ಮತ್ತೆ ಬಾಲಿವುಡ್ಗೆ ಹೊರಟ ಇಂದ್ರಜಿತ್ ಲಂಕೇಶ್; ಉತ್ತರಾಖಂಡದಲ್ಲಿ ಶೂಟಿಂಗ್
ಸ್ಯಾಂಡಲ್ವುಡ್ನ ಸ್ಟೈಲಿಷ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ಮತ್ತೊಂದು ಸಿನಿಮಾಗೆ ಕೈ ಹಾಕಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಪುತ್ರ ಸಮರ್ಜಿತ್ ಲಂಕೇಶ್ರನ್ನು ಕನ್ನಡ ಚಿತ್ರರಂಗಕ್ಕೆ 'ಗೌರಿ' ಮೂಲಕ ಪರಿಚಯಿಸಿದ್ದರು. ಮಗನ ಸಿನಿಮಾವನ್ನು ತಾವೇ ನಿರ್ದೇಶಿಸಿದ್ದರು. 'ಗೌರಿ' ಬಳಿಕ ಮತ್ತೆ ಬಾಲಿವುಡ್ ಕಡೆಗೆ ಪಯಣ ಬೆಳೆಸಿದ್ದಾರೆ. ಅಲ್ಲಿ ಹೊಸ ಸಿನಿಮಾಗೆ ಕೈ ಹಾಕಿದ್ದು, ಈಗಾಗಲೇ ಶೂಟಿಂಗ್ ನಡೆಯುತ್ತಿದೆ.
2020ರಲ್ಲಿ ಅದೇ ಮೊದಲ ಬಾರಿಗೆ ಇಂದ್ರಜಿತ್ ಲಂಕೇಶ್ ಹಿಂದಿ ಸಿನಿಮಾಗೆ ಕೈ ಹಾಕಿದ್ದರು. ಶಕೀಲಾ ಜೀವನವನ್ನು ಕುರಿತ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಸಿನಿಮಾಗೆ ಟೈಟಲ್ ಕೂಡ 'ಶಕೀಲಾ' ಅಂತಾನೇ ಇಟ್ಟಿದ್ದರು. ರಿಚಾ ಚಡ್ಡಾ 90ರ ದಶಕದ ಬೋಲ್ಡ್ ತಾರೆ ಶಕೀಲಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ಪ್ಯಾನ್ ಇಂಡಿಯಾ ಭಾಷೆಯಲ್ಲಿ ರಿಲೀಸ್ ಆಗಿತ್ತು. ಇದಾದ 6 ವರ್ಷಗಳ ಬಳಿಕ ಮತ್ತೊಂದು ಹಿಂದಿ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

ಹೌದು, ಇಂದ್ರಜಿತ್ ಲಂಕೇಶ್ ಮತ್ತೊಮ್ಮೆ ಹಿಂದಿ ಚಿತ್ರರಂಗಕ್ಕೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಅವರು ನಿರ್ದೇಶಿಸುತ್ತಿರುವ ಎರಡನೇ ಸಿನಿಮಾ 'ಜೈ ಹಿಂದ್ ಜೈ ಸಿಂಧ್' ಸದ್ದಿಲ್ಲದೆ ಶುರುವಾಗಿದೆ. ಇನ್ನೊಂದು ವಿಷಯ ಅಂದರೆ, ಈ ಸಿನಿಮಾ ಈಗಾಗಲೇ ಬಹುತೇಕ ಚಿತ್ರೀಕರಣ ಕೂಡ ಮುಗಿದಿದೆ. ಸಿನಿಮಾದ ಕೊನೆಯ ಹಂತದ ಶೂಟಿಂಗ್ ಇದೀಗ ಉತ್ತರಾಖಂಡದಲ್ಲಿ ನಡೆಯುತ್ತಿದೆ. ಹಾಗಿದ್ದರೆ, ಈ ಸಿನಿಮಾದ ಸ್ಟಾರ್ಕಾಸ್ಟ್ ಯಾರು? ಕಥೆಯೇನು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಇಂದ್ರಜಿತ್ ಲಂಕೇಶ್ ಇತ್ತೀಚೆಗೆ 'ಜೈ ಹಿಂದ್ ಜೈ ಸಿಂಧ್' ಸಿನಿಮಾದ ಮೋಷನ್ ಪೋಸ್ಟರ್ ಅನ್ನು ಡೆಹ್ರಾಡೂನ್ನಲ್ಲಿ ರಿಲೀಸ್ ಮಾಡಿದ್ದಾರೆ. ಅಲ್ಲದೆ ಸಿನಿಮಾದ ಮೊದಲ ಪತ್ರಿಕಾಗೋಷ್ಠಿಯನ್ನು ಅದ್ಧೂರಿಯಾಗಿ ಮಾಡಿದ್ದಾರೆ. ಈ ಸಿನಿಮಾದ ನಿರ್ಮಾಪಕ ಸ್ಯಾಮಿ ನನ್ವಾನಿ, ಆಕಾಶಾ ವತ್ಸ್, ವಿಕ್ರಂ ಕೊಚ್ಚರ್ ಸೇರಿದಂತೆ ಹಲವರ ಉಪಸ್ಥಿತಿ ಇತ್ತು. ಸದ್ಯ ಸಿನಿಮಾದ ಟೈಟಲ್ನಿಂದಲೇ ಗಮನ ಸೆಳೆಯುತ್ತಿದೆ. 'ಜೈ ಹಿಂದ್ ಜೈ ಸಿಂಧ್'' ಚಿತ್ರವನ್ನು ಸ್ಯಾಮೀಸ್ ಎಂಟರ್ಟೈನ್ಮೆಂಟ್ ಸಂಸ್ಥೆಯಡಿ ಸ್ಯಾಮಿ ನನ್ವಾನಿ ನಿರ್ಮಾಣ ಮಾಡುತ್ತಿದ್ದಾರೆ.
ಇನ್ನು 'ಜೈ ಹಿಂದ್ ಜೈ ಸಿಂಧ್' ಸಿನಿಮಾದಲ್ಲಿ ಬಿಗ್ಸ್ಟಾರ್ ಕಾಸ್ಟ್ ಇದೆ. ಬಹುಭಾಷಾ ನಟ ಮಹೇಶ್ ಮಂಜ್ರೇಕರ್, ವಿಕ್ರಂ ಕೋಚಾರ್, ಜರೀನಾ ವಹಾಬ್, ಜಯಪ್ರದಾ, ಉಪಾಸನಾ ಸಿಂಗ್, ಅಮಿತ್ ಬಹಲ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇಷ್ಟೇ ಅಲ್ಲದೆ ಈ ಸಿನಿಮಾದ ಮೂಲಕ ಇಂದ್ರಜಿತ್ ಲಂಕೇಶ್ ಚಿತ್ರರಂಗಕ್ಕೆ ನಾಲ್ವರು ಹೊಸ ಪ್ರತಿಭೆಗಳನ್ನು ಪರಿಚಯ ಮಾಡುತ್ತಿದ್ದಾರೆ.

ಇದೇ ವೇಳೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ತಮ್ಮ ಸಿನಿಮಾದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. "ಇದೊಂದು ಪ್ರೇಮಕಥೆಯಾಗಿದ್ದು, ಇದರಲ್ಲಿ ದೇಶ ವಿಭಜನೆ ಪ್ರಮುಖ ಪಾತ್ರ ವಹಿಸುತ್ತದೆ. ಅನೇಕತೆಯಲ್ಲಿ ಏಕತೆ ಎಂಬ ವಿಷಯವನ್ನು ಈ ಸಿನಿಮಾದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇನೆ. ದೇಶ ವಿಭಜನೆಯಾದಾಗ ಸಿಂಧ್ ಪ್ರಾಂತ್ಯದ ಜನ ಹೇಗೆ ನರಳಿದರು? ಅದರಿಂದ ಹೊರಬಂದು, ಈಗ ತಮ್ಮ ಬದುಕನ್ನು ಹೇಗೆ ಕಟ್ಟಿಕೊಂಡಿದ್ದಾರೆ? ಎಂಬುದನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇನೆ" ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
ಇದೇ ವೇಳೆ ಹೊಸ ಪ್ರತಿಭೆಗಳನ್ನು ಪರಿಚಯಿಸಿದ್ದರ ಬಗ್ಗೆನೂ ಇಂದ್ರಜಿತ್ ಲಂಕೇಶ್ ಹೇಳಿಕೊಂಡಿದ್ದಾರೆ. "ನನ್ನ ಮೊದಲ ಸಿನಿಮಾದಿಂದಲೂ ಹಲವು ನಟ-ನಟಿಯರನ್ನು ಪರಿಚಯಿಸುತ್ತಲೇ ಬಂದಿದ್ದೇನೆ. ಗಾಯಕಿ ವಸುಂದರಾ ದಾಸ್ ಅವರನ್ನು 'ಲಂಕೇಶ್ ಪತ್ರಿಕೆ' ಸಿನಿಮಾದ ಮೂಲಕ ನಾಯಕಿಯಾಗಿ ಪರಿಚಯಿಸಿದ್ದೆ. ದೀಪಿಕಾ ಪಡುಕೋಣೆ ಅವರನ್ನು 'ಐಶ್ವರ್ಯ' ಸಿನಿಮಾದ ಮೂಲಕ ಇಮಟ್ರುಡ್ಯೂಸ್ ಮಾಡಿದ್ದೆ. ಈಗ 'ಜೈ ಹಿಂದ್ ಜೈ ಸಿಂಧ್' ಸಿನಿಮಾದ ಮೂಲಕ ನಾಲ್ವರು ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದೇನೆ" ಎಂದು ಹೇಳಿದ್ದಾರೆ. 'ಜೈ ಹಿಂದ್ ಜೈ ಸಿಂಧ್' ಶೂಟಿಂಗ್ ಸದ್ಯದ್ರಲ್ಲೇ ಮುಗಿಯಲಿದ್ದು, ಈ ವರ್ಷದ ಮಧ್ಯಭಾಗದ ಹೊತ್ತಿಗೆ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ.


Click it and Unblock the Notifications











