'ಏಳುಮಳೆ' ಸಿನಿಮಾದಲ್ಲಿರೋ ಪ್ರಮುಖ ಪಾತ್ರಗಳು ಬದುಕಿದ್ದಾವಾ? ಪಾರ್ಟು 2ಗೆ ಕರ್ಕೊಂಡು ಬರ್ತಾರಾ?
ತರುಣ್ ಸುಧೀರ್ ನಿರ್ಮಾಣ ಮಾಡಿರುವ 'ಏಳುಮಲೆ' ಸಿನಿಮಾಗೆ ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಸಿನಿಮಾ ನೋಡಿದವರೆಲ್ಲರಿಗೂ 'ಏಳುಮಲೆ' ಇಷ್ಟ ಆಗಿದೆ. ನೈಜ ಘಟನೆಗಳನ್ನು ಇಟ್ಟುಕೊಂಡು ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಪ್ರಮುಖ ಪಾತ್ರದಲ್ಲಿ ರಕ್ಷಿತಾ ಪ್ರೇಮ್ ಸಹೋದರ ರಾಣಾ ಹಾಗೂ ಪ್ರಿಯಾಂಕಾ ಆಚಾರ್ ನಟಿಸಿದ್ದಾರೆ. ಈ ಎರಡು ಪಾತ್ರಗಳು ಸಿನಿಮಾ ಬಿಡುಗಡೆಯ ಬಳಿಕ ಹೊಸ ಚರ್ಚೆಯನ್ನು ಹುಟ್ಟಾಕಿದೆ.
'ಏಳುಮಲೆ' ಸಿನಿಮಾ ಕರ್ನಾಟಕ ಹಾಗೂ ತಮಿಳುನಾಡಿ ಗಡಿ ಪ್ರದೇಶದಲ್ಲಿ ನಡೆಯುವ ಕಥೆ. ಹೀಗಾಗಿ ಶೀಘ್ರದಲ್ಲಿಯೇ ತಮಿಳು ಹಾಗೂ ತೆಲುಗು ಎರಡೂ ಭಾಷೆಯಲ್ಲಿಯೂ ಈ ಸಿನಿಮಾ ಬಿಡುಗಡೆಯಾಗಲಿದೆ. ಹಾಗೇ ಕರ್ನಾಟಕದಲ್ಲಿಯೂ ನಿಧಾನವಾಗಿ ಸಿನಿಮಾ ಪಿಕಪ್ ಆಗಿದೆ. ದಿನದಿಂದ ದಿನಕ್ಕೆ ಸಿನಿಮಾದ ಶೋಗಳನ್ನು ಹೆಚ್ಚಿಸಲಾಗಿದೆ. ಮೌತ್ ಪಬ್ಲಿಸಿಟಿಯಿಂದ ಥಿಯೇಟರ್ಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿರುವಾಗಲೇ ರಾಣಾ ಹಾಗೂ ಪ್ರಿಯಾಂಕಾ ಆಚಾರ್ ನಟಿಸಿರುವ ಪಾತ್ರಗಳು ರಿಯಲ್ ಲೈಫ್ನಲ್ಲಿ ಇದ್ದಾವಾ? ಅವರು ಇನ್ನೂ ಬದುಕಿದ್ದಾರಾ? ಸಿನಿಮಾ ಹಿಟ್ ಆದ್ಮೇಲೆ ಆ ಪಾತ್ರಗಳನ್ನು ಜನರ ಮುಂದೆ ಕರೆದುಕೊಂಡು ಬರುತ್ತಾರಾ? 'ಏಳುಮಲೆ' ಪಾರ್ಟ್ 2 ಏನಾದರೂ ಬರುತ್ತಾ? ಈ ಎಲ್ಲಾ ಪ್ರಶ್ನೆಗಳಿಗೆ ನಿರ್ಮಾಪಕ ತರುಣ್ ಸುಧೀರ್ ಸ್ವತ: ಉತ್ತರಿಸಿದ್ದಾರೆ.
ರಿಯಲ್ ಲೈಫ್ನಲ್ಲಿ ಇದ್ದಾರಾ ರಿಯಲ್ ಪಾತ್ರಗಳು?
'ಏಳುಮಲೆ' ಸಿನಿಮಾದಲ್ಲಿ ರಾಣಾ ಹಾಗೂ ಪ್ರಿಯಾಂಕಾ ಆಚಾರ್ ಪಾತ್ರಗಳು ಈ ಸಿನಿಮಾದ ಜೀವಾಳ. ಇವರಿಬ್ಬರ ಲವ್ ಸ್ಟೋರಿಯೇ ಈ ಸಿನಿಮಾದ ಹೈಲೈಟ್. 'ಏಳುಮಲೆ' ನೋಡಿ ಹೊರ ಬಂದ ಪ್ರತಿಯೊಬ್ಬ ಪ್ರೇಕ್ಷಕರಿಗೂ ರಿಯಲ್ ಲೈಫ್ ಕ್ಯಾರೆಕ್ಟರ್ಗಳನ್ನು ನೋಡಬೇಕು ಅನ್ನೋ ಹಂಬಲ ಹುಟ್ಟಿಕೊಂಡಿದೆ. ಅವರು ಎಲ್ಲಿದ್ದಾರೆ? ಈಗೇನು ಮಾಡುತ್ತಿದ್ದಾರೆ? ಇಲ್ಲಾ ಬದುಕಿದ್ದಾರಾ? ಇಲ್ವಾ? ಇಂತಹದ್ದೇ ಒಂದು ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಆ ಎಲ್ಲಾ ಗೊಂದಲಗಳಿಗೆ ಸ್ವತ: ತರುಣ್ ಸುಧೀರ್ ತೆರೆ ಎಳೆದಿದ್ದಾರೆ.
ರಿಯಲ್ ಹೆಸರು ಹೇಳುವುದಕ್ಕೆ ಆಗಲ್ಲ
"ಸಿನಿಮಾ ನೋಡಿದ ಮೇಲೆ ನಿಮಗೆ ಯಾರ ಪಾತ್ರ ಯಾರದ್ದು ಅನ್ನೋದು ಗೊತ್ತಾಗಿರುತ್ತೆ. ಬೇರೆ ಬೇರೆ ಕಾರಣಗಳಿಗೆ ರಿಯಲ್ ಹೆಸರುಗಳನ್ನು ಹೇಳುವುದಕ್ಕೆ ಆಗುವುದಿಲ್ಲ. ಯಾರು ಇದ್ದಾರೆ. ಯಾರು ಇಲ್ಲ ಅನ್ನೋದು ಅಧಿಕೃತವಾಗಿ ಹೇಳುವುದಕ್ಕೆ ಆಗುವುದಿಲ್ಲ. ಹುಡುಗ-ಹುಡುಗಿ ರಿಯಲ್ ಆಗಿ ಇಲ್ಲ. ಅದು ಕೇವಲ ಕಾಲ್ಪನಿಕ ಅಷ್ಟೇ. ಅದನ್ನು ಬಿಟ್ಟು ಉಳಿದ ಎಲ್ಲವೂ ರಿಯಲ್ ಆಗಿದೆ. ಪೊಲೀಸ್ ಸ್ಟೇಷನ್ನಲ್ಲಿ ನಡೆಯುವ ಘಟನೆ, ಅಕ್ಟೋಬರ್ 18ರಂದು ಏನು ನಡೀತು ಅನ್ನೋ ಘಟನೆಯಿಂದ ಹಿಡಿದು, ಈ ಜೋಡಿಯ ಘಟನೆಯಿಂದ ಹಿಡಿದು ಎಲ್ಲವೂ ನಮ್ಮಲ್ಲಿ ಮಾಹಿತಿಯಿದೆ. ಆದರೆ ಅದೆಲ್ಲವೂ ಒಂದೇ ದಿನ ನಡೆದಿದ್ದು ಅಂತಲ್ಲ. ಅದನ್ನೆಲ್ಲ ನಾವು ಹೆಣೆದು ತಂದಿದ್ದೇವೆ." ಎಂದು ತರುಣ್ ಸುಧೀರ್ ಹೇಳಿದ್ದಾರೆ.
'ಏಳುಮಲೆ' ಪಾರ್ಟ್ 2 ಬರುತ್ತಾ?
ಕೊನೆಯಲ್ಲಿ ಹೀರೋಯಿನ್ ಬರುವ ದೃಶ್ಯ ಸಮಜಾಯಿಷಿ ಕೊಡುವುದಿಲ್ಲ ಯಾಕೆ? ಎಂದು ಮಾಧ್ಯಮದವರು ಪ್ರಶ್ನೆ ಮಾಡಿದ್ದರು. ಅದಕ್ಕೆ ತರುಣ್ ಸುಧೀರ್ ಪಾರ್ಟ್ 2 ಬಗ್ಗೆ ಹಿಂಟ್ ಕೊಟ್ಟಿದ್ದಾರೆ. "ಹೀರೋಯಿನ್ ಬರೋದು ಸೀನ್ ಇದೆಯಲ್ಲ ಅಲ್ಲಿ ಒಂದು ಮಾರುತಿ ವ್ಯಾನ್ ಬರುತ್ತೆ. ಅದೇ ಮಾರುತಿ ವ್ಯಾನ್ನಲ್ಲೇ ಅವರು ಆ ಕಡೆ ಇಳಿದಿರೋದು. ಅವರು ಎಲ್ಲಿದ್ದರು ಅನ್ನೋದು ನಿಮಗೆ ಗೊತ್ತಾಗುತ್ತೆ. ಕಿಶೋರ್ ಏನೆಲ್ಲ ಮಾಡಿದರೂ, ಅವರನ್ನು ಸೇಫ್ ಆಗಿ ಇಡುವುದಕ್ಕೆ ಪ್ರಯತ್ನ ಮಾಡಿದ್ದರು ಎಂದು ಹೇಳುವುದಕ್ಕೆ ಹೊರಟಿದ್ವಿ. ಅಲ್ಲೇ ಮುಗಿಸಬಹುದು. ಆದ್ರೆ, ಪಾರ್ಟ್ 2ನಲ್ಲಿ ಅದಕ್ಕೆ ಉತ್ತರ ಕೊಡುತ್ತೇವೆ." ಎಂದು ಹೇಳಿದ್ದಾರೆ.


Click it and Unblock the Notifications











