'ದೈವ'ನಾ ದೆವ್ವ ಎಂದ ರಣ್ವೀರ್ ಸಿಂಗ್; ವೇದಿಕೆ ಮೇಲೆ ರಿಷಬ್ ಶೆಟ್ಟಿಗೆ ಅವಮಾನ ಮಾಡಿದರೇ?
ಬಾಲಿವುಡ್ ಸಿನಿಮಾಗಳ ಮುಂದೆನೂ ಗೆದ್ದು ಬೀಗಿದ ಸಿನಿಮಾ 'ಕಾಂತಾರ ಚಾಪ್ಟರ್ 1'. ಇದೂವರೆಗೂ ಈ ವರ್ಷದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ್ದು ಕೂಡ ಇದೇ ಸಿನಿಮಾ. ರಿಷಬ್ ಶೆಟ್ಟಿ ಮತ್ತೊಂದು ಪ್ಯಾನ್ ಇಂಡಿಯಾ ಸ್ಟಾರ್ ಅನ್ನೋದನ್ನು ಸಾಬೀತು ಮಾಡಿದ್ದಾರೆ. ಭಾರತದ ಎಲ್ಲಾ ಚಿತ್ರರಂಗಗಳು ಕೂಡ ಈ ಸಿನಿಮಾವನ್ನು ಕೊಂಡಾಡಿವೆ. ಆದ್ರೀಗ ಬಾಲಿವುಡ್ ನಟ ರಣ್ವೀರ್ ಸಿಂಗ್ಗೆ ಮಾತ್ರ ಈ ಸಿನಿಮಾಗೆ ಮೆಗಾ ಬ್ಲಾಕ್ ಬಸ್ಟರ್ ಆಗಿದ್ದು ಇಷ್ಟ ಆಗಿಲ್ಲ ಅಂತ ಕಾಣುತ್ತಿದೆ.
'ಕಾಂತಾರ ಚಾಪ್ಟರ್ 1' ತುಳುನಾಡಿನ ದೈವಗಳ ಬಗ್ಗೆ ಮಾಡಿರುವ ಸಿನಿಮಾ ಅನ್ನೋದು ಗೊತ್ತೇ ಇದೆ. ಅಲ್ಲಿನ ದೈವಾರಾಧನೆ, ಸಂಸ್ಕೃತಿಯನ್ನು ಈ ಸಿನಿಮಾ ಮೂಲಕ ಜನರಿಗೆ ತಿಳಿಸುವ ಪ್ರಯತ್ನ ಆಗಿತ್ತು. ಇದರಲ್ಲಿ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ಇಬ್ಬರೂ ಗೆದ್ದು ಬೀಗಿದ್ದಾರೆ. ಇದೇ ಬಾಲಿವುಡ್ ಮಂದಿ ಸಿನಿಮಾವನ್ನು ಹಾಡಿ ಹೊಗಳಿಸಿದ್ದಾರೆ. ಆದ್ರೀಗ ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ರಣ್ವೀರ್ ಸಿಂಗ್ ದೈವಗಳ ವಿಷಯ ಇಟ್ಟುಕೊಂಡು ರಿಷಬ್ ಶೆಟ್ಟಿಗೆ ಅವಮಾನ ಮಾಡಿದ್ದಾರೆಂದು ಸುದ್ದಿಯಾಗುತ್ತಿದೆ.

ಇತ್ತೀಚೆಗೆ ಗೋವಾದಲ್ಲಿ IFFI 2025 ಸಮಾರೋಪ ಸಮಾರಂಭ ನಡೆದಿದೆ. ಈ ವೇಳೆ ಸೂಪರ್ಸ್ಟಾರ್ ರಜನಿಕಾಂತ್ ಅವರ 50 ವರ್ಷಗಳ ಸಿನಿಮಾ ಜರ್ನಿಯನ್ನು ಇದೇ ವೇದಿಕೆ ಮೇಲೆ ಗೌರವಿಸಲಾಯ್ತು. ಇಲ್ಲಿಗೆ ರಣ್ವೀರ್ ಸಿಂಗ್ ಹಾಗೂ ರಿಷಬ್ ಶೆಟ್ಟಿ ಇಬ್ಬರೂ ಅತಿಥಿಗಳಾಗಿ ಬಂದಿದ್ದರು. ವೇದಿಕೆ ಮೇಲೆ ರಿಷಬ್ ಶೆಟ್ಟಿಯನ್ನು ನೋಡಿ ತುಳುನಾಡಿನ 'ದೈವ'ವನ್ನು 'ದೆವ್ವ' ಎಂದು ಕರೆದಿದ್ದಲ್ಲದೆ, ರಿಷಬ್ ಶೆಟ್ಟಿಯನ್ನು ಗೇಲಿ ಮಾಡಿದ್ದಾರೆಂಬ ಆರೋಪ ಸೋಶಿಯಲ್ ಮೀಡಿಯಾದಲ್ಲಿ ಆಗುತ್ತಿದೆ. ಅಸಲಿಗೆ ರಣ್ವೀರ್ ಸಿಂಗ್ ಹೇಳಿದ್ದೇನು? ರಿಷಬ್ ಶೆಟ್ಟಿಯನ್ನು ಅವಮಾನ ಮಾಡಿದರೇ? ಆ ವೇದಿಕೆ ಮೇಲೆ ಅಂತಹದ್ದೇನಾಯ್ತು? ತಿಳಿಯುವುದಕ್ಕೆ ಮುಂದೆ ಓದಿ.
IFFI 2025 ಸಮಾರೋಪ ಸಮಾರಂಭಕ್ಕೆ ಅತಿಥಿಯಾಗಿ ಬಂದಿದ್ದ ರಣ್ವೀರ್ ಸಿಂಗ್ 'ಕಾಂತಾರ ಚಾಪ್ಟರ್ 1' ಸಿನಿಮಾ ಬಗ್ಗೆ ಮಾತಾಡುವುದಕ್ಕೆ ಶುರು ಮಾಡಿದ್ದರು. ಆ ವೇಳೆ ರಿಷಬ್ ಶೆಟ್ಟಿ ಅದೇ ವೇದಿಕೆಯ ಮುಂಭಾಗದಲ್ಲಿಯೇ ಕುಳಿತಿದ್ದರು. ಈ ವೇಳೆ ಸಿನಿಮಾವನ್ನು ಹೊಗಳಿದರೋ ತೆಗಳಿದರೋ ಅಲ್ಲಿ ನೆರೆದಿದ್ದವರಿಗೆ ಗೊತ್ತಾಗಿಲ್ಲ. 'ದೈವ'ವನ್ನು ದೆವ್ವವೆಂದು ಹೇಳಿದ್ದಲ್ಲದೆ, ರಿಷಬ್ ಶೆಟ್ಟಿಯ ನಟನೆ ಬಗ್ಗೆನೂ ವ್ಯಂಗ್ಯವಾಡಿದ್ದಾರೆ. ಇದರದ್ದೊಂದು ವಿಡಿಯೋ ವೈರಲ್ ಆಗುತ್ತಿದೆ.
ಅಷ್ಟಕ್ಕೂ ಅಲ್ಲಿ ಏನು ನಡೀತು ಅಂತ ನೋಡುವುದಾರೇ, ಮುಂದಿನ ಸಾಲಿನಲ್ಲಿ ಕೂತಿದ್ದ ರಿಷಬ್ ಶೆಟ್ಟಿಯನ್ನು ಉದ್ದೇಶಿಸಿ, ರಣ್ವೀರ್ ಸಿಂಗ್ " ರಿಷಬ್ ನಿಮ್ಮ ಕಾಂತಾರ ಸಿನಿಮಾವನ್ನು ನಾನು ಥಿಯೇಟರ್ನಲ್ಲಿ ನೋಡದೆ. ನಿಮ್ಮ ನಟನೆ ಅದ್ಭುತವಾಗಿತ್ತು. ಹೆಣ್ಣು 'ದೆವ್ವ' ನಿಮ್ಮ ಮೈ ಸೇರುವ ದೃಶ್ಯವಂತೂ ಅದ್ಭುತ. ಆ ವೇಳೆ ನೀವು ಕೊಡುವ ಲುಕ್ ಹಾಗೂ ನಟನೆ ಮಜವಾಗಿತ್ತು." ಎಂದು ಹೇಳಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ರಣ್ವೀರ್ ಸಿಂಗ್ ವಿರುದ್ಧ ಕಿಡಿಕಾರುತ್ತಿದ್ದಾರೆ. ಯಾಕಂದ್ರೆ, ರಿಷಬ್ ನಟಿಸಿದ ದೃಶ್ಯವನ್ನು ರಣ್ವೀರ್ ಸಿಂಗ್ ನಟಿಸಿಯೂ ತೋರಿಸಿದ್ದು, ಅದೊಂತರ ಗೇಲಿ ಮಾಡಿದಂತೆ ಇತ್ತು. ರಿಷಬ್ ಶೆಟ್ಟಿಯನ್ನು ಕೆಟ್ಟದಾಗಿ ಅನುಕರಣೆ ಮಾಡಿದ್ದಾರೆಂದು ನೆಟ್ಟಿಗರು ರಣ್ವೀರ್ ಸಿಂಗ್ ವಿರುದ್ಧ ಕಿಡಿಕಾರುತ್ತಿದ್ದಾರೆ.
ರಣ್ವೀರ್ ಸಿಂಗ್ ಹೀಗೆ ಮಾಡಿದ್ದಕ್ಕೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ ಸಿಂಪಲ್. ಎಂದಿನಂತೆ ರಿಷಬ್ ಶೆಟ್ಟಿ ಹೈವೋಲ್ಟೇಜ್ ಸ್ಮೈಲ್ ಕೊಟ್ಟಿದ್ದಾರೆ. ಜೊತೆಗೆ ನಾಚಿಕೆಯಿಂದ ಮುಖ ಪಕ್ಕಕ್ಕೆ ತಿರುಗಿಸಿ ನಕ್ಕಿದ್ದಾರೆ. ರಿಷಬ್ ಶೆಟ್ಟಿ ಆ ಸಂದರ್ಭದವನ್ನು ತಿಳಿ ಮಾಡುವುದಕ್ಕೆ ಹಾಗೆ ಮುಖ ತಿರುಗಿಸಿಕೊಂಡರೋ, ಇಲ್ಲ ವೇದಿಕೆ ಮೇಲೆ ರಣ್ವೀರ್ ಸಿಂಗ್ ಹುಚ್ಚಾಟವನ್ನು ಕಂಡು ಹೀಗೆ ವರ್ತಿಸಿದರೋ ಗೊತ್ತಿಲ್ಲ. ಏನಕ್ಕೂ ರಣ್ವೀರ್ ಸಿಂಗ್ ನಟಿಸಿದ 'ದುರಂಧರ್' ಸಿನಿಮಾ ಡಿಸೆಂಬರ್ 5ರಂದು ರಿಲೀಸ್ ಆಗುತ್ತಿದೆ. ಅದು 'ಕಾಂತಾರ ಚಾಪ್ಟರ್ 1' ಅನ್ನು ಮೀರಿಸುತ್ತಾ? ಇಲ್ಲಾ ಮಕಾಡೆ ಮಲಗುತ್ತಾ? ಅನ್ನೋದು ನೋಡಬೇಕಿದೆ.


Click it and Unblock the Notifications











