ಸೌಜನ್ಯ ಕತೆ ಹೇಳುವುದಕ್ಕೆ ಹೊರಟಿದ್ದಾರಾ ಹರ್ಷಿಕಾ ಪೂಣಚ್ಚ? ಚಿ. ಸೌಜನ್ಯ ಕಥೆ ಯಾರದ್ದು? ಏನಂತಾರೆ ನಟಿ?
ಹರ್ಷಿಕಾ ಪೂಣಚ್ಚ ವಿವಾಹದ ಬಳಿಕ ಕೌಟುಂಬಿಕ ಜೀವನಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರು. ಮಗುವಾದ ಬಳಿಕ ಸ್ವಲ್ಪ ಗ್ಯಾಪ್ ತೆಗೆದುಕೊಂಡು ಮತ್ತೆ ಸಿನಿಮಾ ಕಡೆಗೆ ಮುಖ ಮಾಡುತ್ತಿದ್ದಾರೆ. ನಟನೆಯ ಜೊತೆಗೆ ಹೊಸ ಹೆಜ್ಜೆಯನ್ನು ಇಟ್ಟಿದ್ದಾರೆ. ಇದೇ ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿದ್ದು, ಈಗಾಗಲೇ ಸಿನಿಮಾ ಟೈಟಲ್ ಹಾಗೂ ಪೋಸ್ಟರ್ ಅನ್ನು ರಿಲೀಸ್ ಮಾಡಿದ್ದಾರೆ. ಅದುವೇ 'ಚಿ: ಸೌಜನ್ಯ - ಒಂದು ಹೆಣ್ಣಿನ ಕಥೆ'.
ಸಿನಿಮಾ ಟೈಟಲ್ ಕೇಳಿದ ಕೂಡ ಇದು ಧರ್ಮಸ್ಥಳದ ಸೌಜನ್ಯ ಪ್ರಕರಣ ನೆನಪಾಗುತ್ತೆ. ಅದರಲ್ಲೂ ಸೌಜನ್ಯ ಕೇಸ್ ವಿಚಾರವಾಗಿ ಯೂಟ್ಯೂಬರ್ ಮಾಡಿದ ಒಂದು ವಿಡಿಯೋ ಮತ್ತೆ ಕಿಚ್ಚು ಹಚ್ಚಿದೆ. ಹೀಗಾಗಿ ಇದೇ ಘಟನೆಗಳನ್ನು ಇಟ್ಟುಕೊಂಡು ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಇಬ್ಬರೂ ಈ ಸಿನಿಮಾ ಮಾಡುವುದಕ್ಕೆ ಮುಂದಾದ್ರಾ? ಎನ್ನುವ ಪ್ರಶ್ನೆಯಂತೂ ಮೂಡುತ್ತೆ.

'ಚಿ: ಸೌಜನ್ಯ - ಒಂದು ಹೆಣ್ಣಿನ ಕಥೆ' ಸಿನಿಮಾದಲ್ಲಿ ಕಿಶೋರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಉಗ್ರಂ ಮಂಜು, ಕಾಕ್ರೋಚ್ ಅಲಿಯಾಸ್ ಸುಧಿ ಈ ಸಿನಿಮಾದಲ್ಲಿ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಹರ್ಷಿಕಾ ಇದೇ ಮೊದಲ ಬಾರಿಗೆ ನಿರ್ದೇಶಿಸುವುದಕ್ಕೆ ಹೊರಟಿರುವ ಈ ಸಿನಿಮಾ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದೆಯೇ? ಅದೇ ಕಥೆಯನ್ನು ತೆರೆಮೇಲೆ ತರುವುದಕ್ಕೆ ಮುಂದಾಗಿದ್ದಾರಾ? ಈ ಪ್ರಶ್ನೆಗೆ ಹರ್ಷಿಕಾ ಪೂಣಚ್ಚ ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಿನಿಮಾ ಬಗ್ಗೆ ಏನು ಹೇಳಿದ್ದಾರೆ ಅಂತ ನೋಡುವುದಾರೇ,
'ಚಿ: ಸೌಜನ್ಯ' ಯಾಕೆ? ನೀವು ನಿರ್ದೇಶನಕ್ಕೆ ಇಳಿದಿದ್ದೇಕೆ?
"ನಮ್ಮ ಟೀಮ್ ಜೊತೆ ಕೂತು ಮಾತಾಡಿತ್ತಿದ್ದಾಗ, ಬೇರೆ ಬೇರೆ ಸಬ್ಜೆಕ್ಟ್ ಅನ್ನು ಚರ್ಚೆ ಮಾಡುತ್ತಿದ್ವಿ. ನಮ್ಮ ಪ್ರೊಡಕ್ಷನ್ ಟೀಮ್ ಜೊತೆ ಕೂತು ಮಾತಾಡುತ್ತಿದ್ದಾಗ, ಸಮಾಜದಲ್ಲಿ ಬದಲಾವಣೆ ಆಗುವಂತಹ ಸಿನಿಮಾ ಮಾಡಬೇಕು ಅಂತ ಮಾತಾಡುತ್ತಿದ್ದಾಗ, ಭುವನ್ ಕೂಡ ಇಂತಹದ್ದೇ ಸಿನಿಮಾ ಮಾಡಬೇಕು ಅಂತ ಹೇಳಿದರು. ಸೌಜನ್ಯ ಕೇಸ್ ಒಂದೇ ಅಲ್ಲ. ಸಾಕಷ್ಟು ಕಡೆ ಇಂತಹ ಘಟನೆ ನಡೆದಿದೆ. ಅಲ್ಲಿಗೆ ನಾವು ಹೋದಾಗ ಅವರ ತಂದೆ ತಾಯಿ ಪಡುವ ಪಾಡು ಎಲ್ಲ ನೋಡಿದ್ವಿ. ಅದಕ್ಕೆ ಇಂತಹ ಸಿನಿಮಾ ಮಾಡಬೇಕು ಅಂದುಕೊಂಡೆವು. ಆಗ ನಾನು ಇಂತಹ ಸಬ್ಜೆಕ್ಟ್ ಸಿಕ್ಕರೆ ನಿರ್ದೇಶನ ಮಾಡುತ್ತೇನೆ ಅಂದಿದ್ದೆ. ಈ ಕಥೆ ಬಂದಾಗ ಭುವನ್ ಅವರು ನೀನೆ ಯಾಕೆ ಮಾಡಬಾರದು ಅಂತ ಹೇಳಿದ್ರು. ಸಪೋರ್ಟ್ ಮಾಡಿದ್ರೆ, ಯಾಕೆ ಆಗಬಾರದು? ಅಂತ ಶುರು ಮಾಡಿದೆ." ಎನ್ನುತ್ತಾರೆ ಹರ್ಷಿಕಾ ಪೂಣಚ್ಚ.

ಸೌಜನ್ಯ ಪ್ರಕರಣ ಪ್ರೇರಣೆನಾ?
"ಇದು ಯಾವುದರಿಂದಲೂ ಪ್ರೇರಣೆ ಪಡೆದಿದ್ದು ಅಲ್ಲ. ಈಗ ನಡೆಯುತ್ತರುವ ಘಟನೆಗೂ ಈ ಸಿನಿಮಾಗೂ ಯಾವುದೇ ರೀತಿಯ ಸಂಬಂಧವಿಲ್ಲ. ನಮ್ಮ ಕಥಾ ನಾಯಕಿ ಹೆಸರು ಸೌಜನ್ಯ. ನನ್ನ ಸಿನಿಮಾದ ಪಾತ್ರದ ಹೆಸರು ಸೌಜನ್ಯ. ಅದಕ್ಕೋಸ್ಕರ ಟೈಟಲ್ ಸೌಜನ್ಯ ಅಂತ ಇದೆ ಅಷ್ಟೇ."
ಕಿಶೋರ್ ನಟಿಸುತ್ತಿದ್ದಾರೆ.. ಅವರ ಅಭಿಪ್ರಾಯವೇನು?
"ಬೆಸ್ಟ್ ಅಂದರೆ, ನನ್ನ ಮೊದಲನೇ ಸಿನಿಮಾಗೆ ಕಿಶೋರ್ ಸರ್ ಅಂತಹ ಆರ್ಟಿಸ್ಟ್ ಸಿಕ್ಕಿದ್ದಾರೆ. ಇನ್ನೇನು ಬೇಕು? ಒಬ್ಬ ಡೈರೆಕ್ಟರ್ ಆಗಿ ನಾನು ಅವರಿಂದ ತುಂಬಾನೇ ಕಲಿಯುತ್ತೇನೆ. ನಿನ್ನೆ ಹೇಳುತ್ತಿದ್ದರು. ಮೇಡಂ ನಿಮಗೆ ಕಷ್ಟ ಆಗಬಹುದು. ನಾವು ಆರ್ಟಿಸ್ಟ್ಗಳೆಲ್ಲ ತಲೆ ಕೆಟ್ಟವರು ಅಂತಿದ್ರು,. ನಾನು ಆರ್ಟಿಸ್ಟ್ ಅಲ್ವ ಸರ್.. ಒಳ್ಳೆ ಸಿನಿಮಾ ಮಾಡೋಣ ಅಂತ ಹೇಳಿದ್ದೇನೆ."
'ಚಿ: ಸೌಜನ್ಯ' ಬಗ್ಗೆ ಇನ್ನೊಂದಿಷ್ಟು ಸುಳಿವು?
"ಕಿಶೋರ್ ಸರ್ ಕಣ್ಣಿಂದ ಈ ಸಿನಿಮಾ ಓಪನ್ ಆಗುತ್ತೆ. ಒಬ್ಬ ಆಫೀಸರ್ ಈ ಕಥೆಯನ್ನು ಹೇಳುತ್ತಾ ಹೋಗುತ್ತಾರೆ. ಖಳನಾಯಕರಾಗಿ ಉಗ್ರಂ ಮಂಜು ಹಾಗೂ ಸುಧೀ ಅವರನ್ನು ಲಾಕ್ ಮಾಡಿದ್ದೇವೆ. ಅವರು ಬಿಟ್ಟು ಇನ್ನೊಂದಿಷ್ಟು ಕಲಾವಿದರು ಬರುತ್ತಾರೆ. ಮುಖ್ಯ ಪಾತ್ರ ಸೌಜನ್ಯ ರೋಲ್ಗೆ ಆಡಿಷನ್ ಮಾಡಿತ್ತೇವೆ. ಇನ್ನೊಂದು ನಾಯಕ ನಟಿ ಪಾತ್ರವಿದೆ. ಅದು ಜನಪ್ರಿಯ ನಟಿನೇ ಬರುತ್ತಾರೆ."
ಭುವನ್ ಅವರ ಪಾತ್ರವೇನು?
"ನನಗೆ ಕ್ರಿಯೇಟಿವ್ ಡೈರೆಕ್ಟರ್ ಆಗಿ ಭುವನ್ ಅವರು ಸಪೋರ್ಟ್ ಮಾಡುತ್ತಿದ್ದಾರೆ. ಭುವನ್ ಅವರು ಕಲಿತುಕೊಂಡು ಬಂದಿದ್ದಾರೆ. ಆದರೆ, ನಾನು ಯಾವುದೇ ಕೋರ್ಸ್ ಮಾಡಿಲ್ಲ. ಆಕ್ಟಿಂಗ್ಗೂ ಯಾವುದೇ ಕೋರ್ಸ್ ಮಾಡಿಕೊಂಡು ಬಂದಿಲ್ಲ. ಡೈರೆಕ್ಟರ್ ಏನು ಹೇಳಿದ್ದಾರೆ. ನಾನು ಅದನ್ನೇ ಮಾಡಿಕೊಂಡು ಬಂದಿದ್ದೀನಿ. ನನಗೆ ಆಗಿರುವ ಅನುಭವವನ್ನು ಇಟ್ಕೊಂಡು, ಭುವನ್ ಅವರ ಕಡೆಯಿಂದ ಕಲಿತುಕೊಂಡು ನಿರ್ದೇಶನ ಮಾಡುತ್ತೇನೆ."
ನಿರ್ದೇಶನ ಅಷ್ಟು ಸುಲಭ ಅಲ್ಲ ಅಲ್ವಾ?
"ನನಗೆ ಗೊತ್ತು ಇದು ತುಂಬಾನೇ ಕಷ್ಟ ಅಂತ. ಆದರೆ, ಕಲಿತುಕೊಳ್ಳುವುದಕ್ಕೆ ರೆಡಿಯಿದ್ದೇನೆ. ಹಾಗೇ ನಾನು ಕಲಿತುಕೊಂಡು ಮಾಡುತ್ತೇನೆ ಅಂತ ನನಗೆ ನಂಬಿಕೆಯಿದೆ. ನಾನು ಕೆಲವು ತಪ್ಪುಗಳನ್ನು ಮಾಡಬಹುದು. ಆದರೆ, ಅದರಿಂದನೂ ಕಲಿತುಕೊಂಡು ಮಾಡುತ್ತೇನೆ. ಮತ್ತೆ ನಾನು ತುಂಬಾನೇ ಸಿನಿಮಾಗಳನ್ನು ನೋಡಿದ್ದೇನೆ. ನನಗೆ ಸಿನಿಮಾ ಕೆಲವು ಟರ್ಮ್ಗಳು ಗೊತ್ತಿಲ್ಲದೆ ಇರಬಹುದು. ಆದರೆ, ನನಗೆ ವಿವರಿಸುವುದಕ್ಕೆ ಬರುತ್ತೆ."
ಸಮಾಜದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ?
"ನಮ್ಮ ಸಿನಿಮಾ ಚಿರಂಜೀವಿ ಸೌಜನ್ಯ. ಒಂದು ಹೆಣ್ಣಿನ ಕಥೆ ಅಂತ ಟೈಟಲ್ ಕೊಟ್ಟಿದ್ದೀವಿ. ನಾನು ಇಲ್ಲಿ ಒಂದು ಹೆಣ್ಣು ಅಂತ ಹೇಳುವುದಕ್ಕೆ ಹೋಗುವುದಿಲ್ಲ. ನಮ್ಮ ದೇಶಾದ್ಯಂತ ಎಷ್ಟು ಹೆಣ್ಣು ಮಕ್ಕಳಿಗೆ ಇಂತಹ ದೌರ್ಜನ್ಯ ಆಗಿದೆ. ಅಂತಹ ಪ್ರತಿಯೊಂದು ಹೆಣ್ಣಿನ ಕಥೆ. ಈ ಸಿನಿಮಾದಿಂದ ಒಂದಷ್ಟು ಜನರು ಹೆಣ್ಣು ಮಕ್ಕಳನ್ನು ನೋಡುವ ಮನಸ್ಥಿತಿ ಬದಲಾದರೆ ನನ್ನ ಸಿನಿಮಾ ಗೆದ್ದಂತೆ. ಎಷ್ಟು ಜನ ಹೆಣ್ಣು ಮಕ್ಕಳಿಗೆ ನ್ಯಾಯ ಒದಗಿಸುತ್ತೇನೆ ಅನ್ನೋದು ನನಗೆ ಗೊತ್ತಿಲ್ಲ. ಆದರೆ, ಇಂದಿನ ಪೀಳಿಗೆ ಹೆಣ್ಣು ಮಕ್ಕಳು ಧೈರ್ಯವಾಗಿ ಓಡಾಡಬಹುದು. ಅಂತಹದ್ದೊಂದು ಇಂಪ್ಯಾಕ್ಟ್ ಆಗುವಂತಹ ಸಿನಿಮಾ ಮಾಡಬೇಕು ಅಂತಿದೆ." ಎಂದು ಹರ್ಷಿಕಾ ಪೂಣಚ್ಚ ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಹರ್ಷಿಕಾ ಪೂಣಚ್ಚ ಚೊಚ್ಚಲ ಬಾರಿಗೆ ನಿರ್ದೇಶಿಸುತ್ತಿರುವ ಕ್ರೈಂ ಥ್ರಿಲ್ಲರ್ ಸಿನಿಮಾವನ್ನು ಭುವನ್ ಎಂಟರ್ಟೈನ್ಮೆಂಟ್ ಮುಖ್ಯಸ್ಥ, ನಟ ಭುವನ್ ಪೊನ್ನಣ್ಣ , ಮಧು ಕಂಸಾಳೆ ಫಿಲಂಸ್ ಬ್ಯಾನರ್ ಹಾಗು ಗಣೇಶ್ ಮಹಾದೇವ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದ ಡಿಜಿಟಲ್ ಪೋಸ್ಟರ್ ಹಾಗು ಟೈಟಲ್ ಲಾಂಚ್ ಈಗಾಗಲೇ ನಡೆದಿದೆ. ನಟ ಕಿಶೋರ್ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇನ್ನೂ ಕಿಶೋರ್, ಉಗ್ರಂ ಮಂಜು ಹಾಗೂ ಕಾಕ್ರೋಚ್ ಅಷ್ಟೇ ಫೈನಲ್ ಆಗಿದ್ದು, ಇನ್ನೂ ಸೌಜನ್ಯ ಪಾತ್ರಕ್ಕೆ ಆಯ್ಕೆ ಆಗಬೇಕಿದೆ. ಇನ್ನೊಬ್ಬ ನಾಯಕಿಯಿದ್ದು, ಅವರ ಆಯ್ಕೆ ಕೂಡ ನಡೆಯಬೇಕಿದೆ. ಸದ್ಯಕ್ಕೀಗ ಸ್ಕ್ರಿಪ್ಟ್ ಕೆಲಸ ಮುಗಿಯುತ್ತಿದೆ. ಎಲ್ಲಾ ಅಂದುಕೊಂಡಂತೆ ಆದರೆ, ಮುಂದಿನ ತಿಂಗಳು ಶೂಟಿಂಗ್ ಮಾಡುವುಕ್ಕೆ ಶುರು ಮಾಡುತ್ತಾರೆ. ಸದ್ಯ 'ಚಿ. ಸೌಜನ್ಯ ಒಂದು ಹೆಣ್ಣಿನ ಕಥೆ' ಸಿನಿಮಾ ಅಂತೂ ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಮೊದಲ ಬಾರಿಗೆ ಆಕ್ಷನ್ ಹೇಳುತ್ತಿರುವ ನಟಿ ಉತ್ಸಾಹದಲ್ಲಿ ಇದ್ದಾರೆ. ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಟ್ರೆಂಡ್ ಸೆಟ್ ಮಾಡುತ್ತಾ? ಅನ್ನೋದು ನೋಡಬೇಕಿದೆ.


Click it and Unblock the Notifications











