ಕನ್ನಡ ನಿರ್ಮಾಪಕರಿಂದ ಸುದೀಪ್ ಅಂತರ ಕಾಯ್ದುಕೊಳ್ಳುತ್ತಿದ್ದಾರಾ? "ನನ್ನ ತುತ್ತು ನನ್ನ ಗತ್ತು" ಎಂದಿದ್ದೇಕೆ ಕಿಚ್ಚ?
ಕಿಚ್ಚ ಸುದೀಪ್ಗೆ ಲಕ್ಕಿ ಡೇಟ್ ಸಿಕ್ಕಿ ಬಿಟ್ಟಿದೆ. ಕಳೆದ ವರ್ಷ ಡಿಸೆಂಬರ್ 25ರಂದು 'ಮ್ಯಾಕ್ಸ್' ರಿಲೀಸ್ ಆಗಿತ್ತು. ಈ ಮೂಲಕ ಕಿಚ್ಚನಿಗೆ ಬ್ಲಾಕ್ ಬಸ್ಟರ್ ಸಿನಿಮಾ ಸಿಕ್ಕಿತ್ತು. ಹೀಗಾಗಿ ಈ ವರ್ಷ ಕೂಡ ಅದೇ ದಿನಕ್ಕೆ ಮತ್ತೊಂದು ಸಿನಿಮಾ ರಿಲೀಸ್ ಮಾಡಬೇಕು ಅಂತ ಶತಪ್ರಯತ್ನ ನಡೆಯುತ್ತಿದೆ. ಈ ಕಾರಣಕ್ಕೆ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ಅದು 'ಮ್ಯಾಕ್ಯ್' ಸಿನಿಮಾಗೆ ಆಕ್ಷನ್ ಕಟ್ ಹೇಳಿದ ನಿರ್ದೇಶಕರು ಈ ಸಿನಿಮಾವನ್ನು ಡೈರೆಕ್ಟ್ ಮಾಡುತ್ತಿದ್ದಾರೆ.
ಇದು ಕಿಚ್ಚ ಸುದೀಪ್ ನಟಿಸುತ್ತಿರುವ 47ನೇ ಸಿನಿಮಾ. ಜುಲೈ 7ರಿಂದ ಈ ಸಿನಿಮಾದ ಶೂಟಿಂಗ್ ಆರಂಭ ಆಗುತ್ತಿದೆ. ಡಿಸೆಂಬರ್ 25ಕ್ಕೆ ಸಿನಿಮಾ ಬಿಡುಗಡೆ ಮಾಡುವ ಆಲೋಚನೆ ಇಟ್ಟುಕೊಂಡಿದ್ದಾರೆ. ಹೇಗಾದರೂ ಮಾಡಿ ಕನ್ನಡಿಗರಿಗೆ ವರ್ಷಕ್ಕೊಂದು ಸಿನಿಮಾ ಕೊಡಬೇಕು ಅಂತ ಕಿಚ್ಚ ಸುದೀಪ್ ಹಠಕ್ಕೆ ಬಿದ್ದಿದ್ದಾರೆ. ಅದು ಸಾಧ್ಯವಾಗುತ್ತಾ? ಇಲ್ವಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ.

ಕಳೆದ ಕೆಲವು ದಿನಗಳಿಂದ ಕಿಚ್ಚ ಸುದೀಪ್ ಹಾಗೂ ವಿಜಯ್ ಕಾರ್ತಿಕೇಯ ಕಾಂಬಿನೇಷನ್ನಲ್ಲಿ 'ಮ್ಯಾಕ್ಸ್ 2' ಆರಂಭ ಆಗುತ್ತೆ ಎಂದು ಗುಲ್ಲೆದ್ದಿತ್ತು. ತಮ್ಮ 47ನೇ ಸಿನಿಮಾ 'ಮ್ಯಾಕ್ಸ್ 2' ಅಲ್ಲ ಎಂದು ಸುದೀಪ್ ಹೇಳಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವವರೂ ಕೂಡ ತಮಿಳಿನ ನಿರ್ಮಾಣ ಸಂಸ್ಥೆಯೇ. ಹೀಗಾಗಿ ಕಿಚ್ಚ ಕನ್ನಡದ ನಿರ್ಮಾಪಕರಿಂದ ಅಂತರ ಕಾಯ್ಡುಕೊಳ್ಳುತ್ತಿದ್ದಾರೆಯೇ? ಇಂತಹದ್ದೊಂದು ಪ್ರಶ್ನೆ ಎದ್ದಿತ್ತು. ಅದಕ್ಕೆ ಕಿಚ್ಚ "ನನ್ನ ತುತ್ತು.. ನನ್ನ ಗತ್ತು" ಎಂದು ಉತ್ತರ ಕೊಟ್ಟಿದ್ದಾರೆ. ಅಷ್ಟಕ್ಕೂ ಹೀಗಂದಿದ್ದು ಯಾಕೆ? ತಿಳಿಯುವುದಕ್ಕೆ ಮುಂದೆ ಓದಿ.
'ಮ್ಯಾಕ್ಸ್ 2' ಕೈ ಬಿಟ್ಟಿದ್ದೇವೆ
ಕಿಚ್ಚ ಸುದೀಪ್ ನಟಿಸುತ್ತಿರುವ 47ನೇ ಸಿನಿಮಾ 'ಮ್ಯಾಕ್ಸ್ 2' ಅಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. 'ಮ್ಯಾಕ್ಸ್ 2' ಪ್ರಯತ್ನ ಪಟ್ಟಿದ್ದಿ. ಆದರೆ, ಅದು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ. "ಇದು ಮ್ಯಾಕ್ಸ್ 2 ಅಲ್ಲ. ಒಂದು ಒಟ್ಟಿಗೆ ಬರುತ್ತಿದೆ ಅಂದರೆ, ಆ ಪರಂಪರೆ ಕಂಟಿನ್ಯೂ ಆಗಬೇಕು. ಹೌದು ಮ್ಯಾಕ್ಸ್ 2 ಮಾಡ್ತಾ ಇದ್ದೀವಿ ಅಂತ ಸುದ್ದಿಯಾಗುತ್ತಿತ್ತು. ನಾವು ಮ್ಯಾಕ್ಸ್ 2 ಮಾಡುವುದಕ್ಕೆ ಪ್ರಯತ್ನ ಮಾಡಿದ್ದೂ ಹೌದು. ಅದರ ಕಥೆಗೆ ಕೂತುಕೊಂಡಿದ್ದೂ ಹೌದು. ಅದು ಶೇಪ್ ಆಗುವಾಗ ಕೆಲವು ವೇಳೆ ನಮಗೆ ಮ್ಯಾಕ್ಸ್ ಅಂತ ಹೇಳುವುದಕ್ಕೆ ನಾವು ಫೋರ್ಸ್ ಮಾಡುತ್ತಿದ್ದೇವೆ ಅಂತ ಅನಿಸಿತು. ಮ್ಯಾಕ್ಸ್ 2 ಅಂತ ಹೇಳುವುದಕ್ಕೆ ಪುಶ್ ಮಾಡುತ್ತಿದ್ದೇವೆ ಅಂತ ಅನಿಸಿತ್ತು. ಅರ್ಜುನ್ ಮಹಾಶಯ್ ಸ್ವಲ್ಪ ಸೀರಿಯಸ್ ವ್ಯಕ್ತಿ. ಈ ಸಿನಿಮಾದಲ್ಲಿ ಮುತ್ತತ್ತಿ ಸತ್ಯರಾಜು ಟಚ್ ಬರಬಹುದು ಅಂತ ಹೇಳುತ್ತೇನೆ. ಇದೊಂದು ವಿಭಿನ್ನ ಸಿನಿಮಾ. ಇದು ಖಂಡಿತಾ ಇದು ಮ್ಯಾಕ್ಸ್ ಅಲ್ಲ. ಮ್ಯಾಕ್ಸ್ 2 ಅನ್ನೋದನ್ನು ಸದ್ಯಕ್ಕಂತೂ ಕೈ ಬಿಟ್ಟಿದ್ದೇವೆ." ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಡಿಸೆಂಬರ್ 25ಕ್ಕೆ ರಿಲೀಸ್ ಮಾಡಬೇಕೆಂಬ ಹಠ
ಕಿಚ್ಚ ಸುದೀಪ್ ಈಗಾಗಲೇ 'ಬಿಲ್ಲ ರಂಗ ಬಾಷಾ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೊಂದು ಕಡೆ ಬಿಗ್ ಬಾಸ್ ಒಪ್ಪಿಕೊಂಡಿದ್ದಾರೆ. ಗ್ಯಾಪ್ನಲ್ಲೇ 47ನೇ ಸಿನಿಮಾದ ಶೂಟಿಂಗ್ ಆರಂಭಿಸಿದ್ದಾರೆ. ಅದ್ಯಾಕೆ ಅನ್ನೋದನ್ನು ಸುದೀಪ್ ರಿವೀಲ್ ಮಾಡಿದ್ದಾರೆ. "ಟೈಟ್ ಶೂಟಿಂಗ್ ಹಾಕೊಂಡಿದ್ದೀನಿ. ಕಾರಣ ಏನು ಅಂದರೆ, ಬಿಲ್ಲಾ ರಂಗ ಬಾಷಾ ಅನ್ನೋದು ಬಹಳ ದೊಡ್ಡ ಸಿನಿಮಾ. ತುಂಬಾ ಸೆಟ್ಟು ಇದೆ. ಅಲ್ಲೊಂದು ಪ್ರಪಂಚ ಸೃಷ್ಟಿ ಮಾಡುತ್ತಿದ್ದೇವೆ. ಇಲ್ಲಿ ಎಂಟು ಎಕ್ಕರೆ ಲ್ಯಾಂಡ್ನಲ್ಲಿ ಸ್ಟುಡಿಯೋ ಶುರು ಮಾಡುತ್ತಿದ್ದೇವೆ. ಈ ವರ್ಷ ಅಂತೂ ಖಂಡಿತಾ ರಿಲೀಸ್ ಆಗಲ್ಲ. ಅದೇ ವೇಳೆ ನಾನೊಂದು ಸಿನಿಮಾವನ್ನು ಬೇಗನೇ ರಿಲೀಸ್ ಮಾಡಬೇಕಿತ್ತು. ಮ್ಯಾಕ್ಸ್ ಸಿನಿಮಾವನ್ನು ತುಂಬಾ ಬೇಗನೇ ಕಂಪ್ಲೀಟ್ ಮಾಡಿದ್ವಿ. ಆದರೆ, ಪ್ರವಾಹ ಬಂದಿದ್ದರಿಂದ ತಡವಾಗಿತ್ತು. ಡಿಸೆಂಬರ್ 25ನೇ ತಾರೀಕು ಈ ಸಿನಿಮಾ ರಿಲೀಸ್ ಮಾಡಬೇಕು ಅನ್ನೋದು ನಮ್ಮ ಹಠ. ಇದೊಂದು ಅಸಾಧ್ಯವಾದ ಟಾಸ್ಕ್. ಆದರೆ, ನಮ್ಮ ಟೀಮ್ನಲ್ಲಿರುವ ಎನರ್ಜಿ ನೋಡಿದರೆ, ಇದು ಅಸಾಧ್ಯವಲ್ಲ ಅಂತಾನೂ ಅನಿಸುತ್ತಿದೆ." ಎಂದು ಸುದೀಪ್ ಹೇಳಿದ್ದಾರೆ.

ಇದೇ ವೇಳೆ ಕಿಚ್ಚನಿಗೊಂದು ಪ್ರಶ್ನೆ ಎದುರಾಗಿತ್ತು. 'ಮ್ಯಾಕ್ಸ್' ಸಿನಿಮಾ ನಿರ್ಮಾಣ ಮಾಡಿದವರು ತಮಿಳು ನಿರ್ಮಾಪಕ ಕಲೈಪುಲಿ ತನು. 47ನೇ ಸಿನಿಮಾವನ್ನೂ ತಮಿಳು ಸಿನಿಮಾದ ನಿರ್ಮಾಪಕರೇ ಮಾಡುತ್ತಿದ್ದಾರೆ. ಬಿಲ್ಲ ರಂಗ ಬಾಷಾದ ನಿರ್ಮಾಪಕರ ಕೂಡ ತೆಲುಗಿನವರು. ಹೀಗಾಗಿ ಕನ್ನಡ ನಿರ್ಮಾಪಕರಿಂದ ಸುದೀಪ್ ಅಂತರ ಕಾಯ್ದುಕೊಂಡಿದ್ದಾರಾ? ಇಲ್ಲಾ ನಿರ್ಮಾಪಕರೇ ಇವರಿಂದ ಅಂತರ ಕಾಯ್ದುಕೊಂಡಿದ್ದಾರಾ? ಎಂಬ ಪ್ರಶ್ನೆಗೆ ತಮ್ಮದೇ ಸ್ಟೈಲ್ನಲ್ಲಿ ಉತ್ತರಿಸಿದ್ದಾರೆ.
ನನ್ನ ತುತ್ತು.. ನನ್ನ ಗತ್ತು
"ಕನ್ನಡ ಚಿತ್ರರಂಗದಲ್ಲಿ ದೊಡ್ಡ ದೊಡ್ಡ ಸಂಸ್ಥೆ ಅನ್ನೋದು ಇದೆಯೋ ಅವರ ಬಳಿ ಹೋಗಿ ಯಾಕೆ ಕೇಳಬಾರದು. ನೀವು ಸುದೀಪ್ ಅವರಿಂದ ಅಂತರವನ್ನು ಕಾಯ್ದು ಕೊಂಡಿದ್ದೀರಾ ಅಂತ ಕೇಳಿ. ನಾನ್ಯಾಕೆ ಅಂತರ ಕಾಯ್ದುಕೊಳ್ಳಲಿ? ಇನ್ನೊಂದು ಬಂದವರನ್ನು ಯಾಕೆ ಕೈ ಹಿಡಿಯದೆ ಇರಲಿ? ನನ್ನನ್ನು ಹುಡುಕಿಕೊಂಡು ಬಂದವರನ್ನು ಮಾತಾಡಿಸಲೋ. ಇಲ್ಲಾ ಯಾರೋ ನನ್ನ ಮಾತಾಡಿಸಲಿಲ್ಲ ಅಂತ ತಲೆ ಕೆಡಿಸಿಕೊಳ್ಳಲೋ? ನನ್ನ ಭಾಗದಲ್ಲಿರುವ ತುತ್ತು ನನ್ನ ತುತ್ತು. ನನ್ನ ತುತ್ತು.. ನನ್ನ ಗತ್ತು." ಎಂದು ಕಿಚ್ಚ ಪ್ರತಿಕ್ರಿಯೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಆಷಾಢ ಸಿನಿಮಾ ಆರಂಭ ಮಾಡಿದ್ದಕ್ಕೂ ಪ್ರತಿಕ್ರಿಯೆ ನೀಡಿದ್ದಾರೆ. ಆಷಾಢ ತನಗೆ ಅನ್ನೋದು ಗೊತ್ತಿರಲಿಲ್ಲ. ಅದೊಂದು ನಂಬಿಕೆ. ಆದರೆ, ಅದೇ ಮೂಡನಂಬಿಕೆ ಅಗಬಾರದು. ಯಾರಾದರೂ ಬಂದು ಹಣ ಕೊಟ್ಟರೆ ಆಷಾಢ ಅಂತ ತೆಗೆದುಕೊಳ್ಳದೇ ಇರುತ್ತೇವಾ? ಅದಕ್ಕೆ ಕೆಲಸ ಮಾಡುತ್ತಿರಬೇಕು ಎಂದು ಸುದೀಪ್ ಹೇಳಿದ್ದಾರೆ.


Click it and Unblock the Notifications











