ ಮಾತಾಡುವುದಕ್ಕೆ ಇಷ್ಟವಿಲ್ಲ. ಯಾಕಂದ್ರೆ, ನೀವು ನೋಡಿದ್ದೀರ, ಕೆಟ್ಟ ಬೆಳವಣಿಗೆ ಆಗುತ್ತೆ. ಇವತ್ತು ನಾನು ಕಮೆಂಟ್ ಮಾಡುತ್ತೇನೆ. ಮುಂದೆ ಯಾರೋ ಕಮೆಂಟ್ ಮಾಡುತ್ತಾರೆ. ಅದೊಂತರ ಬೆಳೆದು ಹೋಗುತ್ತೆ. ಚಿತ್ರರಂಗದ ದೃಷ್ಟಿಯಲ್ಲಿ ಕೂತು ಬಗೆಹರಿಸಿಕೊಳ್ಳಬೇಕು ಅಂತ ಹೇಳುತ್ತೇನೆ." ಎಂದು ಇಂದ್ರಜಿತ್ ಲಂಕೇಶ್ ಹೇಳಿಕೊಂಡಿದ್ದಾರೆ.
ಸದ್ಯ ಪುತ್ರ ಸಮರ್ಜಿತ್ ಅನ್ನು ಚಿತ್ರರಂಗಕ್ಕೆ ಪರಿಚಯ ಮಾಡುವುದಕ್ಕೆ ನಿರ್ಧರಿಸಿದ್ದಾರೆ. ಇದರ ಜೊತೆನೇ ಅಪ್ಪು ಹುಟ್ಟುಹಬ್ಬಕ್ಕೆ ವಿಶೇಷವಾದ ಹಾಡನ್ನು ಡೆಡಿಕೇಟ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಸಮರ್ಜಿತ್ ಲಂಕೇಶ್ ಹಾಗೂ ತಾನ್ಯಾ ಹೋಪ್ ಇಬ್ಬರೂ ಜೋಡಿಯಲ್ಲಿ ಪುನೀತ್ ನಟಿಸಿದ ಒಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಹಾಡನ್ನು ಅಪ್ಪು ಹುಟ್ಟುಹಬ್ಬಕ್ಕೆ ರಿಲೀಸ್ ಮಾಡಲಿದ್ದಾರೆ.
"ಇಡೀ ಕರ್ನಾಟಕ್ಕೆ ಅಪ್ಪು ಸರ್ ನಗು ಫೇಮಸ್. ಅಪ್ಪು ಸರ್ಗೆ ಅಪ್ಪು ಸರ್ ಸಾಟಿ ಅಂತ ಹೇಳಬಹುದು. ಮಾರ್ಚ್ 17ರಂದು ಅಪ್ಪು ಸರ್ ಹುಟ್ಟುಹಬ್ಬ. ಹೀಗಾಗಿ ಏನಾದರೂ ಅವರಿಗೆ ಅರ್ಪಿಸಬೇಕು. ನಮ್ಮ ಕಡೆಯಿಂದ ಏನಾದರೂ ಒಂದು ಗೌರವ ಕೊಡಬೇಕು ಅಂದಾಗ ನನ್ನ ಮಗ ಸಮರ್ಜಿತ್ ಲಂಕೇಶ್ ಹಾಗೂ ತಾನ್ಯ ಹೋಪ್ ಸೇರಿ ಯಾಕೊಂದು ಅಪ್ಪು ಸರ್ ಹಾಡಿಗೆ ಹೆಜ್ಜೆ ಹಾಕಿ ಆ ಹಾಡನ್ನು ಡೆಡಿಕೇಟ್ ಮಾಡಬಾರದು ಅಂದ್ರು. ಅದಕ್ಕೆ ಒಂದು ಹಾಡಿಗೆ ರಿಹರ್ಸಲ್ ಮಾಡಿ ಅದನ್ನು ಶೂಟ್ ಮಾಡಿ ಬಿಡುಗಡೆ ಮಾಡುತ್ತೇವೆ. " ಎಂದು ಇದೇ ಸಂದರ್ಭದಲ್ಲಿ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.


Click it and Unblock the Notifications











